'ರಂಗನಾಯಕ' ಚಿತ್ರಕ್ಕಾಗಿ ಐತಿಹಾಸಿಕ ಸೆಟ್: ಜಗ್ಗೇಶ್ ಥ್ರಿಲ್
''ಈಗಿನ ಸಮಯಕ್ಕೆ ಪೌರಾಣಿಕ ಹಾಗೂ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸುವ ಅವಕಾಶ ಹಾಗೂ ಅದೃಷ್ಟ ಎಲ್ಲರಿಗೂ ಸಿಗಲ್ಲ. ಆ ವಿಚಾರದಲ್ಲಿ ದರ್ಶನ್ ತುಂಬಾ ಲಕ್ಕಿ. ಎರಡೆರಡು ಚಿತ್ರದಲ್ಲಿ ನಟಿಸಿಬಿಟ್ಟರು'' ಎಂದು ನಟ ಜಗ್ಗೇಶ್ ಇತ್ತೀಚಿಗಷ್ಟೆ 'ರಂಗನಾಯಕ' ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಇದೀಗ, ಜಗ್ಗೇಶ್ ಅವರು ಸಹ ಅಂತಹದೊಂದು ಅನುಭವವನ್ನು ಪಡೆಯುತ್ತಿದ್ದಾರೆ.
ಜಗ್ಗೇಶ್ ಮತ್ತು ಗುರು ಪ್ರಸಾದ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ರಂಗನಾಯಕ ಚಿತ್ರದಲ್ಲಿ ಐತಿಹಾಸಿಕ ಕಥಾಹಂದರದ ದೃಶ್ಯಗಳು ಇರಲಿದ್ದು, ಅದಕ್ಕಾಗಿ ಬೆಂಗಳೂರಿನಲ್ಲಿ ಅದ್ಧೂರಿ ಸೆಟ್ ಹಾಕಲಾಗಿದೆ. ಈ ಸೆಟ್ ಈಗ ಸ್ಯಾಂಡಲ್ವುಡ್ ಇಂಡಸ್ಟ್ರಿಯ ಟಾಕ್ ಆಫ್ ದಿ ಟೌನ್ ಆಗಿದೆ.
ಹೌದು, ಐತಿಹಾಸಿಕ ಸನ್ನಿವೇಶಗಳಿಗಾಗಿ ಅರಮನೆ ಸೆಟ್ ಹಾಕಲಾಗಿದ್ದು, ಕಲಾ ನಿರ್ದೇಶಕ ಕುಲಕರ್ಣಿ ಜಾದೂ ಮಾಡಿದ್ದಾರೆ. ರಾಜರ ಕಾಲದ ಅರಮನೆಯನ್ನು ಮರುಸೃಷ್ಟಿಸಿದ್ದಾರೆ. ಈ ಸೆಟ್ ನೋಡಿ ಥ್ರಿಲ್ ಆಗಿರುವ ಜಗ್ಗೇಶ್ ಕುಲಕರ್ಣಿ, ನಿರ್ದೇಶಕ ಹಾಗೂ ನಿರ್ಮಾಪಕರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ''ಬಹಳ ವರ್ಷಗಳ ನಂತರ ಕರ್ನಾಟಕದಲ್ಲಿ ಇಂಥ ಅದ್ದೂರಿಯ ಸೆಟ್ ಕೆಲಸ. ನನ್ನ ನಲ್ಮೆಯ ಕುಲಕರ್ಣಿ ರವರಿಂದ.. ನಿರ್ದೇಶಕ ನ ಕನಸು ನಿರ್ಮಾಪಕನ ಶ್ರಮ.. ಕನ್ನಡಕ್ಕೆ ನೆನಪಿಡುವ ಚಿತ್ರ..'' ಎಂದು ಟ್ವೀಟ್ ಮಾಡಿದ್ದಾರೆ.

