ಒನ್ ಇಂಡಿಯಾ ಜತೆ ಸಂಭ್ರಮ ಹಂಚಿಕೊಂಡ ಶೇಷಾದ್ರಿ
ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ದೇಶಕ ಪಿ. ಶೇಷಾದ್ರಿ ಅವರು ಮತ್ತೊಮ್ಮೆ ರಾಷ್ಟ್ರಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಶೇಷಾದ್ರಿ ಅವರ ಮುಂಬರುವ ಚಿತ್ರ 'ಡಿಸೆಂಬರ್ 1' ಚಲನಚಿತ್ರದ ಚಿತ್ರಕಥೆಗೆ ಪಿ ಶೇಷಾದ್ರಿ ಅವರಿಗೆ 61ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಜತೆಗೆ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಶ್ರೇಷ್ಠ ಕನ್ನಡ ಚಿತ್ರ ಎಂದು ರಾಷ್ಟ್ರ ಪ್ರಶಸ್ತಿ ಲಭಿಸಿದೆ, ಈ ಡಬ್ಬಲ್ ಖುಷಿ ಶೇಷಾದ್ರಿ ಅವರು ಒನ್ ಇಂಡಿಯಾ ಕನ್ನಡ ಜತೆ ಹಂಚಿಕೊಂಡರು.
2013ನೇ ಸಾಲಿನ ರಾಷ್ಟ್ರಚಲನಚಿತ್ರ ಪ್ರಶಸ್ತಿಗಳು ಬುಧವಾರ ಸಂಜೆ ಪ್ರಕಟಗೊಂಡಿದ್ದು, ಕನ್ನಡ ಚಿತ್ರ 'ಡಿಸೆಂಬರ್ 1' ಕ್ಕೆ ಚಿತ್ರಕಥೆ ವಿಭಾಗದ ಪ್ರಶಸ್ತಿ ಘೋಷಣೆಯಾಗಿದೆ. ಪ್ರಶಸ್ತಿ ಲಭಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಶೇಷಾದ್ರಿ ಅವರು ಒನ್ ಇಂಡಿಯಾ ಜತೆ ಮಾತನಾಡಿ 'ಸಿಎಂ ಗ್ರಾಮ ವಾಸ್ತವ್ಯದ ಕಥೆಯುಳ್ಳ ಈ ಚಿತ್ರ ಜನರಿಗೆ ತಲುಪಿದೆ ನಮ್ಮ ಶ್ರಮ ಸಾರ್ಥಕ' ಎಂದರು.
ಉತ್ತರ ಕರ್ನಾಟಕದ ಭಾಗದಲ್ಲಿ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ ಯೋಜನೆ ಜಾರಿಗೊಂಡಾಗ ನಡೆದ ಒಂದು ಪ್ರಸಂಗದ ಬಗ್ಗೆ ದಿನಪತ್ರಿಕೆಯೊಂದರಲ್ಲಿ ವರದಿ ಬಂದಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರದ ಕಥೆ ಹೆಣೆಯಲಾಗಿದೆ. ರೊಟ್ಟಿ ದೇವಕ್ಕ ಎಂಬ ಹೆಣ್ಮಗಳು ತನ್ನ ಸಂಸಾರ ನಿಭಾಯಿಸುವ ಬಗೆ, ಸಿಎಂ ಗ್ರಾಮ ವಾಸ್ತವ್ಯಕ್ಕೂ ಮುನ್ನ ಹಾಗೂ ನಂತರದ ಪರಿಸ್ಥಿತಿ, ಇಡೀ ಗ್ರಾಮ ಈ ಕುಟುಂಬವನ್ನು ಕಾಣುವ ರೀತಿಯನ್ನು ಚಿತ್ರಿಸಲು ಯತ್ನಿಸಲಾಗಿದೆ.

