Kaatera: "ನಮ್ಮದು ನಾರ್ಮಲ್ ಪಿಕ್ಚರ್ ಅಲ್ವಲ್ಲ.. ಪ್ರಚಾರಕ್ಕೆ ತಿಂಗಳು ಸಾಕಲ್ವಾ": ತರುಣ್ ಸುಧೀರ್
ಬಹಳ ದಿನಗಳಿಂದ 'ಕಾಟೇರ' ಅಪ್ಡೇಟ್ ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ. ಪರಿ ಪರಿಯಾಗಿ ನಿರ್ದೇಶಕ ತರುಣ್ ಸುಧೀರ್ ಬಳಿ ಮನವಿ ಮಾಡಿದ್ದರು. ಆದರೆ ಚಿತ್ರತಂಡ ಕೊಟ್ಟ ದಿಢೀರ್ ಸರ್ಪ್ರೈಸ್ಗೆ ಅಭಿಮಾನಿಗಳು ಶಾಕ್ ಆಗಿದ್ದಾರೆ. ಫಸ್ಟ್ ಸಾಂಗ್ ಅಪ್ಡೇಟ್ ಬರುತ್ತೆ ಎಂದುಕೊಂಡವರಿಗೆ ರಿಲೀಸ್ ಡೇಟ್ ಘೋಷಣೆ ಮಾಡಿ ತರುಣ್ ಶಾಕ್ ಕೊಟ್ಟಿದ್ದಾರೆ.
'ಕಾಟೇರ' ಕೊನೆ ಹಂತದ ಚಿತ್ರೀಕರಣ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿತ್ತು. ಇಂತಹ ಹೊತ್ತಲ್ಲಿ ಇಷ್ಟು ಬೇಗ ಸಿನಿಮಾ ರಿಲೀಸ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಏಕಾಏಕಿ ಇನ್ನೊಂದು ತಿಂಗಳಲ್ಲಿ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಹೇಳಿದೆ. ಈ ಸುದ್ದಿ ಕೇಳಿ ಅಭಿಮಾನಿಗಳಂತೂ ಥ್ರಿಲ್ಲಾಗಿದ್ದಾರೆ. ಆದರೂ ಇನ್ನೊಂದು ತಿಂಗಳಲ್ಲಿ ಪ್ರಮೋಷನ್, ರಿಲೀಸ್ ಹೇಗೆ ಸಾಧ್ಯ ಸಾಧ್ಯ ಎಂದು ಚರ್ಚಿಸುತ್ತಿದ್ದಾರೆ.

ಡಿಸೆಂಬರ್ 22ಕ್ಕೆ 'ಸಲಾರ್' ಹಾಗೂ 'ಡಂಕಿ' ಸಿನಿಮಾಗಳು ರಿಲೀಸ್ ಆಗಲಿವೆ. ಹಾಗಿರುವಾಗ ಒಂದು ವಾರದ ಅಂತರದಲ್ಲಿ 'ಕಾಟೇರ' ಸಿನಿಮಾ ರಿಲೀಸ್ ನಿರ್ಧಾರ ಎಷ್ಟು ಸರಿ ಎನ್ನುವ ಚರ್ಚೆ ಕೂಡ ಶುರುವಾಗಿದೆ. ಇನ್ನು ಜಬರ್ದಸ್ತ್ ಮೇಕಿಂಗ್ ವಿಡಿಯೋ ಜೊತೆ ಸಣ್ಣ ಟೀಸರ್ ಝಲಕ್ ರಿಲೀಸ್ ಮಾಡಿ ಅಭಿಮಾನಿಗಳ ಮನಗೆದ್ದಿದೆ ಚಿತ್ರತಂಡ. ಹೊಸ ವರ್ಷಕ್ಕೆ ಒಳ್ಳೆ ಉಡುಗೊರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಈ ವರ್ಷ 190ಕ್ಕೂ ಅಧಿಕ ಕನ್ನಡ ಸಿನಿಮಾಗಳು ರಿಲೀಸ್ ಆಗಿವೆ. ಆದರೆ ದೊಡ್ಡಮಟ್ಟದಲ್ಲಿ ಯಾವುದೇ ಸಿನಿಮಾ ಸದ್ದು ಮಾಡಲಿಲ್ಲ. ಭಾರೀ ನಿರೀಕ್ಷೆ ಮೂಡಿಸಿದ್ದ ಒಂದೆರಡು ಸಿನಿಮಾಗಳು ಮುಗ್ಗರಿಸಿದ್ದವು. ಇದೆಲ್ಲದರ ನಡುವೆ ಇದೇ ವರ್ಷ 'ಕಾಟೇರ' ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಲಾಗಿದೆ. ಸಾಕಷ್ಟು ಜನ ಟೀಸರ್ನಲ್ಲಿ ಪದೇ ಪದೇ ರಿಲೀಸ್ ಡೇಟ್ ನೋಡಿ ನೋಡಿ ಖಚಿತಪಡಿಸಿಕೊಂಡಿದ್ದಾರೆ. ಅಷ್ಟರಮಟ್ಟಿಗೆ 'ಕಾಟೇರ' ಅಪ್ಡೇಟ್ ಅಚ್ಚರಿ ಮೂಡಿಸಿದೆ.

