ಕ್ಷಮಿಸಿ.... ಪಾಂಚಾಲಿ ಹೇಳಿದ್ದು ಒಂದೇ ಒಂದು ಸುಳ್ಳು!
ಹಳ್ಳಿಗೆ ಬಂದ ಈ ಪಾಂಚಾಲಿ ಹೇಳಿದ್ದು ಒಂದೇ ಒಂದು ಸುಳ್ಳು. ಆ ಸುಳ್ಳನ್ನೇ ನಿಜವೆಂದು ನಂಬಿದ ಪಂಚ ಪಾಂಡವರು ಪಾಂಚಾಲಿಯನ್ನು ಪ್ರೀತಿಸಿಯೇ ಬಿಟ್ಟರು. ಪಾಂಚಾಲಿಯ ಪ್ರೀತಿಸಲು ಪಾಂಡವರಿಗಲ್ಲದೆ ಮತ್ಯಾರಿಗೆ ಹಕ್ಕಿದೆ ಎನ್ನುತ್ತೀರಾ?
ಇಲ್ಲಿ ಪಾಂಚಾಲಿಯ ಪ್ರೀತಿಸುವ ಹಕ್ಕು ಪಂಚ ಪಾಂಡವರಿಗೆ ಇಲ್ಲವೇ ಇಲ್ಲ. ಕಾರಣ ಪಾಂಚಾಲಿಯ ವರಿಸಿದ ಅರ್ಥಾತ್ ಮದುವೆಯಾದ ಶೋರಾಧಿಶೂರ, ವೀರಾಧಿವೀರ 'ಸೈನಿಕ" ನಿದ್ದಾನೆ. ಆರ್ಥವಾಗಲೇ ಇಲ್ಲ ಅಲ್ಲವೇ. ಇದಿಷ್ಟೂ ಚಿತ್ರೀಕರಣ ಹಂತದಲ್ಲಿರುವ 'ಪಾಂಚಾಲಿ" ಚಿತ್ರದ ಒಂದು ಸನ್ನಿವೇಶ.
ಅದೊಂದು ಹಳ್ಳಿ. ಹಳ್ಳಿಗೆ ಟೀಚರ್ ಆಗಿ ವಯ್ಯಾರದ ಗೊಂಬೆ 'ರಂಭಾ" ಆಗಮನ. ದಿಲ್ಲಿಯಿಂದ ಹಳ್ಳಿಗೆ ಬಂದ ಈ ಬೆಡಗಿ ತಾನು ಅವಿವಾಹಿತೆ ಅಂತಾಳೆ. ಅದೊಂದೇ ಆಕೆ ಹೇಳುವ ಸುಳ್ಳು. ಇದನ್ನು ನಂಬಿದ ಊರಿನ ಐವರು ಯುವಕರು ಅವಳನ್ನು ಗಾಢವಾಗಿ ಪ್ರೇಮಿಸತೊಡಗುತ್ತಾರೆ. ಅಷ್ಟೊತ್ತಿಗೆ ವಿಲನ್ನಂತೆ ಹೀರೋ ಎಂಟ್ರೀ. ಆತನೆ ಆ ಟೀಚರ್ ಗಂಡ. ಮಿಲಿಟರಿ ಗಂಡ ಅರ್ಥಾತ್ ಸೈನಿಕ. ಸೈನಿಕ ಯಾರು ಗೊತ್ತೆ ? ಕಾರ್ಗಿಲ್ನಲ್ಲೇ ಸೈನಿಕನಾಗಿ ಮೆರೆದ ನಟ ಯೋಗೀಶ್ವರ.
ಮದುವೆಯಾಗಿಯೂ ಅವಿವಾಹಿತೆ ಅಂತ ಹೇಳಿದ ರಂಭಳ ಮೇಲೆ ಹಳ್ಳಿಗರು ಕೋಪಗೊಳ್ಳುತ್ತಾರೆ. ಗೌಡರ ನೇತೃತ್ವದಲ್ಲಿ ಪಂಚಾಯ್ತಿಯನ್ನೂ ನಡೆಸುತ್ತಾರೆ. ಬಾಲಾಜಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಪಾಂಚಾಲಿ" ಚಿತ್ರಕ್ಕಾಗಿ ಈ ದೃಶ್ಯವನ್ನು ಶ್ರೀರಂಗಪಟ್ಟಣ ಸಮೀಪದ ರಾಂಪುರ ಗ್ರಾಮದಲ್ಲಿ ನಿರ್ದೇಶಕ ದಿನೇಶ್ ಬಾಬು ಈಚೆಗೆ ಚಿತ್ರೀಕರಿಸಿಕೊಂಡರು.
ಪಂಚಾಯ್ತಿ ಕಟ್ಟೆಯ ದೃಶ್ಯದಲ್ಲಿ ಕಿಟ್ಟಿ, ರಮೇಶ್ಭಟ್, ಸುಂದರ್ರಾಜ್, ಶೆಣೈ, ಉಮೇಶ್ ಮತ್ತಿತರರು ಪಾಲ್ಗೊಂಡಿದ್ದರು. ಪಂಚಾಯ್ತಿಯಲ್ಲಿ ಈಕೆಗೆ ಯಾವ ಶಿಕ್ಷೆ ಕೊಟ್ಟರು ಅನ್ನೋದು ಮಾತ್ರ ಸಸ್ಪೆನ್ಸ್. ಅಂದಹಾಗೆ ಪಿ.ಕೆ.ಎಚ್. ದಾಸ್ ಛಾಯಾಗ್ರಹಣದಲ್ಲಿ ದೃಶ್ಯದ ಚಿತ್ರೀಕರಣ ನಡೆಯಿತು.


Click it and Unblock the Notifications