8ನೇ ರಾಷ್ಟಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇತ್ತಾ?
ನಿವೇದಿತಾ(ಸ್ಮಿತಾ) ಮುಖ್ಯಪಾತ್ರದಲ್ಲಿ ಉತ್ತಮವಾಗಿ ನಟಿಸಿದ್ದಾರೆ. ಚಿತ್ರಕ್ಕೆ ಪ್ರಶಸ್ತಿ ಬರುವ ನಿರೀಕ್ಷೆ ಅಂಥ ಇರಲಿಲ್ಲ. ಆದರೆ, ಪರೀಕ್ಷೆ ಬರೆದ ಮೇಲೆ ಉತ್ತಮ ಫಲಿತಾಂಶ ನಿರೀಕ್ಷೆ ಇದ್ದೇ ಇರುತ್ತೆ. ಅದೇ ರೀತಿ ಈ ಚಿತ್ರದ ಸಬ್ಜೆಕ್ಟ್ ತುಂಬಾ ಕಾಡುವಂಥದ್ದು, ಹೀಗಾಗಿ ರಾಷ್ಟ್ರಮಟ್ಟದಲ್ಲಿ ಚಿತ್ರದ ಕಥೆ ಚರ್ಚಿತವಾಗಿದೆ ಎಂಬುದೇ ಸಂತೋಷದ ಸಂಗತಿ ಎಂದು ಶೇಷಾದ್ರಿ ಹೇಳಿದರು.

ಗ್ರಾಮವಾಸ್ತವ್ಯದ ಕಥೆಯುಳ್ಳ ಚಿತ್ರ ಬಿಡುಗಡೆ?
ಏಪ್ರಿಲ್ ತಿಂಗಳ ಕೊನೆವಾರ ದೊಳಗೆ ಡಿಸೆಂಬರ್ 1 ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆದಿದೆ. ಏ.25ಕ್ಕೆ ಚಿತ್ರ ಬಿಡುಗಡೆ ಮಾಡಲು ಸಿದ್ಧತೆ ನಡೆದಿತ್ತು. ಆದರೆ, ಸ್ವಲ್ಪ ಹೆಚ್ಚುಕಮ್ಮಿ ಇದೇ ತಿಂಗಳಲ್ಲಿ ತೆರೆಗೆ ತರಲು ಬಸಂತ್ ಕುಮಾರ್ ಪಾಟೀಲ್ ಯತ್ನಿಸುತ್ತಿದ್ದಾರೆ ಎಂದರು.

ಚಿತ್ರವನ್ನು ಬರೀ ಮಲ್ಟಿಪೆಕ್ಸ್ ನಲ್ಲೇ ನೋಡಬೇಕಾ?
ಅದು ನಮ್ಮ ಕೈಲಿಲ್ಲ. ಪ್ರೇಕ್ಷಕರು ಇಷ್ಟಪಟ್ಟರೆ ಚಿತ್ರಮಂದಿರದಲ್ಲಿ ಹೆಚ್ಚು ದಿನಗಳ ಕಾಲ ಚಿತ್ರ ಇರಲು ಸಾಧ್ಯ. ಎಫ್ ಡಿಐ, ಕಿರಾಣಿ ಅಂಗಡಿ ಕುರಿತ ಕಥೆ ಇದ್ದ ಭಾರತ್ ಸ್ಟೋರ್ಸ್ ಚಿತ್ರ ಮಲ್ಪಿಪೆಕ್ಸ್ ಚಿತ್ರಮಂದಿರಗಳಲ್ಲಿ ಚೆನ್ನಾಗಿ ಓಡಿತ್ತು. ಪ್ರೇಕ್ಷಕರ ಬೇಡಿಕೆ ಇದ್ದು, ಹಣಗಳಿಕೆ ಇದ್ದರೆ ಚಿತ್ರಮಂದಿರದಿಂದ ಚಿತ್ರ ತೆಗೆಯಲು ಹೇಗೆ ಸಾಧ್ಯ ಎಂದು ಮರು ಪ್ರಶ್ನೆ ಎಸೆದರು.

