ಫಿಲ್ಮ್ ಚೇಂಬರ್ ಗೆ ವಿಜಿ ಪ್ರಕರಣ: ನಿಷೇಧ ಮಾಡಲು ಒತ್ತಾಯ.!
ಜಿಮ್ ಟ್ರೈನರ್ ಮಾರುತಿ ಗೌಡ ಅವರನ್ನ ಕಿಡ್ನ್ಯಾಪ್ ಮಾಡಿ, ಹಲ್ಲೆ ಮಾಡಿರುವ ಆರೋಪದಡಿ ನಟ ದುನಿಯಾ ವಿಜಯ್ ಬಂಧನವಾಗಿದ್ದಾರೆ. ಈ ಸಂಬಂಧ ಹಲ್ಲೆಗೊಳಗಾದ ವ್ಯಕ್ತಿಯ ಚಿಕ್ಕಪ್ಪ ಪಾನಿಪುರಿ ಕಿಟ್ಟಿ ಅವರು ವಿಜಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
ದುನಿಯಾ ವಿಜಯ್ ಚಿತ್ರರಂಗಕ್ಕೆ ಸಂಬಂಧಿಸಿದ ವ್ಯಕ್ತಿಯಾಗಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು, ಹಾಗೂ ವಿಜಿ ಅವರನ್ನ ಚಿತ್ರರಂಗದಿಂದ ಶಾಶ್ವತವಾಗಿ ನಿಷೇಧ ಮಾಡಬೇಕು ಎಂದು ಪಾನಿಪುರಿ ಕಿಟ್ಟಿ ಅವರು ಮನವಿ ಮಾಡಲು ಮುಂದಾಗಿದ್ದಾರೆ.
ಇನ್ನು ವಿಜಯ್ ಅವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೆಗೌಡ ಅವರು ಮಾಧ್ಯಮದೊಂದಿಗೆ ಮಾತನಾಡಿದ್ದು, ''ದೂರು ಯಾರೂ ನೀಡಿಲ್ಲ. ಒಂದು ವೇಳೆ ದೂರು ನೀಡಿದ್ರೆ ಫಿಲ್ಮ್ ಚೇಂಬರ್ ಸದಸ್ಯರೆಲ್ಲಾ ಕೂತು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ'' ಎಂದರು.

ಪ್ರಕರಣದ ಬಗ್ಗೆ ಮಾತನಾಡಿದ್ದ ಚಿನ್ನೆಗೌಡ ''ಕಲಾವಿದರು ಕಲಾವಿದರಾಗಿರಬೇಕು. ಇಂತಹ ಘಟನೆಗಳು ಆಗಬಾರದು. ಯಾರೂ ಕಾನೂನನ್ನ ಕೈಗೆ ತೆಗೆದುಕೊಳ್ಳಬಾರದು. ಕಲಾವಿದರ ಸಂಘದವರು ಯಾವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ ನೋಡಬೇಕಿದೆ. ನಂತರ ನಾವು ಎಲ್ಲರ ಚರ್ಚೆ ಮಾಡ್ತೀವಿ'' ಎಂದು ತಿಳಿಸಿದ್ದಾರೆ.
ಈ ಹಿಂದೆ 'ಮಾಸ್ತಿಗುಡಿ' ದುರಂತದ ಸಂದರ್ಭದಲ್ಲಿ ದುನಿಯಾ ವಿಜಯ್ ಅವರಿಗೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿತ್ತು. ನಂತರ ಆ ನಿಷೇಧವನ್ನ ರದ್ದು ಮಾಡಲಾಗಿತ್ತು. ಈಗ ಮತ್ತೆ ದುನಿಯಾ ವಿಜಯ್ ಅವರಿಗೆ ನಿಷೇಧ ಹೇರಬಹುದು ಎನ್ನಲಾಗುತ್ತಿದೆ. ಆದ್ರೆ, ನಾಳೆ ವಾಣಿಜ್ಯ ಮಂಡಳಿಯಲ್ಲಿ ಈ ಬಗ್ಗೆ ಸಭೆ ನಡೆಯಲಿದ್ದು, ಏನಾಗಲಿದೆ ಎಂದು ಕಾದುನೋಡಬೇಕಿದೆ.


Click it and Unblock the Notifications











