37 ವರ್ಷದ ಹಿಂದೆ 40 ರೂಪಾಯಿ ಕೊಟ್ಟು ತಂದಿದ್ದ ಗಣೇಶನನ್ನು ವಿಸರ್ಜನೆ ಮಾಡದೇ ಉಳಿಸಿಕೊಂಡಿದ್ದೇಕೆ ಜಗ್ಗೇಶ್..?
ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ಸ್ಪೆಷಲ್ ಡೈಲಾಗ್ ಡೆಲಿವರಿಯ ಚಾಕಚಕ್ಯತೆಯಿಂದಲೇ ಕಮಾಲು ಮಾಡಿರುವವರು ಜಗ್ಗೇಶ್. ಹೀರೋಯಿಸಂ ಅಂದರೆ ಜನರಿಗಿದ್ದ ಕಲ್ಪನೆಯನ್ನೂ ಮೀರಿ ಮತ್ತೊಂದು ಬಗೆಯಲ್ಲಿ ಕನ್ನಡಿಗರನ್ನು ಆವರಿಸಿಕೊಂಡ ಕನ್ನಡ ಚಿತ್ರರಂಗದ ಮಿನಿಮಮ್ ಗ್ಯಾರಂಟಿ ನಟ ಕೂಡ ಹೌದು. ಕನ್ನಡ ಚಿತ್ರರಂಗದಲ್ಲಿ ನಾಲ್ಕೂವರೆ ವರ್ಷಗಳನ್ನ ಪೂರೈಸಿರುವ ಜಗ್ಗೇಶ್ ಇಲ್ಲಿಯವರೆಗೆ ತಮ್ಮ ಬದುಕಿನಲ್ಲಿ ಅನೇಕ ಏರಿಳಿತವನ್ನ ಕಂಡಿದ್ದಾರೆ. ಸೋಲು ಗೆಲುವನ್ನೂ ಸಮಾನವಾಗಿಯೇ ಸ್ವೀಕರಿಸಿದ್ದಾರೆ.
ಇಂಥಾ ಜಗ್ಗೇಶ್ 37 ವರ್ಷದ ಹಿಂದೆ ತಂದ ಗಣೇಶನನ್ನೂ ಇನ್ನೂ ವಿಸರ್ಜನೆ ಮಾಡದೇ ಮನೆಯಲ್ಲಿಯೇ ಇಟ್ಟುಕೊಂಡಿದ್ದಾರೆ. ಎಲ್ಲಿ ಆಧ್ಯಾತ್ಮಿಕ ಜ್ಞಾನ ಇರುತ್ತದೆ ಅಲ್ಲಿ ಗುರು ಹಿರಿಯರ ಹಾಗೂ ದೇವರ ಮೇಲಿನ ಭಕ್ತಿ ಉಳಿಯುತ್ತದೆ ಎಂದಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಜಗ್ಗೇಶ್, ''ಸನಾತನ ಧರ್ಮದಲ್ಲಿ ಸಂಸ್ಕೃತಿ, ಶ್ರುತಿ, ಸ್ಮೃತಿಯಿಂದ ತಲೆಯಿಂದ ತಲೆಗೆ ಹರಿದುಬಂದದ್ದು...ನಾವು ಕಲಿತಾಗ ನಮ್ಮ ತಲೆಮಾರಿಗೆ ದಾಟಿಸಬಹುದು. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೆ ಆಸ್ತಿ ಮಾಡಬೇಕು, ಆಗಲೇ ನಮ್ಮ ಹಿರಿಯರ ತತ್ವ ಸಿದ್ಧಾಂತ ಮುಂದಿನ ತಲೆಮಾರಿಗೆ ದೇಣಿಗೆ ಆಗೋದು... ಜ್ಞಾನ ಶ್ರೇಷ್ಠ ಸಂಪತ್ತು ನಾವು ಮೊದಲು ಕಲಿತು ಮುಂದಿನ ಪೀಳಿಗೆಯ ದಾಟಿಸಬೇಕು. ನನ್ನ ಅಮ್ಮ ನನಗೆ ಕಲಿಸಿದ ಆಧ್ಯಾತ್ಮಿಕ ಜ್ಞಾನ ನನ್ನ ಮೊಮ್ಮಗ ಅರ್ಜುನಿಗೆ ದಾಟಿಸುವ ಪ್ರಯತ್ನ ತಾತನಾದ ನನ್ನಿಂದ ಹಾಗು ಅಜ್ಜಿ ಪರಿಮಳ ಪ್ರಯತ್ನ'' ಎಂದಿದ್ದಾರೆ.
