ಸ್ವಚ್ಛ ಭಾರತ ಅಭಿಯಾನದಲ್ಲಿ 'ಒಂದು ರೋಮ್ಯಾಂಟಿಕ್ ಕ್ರೈಂ ಕಥೆ!'
ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡಿದಷ್ಟು ಸಿನಿಮಾಗಳಿಗೆ ಮೈಲೇಜ್ ಜಾಸ್ತಿ. ಇದನ್ನ ಅರಿತಿರುವ ಯುವ ಪ್ರತಿಭೆಗಳ 'ಒಂದು ರೋಮ್ಯಾಂಟಿಕ್ ಕ್ರೈಂ ಕಥೆ' ಚಿತ್ರತಂಡ ವಿಶಿಷ್ಟ ಕೆಲಸಕ್ಕೆ ಕೈಹಾಕಿದೆ.
ದೇಶಾದ್ಯಂತ ಹರಡಿಕೊಂಡಿರುವ ಮೋದಿಯವರ ಕನಸಿನ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ತಮ್ಮ ಚಿತ್ರವನ್ನೂ ಡಿಫರೆಂಟಾಗಿ ಪ್ರಮೋಟ್ ಮಾಡುತ್ತಿದೆ ಚಿತ್ರತಂಡ.
ಬೆಂಗಳೂರಿನ ಅನೇಕ ಕಾಲೇಜುಗಳಿಗೆ ಭೇಟಿ ನೀಡಿ, ಸ್ವಚ್ಛತಾ ಆಂದೋಲನದಲ್ಲಿ ಭಾಗಿಯಾಗಿ, 'ಒಂದು ರೋಮ್ಯಾಂಟಿಕ್ ಕ್ರೈಂ ಕಥೆ' ಟೀಮ್ ಭರ್ಜರಿ ಪ್ರಮೋಷನ್ ಮಾಡುತ್ತಿದೆ.

ಕಳೆದ ವಾರವಷ್ಟೆ ಬೆಂಗಳೂರಿನ ರಾಜಾಜಿನಗರದ ಸರ್ಕಾರಿ ಕಾಲೇಜಿಗೆ ವಿಸಿಟ್ ಹಾಕಿ, 'ಒಂದು ರೋಮ್ಯಾಂಟಿಕ್ ಕ್ರೈಂ ಕಥೆ' ಚಿತ್ರತಂಡ ಕೆಲ ಕಾಲ ಪೊರಕೆ ಹಿಡಿದು ಕಾಲೇಜು ಅಂಗಳವನ್ನ ಸ್ವಚ್ಛ ಮಾಡಿದೆ. ಇದರೊಂದಿಗೆ, ತಮ್ಮ ಚಿತ್ರದ ಸ್ಪೆಷಾಲಿಟಿಗಳನ್ನ ಯುವ ಜನತೆಗೆ ಸಾರಿ ಸಾರಿ ಹೇಳಿದೆ.
ಈ ಮೂಲಕ ಯುವ ಜನತೆಯನ್ನ ಆಕರ್ಷಿಸುತ್ತಿರುವ ಚಿತ್ರತಂಡ, ಮುಂದಿನ ವಾರ ಬೆಂಗಳೂರು ಮತ್ತು ಮೈಸೂರಿನ ಅನೇಕ ಕಾಲೇಜುಗಳಲ್ಲಿ ಇದೇ ಪ್ಲಾನ್ ಹಾಕಿಕೊಂಡಿದ್ದಾರಂತೆ. ಹಾಗಂತ ನಿರ್ದೇಶಕ ಶ್ಯಾಮ್ ತಿಳಿಸಿದ್ದಾರೆ.

'ಗೊಂಬೆಗಳ ಲವ್' ಖ್ಯಾತಿಯ ಅರುಣ್ ಚಿತ್ರದ ನಾಯಕನಾಗಿದ್ದರೆ, ಮುಖ್ಯ ಭೂಮಿಕೆಯಲ್ಲಿ ಅಶ್ವಿನಿ ಚಂದ್ರಶೇಖರ್, ಪೂಜಶ್ರೀ, ಸೋನಲ್, ಪ್ರಿಯಾಂಕ ಶುಕ್ಲ ಸೇರಿದಂತೆ ಯುವ ಸಮೂಹವೇ ಚಿತ್ರದಲ್ಲಿದೆ.
ಕಾಲೇಜ್ ಲವ್ ಸ್ಟೋರಿಯಾಗಿರುವ 'ಒಂದು ರೋಮ್ಯಾಂಟಿಕ್ ಕ್ರೈಂ ಕಥೆ' ಇಂದಿನ ಯುವ ಜನತೆಗೆ ಉತ್ತಮ ಸಂದೇಶ ಸಾರುವ ಸಿನಿಮಾ. ಅದು ಎಲ್ಲರಿಗೂ ರೀಚ್ ಆಗಲಿ ಅನ್ನುವ ಕಾರಣಕ್ಕೆ, ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಡಿ, ಅರ್ಥಪೂರ್ಣವಾಗಿ ಚಿತ್ರತಂಡ ಪ್ರಚಾರ ಕಾರ್ಯ ಮಾಡುತ್ತಿದೆ.


Click it and Unblock the Notifications











