ಶ್ರೀಕೃಷ್ಣನ ಆಡುಂಬೋಲದಿಂದರಾಜಧಾನಿಗೆ ಮರಳಿದ ‘ಪರ್ವ’
ಸಂಗೀತಮಯ ಪ್ರೇಮಕಾವ್ಯ ಎನಿಸಿಕೊಂಡೇ ಚಿತ್ರೀಕರಣದಲ್ಲಿ ತೊಡಗಿರುವ ಶ್ರೀನಿವಾಸ ಪ್ರೊಡಕ್ಷನ್ಸ್ ಲಾಂಛನದ ಪರ್ವ ಮತ್ತೊಂದು ಹಂತದ ಚಿತ್ರೀಕರಣಕ್ಕಾಗಿ ಶ್ರೀಕೃಷ್ಣನ ಆಡುಂಬೋಲ (ಉಡುಪಿ) ದಲ್ಲಿ ಅಡ್ಡಾಡಿ, ಮನೆಗೆ ಮರಳಿದೆ.
ಸೆನ್ಸೇಷನಲ್ ಚಿತ್ರಗಳನ್ನು ಕನ್ನಡಕ್ಕೆ ನೀಡಿದ ಸುನಿಲ್ ಕುಮಾರ್ ದೇಸಾಯಿ ಚಿತ್ರದ ಕತೆ ಹೆಣೆದು, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕಾಗಿ ಅರುಣ್ ಕುಮಾರ್ ಕಲಾ ನಿರ್ದೇಶನದಲ್ಲಿ ವಿಶಿಷ್ಟವಾದ ಸೆಟ್ಗಳಲ್ಲಿ ಹಲವು ದೃಶ್ಯ ಹಾಗೂ ಹಾಡಿನ ಭಾಗಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ.
'ಪಲ್ಲವಿ ತಾನೆ ಹಾಡಿನ ಪ್ರಾಣ , ನೀ ನನ್ನ ಪಲ್ಲವಿ ನಿನ್ನಿಂದ ಈ ಪಲ್ಲವಿ" ಎಂಬ ಗೀತೆಯ ಕೆಲವು ಭಾಗಗಳಿಗೆ ಉಡುಪಿ ಜಿಲ್ಲೆಯ ಕಾಪು ಬೀಚಿನ ಸುಂದರ ತಾಣವನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯಲಾಗಿದೆ. ಪಲ್ಲವಿಯ ಗೀತೆಗೆ ವಿಷ್ಣುವರ್ಧನ್, ಪ್ರೇಮಾ, ಕಾಶಿ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.
ಉಡುಪಿಯಿಂದ ಬೆಂಗಳೂರಿಗೆ ಮರಳಿರುವ ಚಿತ್ರತಂಡ ಅಶೋಕಾ ಹೊಟೆಲ್ ಮತ್ತು ವಹೀದಾ ರೆಹೆಮಾನ್ ಎಸ್ಟೇಟ್ಗಳಲ್ಲಿ ಚಿತ್ರೀಕರಣ ಮುಂದುವರಿಸಿತು. ಎಚ್.ಸಿ. ವೇಣು ಛಾಯಾಗ್ರಹಣ, ರುದ್ರೇಶ್, ಗೋವಿಂದ್ ಸಹ ನಿರ್ದೇಶನ, ಅರುಣ್ ಕುಮಾರ್ ಕಲಾ ನಿರ್ದೇಶನ, ಡಿ.ಎಂ. ನಾಗರಾಜ ಮೂರ್ತಿ ನಿರ್ಮಾಣ ನಿರ್ವಹಣೆ ಇರುವ ಈ ಚಿತ್ರದ ನಿರ್ಮಾಪಕರು ಬಿ.ವಿ. ಚಕ್ರಪಾಣಿ ಮತ್ತು ಕೆ.ಸಿ. ರವೀಂದ್ರ.
ತಾರಾಬಳಗದಲ್ಲಿ ವಿಷ್ಣುವರ್ಧನ್, ಪ್ರೇಮಾ, ರೋಜಾ, ಕೃತ್ತಿಕಾ, ರೇಖಾ, ಕಾಶಿ, ರಾಧಾರವಿ, ಮನದೀಪ್ ರೈ, ನವೀನ್ ಮಯೂರ್, ಅರುಣ್ ಕುಮಾರ್ ಮೊದಲಾದವರಿದ್ದಾರೆ.


Click it and Unblock the Notifications