ರೌಡಿಗಳೇ ತುಂಬಿದ್ದ 'ಓಂ' ಸಿನಿಮಾ ಸೆಟ್ನಲ್ಲಿ ಗಲಾಟೆ ಆಗದಂತೆ ತಡೆದಿದ್ದು ಆ ಒಂದು ಹೆಸರು
ಕನ್ನಡ ಚಿತ್ರರಂಗದ ಮರೆಯಲಾಗದ ಸಿನಿಮಾಗಳಲ್ಲಿ ಉಪೇಂದ್ರ ನಿರ್ದೇಶನದ 'ಓಂ' ಸಹ ಒಂದು. ಶಿವರಾಜ್ ಕುಮಾರ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟು, ಅವರ ಲುಕ್ ಅನ್ನೇ ಬದಲಿಸಿದ ಸಿನಿಮಾ ಅದು.
Recommended Video
'ಓಂ' ಸಿನಿಮಾ ಹಲವು ಮೊದಲುಗಳಿಗೆ ಕಾರಣವಾಗಿದೆ. ಮೊದಲ ಬಾರಿಗೆ ಈ ಸಿನಿಮಾದಲ್ಲಿ ನಿಜವಾದ ರೌಡಿಗಳನ್ನು ಬಳಸಿಕೊಳ್ಳಲಾಗಿತ್ತು.
ಸನ್ನಿವೇಶಗಳು ನೈಜವಾಗಿ ಬರಲೆಂದು ಉಪೇಂದ್ರ ಅವರು ಸಾಹಸಕ್ಕೆ ಕೈ ಹಾಕಿದ್ದರು. ಆದರೆ ಕೆಲ ದಿನಗಳಲ್ಲಿ ಅವರಿಗೇ ಅನಿಸತೊಡಗಿತ್ತು, ತಾವು ಭಾರಿ ದೊಡ್ಡ ರಿಸ್ಕ್ ಅನ್ನು ಮೈಮೇಲೆ ಎಳೆದುಕೊಂಡಿದ್ದೇವೆಂದು.
ನಿಜವಾದ ರೌಡಿಗಳನ್ನು ಸೆಟ್ಗೆ ಕರೆತಂದು ಉಪೇಂದ್ರ ಅನುಭವಿಸಿದ ಆತಂಕವನ್ನು ಆಪ್ತರ ಬಳಿ ಹೇಳಿಕೊಂಡಿದ್ದರಂತೆ.

ಹಲವು ರೌಡಿಗಳು ಓಂ ಸಿನಿಮಾದಲ್ಲಿ ಅಭಿನಯಿಸಿದ್ದರು
ಜೇಡರಹಳ್ಳಿ ಕೃಷ್ಣ, ತನ್ವೀರ್, ಕೊರಂಗು ಕೃಷ್ಣ, ಬೆಕ್ಕಿನ ಕಣ್ಣು ರಾಜೇಂದ್ರ ಸೇರಿದಂತೆ ಇನ್ನೂ ಹಲವು ಖ್ಯಾತ ನಾಮ ರೌಡಿಗಳನ್ನು ಉಪೇಂದ್ರ ಅವರು ಸೆಟ್ ಗೆ ಕರೆಸಿ ಅವರಿಂದಲೇ ಅಭಿನಯ ಮಾಡಿಸಿದ್ದರು. ಉಪೇಂದ್ರ ಅವರ ಯೋಚನೆಯೇನೋ ಹೊಸದಾಗಿತ್ತು. ಆದರೆ ಇದು ಸುಲಭವಾಗಿರಲಿಲ್ಲ.

ಯಾರು ಯಾರು ಮೇಲೆ ಅಟ್ಯಾಕ್ ಮಾಡುತ್ತಾರೆಂಬ ಭಯ
ಸಿನಿಮಾದಲ್ಲಿ ನಟಿಸಲು ಉತ್ಸುಕತೆಯಿಂದ ರೌಡಿಗಳೇನೋ ಬಂದರು. ಆದರೆ ಅವರ ನಡುವೆ ಇದ್ದ ವೈಷಮ್ಯ ಸೆಟ್ನಲ್ಲೂ ಮುಂದುವರೆಯಿತು. ಯಾವಾಗ ಯಾವ ಗ್ಯಾಂಗ್ನವರು ಇನ್ನೊಂದು ಗ್ಯಾಂಗ್ನ ಮೇಲೆ ಲಾಂಗ್ಗಳನ್ನು ಹಿಡಿದು ಮುಗಿಬಿದ್ದುಬಿಡುತ್ತಾರೋ ಎಂಬ ಭಯ ಸ್ವತಃ ಉಪೇಂದ್ರ ಅವರನ್ನೂ ಕಾಡಿತ್ತಂತೆ.

