ನಟ ಚೇತನ್ ಅಹಿಂಸಾ ವೀಸಾ ರದ್ದು: ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ
ಕನ್ನಡ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ವೀಸಾ ರದ್ದುಗೊಳಿಸಿದ್ದು, ಈ ಸಂಬಂಧ ಕೇಂದ್ರ ಗೃಹ ಇಲಾಖೆಯಿಂದ ನೋಟಿಸ್ ಜಾರಿ ಆಗಿದೆ. ಅಷ್ಟು ಮಾತ್ರವಲ್ಲದೇ ಅವರಿಗೆ ನೀಡಿದ್ದ ಭಾರತೀಯ ಸಾಗರೋತ್ತರ ಪೌರತ್ವವನ್ನು ಕೂಡ ರದ್ದುಗೊಳಿಸಿರುವುದಾಗಿ ವರದಿಯಾಗಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ನಟ ಚೇತನ್ ಅಹಿಂಸಾ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಾದಾತ್ಮಕ ಹೇಳಿಕೆಗಳಿಂದ ಚೇತನ್ ಪದೇ ಪದೇ ಸುದ್ದಿ ಆಗುತ್ತಿದ್ದಾರೆ. ಇತ್ತೀಚೆಗೆ ಹೈಕೋರ್ಟ್ ನ್ಯಾಯಮೂರ್ತಿಗಳ ಹೆಸರು ಉಲ್ಲೇಖಿಸಿ ನೀಡಿದ್ದ ಹೇಳಿಕೆ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಸಾಲದ್ದಕ್ಕೆ ಪದೇ ಪದೇ ಸೋಶಿಯಲ್ ಮೀಡಿಯಾದಲ್ಲಿ ದೇಶದ ಸಾಮಾಜಿಕ ಶಾಂತಿ ಹಾಗೂ ಜನರ ನೆಮ್ಮದಿಗೆ ಧಕ್ಕೆ ತರುವಂತ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಸಂದರ್ಶನಗಳಲ್ಲೂ ಇಂತದ್ದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಲಾಗುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಟ ಚೇತನ್ "23 ವರ್ಷ ನಾನು ಇದ್ದಿದ್ದು, ಓದಿದ್ದು ಅಮೆರಿಕಾದಲ್ಲಿ. ಆ ನಂತ್ರ ಸೇವೆ ಸಲ್ಲಿಸಲು ನಾನು ಭಾರತಕ್ಕೆ ಬಂದೆ. ಅಲ್ಲಿಂದ ಮುಂದೆ ಸಿನಿಮಾ ಸೇರಿದಂತೆ ಒಂದಷ್ಟು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹೋರಾಟ ಮಾಡಿ ಆದಿವಾಸಿಗಳಿಗಾಗಿ 528 ಮನೆಗಳನ್ನ ಕಟ್ಟಿಸಿದ್ದೇವೆ. ನಮ್ಮ ಸಿದ್ದಾಂತ, ಅಂಬೇಡ್ಕರ್ ವಾದ, ಪೆರಿಯರ್ ವಾದ ಸರ್ಕಾರಕ್ಕೆ ಇಷ್ಟವಾಗಿಲ್ಲ. ಬ್ರಾಹ್ಮಣ್ಯ ಲಾಬಿ ಎನ್ನುವ ಮಾತು ಹೇಳಿದ್ದಕ್ಕೆ 295A ಸೆಕ್ಷನ್ ಅಡಿ ಕೇಸ್ ಹಾಕಿದ್ರು. ನನ್ನ ಗನ್ ಮ್ಯಾನ್ನನ್ನು ಒಂದುವರೆ ವರ್ಷದ ಹಿಂದೆಯೇ ತೆಗೆದಿದ್ದಾರೆ."

