ನನ್ನ ಜೀವನವನ್ನೇ ಬದಲಿಸಿದ ಚಿತ್ರ ಕಾಂತಾರ ; ಬ್ಲಾಕ್ಬಸ್ಟರ್ ಪ್ರತಿಕ್ರಿಯೆಗೆ ಕನಕವತಿ ರುಕ್ಮಿಣಿ ವಸಂತ್ ಭಾವುಕ
ಕೆಲ ಒಮ್ಮೆ ಅದೆಷ್ಟೇ ಅಲೆದಾಡಿದರೂ ಕೂಡ ಒಲಿಯದ ಅದೃಷ್ಟ ಎಂಬ ಮಾಯೆ, ಕೆಲವರ ಪಾಲಿಗೆ .. ಹಲವಾರು ಸಂದರ್ಭದಲ್ಲಿ ಬಯಸದೇನೆ ಒತ್ತರಿಸಿಕೊಂಡು ಬರುತ್ತೆ. ಇದಕ್ಕೆ ಕಣ್ಣೆದುರಿನ ಉದಾಹರಣೆಯೇ ರುಕ್ಮಿಣಿ ವಸಂತ್. ಹೌದು, ಬೀರ್ಬಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ರುಕ್ಮಿಣಿ ವಸಂತ್, ''ಸಪ್ತಸಾಗರದಾಚೆ ಎಲ್ಲೋ ಸೈಡ್ ಎ'' ಮತ್ತು ''ಸೈಡ್ ಬಿ'' ಚಿತ್ರಗಳ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದರು. ಅಕ್ಕ-ಪಕ್ಕದ ರಾಜ್ಯದವರ ಕಣ್ಣಿಗೂ ಬಿದ್ದರು.
ಇಂಥಾ ರುಕ್ಮಿಣಿ ವಸಂತ್ ಸದ್ಯ '' ಕಾಂತಾರ''ದ ಮೂಲಕ ಭಾರತದೆಲ್ಲೆಡೆ ಮನೆ ಮಾತಾಗಿದ್ದಾರೆ. ಆ ಭಾಷೆ ಈ ಭಾಷೆ ಎನ್ನದೇ ಹಲವರು ರಾಣಿ ಕನಕವತಿ ಹೆಸರನ್ನೇ ಕನವರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ರುಕ್ಮಿಣಿ ವಸಂತ ಅವರ ಅಭಿನಯ ಮತ್ತು ಸೌಂದರ್ಯದ ಕುರಿತು ಗುಣಗಾನವೇ ನಡೆಯುತ್ತಿದೆ.

ಸಹಜವಾಗಿ ವ್ಯಕ್ತವಾಗುತ್ತಿರುವ ಈ ಅಭಿಪ್ರಾಯಗಳಿಂದ.. ತಮ್ಮ ಬಗ್ಗೆ ಕೇಳಿ ಬರುತ್ತಿರುವ ಮಾತುಗಳಿಂದ.. ರುಕ್ಮಿಣಿ ವಸಂತ್ ಹೃದಯ ತುಂಬಿ ಬಂದಿದೆ. ಹೀಗಾಗಿಯೇ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ ರುಕ್ಮಿಣಿ ವಸಂತ್. ಹಾಗಿದ್ದರೆ ರುಕ್ಮಿಣಿ ವಸಂತ್ ಹೇಳಿದ್ದೇನು..? ಅವರು ಹಂಚಿಕೊಂಡ ಪತ್ರದಲ್ಲೇನಿದೆ..? ಎಂದು ತಿಳಿಯಲು ಮುಂದೆ ಓದಿ.
ರುಕ್ಮಿಣಿ ವಸಂತ್ ಹಂಚಿಕೊಂಡ ಪತ್ರ ಈ ಕೆಳಗಿನಂತೆ ಇದೆ.
