ಬುದ್ಧಿ ಕಲಿಯದ ಕಿಡಿಗೇಡಿಗಳು; ಈಗ ದರ್ಶನ್ ತಾಯಿ, ಸುದೀಪ್ ತಾಯಿ ಅವರ ಟಾರ್ಗೆಟ್!
ಸೋಶಿಯಲ್ ಮೀಡಿಯಾ ಬಳಕೆದಾರರ ಮೇಲೆ ಕಡಿವಾಣ ಹಾಕುವುದು ಅಷ್ಟು ಸುಲಭವಲ್ಲ. ಫೇಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಕೆಟ್ಟ ಕೆಟ್ಟ ಕಾಮೆಂಟ್ ಹಾಕುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ತಮಗೆ ಕೆಟ್ಟದಾಗಿ ಮೆಸೇಜ್ ಮಾಡಿದವರ ವಿರುದ್ಧ ನಟಿ ರಮ್ಯಾ ಕಾನೂನು ಕ್ರಮ ಕೈಗೊಂಡಿದ್ದರು. ಬಳಿಕ ಕೊಂಚಮಟ್ಟಿಗೆ ಕಿಡಿಗೇಡಿಗಳು ಉಪಟಳ ಕಮ್ಮಿ ಆಗಿತ್ತು.
ಇತ್ತೀಚೆಗೆ ನಟ ಸುದೀಪ್ ಕೂಡ ಸೋಶಿಯಲ್ ಮೀಡಿಯಾ ಟ್ರೋಲ್ಸ್ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದರು. ಇಂತಹ ಕೆಲಸಕ್ಕೆ ಕೈ ಹಾಕಬೇಡಿ ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದರು. ಆದರೂ ಟ್ರೋಲ್ ಮಾಡುವವರ ಹುಚ್ಚಾಟ ಕಮ್ಮಿ ಆಗ್ತಿಲ್ಲ. ಇದೀಗ ನಟ ದರ್ಶಬ್ ತಾಯಿ ಮೀನಾ ತೂಗುದೀಪ ಹಾಗೂ ನಟ ಸುದೀಪ್ ತಾಯಿ ದಿವಂಗತ ಸರೋಜಮ್ಮ ಅವರ ಬಗ್ಗೆ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬರನ್ನು ಕೆಣಕಿ ಪೋಸ್ಟ್ ಮಾಡುವುದು, ಅದನ್ನು ತಿರುಗೇಟು ಎನ್ನುವಂತೆ ಮತ್ತೊಬ್ಬರು ಪೋಸ್ಟ್ ಮಾಡುವುದು ಹೀಗೆ ಟ್ವಿಟ್ಟರ್ನಲ್ಲಿ ಕೆಸರೆರಚಾಟ ನಡೀತಿದೆ.

ಅಭಿಮಾನಿಗಳ ನಡುವೆ ಸಂಘರ್ಷ ಇಂದು ನಿನ್ನೆಯದಲ್ಲ. ಆದರೆ ಮೊದಲೆಲ್ಲಾ ಥಿಯೇಟರ್ಗಳ ಮುಂದೆ, ರಸ್ತೆಗಳಲ್ಲಿ ಪೋಸ್ಟರ್ ಹರಿಯುವುದು, ಘೋಷಣೆ ಕೂಗುವುದು ಮಾಡುತ್ತಿದ್ದರು. ಕೆಲವೊಮ್ಮೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಿತ್ತು. ಆದರೆ ಈಗ ಫ್ಯಾನ್ಸ್ ವಾರ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಸೈಬರ್ ಕ್ರೈಂ ಪೊಲೀಸರು ಎಷ್ಟೇ ಕ್ರಮ ಕೈಗೊಂಡರೂ ಕಿಡಿಗೇಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಸಾಧ್ಯವಾಗ್ತಿಲ್ಲ. ಒಂದು ಫೇಕ್ ಅಕೌಂಟ್ ಡಿಲೀಟ್ ಆಗುತ್ತಿದ್ದಂತೆ ಮತ್ತೊಂದು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಕಿಡಿಗೇಡಿಗಳು ಪೋಸ್ಟ್, ಕಾಮೆಂಟ್ ಮಾಡಿ ಹುಚ್ಚಾಟ ಮೆರೆಯುತ್ತಿದ್ದಾರೆ.
ಸ್ಟಾರ್ ನಟರನ್ನು ಮಾತ್ರವಲ್ಲದೇ ಅವರ ಕುಟುಂಬದ ಸದಸ್ಯರ ಹೆಸರು ಹಾಗೂ ಫೋಟೊ ಬಳಸಿ ಟ್ರೋಲ್ ಮಾಡುತ್ತಿದ್ದಾರೆ. ತಮ್ಮ ಕೀಳು ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ. ಇದು ಸಹಜವಾಗಿಯೇ ಅಭಿಮಾನಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ.