ಅದ್ಧೂರಿ ಸೆಟ್ ಬಗ್ಗೆ ಕನ್ನಡ ಪಿಕ್ಚರ್ಸ್ ಯೂಟ್ಯೂಬ್ ಚಾನಲ್ ಜೊತೆ ಮಾತನಾಡಿದ ಕಲಾ ನಿರ್ದೇಶಕ ಕುಲಕರ್ಣಿ, ''ಸುಮಾರು 80 ದಿನಗಳವರೆಗೂ 50 ಜನರು ಈ ಸೆಟ್ಗಾಗಿ ಕೆಲಸ ಮಾಡಿದ್ದೇವೆ. ನಡುವಲ್ಲಿ ಕೊರೊನಾ ಬೇರೆ ಬಂತು. ಆದರೂ ಪೂರ್ಣ ಪ್ರಮಾಣದಲ್ಲಿ ಸೆಟ್ ನಿರ್ಮಿಸಿದ್ದೇವೆ. ನನಗೊಂದು ಕನಸು ಇದು. ಈ ಹಿಂದೆ ರಾಮಾಯಣ-ಮಹಾಭಾರತ ಧಾರಾವಾಹಿಗಳಿಗೆ ಸೆಟ್ ಹಾಕಿದ್ದೆ. ಈಗ ಸಿನಿಮಾದಲ್ಲಿ ಸೆಟ್ ಹಾಕುತ್ತಿದ್ದೇನೆ. ಅದರಲ್ಲೂ ಜಗ್ಗೇಶ್-ಗುರುಪ್ರಸಾದ್ ಮೂರನೇ ಚಿತ್ರ ಎನ್ನುವುದು ವೈಯಕ್ತಿಕವಾಗಿ ನನಗೆ ಬಹಳ ಖುಷಿ ಇದೆ. ಅದಕ್ಕೆ ತಕ್ಕ ಶ್ರಮ ಹಾಕಿ ಕೆಲಸ ಮಾಡಿದ್ದೇನೆ'' ಎಂದರು.
ಇನ್ನು ನಿರ್ದೇಶಕ ಗುರುಪ್ರಸಾದ್ ಮಾತನಾಡಿ ''ವಿಜಯನಗರ ಸಾಮ್ರಾಜ್ಯದ ಸಮಯದ ರಾಜನ ಕಥೆ ಇದಾಗಿದ್ದು, ಹಳೆಯ ರಾಜ ದರ್ಬಾರ್ ರಂಗನಾಯಕ ಚಿತ್ರದ ಪ್ರಮುಖ ಆಕರ್ಷಣೆಯಾಗಿರಲಿದೆ ಹಾಗೂ ಜಗ್ಗೇಶ್ ಅವರು ಈ ಹಿಂದಿನ ಚಿತ್ರಗಳಿಗಿಂತ ಬಹಳ ವಿಶೇಷವಾಗಿ ಎಲ್ಲರನ್ನು ನಗಿಸಲಿದ್ದಾರೆ'' ಎಂದು ನಿರೀಕ್ಷೆ ಹೆಚ್ಚಿಸಿದರು.

''ಈ ಸೆಟ್ ಹಾಕಲು ಸುಮಾರು 60 ಲಕ್ಷ ರೂಪಾಯಿವರೆಗೂ ಖರ್ಚು ಮಾಡಲಾಗಿದೆ. ಡಿಸೈನರ್ಗೆ ಮಾತ್ರ 1 ಲಕ್ಷ ಕೊಟ್ಟಿದ್ದೇವೆ. ಸುಮಾರು ಆರೇಳು ತಿಂಗಳು ಈ ಸೆಟ್ಗೆ ಕೆಲಸ ಮಾಡಲಾಗಿದೆ'' ಎಂದು ಗುರುಪ್ರಸಾದ್ ಮಾಹಿತಿ ನೀಡಿದರು. ಸದ್ಯಕ್ಕೆ ರಂಗನಾಯಕ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಇರ್ಮಾನ್ ಸರ್ದಾರಿಯಾ ಕೊರಿಯೋಗ್ರಫಿ ಮಾಡ್ತಿದ್ದಾರೆ.
'ರಂಗನಾಯಕ' ಸಿನಿಮಾ ಕುರಿತು
ಮಠ, ಎದ್ದೇಳು ಮಂಜುನಾಥ ಸಿನಿಮಾಗಳ ನಂತರ ರಂಗನಾಯಕ ಚಿತ್ರದೊಂದಿಗೆ ಈ ಸೂಪರ್ ಹಿಟ್ ಕಾಂಬಿನೇಷನ್ ಒಂದಾಗಿದೆ. ವಿಖ್ಯಾತ್ ಪ್ರೊಡಕ್ಷನ್ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಈ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ತಮಿಳು ಕಿರುತೆರೆ ನಟಿ ರಚಿತಾ ಮಹಾಲಕ್ಷ್ಮಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯದ ಜೊತೆಗೆ ನಿರ್ದೇಶನ ಮಾಡ್ತಿರುವ ಗುರು ಪ್ರಸಾದ್ ಕೋವಿಡ್ ಬಳಿಕ ಚಿತ್ರೀಕರಣಕ್ಕೆ ಮರುಚಾಲನೆ ಕೊಟ್ಟಿದ್ದಾರೆ. ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ ರಂಗನಾಯಕ ಅಧಿಕೃತವಾಗಿ ಮುಹೂರ್ತ ಮಾಡಿಕೊಂಡಿತ್ತು. ಹಾಗ್ನೋಡಿದ್ರೆ, ಇಷ್ಟೊತ್ತಿಗಾಗಲೇ ಸಿನಿಮಾ ತೆರೆಗೆ ಬರಬೇಕಿತ್ತು. ಕೋವಿಡ್ ಕಾರಣದಿಂದ ಸ್ವಲ್ಪ ತಡವಾಗಿದೆ. ನವೆಂಬರ್ ತಿಂಗಳಷ್ಟರಲ್ಲಿ ಚಿತ್ರೀಕರಣ ಮುಗಿಸಿ ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ಬರಲು ಯೋಜಿಸಲಾಗಿದೆ.


Click it and Unblock the Notifications











