'ಒಂದಲ್ಲಾ ಎರಡಲ್ಲಾ'ಗೆ 2 ರಾಷ್ಟ್ರ ಪ್ರಶಸ್ತಿ: ನಿರ್ದೇಶಕ ಸತ್ಯಪ್ರಕಾಶ್ ಸಂತಸ
66ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಗುಜರಾತಿನ 'ಹೆಲ್ಲಾರೊ' ಅತ್ಯುತ್ತಮ ಸಿನಿಮಾ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಆಯುಷ್ಮಾನ್ ಖುರಾನ್ ಮತ್ತು ವಿಕ್ಕಿ ಕೌಶಲ್ ಗೆ ಅತ್ಯುತ್ತಮ ನಟ ಮತ್ತು ಕೀರ್ತಿ ಸುರೇಶ್ ಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.
ಕನ್ನಡಕ್ಕೆ ಒಟ್ಟು ಹನ್ನೆರಡು ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. 'ರಾಮಾ ರಾಮಾ ರೇ' ಖ್ಯಾತಿಯ ಸತ್ಯ ಪ್ರಕಾಶ್ ನಿರ್ದೇಶನದ 'ಒಂದಲ್ಲಾ ಎರಡಲ್ಲಾ' ಸಿನಿಮಾಗೆ ಎರಡು ನ್ಯಾಷನಲ್ ಅವಾರ್ಡ್ ಲಭಿಸಿರುವುದು ವಿಶೇಷ
ಅತ್ಯುತ್ತಮ ರಾಷ್ಟ್ರೀಯ ಭಾವೈಕ್ಯತೆ ಸಿನಿಮಾ ಮತ್ತು ಅತ್ಯುತ್ತಮ ಬಾಲ ನಟ ವಿಭಾದಲ್ಲಿ ರೋಹಿತ್ ಪಾಂಡವಪುರಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ ನಿರ್ದೇಶಕ ಸತ್ಯ ಪ್ರಕಾಶ್ ಸಂತಸ ಹಂಚಿಕೊಂಡರು.

''ರೋಹಿತ್ ಗೆ ಬಾಲ ನಟ ಪ್ರಶಸ್ತಿ ಸಿಕ್ಕಿರುವುದು ಇಡೀ ತಂಡಕ್ಕೆ ಖುಷಿ ತಂದಿದೆ. ಯಾಕಂದ್ರೆ, ಆ ಪಾತ್ರಕ್ಕಾಗಿ ಆ ಹುಡುಗ ಅಷ್ಟು ಕಷ್ಟಪಟ್ಟಿದ್ದಾನೆ. ಸುಮಾರು ಐದು ತಿಂಗಳು ಅಪ್ಪ-ಅಮ್ಮನ ಬಿಟ್ಟು ನಮ್ಮ ಜೊತೆಯಲ್ಲೇ ಇದ್ದ. ಸಿನಿಮಾ ಮಾಡಿದಾಗಲೇ ಒಂದು ನಿರೀಕ್ಷೆ ಇತ್ತು. ಈ ಹುಡುಗನಿಗೆ ಪ್ರಶಸ್ತಿ ಬರಬಹುದು ಅಂತ. ಅದು ಸಿಕ್ಕಿರುವುದು ತುಂಬಾ ಸಂತಸ ತಂದಿದ'' ಎಂದು ಹರ್ಷ ಹಂಚಿಕೊಂಡರು.
''ಕನ್ನಡದಿಂದ ಸಿನಿಮಾ ಮಾಡಿ ಇಡೀ ದೇಶಕ್ಕೆ ಭಾವೈಕ್ಯತೆ ಸಿನಿಮಾ ಎಂದು ಗುರುತಿಸಿರುವುದು ನಿಜಕ್ಕೂ ಹೆಚ್ಚು ಖುಷಿ ತಂದಿದೆ. ಒಂದೂವರೆ ವರ್ಷ ಇಡೀ ತಂಡ ನನ್ನ ಜೊತೆ ಕೆಲಸ ಮಾಡಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ ಅವರಿಗೆ ಥ್ಯಾಂಕ್ಸ್ ಹೇಳುತ್ತೇನೆ. ಅವರೆಲ್ಲ ಸೇರಿ ಈ ಸಿನಿಮಾ ಆಗಿದ್ದು'' ಸಂತಸ ವ್ಯಕ್ತಪಡಿಸಿದರು.

ಸದ್ಯ ಪಿ.ಆರ್.ಕೆ ಬ್ಯಾನರ್ ನಲ್ಲಿ ಸತ್ಯ ಪ್ರಕಾಶ್ ಅವರು ಸಿನಿಮಾ ಮಾಡ್ತಿದ್ದು, ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಒಮ್ಮೆ ಚಿತ್ರಕಥೆ ಮುಗಿದ ಮೇಲೆ ಕಲಾವಿದರ ಆಯ್ಕೆ ಕಡೆ ಗಮನ ಹರಿಸಲಿದ್ದಾರಂತೆ.
ಇನ್ನುಳಿದಂತೆ ಒಂದಲ್ಲಾ ಎರಡಲ್ಲಾ ಸಿನಿಮಾ ಬಿಟ್ಟು ನಾತಿಚರಾಮಿ ಚಿತ್ರಕ್ಕೆ ಐದು ವಿಭಾಗಳಲ್ಲಿ ಹಾಗೂ ಕೆಜಿಎಫ್ ಚಿತ್ರಕ್ಕೆ ಎರಡು ವಿಭಾಗಗಳಲ್ಲಿ, ಮತ್ತು ಮೂಕಜ್ಜಿಯ ಕನಸು ಚಿತ್ರಕ್ಕೂ ಒಂದು ಪ್ರಶಸ್ತಿ ಬಂದಿದೆ.


Click it and Unblock the Notifications