ದೊಡ್ಡ ಗುಂಪಿನೊಂದಿಗೆ ಸೆಟ್ ಗೆ ಬರುತ್ತಿದ್ದರು
ಈ ರೌಡಿಗಳು ಸೆಟ್ಗೆ ಬರುವಾಗಲೂ ದೊಡ್ಡ ದೊಡ್ಡ ಗುಂಪನ್ನೇ ಬೆನ್ನಿಗೆ ಕಟ್ಟಿಕೊಂಡು ಬರುತ್ತಿದ್ದರಂತೆ. ಇದು ಉಪೇಂದ್ರ ಸೇರಿದಂತೆ ಸೆಟ್ನಲ್ಲಿದ್ದವರಿಗೆ ಆತಂಕ ತಂದಿತ್ತು. ಆದರೆ ಸೆಟ್ನಲ್ಲಿ ಸಣ್ಣ ಅಹಿತಕರ ಘಟನೆಯೂ ಆಗದಂತೆ ಕಾಪಾಡಿದ್ದು ಆ ಒಂದು ಹೆಸರು ಎಂದು ಉಪೇಂದ್ರ ತಮ್ಮ ಸಿನಿಮಾ ಆಪ್ತರ ಬಳಿ ಹೇಳಿಕೊಂಡಿದ್ದರು.

ಕಾಪಾಡಿದ್ದು ಆ ಒಂದು ಹೆಸರು
ಹೌದು, ಓಂ ಸಿನಿಮಾ ವಜ್ರೇಶ್ವರಿ ಕಂಬೈನ್ಸ್ನಲ್ಲಿ ತಯಾರಾದ ಸಿನಿಮಾ. ವಜ್ರೇಶ್ವರಿ ಕಂಬೈನ್ಸ್ ಹಿಂದೆ ಇದ್ದದ್ದು ವರನಟ ಡಾ.ರಾಜ್ಕುಮಾರ್ ಹೆಸರು. ಅದೊಂದು ಹೆಸರು ಆ ರೌಡಿಗಳಲ್ಲೂ ಗೌರವ ಭಾವ ಮೂಡಿಸಿ, ತಾವು ಶಿಸ್ತಿನಿಂದ ವರ್ತಿಸಬೇಕು ಎಂಬ ಜಾಗೃತಿ ಮೂಡಿಸಿತ್ತು ಎಂದು ಉಪೇಂದ್ರ ಸಿನಿಮಾ ಸೆಟ್ನಲ್ಲಿ ಹೇಳಿಕೊಂಡಿದ್ದಾಗಿ ಅವರ ಆಪ್ತರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

ರಾಜ್ಕುಮಾರ್ ಬಗ್ಗೆ ಎಲ್ಲರಿಗೂ ಗೌರವ
ಅಷ್ಟೇ ಏಕೆ, ರಾಜ್ಕುಮಾರ್ ಅವರು ಒಮ್ಮೆ ಓಂ ಚಿತ್ರೀಕರಣ ನೋಡಲು ಸೆಟ್ಗೆ ಬರುವ ಸುದ್ದಿ ಕೇಳಿ ರೌಡಿಗಳು ಸಹ ಸಂಭಾಷಣೆಗಳನ್ನು ತಾಲೀಮು ಮಾಡುವುದರಲ್ಲಿ ನಿರತರಾದರಂತೆ. ನಮ್ಮ ಅಭಿನಯ ನೋಡಿ ರಾಜ್ ಅವರು ಹೊಗಳಲಿ ಎಂಬುದು ಅವರ ಆಸೆಯಾಗಿತ್ತಂತೆ.

ದಂತಚೋರನಿಂದಲೂ ಸನ್ಮಾನಿಸಲ್ಪಟ್ಟವರು ರಾಜ್ಕುಮಾರ್
ದಂತಚೋರ, ಕಿರಾತಕ ವೀರಪ್ಪನ್ ಅಣ್ಣಾವ್ರ ವ್ಯಕ್ತಿತ್ವಕ್ಕೆ ಮಾರುಹೋಗಿ ಸನ್ಮಾನ ಮಾಡಿ ಕಾಲುಮುಗಿದು ಬೀಳ್ಕೊಟ್ಟಿದ್ದ. ಇನ್ನು ಅಣ್ಣಾವ್ರ ಸಿನಿಮಾಗಳನ್ನು ನೋಡಿದ್ದ ಕರ್ನಾಟಕದವರೇ ಆಗಿದ್ದ ಆ ರೌಡಿಗಳಿಗೆ ರಾಜ್ಕುಮಾರ್ ಮೇಲೆ ಗೌರವ ಇದ್ದದ್ದು ಆಶ್ವರ್ಯವೇನೂ ಅಲ್ಲ ಎನಿಸುತ್ತದೆ.


Click it and Unblock the Notifications











