Exclusive: 3 ಭಾಷೆಗಳಲ್ಲಿ 'ದೃಶ್ಯಂ- 3'; ಕನ್ನಡದಲ್ಲಿ ಆ ಆಲೋಚನೆ ಇಲ್ಲ ಅಂದ್ರು ಪಿ. ವಾಸು
ಸೂಪರ್ ಹಿಟ್ 'ದೃಶ್ಯಂ' ಚಿತ್ರದ ಮತ್ತೊಂದು ಸೀಕ್ವೆಲ್ ಘೋಷಣೆಯಾಗಿದೆ. ಸ್ವತಃ ಮೋಹನ್ ಲಾಲ್ ಈ ವಿಚಾರ ಹಂಚಿಕೊಂಡಿದ್ದಾರೆ. ಅಕ್ಟೋಬರ್ನಲ್ಲೇ 'ದೃಶ್ಯಂ- 3' ಚಿತ್ರೀಕರಣ ಆರಂಭ ಎಂದು ಹೇಳಿದ್ದಾರೆ. ಈ ಸೂಪರ್ ಹಿಟ್ ಸರಣಿಯ ಮತ್ತೊಂದು ಭಾಗ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ.
'ದೃಶ್ಯಂ' ಸಿನಿಮಾ ಹಲವು ಭಾಷೆಗಳಿಗೆ ರೀಮೆಕ್ ಆಗಿ ಗೆದ್ದಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ಹೀರೊ ಆಗಿ ಕನ್ನಡಕ್ಕೂ ಬಂದಿತ್ತು. ಪಾರ್ಟ್-1 ಹಿಟ್ ಆಗಿದ್ದರೂ ಪಾರ್ಟ್-2 ಅಷ್ಟಾಗಿ ಸದ್ದು ಮಾಡಲಿಲ್ಲ. ಸದ್ಯ ಪ್ಯಾನ್ ಇಂಡಿಯಾ ಟ್ರೆಂಡ್ ನಡೆಯುತ್ತಿರುವುದರಿಂದ ರೀಮೆಕ್ ಸಿನಿಮಾಗಳು ಸದ್ದು ಮಾಡುತ್ತಿಲ್ಲ. ಒಂದು ಭಾಷೆಯಲ್ಲಿ ತಯಾರಾಗುವ ಚಿತ್ರವನ್ನೇ ಎಲ್ಲಾ ಭಾಷೆಗಳಿಗೂ ಡಬ್ ಮಾಡಿ ರಿಲೀಸ್ ಮಾಡುತ್ತಿದ್ದಾರೆ. 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರದಿದ್ದರೂ ಕೊನೆ ಪಕ್ಷ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದೇ ಈಗ 'ದೃಶ್ಯಂ'-3 ರೀಮೆಕ್ ಮಾಡುವ ಸಮಸ್ಯೆಯಾಗಿದೆ. ಈ ಬಗ್ಗೆ ನಿರ್ದೇಶಕ ಪಿ. ವಾಸು ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ.

2013ರಲ್ಲಿ ಜಿತು ಜೋಸೆಫ್ ನಿರ್ದೇಶನದ 'ದೃಶ್ಯಂ' ಸಿನಿಮಾ ಸಂಚಲನ ಸೃಷ್ಟಿಸಿತ್ತು. ಸಿಂಪಲ್ ಕಥೆಯ ಕ್ರೈಂ ಥ್ರಿಲ್ಲರ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಳಿಕ ತೆಲುಗು, ತಮಿಳು, ಹಿಂದಿ, ಕನ್ನಡ ಭಾಷೆಗಳಿಗೆ ರೀಮೆಕ್ ಆಗಿ ಗೆದ್ದಿತ್ತು. ಆಗ ಓಟಿಟಿ ಟ್ರೆಂಡ್ ಶುರುವಾಗಿರಲಿಲ್ಲ. ಬಳಿಕ 2021ರಲ್ಲಿ 'ದೃಶ್ಯಂ'-2 ನೇರವಾಗಿ ಓಟಿಟಿಗೆ ಬಂದಿತ್ತು. ಕೋವಿಡ್ ಸಂಕಷ್ಟದ ಸಮಯ ಆಗಿದ್ದರಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಆದರೆ ಓಟಿಟಿಯಲ್ಲಿ ದಾಖಲೆಯ ಪ್ರದರ್ಶನ ಕಂಡಿತ್ತು. ಬಳಿಕ ಪಾರ್ಟ್-2 ಕೂಡ ಬೇರೆ ಆ ಭಾಷೆಗಳಿಗೆ ರೀಮೆಕ್ ಆಗಿ ಗೆದ್ದಿತ್ತು.
