ಸಂಕ್ರಾಂತಿಯಂದು ತೆಲುಗು, ತಮಿಳಿನ ಬಿಗ್ ಸಿನಿಮಾಗಳ ನಡುವೆ ಕನ್ನಡದ ಏಕೈಕ ಚಿತ್ರ!

ಸಂಕ್ರಾಂತಿ ಬಂತೆಂದರೆ ಸಾಕು ತೆಲುಗು ಹಾಗೂ ತಮಿಳು ಚಿತ್ರರಂಗಗಳ ದಿಗ್ಗಜ ನಟರ ಚಿತ್ರಗಳು ಬಿಡುಗಡೆಯಾಗಿ ಕೋಟಿ ಕೋಟಿ ಬಾಚುತ್ತವೆ. ದಸರಾ, ದೀಪಾವಳಿ ರೀತಿಯೇ ಸಂಕ್ರಾಂತಿ ಹಬ್ಬದ ವೇಳೆ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ತಮಿಳು ರಾಜ್ಯಗಳಲ್ಲಿ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುವುದು ಕಾಮನ್. ಕೇವಲ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುವುದು ಮಾತ್ರವಲ್ಲದೇ ಈ ಚಿತ್ರಗಳ ನಡುವೆ ಗೆದ್ದವರಾರು ಹಾಗೂ ಬಿದ್ದವರಾರು ಎಂಬ ಪೈಪೋಟಿ ಸಹ ಏರ್ಪಡುತ್ತದೆ.
ಇನ್ನು ಈ ಸಂಕ್ರಾಂತಿ ಬಿಡುಗಡೆ 'ಪೊಂಗಲ್ ರಿಲೀಸ್' ಎಂಬ ಹೆಸರಿನಿಂದಲೇ ಖ್ಯಾತಿಯನ್ನು ಪಡೆದಿದ್ದು, ಈ ದಿನಗಳಂದು ಕರ್ನಾಟಕದಲ್ಲಿ ಕನ್ನಡದ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾದದ್ದು ಅತಿ ಅಪರೂಪ. ನೇರವಾಗಿ ಹೇಳಬೇಕೆಂದರೆ ಈ ದಿನಗಳಂದು ಕರ್ನಾಟಕದಲ್ಲಿಯೂ ಸಹ ತೆಲುಗು ಹಾಗೂ ತಮಿಳು ಚಿತ್ರಗಳ ಹಾವಳಿ ಹೆಚ್ಚಾಗಿರುತ್ತದೆ. ರಾಜ್ಯದಲ್ಲಿಯೂ ಸಹ ನೆರೆ ರಾಜ್ಯಗಳ ಚಿತ್ರಗಳು ಕೋಟಿ ಕೋಟಿ ಬಾಚಿ ಅಬ್ಬರಿಸುತ್ತವೆ.
ಸಾಲು ಸಾಲು ರಜಾ ದಿನಗಳು ಇರುವ ಕಾರಣ ಈ ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರಗಳನ್ನು ತೆರೆಗೆ ತರುತ್ತವೆ ಟಾಲಿವುಡ್ ಹಾಗೂ ಕಾಲಿವುಡ್ ಚಿತ್ರರಂಗಗಳು. ಈ ವರ್ಷವೂ ಸಂಕ್ರಾಂತಿ ಪ್ರಯುಕ್ತ ತೆಲುಗಿನಲ್ಲಿ ಬಾಲಕೃಷ್ಣ ಅಭಿನಯದ ವೀರಾ ನರಸಿಂಹರೆಡ್ಡಿ ಹಾಗೂ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಬಿಡುಗಡೆಯಾಗುತ್ತಿದ್ದರೆ, ತಮಿಳಿನಲ್ಲಿ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ನಟನೆಯ ತುನಿವು ಚಿತ್ರಗಳೂ ಸಹ ಬಿಡುಗಡೆಯಾಗುತ್ತಿವೆ.
ಈಗಾಗಲೇ ಈ ಚಿತ್ರಗಳ ಹಾಡುಗಳನ್ನು ಬಿಡುಗಡೆಗೊಳಿಸಿರುವ ಚಿತ್ರತಂಡಗಳು ಚಿತ್ರಗಳ ಹೈಪ್ ಹೆಚ್ಚಿಸುತ್ತಿದ್ದರೆ, ಕನ್ನಡದ ಯಾವ ಚಿತ್ರಗಳು ಸಂಕ್ರಾಂತಿ ಪ್ತಯುಕ್ತ ಬಿಡುಗಡೆಯಾಗಬಹುದು ಎಂಬ ಪ್ರಶ್ನೆ ಎದ್ದಿತ್ತು. ದೊಡ್ಡ ಚಿತ್ರಗಳ ನಡುವೆ ಬರುವ ಪ್ರಯತ್ನವನ್ನು ಯಾವ ಚಿತ್ರತಂಡ ಮಾಡಬಹುದು ಎಂಬ ಪ್ರಶ್ನೆಯ ನಡುವೆಯೇ ಆರ್ಕೆಸ್ಟ್ರಾ ಮೈಸೂರು ಎಂಬ ಚಿತ್ರ ಸಂಕ್ರಾಂತಿಗೊಂದು ಕನ್ನಡ ಸಿನಿಮಾ ಎಂದು ಮುಂದೆ ಬಂದಿದೆ.
ಜನವರಿ 12ರಂದು ಈ ಚಿತ್ರ ಬಿಡುಗಡೆಯಾಗಲಿದ್ದು, ಸುನಿಲ್ ಮೈಸೂರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರೆ, ಅಶ್ವಿನಿ ವಿಜಯ್ ಕುಮಾರ್ ಹಾಗೂ ರಘು ದೀಕ್ಷಿತ್ ಬಂಡವಾಳ ಹೂಡಿದ್ದಾರೆ ಹಾಗೂ ಡಾಲಿ ಧನಂಜಯ್ ಈ ಚಿತ್ರದ ಎಲ್ಲಾ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.


Click it and Unblock the Notifications











