ಪುನೀತ್ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಂಚಮಸಾಲಿ ಸ್ವಾಮೀಜಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇತ್ತೀಚಿಗಷ್ಟೆ ದಾವಣಗೆರೆಯ ಪ್ರಸಿದ್ಧ ಹರ ಜಾತ್ರಾ ಮಹೋತ್ಸವಕ್ಕೆ ಹೋಗಿದ್ದರು. ನಿರ್ಮಾಪಕ ಮುನಿರತ್ನ ಸಹ ಪುನೀತ್ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಪಂಚಮಸಾಲಿ ಪೀಠದ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಅಪ್ಪು ಅವರಿಂದ ಆಶೀರ್ವಾದ ಪಡೆದುಕೊಂಡಿದ್ದರು. ಹಾಗೂ ಅವರ ಜೊತೆ ವೇದಿಕೆ ಸಹ ಹಂಚಿಕೊಂಡಿದ್ದರು. ಈ ವೇಳೆ ಪುನೀತ್ ಅವರ ಸರಳತೆ ಹಾಗೂ ಸಜ್ಜನಿಕೆ ಕಂಡು ಖುಷಿಯಾಗಿದ್ದಾರೆ. ಈ ಕುರಿತು ಫೇಸ್ಬುಕ್ನಲ್ಲಿ ವಿವರವಾಗಿ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
''ಕೆಲವರು ಎಷ್ಟೇ ಎತ್ತರಕ್ಕೆ ಏರಿದರೂ ಕಾಲು ನೆಲದ ಮೇಲೇ ಇರುತ್ತದೆ. ಹಾಗೇ ಇರಬೇಕು ಕೂಡ. ಅದು ದೊಡ್ಡವರ ಅತಿ ದೊಡ್ಡ ಗುಣ. ಹಾಗಿರುವವರು ಶ್ರೀಪುನೀತ್ ರಾಜಕುಮಾರ್ ಅವರು. ಸರಳತೆ ಸಜ್ಜನತೆ ಅಪಾರ ಪ್ರೀತಿ ಅವರನ್ನು ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸಿದೆ. ಇದೇ ಆಶಯ ವಿಶ್ವಗುರು ಬಸವಣ್ಣನವರದ್ದೂ ಆಗಿತ್ತು. ಮೇಲಾಗಲೊಲ್ಲೆನು ಕೀಳಾಗಲಲ್ಲದೆ ಕೀಳಿಂಗಲ್ಲದೆ ಹಯನು ಕರೆವುದೆ ಮೇಲಾಗಿ ನರಕದಲೋಲಾಡಲಾರೆನು. ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು ಮಹಾದಾನಿ ಕೂಡಲಸಂಗಮದೇವಾ.''

''ಹರಜಾತ್ರಾ ಮಹೋತ್ಸವಕ್ಕೆ ಬಂದಾಗ ಅವರ ಸಿಂಪ್ಲಿಸಿಟಿ ಕಂಡು ನಾವು ವಿಸ್ಮಿತರಾದೆವು. ಅವರಿಗಿರುವ ಅಭಿಮಾನಿ ಸಮೂಹ ಬಹಳ ದೊಡ್ಡದಿದೆ. ಹೇಳಬೇಕೆಂದರೆ ಡಾ. ರಾಜ್ ಕುಮಾರ್ ಅವರನ್ನೇ ಹೋಲುತ್ತಿದೆ ಪುನೀತ್ ಅವರ ವ್ಯಕ್ತಿತ್ವ. ನೀವು ನಮ್ಮ ಹರಜಾತ್ರಾ ಮಹೋತ್ಸವಕ್ಕೆ ಬಂದಿದ್ದು ನಮಗೆ ಅತೀವ ಖುಷಿ ನೀಡಿತು. ಘನತೆ ಹೆಚ್ಚಿಸಿತು. ಈ ಬಾಂಧವ್ಯ ಎಂದೆಂದಿಗೂ ಮುಂದುವರಿಯುತ್ತದೆ. ಶ್ರೀ ಪುನೀತ್ ರಾಜಕುಮಾರ್ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಒಳಿತಾಗಲಿ ಎಂದು ನಾವು ಹರಿಹರಾದಿ ಶರಣರಲ್ಲಿ ಪ್ರಾರ್ಥಿಸುತ್ತೇವೆ.'' ಎಂದು ಬರೆದುಕೊಂಡಿದ್ದಾರೆ.
ಹರ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಪುನೀತ್ ಅವರನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.


Click it and Unblock the Notifications










