ಮೃತಪಟ್ಟ ಮಗನ ಫೋಟೋ ಇಟ್ಟುಕೊಂಡು 'ಯುವರತ್ನ' ಸಿನಿಮಾ ವೀಕ್ಷಿಸಿದ ಪೋಷಕರು
ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಕಂಡು ಅಪ್ಪು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ತಮ್ಮ ನೆಚ್ಚಿನ ನಟನ ಚಿತ್ರ ನೋಡಲು ಎಲ್ಲಾ ವರ್ಗದ ಜನರು ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದ್ದಾರೆ.
Recommended Video
ಈ ನಡುವೆ, ಮೃತಪಟ್ಟ ಮಗನ ಫೊಟೋ ಇಟ್ಟುಕೊಂಡು ಪೋಷಕರು 'ಯುವರತ್ನ' ಸಿನಿಮಾ ನೋಡಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಡಿ ಆರ್ ಸಿ ಮಲ್ಟಿಫ್ಲೆಕ್ಸ್ನಲ್ಲಿ ಪೋಷಕರು ಮೃತ ಮಗನ ಭಾವಚಿತ್ರದೊಂದಿಗೆ ಸಿನಿಮಾ ನೋಡಿದ ಭಾವುಕ ಘಟನೆ ನಡೆದಿದೆ. ಮೈಸೂರಿನ ನಿವಾಸಿ ಮುರಳಿಧರ್ ಎಂಬುವವರ ಪುತ್ರ ಹರಿಕೃಷ್ಣನ್ ಕಳೆದ ಮೂರು ತಿಂಗಳ ಹಿಂದಷ್ಟೇ ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನಪ್ಪಿದ್ದ.

ಪುಟ್ಟ ಹುಡುಗ ಹರಿಕೃಷ್ಣನ್, ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿ ಆಗಿದ್ದ. ಅಷ್ಟೇ ಅಲ್ಲದೆ, ಆತ ಯುವರತ್ನ ಸಿನಿಮಾ ನೋಡಬೇಕೆಂದು ಆಸೆ ಪಟ್ಟಿದ್ದ. ಈ ಕಾರಣದಿಂದ, ಮಗನ ಆಸೆಯಂತೆ ಪೋಷಕರು ಆತನ ಫೋಟೋದೊಂದಿಗೆ 'ಯುವರತ್ನ' ವೀಕ್ಷಣೆ ಮಾಡಿದ್ದಾರೆ. ಜತೆಗೆ ತಮ್ಮಿಂದ ದೂರವಾಗಿರೋ ಮಗನಿಗೂ ಒಂದು ಟಿಕೆಟ್ ತೆಗೆದುಕೊಂಡು, ಅಪ್ಪ-ಅಮ್ಮ, ಹಿರಿಯ ಮಗನ ಜೊತೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

ಎಲ್ಲಾ ವರ್ಗದ ಪ್ರೇಕ್ಷಕರ ನೆಚ್ಚನ ನಟ ಪವರ್ ಸ್ಟಾರ್. ಅದರಲ್ಲೂ ಫ್ಯಾಮಿಲಿ ಆಡಿಯನ್ಸ್ಗೆ ಪುನೀತ್ ಮತ್ತಷ್ಟು ಹತ್ತಿರ. ಯುವರತ್ನ ಚಿತ್ರವನ್ನು ಇಡೀ ಕುಟುಂಬದೊಂದಿಗೆ ಬಂದು ವೀಕ್ಷಣೆ ಮಾಡಿ ಸಂತಸಪಡುತ್ತಿದ್ದಾರೆ. ಸಂತೋಷ್ ಆನಂದ್ ರಾಮ್ ಸಾರಥ್ಯದಲ್ಲಿ ಬಂದ ಯುವರತ್ನ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.


Click it and Unblock the Notifications











