ಉಪೇಂದ್ರನಿಗೆ ತಿರುಗೇಟು ನೀಡುವ ಜಿತೇಂದ್ರ
ಈ ವರ್ಷದ ಆದಿಯಲ್ಲೇ ತೆರೆಕಾಣಲು ಹತ್ತಿರ ಹತ್ತಿರ 20ಕ್ಕೂ ಹೆಚ್ಚು ಚಿತ್ರಗಳು ಕ್ಯೂ ನಿಂತಿರುವಾಗ, ಈ ವಾರ ಇನ್ನೂ ನಾಲ್ಕು ಕನ್ನಡ ಚಿತ್ರಗಳು ಸೆಟ್ಟೇರಿವೆ. ಶನಿವಾರದಿಂದೀಚೆಗೆ ಮುಹೂರ್ತಾ ನಂತರ ಚಿತ್ರೀಕರಣ ಆರಂಭಿಸಿದ ನಾಲ್ಕು ಚಿತ್ರಗಳ ಪೈಕಿ ಮೂರು ರೀಮೇಕ್ ಆದರೆ, ಮತ್ತೊಂದು ಈಗಾಗಲೇ ತೆರೆಕಂಡು ಜನಪ್ರಿಯವಾದ ಚಿತ್ರವೊಂದನ್ನು ವಿರೋಧಿಸುವ ಚಿತ್ರ ಎನ್ನಲು ಅಡ್ಡಿ ಇಲ್ಲ.
ಭಾವ ಭಾಮೈದ: ಸೋಮವಾರ ಸೆಟ್ಟೇರಿದ 'ಭಾವ ಭಾಮೈದ" ಖ್ಯಾತ ನಿರ್ಮಾಪಕ ರಾಮು ಅವರು ರಾಮು ಎಂಟರ್ಪ್ರೆೃಸಸ್ ಲಾಂಚನದಲ್ಲಿ ನಿರ್ಮಿಸುತ್ತಿರುವ ಚಿತ್ರ. ಈ ಚಿತ್ರ ತೆಲುಗಿನ 'ಭಾವ ಬಾಮರ್ದಿ" ಚಿತ್ರದ ರೀಮೇಕ್. ಶಿವರಾಜ್ಕುಮಾರ್, ಪ್ರಕಾಶ್ ರೈ, ಮೋಹಕ ತಾರೆ ರಂಭಾ ಅಭಿನಯದ ಈ ಚಿತ್ರದ ನಿರ್ದೇಶಕರು ಕಿಶೋರ್ ಸರ್ಜಾ.
ಹಂಸಲೇಖ ಈ ಚಿತ್ರಕ್ಕಾಗಿ ಆರು ಹಾಡುಗಳನ್ನು ರಚಿಸಿ, ರಾಗ ಸಂಯೋಜಿಸಿದ್ದಾರೆ. ಗೀತೆಗಳ ಧ್ವನಿಮುದ್ರಣ ಕಾರ್ಯ ಈಗಾಗಲೇ ಆಕಾಶ್ ಧ್ವನಿಗ್ರಹಣ ಕೇಂದ್ರದಲ್ಲಿ ಮುಗಿದಿದ್ದು, ಸೋನು ನಿಗಮ್ ಗೀತೆಗಳನ್ನು ಹಾಡಿದ್ದಾರೆ. ಬಳ್ಳಾರಿ ರಸ್ತೆಯ ಕಲ್ಯಾಣ ಮಂಟಪವೊದರಲ್ಲಿ ಈ ಚಿತ್ರದ ಮೊದಲ ದೃಶ್ಯದ ಚಿತ್ರೀಕರಣ ನಡೆಯಿತು. ಶೋಭರಾಜ್, ದೊಡ್ಡಣ್ಣ, ಸಾಧು ಕೋಕಿಲಾ ತಾರಾಬಳಗದಲ್ಲಿದ್ದಾರೆ.
ಜೇನುಗೂಡು : ರಾಷ್ಟ್ರಗೀತೆ ನಿರ್ಮಾಪಕರು ಈಗ 'ಜೇನುಗೂಡು" ಎಂಬ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. ಕೆ. ಮಂಜು ನಿರ್ಮಾಣದ ಈ ಚಿತ್ರ ಶನಿವಾರ ಅಬ್ಬಯಿನಾಯ್ಡು ಸ್ಟುಡಿಯೋದಲ್ಲಿ ಸೆಟ್ಟೇರಿತು. ಈ ಚಿತ್ರದ ನಾಯಕರು ದೇವರಾಜ್ ಹಾಗೂ ಕುಮಾರ್ ಗೋವಿಂದ್. ನಾಯಕಿಯರು ಶ್ರುತಿ ಹಾಗೂ ಸಿತಾರ. ಅಂದಹಾಗೆ ಈ ಚಿತ್ರ ತಮಿಳಿನ 'ಕೂಡಿ ವಾಳ್ದಾಳ್ ಕೂಡಿ ನನ್ನೆ"ೖ ಚಿತ್ರದ ರೀಮೇಕ್.
