ಟಗರು ಪುಟ್ಟಿ ಮಾನ್ವಿತಾ ನಟನೆಯ ಹೊಸ ಸಿನಿಮಾ: 'ಒನ್ ಅಂಡ್ ಆಫ್' ಫಸ್ಟ್ ಲುಕ್ ರಿಲೀಸ್
ಚಂದನವನದ ಟಗರು ಪುಟ್ಟಿ ಮಾನ್ವಿತಾ ಹರೀಶ್ ನಟನೆಯ ಹೊಸ ಸಿನಿಮಾ ಫಸ್ಟ್ ಲುಕ್ ರಿಲೀಸ್ ಆಗಿದೆ. ತಾಯಿಯನ್ನು ಕಳೆದುಕೊಂಡು ನೋವಿನಲ್ಲಿದ್ದ ನಟಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಸಿನಿಮಾಗಳು, ಫೋಟೋಶೂಟ್ಗಳಲ್ಲಿ ಬ್ಯುಸಿಯಾಗಿ ನೋವನ್ನು ಮರೆಯುತ್ತಿದ್ದಾರೆ.
ಸದ್ಯ ಮಾನ್ವಿತಾ ಹರೀಶ್ ಮುಖ್ಯ ಪಾತ್ರದಲ್ಲಿರುವ ಹೊಸಬರೇ ತುಂಬಿರುವ ಸಿನಿಮಾ ಬರುತ್ತಿದ್ದು, ವಿಭಿನ್ನ ಕಥೆಯ ಈ ಸಿನಿಮಾಕ್ಕೆ 'ಒನ್ ಅಂಡ್ ಆಫ್' ಎಂದು ಹೆಸರಿಡಲಾಗಿದೆ. ಚಿತ್ರರಂಗದಲ್ಲಿ ಹೊಸಬರು ಬರುತ್ತಿದ್ದು, ಹೊಸ ಹೊಸ ಆಲೋಚನೆಗಳು, ಕತೆಗಳನ್ನು ತಮ್ಮೊಂದಿಗೆ ತರುತ್ತಿದ್ದಾರೆ. ಇಂತಹದ್ದೇ ಪ್ರಯತ್ನ ಈ ಒನ್ ಅಂಡ್ ಆಫ್ ಸಿನಿಮಾ ಎನ್ನುತ್ತಿದೆ ಚಿತ್ರತಂಡ.

ಒನ್ ಅಂಡ್ ಆಫ್ ಫಸ್ಟ್ ಲುಕ್ ಅನಾವರಣ
ಹೊಸಬರೇ ಸೇರಿ ಮಾಡಿರುವ 'ಒನ್ ಅಂಡ್ ಆಫ್' ಸಿನಿಮಾಕ್ಕೆ ರಂಗ್ಬಿರಂಗಿ, ಡೆವಿಡ್, ದಿ ವೆಕೆಂಟ್ ಹೌಸ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ಪ್ರತಿಭೆ ಶ್ರೇಯಸ್ ಚಿಂಗಾ ಆಕ್ಷನ್ ಕಟ್ ಹೇಳಿದ್ದಾರೆ. ಇದರ ಜೊತೆಗೆ ತಾವೇ ನಾಯಕ ನಟನಾಗಿಯೂ ಅಭಿನಯಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋಸ್ ನಲ್ಲಿ ಸುಲಕ್ಷ್ಮೀ ಫಿಲಂಸ್ ನಿರ್ಮಾಣ ಸಂಸ್ಥೆಯ ಲೋಗೋ ಹಾಗೂ ಒನ್ ಅಂಡ್ ಸಿನಿಮಾದ ಫಸ್ಟ್ ಲುಕ್ ಅನಾವರಣ ಮಾಡಲಾಯಿತು. ಈ ವೇಳೆ ಇಡೀ ಚಿತ್ರತಂಡ ಹಾಜರಿದ್ದರು. ನಟಿ ಮಾನ್ವಿತಾ ಹರಿಶ್ ಕೂಡ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದು, ಸಿನಿಮಾತಂಡದ ಜೊತೆಗೆ ಬಂದಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಮಾನ್ವಿತಾ ಹರೀಶ್, "ಈ ಸಿನಿಮಾ ಮಾಡಲು ತುಂಬಾ ಕಾರಣಗಳಿವೆ. ಶ್ರೇಯಸ್ ಹೇಳಿದ ಕಥೆ ಇಷ್ಟವಾಯ್ತು. ಶ್ರೇಯಸ್ ಒಳ್ಳೆ ನಟ. ಒಳ್ಳೆ ಬರಹಗಾರ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವ ಅನುಭವ. ನನ್ನ ಪಾತ್ರದ ಹೆಸರು ನಿಧಿ. ನಿಧಿ ಇಲ್ಲಿ ಟ್ರಬಲ್ ಮೇಕರ್" ಎಂದು ಹೇಳಿದ್ದಾರೆ.
ಇದು ಕಂಪ್ಲೀಟ್ ಕಾಮಿಡಿ ಸಿನಿಮಾ ಎಂದು ಹೇಳಿರುವ ನಿರ್ದೇಶಕ ಮತ್ತು ನಾಯಕ ಶ್ರೇಯಸ್ ಚಿಂಗಾ, ಮಾನ್ವಿತಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರು, ಗೋವಾ ಭಾಗದಲ್ಲಿ ಶೂಟಿಂಗ್ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು, ಸಿನಿಮಾದಲ್ಲಿ ನಾಯಕನಿಗೆ 'ಕನ್ನಡ' ಎಂದು ಹೆಸರಿಡಲಾಗಿದೆ.