''ಎಲ್ಲರಿಗೂ ನಮಸ್ಕಾರ! ಒಂದು ವರ್ಷದ ಹಿಂದೆ, ಕನ್ನಡದ ಹೆಮ್ಮೆ ಎನಿಸಿರೋ, ಕಾಂತಾರ: ಚಾಪ್ಟರ್ 1 ತಂಡ ಸೇರೋ ಅವಕಾಶ ನಂಗೆ ಸಿಕ್ಕಿತು. ಈ ಚಿತ್ರದಲ್ಲಿ ಕೆಲಸ ಮಾಡೋದು ಒಂದು ದೊಡ್ಡ ಜವಾಬ್ದಾರಿಯೂ ಹೌದು, ಸಾಹಸವೂ ಹೌದು. ಈ ಚಿತ್ರ ನನ್ನ ಜೀವನವನ್ನೇ ಬದಲಾಯಿಸಿದೆ! ನಾನು ತುಂಬಾ ಕಲಿತಿದ್ದೀನಿ ಮತ್ತು ಅದಕ್ಕಾಗಿ ನಾನು ಬಹಳ ಕೃತಜ್ಞಳಾಗಿದ್ದೇನೆ. ನಮ್ಮ ತಂಡದ ನಾಯಕರೂ, ನಿರ್ದೇಶಕರೂ ಆದ ರಿಷಬ್ ಸರ್ ಅವರಿಗೆ ತುಂಬಾ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಕಠಿಣ ಪರಿಶ್ರಮ, ದಯೆ ಮತ್ತು ಛಲ ಈ ಚಿತ್ರವನ್ನು ತುಂಬಾ ವಿಶೇಷವಾಗಿಸಿದೆ. ನನ್ನನ್ನು ನಂಬಿದ್ದಕ್ಕೆ ಮತ್ತು ನಾನು ಬೆಳೆಯಲು ಸಹಾಯ ಮಾಡಿದ್ದಕ್ಕೆ ಧನ್ಯವಾದಗಳು! ಹೊಂಬಾಳೆ ತಂಡ, ನನ್ನನ್ನು ನಿಮ್ಮ ಕುಟುಂಬದಲ್ಲಿ ಒಬ್ಬಳನ್ನಾಗಿಸಿಕೊಂಡಿದ್ದೀರಿ. ನಿಮಗೆ ನಾನು ಸದಾ ಚಿರಋಣಿ. ವಿಜಯ್ ಸರ್, ಚಲುವೆ ಗೌಡ ಸರ್, ಆದರ್ಶ್ ಮತ್ತು ತೆರೆಮರೆಯಲ್ಲಿರುವ ಎಲ್ಲರಿಗೂ - ಹಾಗೂ ನಾನು ಭೇಟಿಯಾಗಲು ಸಾಧ್ಯವಾಗದ ತಂಡದ ಇತರರಿಗೂ ತುಂಬಾ ತುಂಬಾ ಧನ್ಯವಾದಗಳು''
''ನಮ್ಮ ಸೂಪರ್ ಕೂಲ್ ಕ್ಯಾಮೆರಾಮ್ಯಾನ್ ಅರವಿಂದ್ ಮತ್ತು ಬೆಸ್ಟ್ ಆಫ್ ದಿ ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್ ಪ್ರಗತಿ. ನೀವು ನನಗೆ ಸಂಪೂರ್ಣ ಹೊಸ ಲುಕ್ ಕೊಟ್ಟಿದ್ದೀರಿ ಮತ್ತು ನಾನು ಸುಂದರವಾಗಿ ಕಾಣಿಸಿದ್ದೀನಿ ಅಂತ ಕಾಂಪ್ಲಿಮೆಂಟ್ಸ್ ಬರ್ತಿದ್ರೆ, ಅದಕ್ಕೆ ಪ್ರಮುಖ ಕಾರಣ ನೀವೇ! ನಿಮಗೆ ವಿಶೇಷವಾದ ಧನ್ಯವಾದಗಳು! ಕಾಂತಾರದ ಅತ್ಯದ್ಭುತ ಲೋಕವನ್ನ ಸೃಷ್ಟಿ ಮಾಡಿ, ನನ್ನನ್ನು ಅದರ ಒಂದು ನೈಜ ಭಾಗವಾಗಿರುವಂತೆ ನೋಡಿಕೊಂಡ ಕಲಾ ನಿರ್ದೇಶಕರಾದ ಬಾಂಗ್ಲಾನ್ ಅವರಿಗೆ ವಿಶೇಷ ಧನ್ಯವಾದಗಳು. ಅಜನೀಶ್ ಸರ್, ನಿಮ್ಮ ಸಂಗೀತಕ್ಕೆ 'ರೋಮಾಂಚನ' ಅನ್ನೋದು ಬಿಟ್ಟು ಬೇರೆ ಏನೂ ಹೇಳೋಕೆ ಸಾಧ್ಯ ಇಲ್ಲ. ಥ್ಯಾಂಕ್ಯೂ !''