ಸದ್ಯ 'ದೃಶ್ಯಂ- 3' ಚಿತ್ರವನ್ನು ಮೊದಲು ಮಲಯಾಳಂ ಭಾಷೆಯಲ್ಲಿ ಮಾತ್ರ ಮಾಡಬೇಕಾ? ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಏಕಕಾಲಕ್ಕೆ ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಕೂಡ ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಮಾತುಕತೆ ನಡೀತಿದೆ. ಜಿತು ಜೋಸೆಫ್ ಈಗಾಗಲೇ ಚಿತ್ರಕತೆ ಸಿದ್ಧಪಡಿಸುತ್ತಿದ್ದಾರೆ. ಕತೆ ಸಿದ್ಧವಾದ ಬಳಿಕ ಹಿಂದಿ ಹಾಗೂ ತೆಲುಗು ತಂಡಗಳಿಗೆ ಕೊಡುತ್ತೇನೆ. ಅವರು ಒಪ್ಪಿದರೆ ಒಮ್ಮೆಲೆ ಮೂರು ಭಾಷೆಗಳಲ್ಲಿ ಸಿನಿಮಾ ಮಾಡಬಹುದು ಎನ್ನುತ್ತಿದ್ದಾರೆ.
ಪ್ಯಾನ್ ಇಂಡಿಯಾ ಹಾಗೂ ಓಟಿಟಿ ಟ್ರೆಂಡ್ ರೀಮೆಕ್ ಸಿನಿಮಾಗಳಿಗೆ ಪೆಟ್ಟು ಕೊಟ್ಟಿದೆ. ಅದಾಗಲೇ ಮಲಯಾಳಂನಲ್ಲಿ 'ದೃಶ್ಯಂ'-2 ಸಿನಿಮಾ ನೋಡಿದ್ದವರು ಬೇರೆ ಭಾಷೆಗಳಲ್ಲಿ ಬಂದಾಗ ನೋಡಲು ಮನಸ್ಸು ಮಾಡಲಿಲ್ಲ. ಓಟಿಟಿಗೆ ಬಂದಾಗ ನೋಡೋಣ ಬಿಡು ಎಂದು ಸುಮ್ಮನಾಗಿದ್ದರು. ಅಜಯ್ ದೇವಗನ್ ನಟಿಸಿದ್ದ ಹಿಂದಿ ವರ್ಷನ್ ಮಾತ್ರ ಕೊಂಚ ಸದ್ದು ಮಾಡಿತ್ತು. 'ದೃಶ್ಯಂ'-2 ತೆಲುಗು ವರ್ಷನ್ ಕೂಡ ನೇರವಾಗಿ ಓಟಿಟಿಗೆ ಬಂದಿತ್ತು. ನನಾ ಕಾರಣಗಳಿಂದ ತಮಿಳಿನಲ್ಲಿ ಪಾರ್ಟ್-2 ಸಿದ್ಧವಾಗಲೇ ಇಲ್ಲ.