'ಒನ್ ಅಂಡ್ ಆಫ್'
ಶ್ರೇಯಸ್ ಚಿಂಗಾ ನಾಯಕನಾಗಿದ್ದರೇ, ಮಾನ್ವಿತಾ ಹರೀಶ್ ಕಾಮತ್, ಸಾಧು ಕೋಕಿಲಾ, ಅನಿನಾಶ್ ಯೆಳಂದೂರ್, ಸುಚೇಂದ್ರ ಪ್ರಸಾದ್, ಸ್ಪರ್ಶ ರೇಖಾ, ಅನಂತು, ಸುಂದರಶ್ರೀ, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕುಮಾರ್, ಮಹಾಂತೇಶ್ ಹಿರೇಮಠ್, ನಿಕಿತಾ ದೋರ್ತೊಡಿ, ಲಲಿತಾ ನಾಯಕ್, ರೋಹಿತ್ ಅರುಣ್, ಅಮಾನ್, ರಾಖಿ ಭೂತಪ್ಪ ತಾರಾಬಳಗದಲ್ಲಿದ್ದಾರೆ.
ಸಿನಿಮಾಗೆ ದೇವೇಂದ್ರ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತವಿದೆ. ರೋಮ್ಯಾಂಟಿಕ್ ಕಾಮಿಡಿ ಕಥಾಹಂದರದ ಹೊಂದಿರುವ ಒನ್ ಅಂಡ್ ಆಫ್ ಸಿನಿಮಾವನ್ನು ಸುಲಕ್ಷ್ಮೀ ಫಿಲಂಸ್ ನಡಿ ಚರಣ್ ಸುಬ್ಬಯ್ಯ ನಿರ್ಮಾಣ ಮಾಡುತ್ತಿದ್ದಾರೆ. ಚರಣ್ ಸುಬ್ಬಯ್ಯ ಈ ಹಿಂದೆ ರಂಗ್ಬಿರಂಗಿ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಈಗ ನಿರ್ಮಾಪಕರಾಗಿದ್ದಾರೆ.
ಇನ್ನು, ತಮ್ಮ ಸಂಸ್ಥೆಗೆ ಸುಲಕ್ಷ್ಮೀ ಫಿಲ್ಮಂಸ್ ಎಂದು ಏಕೆ ಹೆಸರಿಟ್ಟೆ ಎಂಬುದನ್ನು ನಿರ್ಮಾಪಕ ಚರಣ್ ಸುಬ್ಬಯ್ಯ ತಿಳಿಸಿದ್ದಾರೆ. ಸು-ಸುಬ್ಬಯ್ಯ ನಮ್ಮ ತಾತ, ಲಕ್ಷ್ಮೀ-ಅಜ್ಜಿ ನಮ್ಮ ಮನೆ ಹೆಸರು ಸುಲಕ್ಷ್ಮೀ. ಹೀಗಾಗಿ ನಮ್ಮ ಪ್ರೊಡಕ್ಷನ್ ಹೌಸ್ಗೆ ಈ ಹೆಸರಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ.


Click it and Unblock the Notifications











