ಅಮೆರಿಕ ಮೂಲದ ಭಾರತೀಯ ನಟ ಟಾಮ್ ಆಲ್ಟರ್ ಇನ್ನಿಲ್ಲ
ಬಾಲಿವುಡ್ ನ ಖ್ಯಾತ ನಟ, ಪತ್ರಕರ್ತ, ರಂಗಭೂಮಿ ಕಲಾವಿದ, ಬರಹಗಾರ ಥಾಮಸ್ ಬೀಚ್ ಆಲ್ಟರ್ ಸೆ.29 ರಂದು ಮುಂಬೈಯಲ್ಲಿ ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಟಾಮ್ ಆಲ್ಟರ್, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ಟಾಮ್ ನಿಧನಕ್ಕೆ ಬಾಲಿವುಡ್ ನಟರು ಸೇರಿದಂತೆ ದೇಶದಾದ್ಯಂತ ಗಣ್ಯರು ಕಂಬನಿ ಮಿಡಿದಿದ್ದಾರೆ.
ಇಂಗ್ಲಿಷ್, ಹಿಂದಿ, ಮಲಯಾಳಂ, ಬೆಂಗಾಳಿ, ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಯ ಚಿತ್ರಗಳಲ್ಲಿ ಟಾಮ್ ಆಲ್ಟರ್ ಅಭಿನಯಿಸಿದ್ದರು. 'ಸರ್ದಾರ್', 'ಪರಿಂದಾ', 'ಗಾಂಧಿ', 'ಕ್ರಾಂತಿ', 'ದೇಸ್ ಪರ್ದೇಸ್', 'ಆನರ್ ಕಿಲ್ಲಿಂಗ್', 'ಅವತಾರ್' ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಜೊತೆಗೆ ಹಲವು ಟಿವಿ ಶೋಗಳಲ್ಲೂ ಕೂಡ ಕಾರ್ಯನಿರ್ವಹಿಸಿದ್ದರು.

ವಿಶೇಷ ಅಂದ್ರೆ 1977ರಲ್ಲಿ ಅನಂತ್ ನಾಗ್ ಅಭಿನಯಿಸಿದ್ದ 'ಕನ್ನೇಶ್ವರ ರಾಮ' ಚಿತ್ರದಲ್ಲಿ ಟಾಮ್ ಆಲ್ಟರ್ ಬ್ರಿಟಿಷ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಇವರ ಏಕೈಕ ಕನ್ನಡ ಸಿನಿಮಾ.
ಅಮರಿಕದ ಕ್ರಿಶ್ಚಿಯನ್ ಮಿಶಿನರಿಯ ಪುತ್ರರಾದ ಟಾಮ್ ಜನಿಸಿದ್ದು ಭಾರತದ ಉತ್ತರಖಾಂಡದ ಮುಸ್ಸೂರಿಯಲ್ಲಿ. 1950, ಜೂನ್ 22 ರಂದು ಜನಿಸಿದ ಟಾಮ್ ಅವರ ಹೆಸರು ಬಾಲಿವುಡ್ ಸಿನಿಮಾ ಕ್ಷೇತ್ರದಲ್ಲಿ ಅಜರಾಮರವಾಗಿದೆ.
ಟಾಮ್ ಆಲ್ಟರ್ ಅವರು ಕಲಾಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ 2008ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಸಿನೆಮಾ ಮಾತ್ರವಲ್ಲದೆ ಪತ್ರಿಕೋದ್ಯಮದಲ್ಲೂ ತುಂಬು ಆಸಕ್ತಿ ಹೊಂದಿದ್ದರು.


Click it and Unblock the Notifications











