ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
ಕನ್ನಡ ಚಿತ್ರರಂಗದ ಸ್ಥಿತಿ ಮತ್ತೆ ತುಂಬಾ ಶೋಚನೀಯವಾಗಿದೆ. ದೊಡ್ಡ ಸಿನಿಮಾಗಳು ಬರದೇ ಥಿಯೇಟರ್ಗಳು ಖಾಲಿ ಹೊಡೆಯುವಂತಾಗಿದೆ. ಐಪಿಎಲ್, ಎಲೆಕ್ಷನ್ ಭರಾಟೆ ನಡುವೆ ಸ್ಯಾಂಡಲ್ವುಡ್ ಸೊರಗಿದೆ. ದೊಡ್ಡ ಸಿನಿಮಾಗಳನ್ನು ರಿಲೀಸ್ ಮಾಡಲು ಹಿಂದೇಟು ಹಾಕುವಂತಾಗಿದೆ. ಇದರಿಂದ ಥಿಯೇಟರ್ಗಳು ಬಾಗಿಲು ಬಂದ್ ಮಾಡುವಂತಾಹ ಪರಿಸ್ಥಿತಿ ನಿರ್ಮಾಣವಾಗಿದೆ.
'ಕಾಟೇರ' ಬಳಿಕ ಕನ್ನಡದಲ್ಲಿ ಯಾವುದೇ ಸಿನಿಮಾ ಗೆದ್ದಿಲ್ಲ. ಇದ್ದಿದ್ದರಲ್ಲಿ 'ಉಪಾಧ್ಯಕ್ಷ', 'ಬ್ಲಿಂಕ್' ಹಾಗೂ 'ಒಂದು ಸರಳ ಪ್ರೇಮಕಥೆ' ಪರವಾಗಿಲ್ಲ ಎನಿಸಿಕೊಂಡಿವೆ. ಇನ್ನುಳಿದಂತೆ 70ಕ್ಕೂ ಹೆಚ್ಚು ಸಿನಿಮಾಗಳು ಬಂದು ಹೋಗಿದ್ದೇ ಗೊತ್ತಾಗಲಿಲ್ಲ. ಪ್ಯಾನ್ ಸಿನಿಮಾಗಳ ಹುಚ್ಚಿಗೆ ಬಿದ್ದು ಕನ್ನಡ ಸಿನಿಮಾಗಳು ಹಾಳಾಗುತ್ತಿವೆ ಎನ್ನುವವರು ಇದ್ದಾರೆ. ಮಾಡಿದರೆ ದೊಡ್ಡ ಸಿನಿಮಾನೇ ಮಾಡಬೇಕು ಎನ್ನುವ ಮಾತು ಚಿತ್ರರಂಗದಲ್ಲಿ ಚಾಲ್ತಿಗೆ ಬಂದುಬಿಟ್ಟಿದೆ.

ಪ್ರೇಕ್ಷಕರು ಸಿನಿಮಾ ನೋಡುವುದು ಒಂದು ಹವ್ಯಾಸ. ಪದೇ ಪದೆ ಒಳ್ಳೆಯ ಸಿನಿಮಾಗಳು ಬಂದಾಗ ಪ್ರೇಕ್ಷಕರು ಚಿತ್ರಮಂದಿರಗಳ ಕಡೆ ಬರುತ್ತಾರೆ. ಆದರೆ ಉತ್ತಮ ಸಿನಿಮಾಗಳ ಸರಬರಾಜು ಕಮ್ಮಿ ಆಗಿದೆ. ವರ್ಷಕ್ಕೆ ಒಂದೋ ಎರಡೋ ಸಿನಿಮಾ ಗೆದ್ದರೆ ಇನ್ನುಳಿದ 11 ತಿಂಗಳ ಕಥೆ ಏನು? ಚಿತ್ರಮಂದಿರಗಳನ್ನೇ ನಂಬಿ ಕುಳಿತವರ ಕಥೆಯೇನು? ಚಿತ್ರಮಂದಿರಗಳೇ ಇಲ್ಲದಿದ್ದರೆ ಮುಂದೆ ಓಟಿಟಿ, ಟಿವಿಯಲ್ಲೇ ಕನ್ನಡ ಸಿನಿಮಾಗಳನ್ನು ನೋಡಬೇಕಾದ ಅನಿವಾರ್ಯತೆ ಉದ್ಭವವಾಗುವ ಲಕ್ಷಣಗಳು ಗೋಚರಿಸುತ್ತಿದೆ.
