ಪರುಲ್ 'ವಾಸ್ತು ಪ್ರಕಾರ' ಪ್ರಾಣಾಪಾಯದಿಂದ ಪಾರು
ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳ ಪ್ಯಾರಿ ಬೆಡಗಿ ಪರುಲ್ ಯಾದವ್ ಪ್ರಾಣಾಪಾಯದಿಂದ ಪಾರಾದ ಘಟನೆಯಿದು. ಈ ಘಟನೆ ನಡೆದಿರುವುದು ವಾಸ್ತುಪ್ರಕಾರ ಚಿತ್ರೀಕರಣಲ್ಲಿ ಎಂಬುದು ವಿಶೇಷ. ಆ ಪ್ರಾಣಾಪಾಯದ ಘಟನೆಯನ್ನು ಅವರ ಬಾಯಲ್ಲೇ ಕೇಳಿ.
ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳುತ್ತಿರುವ 'ವಾಸ್ತು ಪ್ರಕಾರ' ಚಿತ್ರ ಏಪ್ರಿಲ್ 2ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಈ ಬಾರಿ ಭಟ್ರು ಏನೆಲ್ಲಾ ಮ್ಯಾಜಿಕ್ ಮಾಡಿದ್ದಾರೆ, ಚಿತ್ರದಲ್ಲಿನ ವಿಶೇಷಗಳೇನು ಎಂಬುದು ಗೊತ್ತಾಗುವ ಸಮಯ ಹತ್ತಿರವಾಗಿದೆ. [ಪರುಲ್ ಯಾದವ್ ಜೊತೆ ಹಿಮಾಲಯದಲ್ಲಿ 'ಉಪ್ಪಿ 2']
ಈ ಚಿತ್ರದ ಒಂದು ಸನ್ನಿವೇಶದ ಚಿತ್ರೀಕರಣ ವೇಳೆ ಪರುಲ್ ಯಾದವ್ ಗೆ ಜೀವಕ್ಕೇ ಅಪಾಯ ಎದುರಾಗಿತ್ತಂತೆ. ನವರಸ ನಾಯಕ ಜಗ್ಗೇಶ್ ಹಾಗೂ ಪರುಲ್ ನಡುವಿನ ಸನ್ನಿವೇಶದ ಚಿತ್ರೀಕರಣ ವೇಳೆ ಅವರ ಕುತ್ತಿಗೆಗೆ ಬಟ್ಟೆ ಸುತ್ತಿಕೊಂಡು ಉಸಿರುಗಟ್ಟಿ ಇನ್ನೇನು ಜೀವವೇ ಹೋಗಬೇಕಾಗಿತ್ತಂತೆ.

ಆದರೆ ಕ್ಯಾಮೆರಾಮೆನ್ ಸಂತೋಷ್ ರೈ ಪತಾಜೆ ಅವರ ಸಮಯಪ್ರಜ್ಞೆ ಅವರನ್ನು ಗಂಡಾಂತರದಿಂದ ಪಾರು ಮಾಡಿತಂತೆ. ಜಗ್ಗೇಶ್ ಮತ್ತು ಪರುಲ್ ನಡುವಿನ ಸನ್ನಿವೇಶದಲ್ಲಿ ಪರುಲ್ ಕುತ್ತಿಗೆಗೆ ಬಟ್ಟೆ ಸುತ್ತಿ ಕಂಬಕ್ಕೆ ಕಟ್ಟಿ ಎಳೆಯುವ ಸನ್ನಿವೇಶವದು.
ಆದರೆ ಬಟ್ಟೆ ಅವರ ಕುತ್ತಿಗೆಗೆ ಸುತ್ತಿಕೊಂಡು ಉಸಿರುಗಟ್ಟಿತಂತೆ. ಎಲ್ಲರೂ ಸೂಪರ್ ಆಗಿ ಆಕ್ಟಿಂಗ್ ಮಾಡ್ತಿದ್ದಾರೆ ಎಂದೇ ಭಾವಿಸಿದ್ದರಂತೆ. ಆದರೆ ಅವರ ಮುಖ ನೀಲಿಗಟ್ಟುತ್ತಿದ್ದನ್ನು ಗಮನಿಸಿದ ಕ್ಯಾಮೆರಾಮೆನ್ ಕೂಡಲೆ ಎಲ್ಲರ ಗಮನಕ್ಕೆ ತಂದು ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿದರಂತೆ. ಪರುಲ್ ಗೆ ಹೋದ ಜೀವ ಬಂದಂತಾಗಿದೆ.
ವಾಸ್ತುಶಾಸ್ತ್ರ, ಮೂಢನಂಬಿಕೆಗಳ ಕುರುಡ ಆಚರಣೆಗಳಲ್ಲಿ ಭಾರತೀಯ ನಂಬಿಕೆಯನ್ನು ವಿಜ್ಞಾನದ ತಳಹದಿಯಲ್ಲಿ ನೋಡುವ ಪ್ರಯತ್ನವನ್ನು ಭಟ್ರು ಮಾಡಿದ್ದಾರೆ. ಜಗ್ಗೇಶ್, ರಕ್ಷಿತ್ ಶೆಟ್ಟಿ, ಐಶಾನಿ ಶೆಟ್ಟಿ, ಅನಂತನಾಗ್, ಸುಧಾರಾಣಿ, ಟಿ.ಎನ್.ಸೀತಾರಾಮ್ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.


Click it and Unblock the Notifications