'ದೃಶ್ಯಂ- 3' ಸಿನಿಮಾ ಪ್ರಾರಂಭಕ್ಕೂ ಮುನ್ನ ಬೇರೆ ಭಾಷೆಗಳಿಗೆ ರೀಮೆಕ್ ಆಗುವ ಬಗ್ಗೆ ಚರ್ಚೆ ಆರಂಭವಾಗಿದೆ. ಮಲಯಾಳಂ ಭಾಷೆಯಲ್ಲಿ ಬರುವ ಚಿತ್ರ 5 ಆ ಭಾಷೆಗಳಿಗೆ ಡಬ್ ಆಗಿ ತೆರೆಗೆ ಬರುತ್ತದೆ. ಓಟಿಟಿ ಮೂಲಕ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪುತ್ತದೆ. ಹಾಗಾಗಿ ಇದನ್ನು ರೀಮೆಕ್ ಮಾಡಬೇಕೋ ಬೇಡವೋ ಎನ್ನುವ ಗೊಂದಲ ಮೂಡುವುದು ಸಹಜ. ಅದೇ ಕಾರಣಕ್ಕೆ ಮಲಯಾಳಂ, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಒಟ್ಟಿಗೆ ಸಿನಿಮಾ ನಿರ್ಮಿಸಿದರೆ ಚೆನ್ನಾಗಿರುತ್ತದೆ ಎನ್ನುವ ಚರ್ಚೆ ಆರಂಭವಾಗಿದೆ.
ಒಂದೇ ಕಥೆಯನ್ನು ಹೀಗೆ ಎರಡ್ಮೂರು ಭಾಷೆಗಳಲ್ಲಿ ಒಮ್ಮೆಲೆ ಸಿನಿಮಾ ಮಾಡುವುದು ಹೊಸ ಕಾನ್ಸೆಪ್ಟ್ ಏನು ಅಲ್ಲ. ದಶಕಗಳ ಹಿಂದೆಯೇ ಇದು ಚಾಲ್ತಿಯಲ್ಲಿ ಇತ್ತು. ಅಣ್ಣಾವ್ರು, ತೆಲುಗು ನಟ ಎನ್ಟಿಆರ್ ಹೀಗೆ ಆರಂಭದಲ್ಲಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಭೂಕೈಲಾಸ, ಸತ್ಯಹರಿಶ್ಚಂದ್ರ ಸಿನಿಮಾಗಳು ಇದೇ ರೀತಿ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದ್ದ ಸಿನಿಮಾಗಳು. ಕನ್ನಡದಲ್ಲಿ ಡಾ. ರಾಜ್ಕುಮಾರ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಎನ್ಟಿಆರ್ ಮಾಡುತ್ತಿದ್ದರು. ಬಳಿಕ ಇದು ನಿಂತಿತ್ತು. 90ರ ದಶಕದಲ್ಲಿ ರವಿಚಂದ್ರನ್ ಇದೇ ರೀತಿ 'ಶಾಂತಿ ಕ್ರಾಂತಿ' ಚಿತ್ರವನ್ನು ಬೇರೆ ಬೇರೆ ಭಾಷೆಗಳಲ್ಲಿ ತೆರೆಗೆ ತಂದಿದ್ದರು.