ಸ್ಟಾರ್ ನಟರು ವರ್ಷಕ್ಕೆ ಎರಡ್ಮೂರು ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಕೂಗು ಬಹಳ ದಿನಗಳಿಂದ ಕೇಳಿಬರುತ್ತಿದೆ. ದೊಡ್ಡ ಸಿನಿಮಾಗಳನ ನಡು ನಡುವೆ ಸಣ್ಣ ಸಿನಿಮಾಗಳು ಉಸಿರಾಡಲು ಸಾಧ್ಯ. ಇಲ್ಲದಿದ್ದರೆ ಚಿತ್ರಮಂದಿಗಳನ್ನು ಮುಚ್ಚಬೇಕಾಗುತ್ತದೆ. ಈಗಾಗಲೇ ಸಾಕಷ್ಟು ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಕೆಲವೆಡೆ ಪರಭಾಷೆ ಸಿನಿಮಾಗಳನ್ನು ಪ್ರದರ್ಶಿಸುವಂತಾಗಿದೆ. ಕೆಲ ಸಿನಿಮಾಗಳು ಚಿತ್ರಮಂದಿರಕ್ಕೆ ಬಂದ 20 ದಿನಕ್ಕೆ ಓಟಿಟಿಗೆ ಬರುತ್ತಿರುವುದು ವಿಪರ್ಯಾಸವೇ ಸರಿ.
ಓಟಿಟಿ ಬಂದಾಗ ನೊಡೋಣ ಬಿಡು ಎನ್ನುವ ಮನಸ್ಥಿತಿಯೂ ಶುರುವಾಗಿದೆ. ಸಿನಿಮಾ ಟಿಕೆಟ್, ತಿಂಡಿ ತಿನಿಸು, ಪಾನೀಯ, ಪಾರ್ಕಿಂಗ್ ಚಾರ್ಜ್ ಅಂತೆಲ್ಲಾ ಪ್ರೇಕ್ಷಕರಿಗೆ ಹೆಚ್ಚಿನ ಹೊರೆ ಇದೆ. ಒಳ್ಳೆ ಸಿನಿಮಾ ಬಂದಾಗ ಮಾತ್ರ ಚಿತ್ರಮಂದಿರಗಳಿಗೆ ಬರುತ್ತೇವೆ ಎಂದು ಜನ ಪಟ್ಟು ಹಿಡಿದಿದ್ದಾರೆ. ಇಂತಹ ಹೊತ್ತಲ್ಲಿ ಸ್ಟಾರ್ ನಟರು ಸಿನಿಮಾ ಮಾಡುವುದು ತಡ ಮಾಡುತ್ತಿದ್ದಾರೆ. ಕನ್ನಡದ ದೊಡ್ಡ ಸಿನಿಮಾಗಳಿಲ್ಲದೇ ಪರಭಾಷೆ ಸಿನಿಮಾಗಳನ್ನು ನೋಡುವುದಕ್ಕೆ ಪರೋಕ್ಷವಾಗಿ ಪ್ರೇರೇಪಿಸುವಂತೆ ಆಗುತ್ತಿದೆ. ಕನ್ನಡ ಸಿನಿಮಾಗಳನ್ನು ಓಟಿಟಿ ಫ್ಲಾಟ್ಪಾರ್ಮ್ಗಳು ಕೊಂಡುಕೊಳ್ಳಲು ಹಿಂದು ಮುಂದು ನೋಡುತ್ತಿವೆ.

'ಯುವ' ಸಿನಿಮಾ ತೆರೆಕಂಡ 21 ದಿನಕ್ಕೆ ಓಟಿಟಿ ಬಂದಿದೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದರೂ ಇಷ್ಟು ಬೇಗ ಯಾಕೆ? ಓಟಿಟಿ ಸ್ಟ್ರೀಮಿಂಗ್ ಎಂದು ಕೆಲವರು ಕೇಳುತ್ತಿದ್ದಾರೆ. ಮುಂದೆ ಇದೇ ರೀತಿ ಮುಂದುವರೆದರೆ ಜನ ಸಹಜವಾಗಿಯೇ ಓಟಿಟಿಯಲ್ಲಿ ಸಿನಿಮಾ ನೋಡಲು ಒಲವು ತೋರುತ್ತಾರೆ. ಆಗ ರಾಜ್ಯದ ಚಿತ್ರಮಂದಿರಗಳ ಸಂಖ್ಯೆ ಮತ್ತಷ್ಟು ಕಮ್ಮಿ ಆಗುವ ಸಾಧ್ಯತೆಯಿದೆ.
ಕನ್ನಡಕ್ಕಿಂತ ಮಲಯಾಳಂ ಚಿತ್ರರಂಗ ಬಹಳ ಚಿಕ್ಕದು. ಆದರೆ ಮಲಯಾಳಂ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡುತ್ತಿವೆ. ಈ ವರ್ಷ 4 ತಿಂಗಳಲ್ಲಿ ಮಲಯಾಳಂ ಸಿನಿಮಾಗಳು 600 ಕೋಟಿ ರೂ.ಗೂ ಅಧಿಕ ಬ್ಯುಸಿನೆಸ್ ಮಾಡಿರುವ ಅಂದಾಜಿದೆ. ಆದರೆ ಕನ್ನಡ ಸಿನಿಮಾಗಳ ಗಳಿಕೆ 100 ಕೋಟಿ ರೂ. ಕೂಡ ದಾಟಿಲ್ಲ. ಐಪಿಎಲ್ಗೆ ಹೆದರಿ ಕನ್ನಡ ಸಿನಿಮಾಗಳ ರಿಲೀಸ್ ಡೇಟ್ ಮುಂದೂಡಲಾಗುತ್ತಿದೆ.