ಕುಶಲವೇ ಕ್ಷೇಮವೆ : ಶನಿವಾರವೇ ಸೆಟ್ಟೇರಿದ ಮತ್ತೊಂದು ಚಿತ್ರ 'ಕುಶಲವೇ ಕ್ಷೇಮವೆ". 'ಕಾಲಮಿಲ್ಲ ಕಾದಲ್ ವಾಳ್ಗೆ" ಎಂಬ ತಮಿಳು ಚಿತ್ರದ ರೀಮೇಕ್. ಮಹೇಂದ್ರ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದ ನಾಯಕ ರಮೇಶ್. ನಾಯಕಿಯ ಪಾತ್ರಕ್ಕೆ ಶೋಧ ನಡೆದಿದ್ದು. ಸ್ಪರ್ಶದ ರೇಖಾ ನಾಯಕಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎಂಬ ವರ್ತಮಾನ ಬಂದಿದೆ. ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮೊದಲ ದೃಶ್ಯದ ಚಿತ್ರೀಕರಣ ನಡೆದಿದೆ.
ಜಿತೇಂದ್ರ : ಉಪೇಂದ್ರನ ('ನಾನು") ವಧಿಸಲು ಬಂದವನೇ ಈ 'ಜಿತೇಂದ್ರ". ಅಚ್ಚರಿಯಾಯಿತೇ? ನೀವು ಉಪೇಂದ್ರ ಅಭಿನಯದ 'ಉಪೇಂದ್ರ" ಚಿತ್ರ ನೋಡಿದ್ದೀರಲ್ಲವೇ. ಅದರಲ್ಲಿ 'ನಾನು" ಎಂಬ ಪಾತ್ರದಲ್ಲಿ ಉಪೇಂದ್ರ ಅಭಿನಯಿಸಿದ್ದಾರೆ.
ಗಲಾಟೆ ಅಳಿಯಂದಿರು ಖ್ಯಾತಿಯ ಕುಮಾರ ಸ್ವಾಮಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಉಪೇಂದ್ರನ 'ನಾನು" ಪಾತ್ರಕ್ಕೆ ಸಂಪೂರ್ಣ ಉಲ್ಟಾ ಪಾತ್ರದಲ್ಲಿ 'ಜಿತೇಂದ್ರ" ಸಜ್ಜಾಗುತ್ತಿದ್ದಾನೆ. ಅಂದರೆ, ಉಪೇಂದ್ರ ಚಿತ್ರದ ನೀತಿ ವಿರೋಧಿಸಲೆಂದೇ ಈ ಚಿತ್ರ ನಿರ್ಮಾಣವಾಗುತ್ತಿದೆ ಎಂಬುದು ಸ್ಯಾಂಡಲ್ವುಡ್ನಲ್ಲಿ ಹಬ್ಬಿರುವ ಸುದ್ದಿ.
ಈ ಚಿತ್ರ ಗೆಲ್ಲಲಿ, ಸೋಲಲಿ, ಲಾಸೇ ಆಗಲಿ ಅಡ್ಡಿ ಇಲ್ಲ. ಆದರೆ, ಉಪೇಂದ್ರನಿಗೆ ತಿರುಗೇಟು ನೀಡಲೆಂದೇ ಜಿತೇಂದ್ರನ ತಯಾರಿ ಸಾಗಿದೆ. ಅಂದಹಾಗೆ ಜಿತೇಂದ್ರ ಹೀರೋ ಯಾರು ಗೊತ್ತೆ ? ನವರಸ ನಾಯಕ ಜಗ್ಗೇಶ್. ಬಸವೇಶ್ವರ ನಗರದ ದೇವಾಲಯವೊಂದರಲ್ಲಿ ಭಾನುವಾರ ಚಿತ್ರದ ಪ್ರಥಮ ದೃಶ್ಯದ ಚಿತ್ರೀಕರಣ ನಡೆಯಿತು.


Click it and Unblock the Notifications