''ಅನಿ, ಗುರು ಮತ್ತು ನಿರ್ದೇಶನ ತಂಡ ಎಲ್ಲರೂ ನನ್ನ ಡೈಲಾಗ್ಸ್ ಅಲ್ಲಿ ಎಷ್ಟು ಸಹಾಯ ಮಾಡಿದ್ದೀರ ಅಂದ್ರೆ, ನಿಮಗೆ ಈಗ ಥಾಂಕ್ಸ್ ಹೇಳೋಕೂ, ಯಾವ ಪದ ಬಳಸಿ ಹೇಗೆ ಹೇಳೋಕು ಅಂತ ನಿಮಗೆ ಕಾಲ್ ಮಾಡೋಣ ಅನ್ನಿಸ್ತಿದೆ. ನನ್ನ ಹೃದಯವು ನಿಮಗೆ ಧನ್ಯವಾದಗಳಿಂದ ತುಂಬಿದೆ. ನಮ್ಮ ನೃತ್ಯ ಸಂಯೋಜಕರು ಭೂಷಣ್ ಮಾಸ್ಟರ್ಗೇ ಹಾಗೆ ನಮ್ಮ ಫೈಟ್ ಮಾಸ್ಟರ್ಸ್ ಆದ ಜೂಜಿ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ಗೂ ತುಂಬಾ ಧನ್ಯವಾದಗಳು. ಗುಲ್ಶನ್ ಸರ್ ಮತ್ತು ಜಯರಾಮ್ ಸರ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದು ತುಂಬಾ ಖುಷಿ ಇದೆ''
''ಕೇಟರಿಂಗ್ ತಂಡ ನಿಮ್ಮ ಶುಚಿಯಾದ ರುಚಿಕರವಾದ ಆಹಾರ ಮತ್ತು ನೆವರ್ ಎಂಡಿಂಗ್ ಕಾಫಿ ನಮ್ಮನ್ನು ಮುನ್ನಡೆಸಿತು! ನನ್ನದೇ ಆದ ಪುಟ್ಟ ಹೇರ್ ಅಂಡ್ ಮೇಕಪ್ ತಂಡ, ಬಿಸಿಲಿರಲಿ, ಮಳೆಯಿರಲಿ, ಸದಾ ನನ್ನನ್ನು ಹೊಳೆಯುವಂತೆ ನೋಡಿಕೊಂಡವರು ನೀವು! ನನ್ನ ಹುಚ್ಚಾಟ - ತುಂಟಾಟಗಳೆಲ್ಲದರಲ್ಲೂ ನೀವು ನನ್ನ ಜೊತೆಯಾಗಿ ನಿಂತಿದ್ದೀರಿ. ಥಾಂಕ್ಯೂ ಎಂದರೆ ಕಮ್ಮಿ ಅನಿಸುತ್ತಿದೆ. ಮತ್ತು ಕೊನೆಯದಾಗಿ, ಎಲ್ಲರಿಗೂ, ವಿಶೇಷವಾಗಿ ನನ್ನನ್ನು ಹರಸಿ ಹುರಿದುಂಬಿಸುತ್ತಿರುವ ಎಲ್ಲಾ ಕನ್ನಡ ಚಲನಚಿತ್ರ ಅಭಿಮಾನಿಗಳಿಗೆ ತುಂಬು ಹೃದಯದ ಅನಂತಾನಂತ ಧನ್ಯವಾದಗಳು. ನೀವು ನಾನು ಸಿಕ್ಕಾಗೆಲ್ಲಾ. ಕನ್ನಡ ಫಿಲ್ಮಂ ಯಾವಾಗ ಅಂತ ಕೇಳ್ತಿದ್ರೀ. ಇಲ್ಲಿದೆ ಉತ್ತರ''.
ಹೀಗೆ ''ಕಾಂತಾರ'' ಚಿತ್ರದ ಪ್ರಯಾಣವನ್ನು ರುಕ್ಮಿಣಿ ವಸಂತ್ ನೆನೆದಿದ್ದಾರೆ. ಇಡೀ ತಂಡಕ್ಕೆ ಮತ್ತು ಹರಸಿ ಹಾರೈಸಿ ಬೆಂಬಲಿಸಿದ ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಧನ್ಯವಾದವನ್ನು ಹೇಳಿದ್ದಾರೆ. ರುಕ್ಮಿಣಿ ಹಂಚಿಕೊಂಡ ಈ ಬರಹಕ್ಕೆ ನಾನಾ ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.


Click it and Unblock the Notifications