ಒಳ್ಳೆ ಸಿನಿಮಾ ಕೊಟ್ಟರೆ ಜನ ಚಿತ್ರಮಂದಿರಕ್ಕರ ಬಂದೇ ಬರುತ್ತಾರ ಎನ್ನುವುದು 'ಕಾಟೇರ' ಚಿತ್ರದಿಂದ ಮತ್ತೆ ಸಾಬೀತಾಗಿದೆ. ಆದರೂ ಸ್ಟಾರ್ ನಟರು ಸಿನಿಮಾ ಮಾಡಲು ಮೀನಾಮೇಷ ಎಣಿಸುವುದು? ಪ್ಯಾನ್ ಇಂಡಿಯಾ ಸಿನಿಮಾ ಎಂದು ಕಾದು ಕೂರುವುದು ಸರಿಯಲ್ಲ. ಒಳ್ಳೆ ಸಿನಿಮಾ ಮಾಡಿದರೆ ಸಹಜವಾಗಿಯೇ ಇದು 'ಕಾಂತಾರ' ರೀತಿ ಎಲ್ಲಾ ಕಡೆ ಹೋಗುತ್ತದೆ. ಅದು ಬಿಟ್ಟು ಬರೀ ಪ್ಯಾನ್ ಇಂಡಿಯಾ ಮಾಡ್ತೀನಿ ಎಂದು ಕೂತರೇ ಭವಿಷ್ಯ ತುಂಬಾ ಊಹಿಸಿಕೊಳ್ಳುವುದು ಕಷ್ಟ.
ಕನ್ನಡ ಚಿತ್ರರಂಗ ಹಾಗೂ ಚಿತ್ರಮಂದಿರಗಳ ಸದ್ಯದ ಸ್ಥಿತಿಗತಿ ಬಗ್ಗೆ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ. ವಿ. ಚಂದ್ರಶೇಖರ್ ಫಿಲ್ಮಿಬೀಟ್ಗೆ ಪ್ರತಿಕ್ರಿಯಿಸಿದ್ದಾರೆ. "ಐಪಿಎಲ್ ಇಲ್ಲಿ ಲೆಕ್ಕಕ್ಕೇ ಬರಲ್ಲ. ಚಿತ್ರರಂಗದ ಬೆಳವಣಿಗೆಯೇ ಇಲ್ಲ. ಸದ್ಯದ ವಾತಾವಣರ ನೋಡುತ್ತಿದ್ದರೆ ಚಿತ್ರಮಂದಿರಗಳನ್ನು ಮುಚ್ಚಬೇಕು ಅಷ್ಟೆ. ಈಗಾಗಲೇ ಒಂದೊಂದೇ ಚಿತ್ರಮಂದಿರ ಮುಚ್ಚುವ ಕೆಲಸ ನಡೀತಿದೆ. ನಿರ್ಮಾಪಕರು ಹಣ ಹೂಡಿಕೆ ಮಾಡಿದ್ದೇವೆ ಎಂದು ಬೇಗ ಓಟಿಟಿಗೆ ಕೊಡುತ್ತಾರೆ. ಏನು ಮಾಡಲು ಸಾಧ್ಯ. ಥಿಯೇಟರ್ ಮುಚ್ಚಬೇಕು ಅಷ್ಟೆ" ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
"ಯಾರಿಗೆ ಯಾವ ಬ್ಯುಸಿನೆಸ್ ಮಾಡಲು ಆಸೆ ಇದೆಯೋ ಅವರು ಅದನ್ನು ಮಾಡಿಕೊಂಡು ಹೋಗುತ್ತಾರೆ. ಇವತ್ತಿನ ವಾತಾವರಣದಲ್ಲಿ ಚಿತ್ರಮಂದಿರಗಳನ್ನು ಮುಚ್ಚುವ ಸ್ಥಿತಿ ಬಂದಿದೆ ಎನ್ನಬಹುದು. ನಾಳೆ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ 4 ತಿಂಗಳಲ್ಲಿ ಯಾವುದೇ ಸಿನಿಮಾ ಒಳ್ಳೆ ಗಳಿಕೆ ಕಾಣಲಿಲ್ಲ. ಸದ್ಯಕ್ಕೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲು ಸಿನಿಮಾಗಳು ಇಲ್ಲ ಎನ್ನುವಂತಾಗಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











