‘ಪ್ರೇಮ’ ಕಲಹದ ಬಳಿಕ ಚಿತ್ರೀಕರಣ ‘ಪರ್ವ’
ಚಿತ್ರ ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಹಾಗೂ ನಟಿ ಪ್ರೇಮಾ ನಡುವಿನ ಕಲಹ ಕೊನೆಗೊಂಡಿದ್ದು. ಈಗ ಮತ್ತೊಂದು ಸುತ್ತಿನ ಚಿತ್ರೀಕರಣದ 'ಪರ್ವ" ಕ್ಕೆ ನಾಂದಿ ಹಾಡಿದೆ. ಶ್ರೀನಿವಾಸ್ ಪ್ರೋಡಕ್ಷನ್ಸ್ ಲಾಂಛನದಲ್ಲಿ ಸುನಿಲ್ ಕುಮಾರ್ ದೇಸಾಯಿ ನಿರ್ದೇಶಿಸುತ್ತಿರುವ 'ಪರ್ವ" ವೆಂಬ ಪ್ರೇಮಕಾವ್ಯಕ್ಕಾಗಿ ರಾಜ್ಯದ ನಾನಾ ಭಾಗಗಳಲ್ಲಿ ಚಿತ್ರೀಕರಣ ಭರದಿಂದ ನಡೆದಿದೆ.
'ಪಲ್ಲವಿ ತಾನೆ ಹಾಡಿನ ಪ್ರಾಣ, ನೀ ನನ್ನ ಪಲ್ಲವಿ, ನಿನ್ನಿಂದ ಈ ಪಲ್ಲವಿ" ಎಂಬ ಪ್ರೇಮಗೀತೆಗೆ ವಿಷ್ಣುವರ್ಧನ್ ಹಾಗೂ ಪ್ರೇಮಾ ಹೆಜ್ಜೆ ಹಾಕಿದರು. ಈ ಗೀತೆಯ ಚಿತ್ರೀಕರಣ ಮಡಿಕೇರಿ, ಅಬ್ಬಿ ಜಲಪಾತ, ತಲಕಾವೇರಿ, ಕೊತ್ಲೋಳೆ ಮೊದಲಾದ ಕಡೆಗಳಲ್ಲಿ ನಡೆಯಿತು.
ಇದಾದ ಬಳಿಕ ಗಾಳೀಬೀಡು ಎಂಬ ಮನೋಹರ ತಾಣದಲ್ಲಿ ವಿಷ್ಣು ಹಾಗೂ ಪ್ರೇಮಾ ಅವರ ಅಭಿನಯದಲ್ಲೇ 'ಎಲ್ಲಿ ಹೋದೆ, ಏಕೆ ಹೋದೆ" ಎಂಬ ಮತ್ತೊಂದು ಗೀತೆಗೂ ನೃತ್ಯದ ಚಿತ್ರೀಕರಣ ನಡೆಯಿತು. ವಿಷ್ಣು, ರೋಜಾ, ಜಯಲಕ್ಷ್ಮೀ ಹಾಗೂ ನಲವತ್ತಕ್ಕೂ ಹೆಚ್ಚು ಸಹಕಲಾವಿದರನ್ನೊಳಗೊಂಡ ಮಗದೊಂದು ಗೀತೆಯ ಚಿತ್ರೀಕರಣವೂ ಎಚ್.ಸಿ. ವೇಣು ಛಾಯಾಗ್ರಹಣದಲ್ಲಿ ಸಿಲ್ವರ್ ಓಕೆ ರೆಸಾರ್ಟ್ನಲ್ಲಿ ಮುಗಿದ್ದಿದ್ದು 'ಪರ್ವ" ಅಂತಿಮಘಟ್ಟ ತಲುಪಿದೆ.
ಸುನಿಲ್ಕುಮಾರ್ ದೇಸಾಯಿ ಅವರು, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು 'ಪರ್ವ"ವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಹಂಸಲೇಖಾರ ಗೀತೆ - ರಾಗಸಂಯೋಜನೆ ಇದೆ. ತಾರಾಗಣದಲ್ಲಿ ವಿಷ್ಣುವರ್ಧನ್, ಪ್ರೇಮಾ, ರೋಜಾ, ಅಪರ್ಣ, ರಮೇಶ್ಭಟ್, ವೈದ್ಯನಾಥನ್, ರೇಖಾ, ನವೀನ್ ಮಯೂರ್, ಕೆರೆಮನೆ ಶಂಭುಹೆಗಡೆ ಮೊದಲಾದವರಿದ್ದಾರೆ .ವಾರ್ತಾ ಸಂಚಯ


Click it and Unblock the Notifications