ಮೋಹನ್ ಲಾಲ್ ಸಿನಿಮಾಗಳು ಈಗ ಕನ್ನಡಕ್ಕೆ ಡಬ್ ಆಗಿ ಬರ್ತಿವೆ. 'ಎಂಪುರಾನ್', 'ಥುಡರುಂ' ಚಿತ್ರಗಳು ಕರ್ನಾಟಕದಲ್ಲಿ ಸದ್ದು ಮಾಡಿದ್ದವು. ಓಟಿಟಿಗೆ ಬಂದು ಗಮನ ಸೆಳೆದಿತ್ತು. ಹಾಗಾಗಿ 'ದೃಶ್ಯಂ'-3 ಚಿತ್ರವನ್ನು ನೋಡಲು ಕೆಲವರು ಕಾಯುತ್ತಿದ್ದಾರೆ. ಹಾಗಾಗಿ ಮುಂದೆ ಇದನ್ನು ಕನ್ನಡದಲ್ಲಿ ರೀಮೆಕ್ ಮಾಡಿದರೆ ವರ್ಕ್ಔಟ್ ಆಗುತ್ತಾ? ಎನ್ನುವ ಪ್ರಶ್ನೆಯೂ ಮೂಡಿದೆ. ತೆಲುಗು, ಹಿಂದಿ ಚಿತ್ರರಂಗದಲ್ಲಿ ಮೂಡಿರುವ ಗೊಂದಲ ಕನ್ನಡದಲ್ಲೂ ಶುರುವಾಗಿದೆ. ಈ ಬಗ್ಗೆ ಪಿ. ವಾಸು ಅವರನ್ನು ಫಿಲ್ಮಿಬೀಟ್ ಕನ್ನಡ ಸಂಪರ್ಕಿಸಿತ್ತು. ಅವರು ಮಾತನಾಡಿ ಕಾದು ನೋಡೋಣ ಎಂದಿದ್ದಾರೆ.
"ಮಲಯಾಳಂ ನಿರ್ಮಾಪಕರಾದ ಮುಖೇಶ್ ಆರ್. ಮೆಹ್ತಾ 'ದೃಶ್ಯ' ಚಿತ್ರವನ್ನು ಕನ್ನಡದಲ್ಲಿ ನಿರ್ಮಾಣ ಮಾಡಿದ್ದರು. 'ದೃಶ್ಯ'-3 ಸಿನಿಮಾ ಏನು ಮಾಡ್ತಾರೆ ಎನ್ನುವುದು ಗೊತ್ತಿಲ್ಲ. ಪಾರ್ಟ್-2 ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿತ್ತು. ಮಲಯಾಳಂ, ತೆಲುಗು ಎಲ್ಲಾ ಭಾಷೆಗಳಲ್ಲಿ ಬಂದುಬಿಟ್ಟಿತ್ತು. ಎಲ್ಲರೂ ನೋಡಿಬಿಟ್ಟಿದ್ದರು. ಹಾಗಾಗಿ ಕನ್ನಡದಲ್ಲಿ ಬಂದಾಗ ನಿರೀಕ್ಷೆ ಇರಲಿಲ್ಲ. ಓಟಿಟಿ ಎನ್ನುವುದು ಆಲ್ಇಂಡಿಯಾ ಟೆಲಿಕಾಸ್ಟ್ ಎನ್ನುವಂತಾಗಿದೆ. ಕನ್ನಡಕ್ಕೂ ಡಬ್ ಆಗಿ ಬರುತ್ತದೆ. ಹಾಗಾಗಿ ಏನು ಮಾಡುವುದು. ಕನ್ನಡದಲ್ಲಿ ಪಾರ್ಟ್-3 ಬಗ್ಗೆ ನಾನು ಯೋಚನೆ ಮಾಡಿಯೇ ಇಲ್ಲ" ಎಂದು ಪಿ. ವಾಸು ಹೇಳಿದ್ದಾರೆ.
