'ರಾಬರ್ಟ್' ಪೈರಸಿ ಕಾಪಿ ಮಾರುತ್ತಿದ್ದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ದರ್ಶನ್ ಅಭಿಮಾನಿ
ಡಿ ಬಾಸ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರವನ್ನು ಪೈರಸಿ ಮಾಡಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ದರ್ಶನ್ ಅಭಿಮಾನಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿ ವಿಶ್ವನಾಥ್ ಎಂದು ತಿಳಿದುಬಂದಿದ್ದು, ಈತನ ವಿರುದ್ಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಬರ್ಟ್ ಬಿಡುಗಡೆಯಾದ ದಿನವೇ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದ ಚಿತ್ರತಂಡಕ್ಕೆ ಚಿತ್ರವನ್ನು ಚಿತ್ರಮಂದಿರಗಳಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟು, ದುಡ್ಡು ಮಾಡುವ ದೊಡ್ಡ ಗ್ಯಾಂಗ್ ಇದರ ಹಿಂದೆ ಇರುವ ಅನುಮಾನ ಮೂಡಿತ್ತು.
ಇದೊಂದು ದೊಡ್ಡ ಜಾಲವಾಗಿ ಬೆಳೆದಿದ್ದು, ನಾನಾ ಜಿಲ್ಲೆಯಲ್ಲಿ ಪೈರಸಿ ವಂಚಕರು ಇರುವ ಸುಳಿವು ಸಿಕ್ಕಿದೆ. ಆರೋಪಿಗಳಿಗಾಗಿ ಮಾಗಡಿ ರಸ್ತೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ತಿಳಿಸಿದ್ದಾರೆ.

ರಾಬರ್ಟ್ ಚಿತ್ರವನ್ನು ಸೆರೆಹಿಡಿದು ಆರೋಪಿಗಳು, ವಾಟ್ಸಪ್, ಇನ್ಸ್ಟಾಗ್ರಾಮ್ ಇತರೆ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟಿದ್ದರು. ಎಚ್ ಡಿ ಪ್ರಿಂಟ್ ಕೇಳಿದರೆ ಹಣ ಪಡೆದು ನೀಡುತ್ತಿದ್ದರು. ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದ ಲಿಂಕ್ ಬೆನ್ನು ಬಿದ್ದ ದರ್ಶನ್ ಅಭಿಮಾನಿಯೊಬ್ಬ ಎಚ್ಡಿ ಗುಣಮಟ್ಟದ ವಿಡಿಯೋ ಕೊಡುವಂತೆ ಕೇಳಿದ್ದಾನೆ. ಹೆಚ್ಚು ಹಣ ನೀಡಿದರೆ ಎಚ್ಡಿ ಪ್ರಿಂಟ್ ನೀಡುವುದಾಗಿ ವಿಶ್ವನಾಥ್ ಹೇಳಿದ್ದಾನೆ. ಹಣ ಕೊಡುವುದಾಗಿ ಹೇಳಿ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರ ಬಳಿ ಕರೆಸಿಕೊಂಡು, ವಿಶ್ವನಾಥ್ ಎಂಬಾತನನ್ನು ಹಿಡಿದು ಮಾಗಡಿ ರಸ್ತೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಹಲವಾರು ಸಿನಿಮಾ ಲೀಕ್ ಮಾಡಿರುವುದು ಗೊತ್ತಾಗಿದೆ. ಅಲ್ಲದೇ ಈ ಸಿನಿಮಾ ಲಿಂಕ್ ಕಳಿಸುವ ಮೂಲಕ ಹಣ ಪಡೆಯುತ್ತಿದ್ದ ಸಂಗತಿ ಗೊತ್ತಾಗಿದೆ. ಆರೋಪಿಯ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದ್ದು, ವಿಶ್ವನಾಥ್ ಮೊಬೈಲ್ ಸಂಪರ್ಕ ಸಂಖ್ಯೆ ಜಾಡು ಹಿಡಿದು ಇತರರಿಗಾಗಿ ಶೋಧ ನಡೆದಿದೆ.
ಡಿಸಿಪಿ ಸಂಜೀವ ಪಾಟೀಲ್ ಅವರ ಸೂಚನೆ ಮೇರೆಗೆ, ರಾಜ್ಯದ ನಾನಾ ಜಿಲ್ಲೆಗಳಲ್ಲಿ ಬೇರು ಬಿಟ್ಟಿರುವ ಪೈರಸಿ ಮಾಡುವವರನ್ನು ಬಂಧಿಸುವಂತೆ ಸೂಚಿಸಿದ್ದಾರೆ.
ಈಗಾಗಲೇ ರಾಬರ್ಟ್ ತಂಡ ಸುಮಾರು 3ಸಾವಿರಕ್ಕೂ ಅಧಿಕ ಪೈರಸಿ ಲಿಂಕ್ ಗಳನ್ನು ಡಿಲೀಟ್ ಮಾಡಿಸಿದ್ದು, ಲಿಂಕ್ ಹುಡುಕಿ ಡಿಲೀಟ್ ಮಾಡುವ ಕೆಲಸ ಇನ್ನೂ ಮುಂದುವರೆಸಿದ್ದಾರೆ. ಪೈರಸಿ ನಡುವೆಯೂ ರಾಬರ್ಟ್ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಕೋಟಿ ಕೋಟಿ ಕಲೆಕ್ಷನ್ ಮಾಡಿದೆ.


Click it and Unblock the Notifications