ಮುಂದುವರೆದು ''1987ರಲ್ಲಿ 40ರೂ ಗಣಪನ ತಂದು ಇವನ ಅಪ್ಪ ಗುರುರಾಜ ಹುಟ್ಟಿದಾಗ ಗಣಪತಿ ವ್ರತ ಆರಂಭಿಸಿದೆ. ಆದರೆ ಆ ಗಣಪನ ವಿಸರ್ಜನೆ ಮಾಡದೆ ಹಾಗೆ ಉಳಿಸಿಕೊಂಡಿರುವೆ. ಆ ಗಣಪನಿಗೆ ಈಗ ಮಗ ಗುರುರಾಜನ ವಯಸ್ಸು 37 ವರ್ಷ. ಎಲ್ಲಿ ಆಧ್ಯಾತ್ಮಿಕ ಜ್ನಾನ ಇರುತ್ತದೆ ಅಲ್ಲಿ ಗುರು ಹಿರಿಯರ ಹಾಗು ದೇವರ ಮೇಲಿನ ಭಕ್ತಿ ಉಳಿಯುತ್ತದೆ'' ಎಂದು ಹೇಳಿದ್ದಾರೆ. ''ಭಕ್ತಿ ಇದ್ದ ಕಡೆ ಭಯ ಶ್ರದ್ಧೆ ಶಿಸ್ತು. ಶಿಸ್ತು ಇದ್ದಾಗ ಯಶಸ್ಸು ತನ್ನಂತೆ ಮೂಡುತ್ತದೆ. ಗಣಪನ ಕೃಪೆಯಿಂದ ಸರ್ವ ಸಮಾಜದ ಯವಮನಸ್ಸುಗಳು ಯಶಸ್ಸಿಯಾಗಲಿ. ಸರ್ವೇಜನಾಃ ಸುಖಿನೋ ಭವಂತು'' ಎಂದಿದ್ದಾರೆ ನವರಸನಾಯಕ ಜಗ್ಗೇಶ್.
ಉಳಿದಂತೆ ನವರಸನಾಯಕ ಜಗ್ಗೇಶ್ ಅವರು ಮೊದಲಿಂದ ದೈವ ಭಕ್ತ ಅನ್ನುವುದು ಎಲ್ಲರಿಗೂ ಗೊತ್ತಿರುವಂತಹದ್ದೇ. ಅದರಲ್ಲಿಯೂ ಜಗ್ಗೇಶ್ ರಾಯರ ಅಪ್ಪಟ ಭಕ್ತ. ಸಮಯ ಸಿಕ್ಕಾಗೆಲ್ಲ ಮಂತ್ರಾಲಯಕ್ಕೆ ತೆರಳಿ ಜಗ್ಗೇಶ್ ರಾಯರ ದರ್ಶನವನ್ನು ಪಡೆದು ಬರುತ್ತಾ ಇರ್ತಾರೆ. ಇನ್ನೂ ಚಿತ್ರರಂಗದ ಜೊತೆ ಜೊತೆಯಲ್ಲಿ ರಾಜಕೀಯದಲ್ಲಿ ಕೂಡ ಸಕ್ರಿಯವಾಗಿರುವ ಜಗ್ಗೇಶ್ ರಾಜ್ಯ ಸಭಾ ಸದಸ್ಯ ಕೂಡ ಹೌದು. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋದ ಪ್ರಮುಖ ಜಡ್ಜ್ ಕೂಡ ಹೌದು. ಇಂಥಾ
ಜಗ್ಗೇಶ್ ಸದ್ಯಕ್ಕೆ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡಿದ್ದಾರೆ.ಸರಸ್ವತಿ ಪುತ್ರ ಗುರುಪ್ರಸಾದ್ ನಿರ್ದೇಶನದಲ್ಲಿ ಬಂದ ರಂಗನಾಯಕ ಚಿತ್ರದ ನಂತರ ಜಗ್ಗೇಶ್ ಬೇರೆ ಯಾವ ಚಿತ್ರವನ್ನು ಕೂಡ ಒಪ್ಪಿಕೊಂಡಂತೆ ಇಲ್ಲ.


Click it and Unblock the Notifications