"ಒಂದು ಸತ್ಯದ ಟ್ವೀಟ್ ಮಾಡಿದ್ದಕ್ಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದೇನೆ ಅಂತ ಮೂರು ದಿನ ಜೈಲಿಗೆ ಕಳಿಸಿದ್ರು. OCL (ಒವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ) ನನಗೆ ನೀಡಿದ್ದಾರೆ. ಇದರಲ್ಲಿ ಮತ ಹಾಕೋದು, ಚುನಾವಣೆ ನಿಲ್ಲುವುದು, ಸರ್ಕಾರಿ ನೌಕರನಾಗಿ ಕೆಲಸ ಮಾಡೋದು ಬಿಟ್ಟರೆ ಉಳಿದ ಎಲ್ಲಾ ಹಕ್ಕು ನನಗೆ ಇದೆ. ನೀವು ತುಂಬ ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದೀರಾ. ಆದ್ದರಿಂದ ನಿಮ್ಮ ವೀಸಾ ಯಾಕೆ ರದ್ದು ಮಾಡಬಾರದು ಅಂತ 10 ತಿಂಗಳ ಹಿಂದೆ(ಜೂನ್ 8, 2022) ಶೋಕಾಸ್ ನೋಟೀಸ್ ನೀಡಿದ್ದರು. ಆಗ ಗೃಹ ಇಲಾಖೆಗೆ ಹೋಗಿ ಎಲ್ಲ ದಾಖಲೆ ಸಲ್ಲಿಸಿ ಬಂದಿದ್ದೆ"
"ನಿನ್ನೆ ಮತ್ತೆ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರಾ ಎಂದು ಹೇಳಿ ವೀಸಾ ರದ್ದು ನೋಟಿಸ್ ನೀಡಿದ್ದಾರೆ. ನಾನು ದೇಶ ವಿರೋಧಿ ಚಟುವಟಿಕೆಯಲ್ಲಿ ಎಲ್ಲಿ ಭಾಗಿಯಾಗಿದ್ದೇನೆ ಉದ್ದೇಶಪೂರ್ವಕವಾಗಿ ನನ್ನ ಮೇಲೆ ಈ ರೀತಿ ಪಿತೂರಿ ಮಾಡುತ್ತಿದ್ದಾರೆ. ನಾನು ಈ ದೇಶದಲ್ಲಿ ಇರಬಾರದು ಎನ್ನುವ ಕಾರಣಕ್ಕೆ ವೀಸಾ ರದ್ದುಗೊಳಿಸಿದ್ದಾರೆ. ವಾಕ್ ಸ್ವಾತಂತ್ರವನ್ನ ಕಿತ್ತು ಹಾಕುವುದಲ್ಲದೇ, ಜೈಲಿಗೆ ಹಾಕುವುದಲ್ಲದೇ ನನ್ನನ್ನು ದೇಶದಲ್ಲೂ ಇರಬಾರದು ಅಂತ ವೀಸಾ ರದ್ದು ಮಾಡಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಾನು ಲಾಯರ್ ಬಳಿ ಮಾತನಾಡಿದ್ದೇನೆ. ಇದಕ್ಕೆ ವಿರುದ್ದವಾಗಿ ನಾನು ಸ್ಟೇ ತರುತ್ತೇನೆ, ನಾನು ಕಾನೂನು ಹೋರಾಟ ಮಾಡುತ್ತೇನೆ. ನನಗೆ 15 ದಿನದವರೆಗೆ ಸಮಯಾವಕಾಶ ಕೊಟ್ಟಿದ್ದಾರೆ. ಅಷ್ಟರಲ್ಲಿ ನಾನು ಸ್ಟೇ ತರುತ್ತೇನೆ. ನಾನು ಭಾರತದಲ್ಲಿ 18 ವರ್ಷಗಳಿಂದ ಇದ್ದೇನೆ. ಜಾನಪದ ರಂಗಭೂಮಿ ಮತ್ತು ಆದರಿಂದ ಸಾಮಾಜಿಕ ಬದಲಾವಣೆ ಎನ್ನುವ ವಿಚಾರ ಮೇಲೆ ರಿಸರ್ಚ್ ಗ್ರಾಂಡ್ ತೆಗೆದುಕೊಂಡಿದ್ದೇನೆ. 2005ರಲ್ಲಿ ನಾನು ಭಾರತಕ್ಕೆ ಬಂದೆ. 2015ರಿಂದ ಪೂರ್ಣ ಪ್ರಮಾಣದಲ್ಲಿ ಭಾರತದಲ್ಲಿಯೇ ಇದ್ದೇನೆ"
"ನನ್ನ ತಂದೆ ಮತ್ತು ತಾಯಿ ಭಾರತದವರೇ ಆಗಿರೋದು 2018ರಲ್ಲಿ OCI ಕೊಟ್ಟರು. ಅದರ ಜೊತೆಗೆ ನನ್ನ ಬಳಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಎಲ್ಲವೂ ಇದೆ. ನಾನು ಕೂಡ ದೇಶಕ್ಕೆ ಟ್ಯಾಕ್ಸ್ ಕಟ್ಟುತ್ತೇನೆ. ಈಗ ತಕ್ಷಣವೇ OCI ರದ್ದು ಮಾಡಿದ್ದೇವೆ ಅಂತ ನೋಟಿಸ್ ನೀಡಿದ್ದಾರೆ. ಇದರಲ್ಲಿ ಯಾವುದೇ ಅರ್ಥ ಇಲ್ಲ. ನಾನು ಇದೇ ದೇಶದವನು, ನನಗೆ ಅಮೆರಿಕಕ್ಕೆ ಹೋಗುವ ಮನಸ್ಸಿಲ್ಲ" ಎಂದು ಚೇತನ್ ಅಹಿಂಸಾ ಹೇಳಿದ್ದಾರೆ.


Click it and Unblock the Notifications