ಕನ್ನಡಕ್ಕೆ ಮೂರು ಮತ್ತೊಂದು ಪ್ರಶಸ್ತಿ
* ಡಿಸೆಂಬರ್ 1 ಚಿತ್ರದ ಮೂಲಕಥೆ ಪಿ. ಶೇಷಾದ್ರಿ ಅವರಿಗೆ ರಜತ ಕಮಲ(50,000 ನಗದು ಹಾಗೂ ಪ್ರಶಸ್ತಿ ಫಲಕ),
* ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ಶ್ರೇಷ್ಥ ಕನ್ನಡ ಚಿತ್ರವಾಗಿ ಡಿಸೆಂಬರ್ 1 ಕ್ಕೆ ಪ್ರಶಸ್ತಿ, ಬಸಂತ್ ಪ್ರೊಡೆಕ್ಷನ್ ಗೆ ರಜತ ಕಮಲ 1,00,000 ರು ನಗದು ಬಹುಮಾನ.
* ಪ್ರಕೃತಿ ಚಿತ್ರದ ಚಿತ್ರಕಥೆಗೆ ಪಂಚಕ್ಷರಿ ಅವರಿಗೆ ರಜತ ಕಮಲ ಪ್ರಶಸ್ತಿ.
* ಬಾಗಾ ಬೀಚ್ ಕೊಂಕಣಿ ಚಿತ್ರಕ್ಕೂ ರಜತ ಕಮಲ ಪ್ರಶಸ್ತಿ.
* ಗಿರೀಶ್ ಕಾಸರವಳ್ಳಿ ನಿರ್ದೇಶನದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು.ಆರ್ ಅನಂತಮೂರ್ತಿ ಕುರಿತ ಕಾಲ್ಪನಿಕ ಆತ್ಮಚರಿತೆ ಕಥಾವಸ್ತುವುಳ್ಳ ಇಂಗ್ಲೀಷ್ ಭಾಷೆಯ ಸಾಕ್ಷ್ಯಚಿತ್ರಕ್ಕೆ ವಿಶೇಷ ಜ್ಯೂರಿ ಪ್ರಶಸ್ತಿ ರಜತ ಕಮಲ(1,00,000 ರು ನಗದು)

ರಾಷ್ಟ್ರಪ್ರಶಸ್ತಿಗಳ ಸರದಾರ ಶೇಷಾದ್ರಿ
2000 ಇಸವಿಯಲ್ಲಿ ತೆರೆಗೆ ಬಂದ ಶೇಷಾದ್ರಿಯ ಮೊದಲ ಚಿತ್ರ ‘ಮುನ್ನುಡಿ'.ನಂತರ ‘ಅತಿಥಿ'(2001), ‘ಬೇರು'(2004), ‘ತುತ್ತೂರಿ'(2005), ‘ವಿಮುಕ್ತಿ' (2008), ‘ಬೆಟ್ಟದ ಜೀವ (2010) ಹಾಗೂ ‘ಭಾರತ್ ಸ್ಟೋರ್ಸ್' (2012) ಚಿತ್ರಗಳು ರಾಷ್ಟ್ರಪ್ರಶಸ್ತಿ ಬಾಚಿಕೊಂಡಿವೆ. ಸಹಕಾರಿ ತತ್ವದಲ್ಲಿ ‘ಮಿತ್ರಚಿತ್ರ' ಸಂಸ್ಥೆ ಮೂಲಕ ಬಸಂತ್ ಕುಮಾರ್ ಪಾಟೀಲ್ ಅವರು ನಿರ್ಮಾಣ ಮಾಡಿರುವ ಡಿಸೆಂಬರ್ 1 ಚಿತ್ರ ಕೂಡಾ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.
ಡಿಸೆಂಬರ್ 1 ಚಿತ್ರದ ಪ್ರೋಮೊ ನೋಡಿ
ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯದ ಪರಿಣಾಮ ಬಸಾಪುರದ ರೊಟ್ಟಿ ದೇವಕ್ಕ, ಮಹದೇವಪ್ಪ ಕುಟುಂಬದ ಕಥೆಯುಳ್ಳ ಸತ್ಯಘಟನೆ ಆಧಾರಿಸಿದ ಕಾಲ್ಪನಿಕ ಚಿತ್ರ ಡಿಸೆಂಬರ್ 1 ಪ್ರೋಮೊ ನೋಡಿ


Click it and Unblock the Notifications