ಒಂದು ತಿಂಗಳಲ್ಲಿ ಪ್ರಚಾರ ಮಾಡೋಕೆ ಸಾಧ್ಯಾನಾ? 'ಸಲಾರ್' ಬೆನ್ನಲ್ಲೇ ರಿಲೀಸ್ ಮಾಡುತ್ತಿರುವುದು ಸರೀನಾ? ಥಿಯೇಟರ್ ಸಿಗುತ್ತಾ? ಎನ್ನುವ ಚರ್ಚೆಯ ನಡುವೆ ಚಿತ್ರತಂಡ ಮಾತ್ರ 'ಕಾಟೇರ' ಸಿನಿಮಾ ಬಗ್ಗೆ ಬಹಳ ಭರವಸೆಯಿಂದ ಇದೆ. ಇದೇ ಕಾರಣಕ್ಕೆ ಡಿಸೆಂಬರ್ 29ಕ್ಕೆ ಸಿನಿಮಾ ತೆರೆಗೆ ತರುವ ನಿರ್ಧಾರಕ್ಕೆ ಬಂದಿದೆ.
'ಕಾಟೇರ' ರಿಲೀಸ್ ಡೇಟ್ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಫಿಲ್ಮಿಬೀಟ್ಗೆ ಪ್ರತಿಕ್ರಿಯಿಸಿದ್ದಾರೆ. "ಸಿನಿಮಾ ಪ್ರಚಾರ ಮಾಡಲು ಒಂದು ತಿಂಗಳು ಸಾಕಾಗಲ್ವ? ನಮ್ಮದು ನಾರ್ಮಲ್ ಸಿನಿಮಾ ಅಲ್ವಲ್ಲ.. ಫೋರ್ಸ್ ಇರುವಂತಹ ಸಿನಿಮಾ. ನಾವು ಎಲ್ಲಾ ವಿಧದಲ್ಲೂ ರೆಡಿ ಇದ್ದೀವಿ. ಎಲ್ಲಾ ರೆಡಿ ಮಾಡಿಟ್ಟುಕೊಂಡು ಅನೌನ್ಸ್ ಮಾಡಬೇಕು ಎಂದುಕೊಂಡಿದ್ದೆವು. ಟೀಸರ್, ಟ್ರೈಲರ್, ಸಾಂಗ್ಸ್ ಎಲ್ಲಾ ಬರುತ್ತೆ" ಎಂದು ಹೇಳಿದ್ದಾರೆ. ತರುಣ್ ಮಾತಿನಲ್ಲೇ ಸಿನಿಮಾ ಬಗ್ಗೆ ಇರುವ ಭರವಸೆ ಗೊತ್ತಾಗುತ್ತದೆ.
ರಾಕ್ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ದರ್ಶನ್ ಜೊತೆ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇನ್ನುಳಿದಂತೆ ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಬಿರಾದಾರ್, ಶ್ರುತಿ, ಕುಮಾರ್ ಗೋವಿಂದ್ ಚಿತ್ರದ ತಾರಾಗಣದಲ್ಲಿದ್ದಾರೆ.
ವಿ. ಹರಿಕೃಷ್ಣ ಸಂಗೀತ, ಮಾಸ್ತಿ ಸಂಭಾಷಣೆ ಹಾಗೂ ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ. ನಿರ್ದೇಶಕ ಜಡೇಶ್ ಹಾಗೂ ತರುಣ್ ಚಿತ್ರಕ್ಕೆ ಕತೆ ಸಿದ್ಧಪಡಿಸಿದ್ದಾರೆ. ಕನ್ನಡದಲ್ಲಿ ಮಾತ್ರ 'ಕಾಟೇರ' ಸಿನಿಮಾ ರಿಲೀಸ್ ಆಗಲಿದೆ. 70ರ ದಶಕದ ಕತೆಯನ್ನು 'ಕಾಟೇರ' ಚಿತ್ರದಲ್ಲಿ ಹೇಳಲಾಗುತ್ತಿದೆ. 'ಉಳುವವನೆ ಭೂಮಿಯ ಒಡೆಯ' ಕಾಯ್ದೆ ಜಾರಿಯಾದಾಗ ಹಳ್ಳಿಗಳಲ್ಲಿ ನಡೆದ ಸಂಘರ್ಷದ ಕತೆ ಚಿತ್ರದಲ್ಲಿದೆ. ಇನ್ನು ಟೀಸರ್ ನೋಡುತ್ತಿದ್ದರೆ ತಾಯಿ ಸೆಂಟಿಮೆಂಟ್ ಕೂಡ ಚಿತ್ರದಲ್ಲಿ ಅನ್ನೋದು ಗೊತ್ತಾಗುತ್ತಿದೆ.


Click it and Unblock the Notifications