ಎರಡು ವರ್ಷಗಳ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಗ್ಗೆಯೂ ಇದೇ ರೀತಿ ಕೆಲವರು ಟ್ರೋಲ್ ಮಾಡಿದ್ದರು. ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು. ಈ ಸಂಬಂಧ ಸಾಮಾಜಿಕ ಹೋರಾಟಗಾರ ಆರ್ ಭಾಸ್ಕರ್ ಪ್ರಸಾದ್ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದರು. ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಪ್ರಕರಣ ಸಂಬಂಧ ಸ್ಪಷ್ಟನೆ ನೀಡುವಂತೆ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಪೊಲೀಸರು ನೋಟಿಸ್ ಸಹ ನೀಡಿದ್ದರು. ಆದರೆ ಪೊಲೀಸರ ತನಿಖೆಗೆ ವಿಜಯಲಕ್ಷ್ಮಿ ನಿರಾಸಕ್ತಿ ತೋರಿಸಿದ್ದರು. ಸದ್ಯ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಈ ಪ್ರಕರಣದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿರಲು ತೀರ್ಮಾನಿಸಿದಂತೆ ಕಾಣ್ತಿದೆ.
ಇತ್ತೀಚೆಗೆ ಅಭಿಮಾನಿಗಳ ಜೊತೆ ಸುದೀಪ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಬಳಿಕ ಮಾತನಾಡಿ ಅಭಿಮಾನಿಗಳ ಬಗ್ಗೆ ಮನವಿ ಮಾಡಿದ್ದರು. "ಆನ್ಲೈನ್ನಲ್ಲಿ ಯಾರೇ, ಯಾವುದೇ ಪೇಜ್ನಿಂದ ನನಗೆ ಎಷ್ಟೇ ಬೈದರೂ ನೀವು ಮಾತ್ರ ಪ್ರತಿಕ್ರಿಯಿಸಬೇಡಿ. ನಮ್ಮ ಅಫೀಷಿಯಲ್ ಫ್ಯಾನ್ ಪೇಜ್ಗಳಿಂದ ಯಾವ ಕಲಾವಿದರಿಗೂ ಅವಮಾನ ಮಾಡಬೇಡಿ. ಯಾವ ತೆಗಳಿಕೆಗೆ ನಾನು ಬಿದ್ದಿಲ್ಲ, ಹೊಗಳಿಕೆಯಿಂದ ನಾನು ಎದ್ದಿಲ್ಲ. ನಮ್ಮ ಸಿನಿಮಾ ಮಾತ್ರ ನಮ್ಮ ಆಸ್ತಿ. ಯಾವ ಪೇಜ್ಗೂ ತಲೆ ಬಾಗಬೇಡಿ. ಯಾವ ಅವಮಾನಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ಯಾರ್ ಯಾರ್ ಕಿತ್ತೋಗಿರೋ ನನ್ಮಕ್ಕಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ" ಎಂದು ಮನವಿ ಮಾಡಿದ್ದರು.


Click it and Unblock the Notifications