ಮೊದಲು ಮೋಹನ್ ಲಾಲ್ ಅವರ 'ದೃಶ್ಯಂ-3' ಸಿನಿಮಾ ಬರಲಿ. ಅದರ ಫಲಿತಾಂಶ ನೋಡಿಕೊಂಡು ಮುಂದೆ ಏನು ಎಂದು ನಿರ್ಧರಿಸುತ್ತೇವೆ ಎಂದು ಪಿ. ವಾಸು ತಿಳಿಸಿದ್ದಾರೆ. ಮಲಯಾಳಂ ಜೊತೆಗೆ ಒಮ್ಮೆಲೆ ಕನ್ನಡದಲ್ಲಿ ಕೂಡ ಸಿನಿಮಾ ಮಾಡುವ ಅವಕಾಶ ಬಂದರೆ ಹೇಗೆ? ಎನ್ನುವ ಪ್ರಶ್ನೆಗೆ ಈ ಬಗ್ಗೆ ನೀವು ರವಿಚಂದ್ರನ್ ಅವರನ್ನೇ ಕೇಳಬೇಕು" ಎಂದು ಪಿ. ವಾಸು ಹೇಳಿದ್ದಾರೆ. ಒಟ್ಟಾರೆ ಸದ್ಯಕ್ಕಂತೂ ಕನ್ನಡದಲ್ಲಿ 'ದೃಶ್ಯಂ-3' ಸಿನಿಮಾ ಮಾಡುವ ಬಗ್ಗೆ ಯಾರೊಬ್ಬರೂ ಯೋಚಿಸುತ್ತಿಲ್ಲ.
ಅಚಾನಕ್ ಆಗಿ ನಡೆಯುವ ಒಂದು ಕೊಲೆಯ ಸುತ್ತಾ ಜಿತು ಜೋಸೆಫ್ 'ದೃಶ್ಯಂ' ಸಿನಿಮಾ ಕಟ್ಟಿಕೊಟ್ಟಿದ್ದರು. ಮುಂದೆ ಆ ಕಥೆ ಬೇರೆ ಭಾಷೆಗಳಿಗೆ ರೀಮೆಕ್ ಆಗಿದ್ದು ಮಾತ್ರವಲ್ಲ ಒಂದು ಸೀಕ್ವೆಲ್ ಬಂದು ಗೆಲ್ಲುವಂತಾಯಿತು. ಇದೀಗ ಮತ್ತೊಂದು ಪಾರ್ಟ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಜಾರ್ಜ್ಕುಟ್ಟಿಯಾಗಿ ಮೋಹನ್ ಲಾಲ್ ನಟನೆಯನ್ನು ಕೂಡ ಮರೆಯುವಂತಿಲ್ಲ. ಅದೇ ಕಾರಣಕ್ಕೆ 'ದೃಶ್ಯಂ- 3' ಅಂದಾಕ್ಷಣ ಸಿನಿರಸಿಕರ ಕುತೂಹಲ ಡಬಲ್ ಆಗಿದೆ.
ಸತ್ತವನ ಶವವನ್ನು ಮುಚ್ಚಿಟ್ಟು ಜಾರ್ಜ್ಕುಟ್ಟಿ ತನ್ನ ಕುಟುಂಬವನ್ನು ರಕ್ಷಿಸಿಕೊಂಡು ಬರ್ತಿದ್ದಾನೆ. ಮುಂದೆ ಆತನ ಆಟ ನಡೆಯುತ್ತಾ? ಪೊಲೀಸರ ಕೈಯಲ್ಲಿ ಸಿಕ್ಕಿಬೀಳ್ತಾನಾ? ಪತ್ನಿ ಹಾಗೂ ಮಗಳು ಸೇರಿ ಕೊಲೆ ಮಾಡಿದ್ದರೂ ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಕ್ಕೆ ಜಾರ್ಜ್ ಕುಟ್ಟಿ ಕೂಡ ಜೈಲು ಪಾಲಾಗುತ್ತಾನಾ? ಅಥವಾ ಕತೆಯನ್ನು ಬೇರೆ ರೀತಿಯಲ್ಲೆ ಜಿತು ಜೋಸೆಫ್ ಕೊಟ್ಟಿಕೊಡುತ್ತಾರಾ? ಕಾದು ನೋಡಬೇಕಿದೆ. ಒಟ್ಟಾರೆ ಸಿನಿಮಾ ಅಂತೂ ಸೆಟ್ಟೇರುವ ಮುನ್ನವೇ ನಿರೀಕ್ಷೆ ಹುಟ್ಟಾಕ್ಕಿದೆ.


Click it and Unblock the Notifications











