twitter
    For Quick Alerts
    ALLOW NOTIFICATIONS  
    For Daily Alerts

    ಇಂಥಾ ಅವಿವೇಕ ಮುಂದುವರಿದರೆ ಇಂಡಸ್ಟ್ರಿಗೆ ಉಳಿಗಾಲವಿಲ್ಲ’

    By Super
    |

    ಎಂಟು ತಿಂಗಳ ಕಾಲ ಹಗಲು- ರಾತ್ರಿ ಕತೆಯಾಂದರ ಸ್ಕೆಲಿಟನ್‌ಗೆ ಜೀವ ತುಂಬುವ ಕೆಲಸದಲ್ಲಿ ತೊಡಗಿ, ಒಂದೂಕಾಲು ವರ್ಷದ ಅವಧಿಯಲ್ಲಿ ಆ ಕತೆಯನ್ನು ಸಿನಿಮಾ ಆಗಿಸಿದ ಅಶೋಕ್‌ ಪಾಟೀಲ್‌ ಅಮೆರಿಕದ ಸಾಫ್ಟ್‌ವೇರ್‌ ಎಂಜಿನಿಯರ್‌. ಕಳೆದ ವರ್ಷವೇ ತಮ್ಮ ಚೊಚ್ಚಲ ನಿರ್ದೇಶನದ ಕನ್ನಡ ಚಿತ್ರ 'ಶಾಪ'ವನ್ನು ತೆರೆಗೆ ತರಲು ಶತಾಯಗತಾಯ ಯತ್ನಿಸಿ, ವಿತರಕರಿಂದ ಬೇಸತ್ತು ಭಾರತದಿಂದ ಮತ್ತೆ ಅಮೆರಿಕೆಗೆ ಹಾರಿದವರು.

    ಸಿನಿಮಾ ಬಿಡುಗಡೆಯಾಗಿದೆ. ಆದರೆ ಅಶೋಕ್‌ ಅವರಿಗೆ ಅದನ್ನು ಭಾರತದಲ್ಲಿ ನೋಡುವ ಭಾಗ್ಯ ಇಲ್ಲ. ಆದರೂ ಇಲ್ಲಿನ ಕನ್ನಡಿಗರ ಪ್ರತಿಕ್ರೆಯೆಗೆ ಅವರು ಕಾತರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮೊಟ್ಟಿಗೆ ಇ- ಮೇಲ್‌ ಮೂಲಕ ಅಶೋಕ್‌ ಮಾತಾಡಿದ್ದಾರೆ...

    ಶಾಪ ಚಿತ್ರವನ್ನು ನೀವು ಯಾವ ಕೆಟಗರಿಗೆ ಸೇರಿಸಲು ಇಷ್ಟಪಡುತ್ತೀರಿ. ಇದೊಂದು ಮನೋವೈಜ್ಞಾನಿಕ ಚಿತ್ರವೇ ಅಥವಾ ಥ್ರಿಲ್ಲರಾ, ಪ್ರೇಮಕತೆಯೋ, ಮೂರು ಕೊಳಲುಗಳ ಕತೆಯೋ, ವಯಾಮೀಡಿಯಾ ಚಿತ್ರವೋ. ಇವೆಲ್ಲಾ ಅಂಶಗಳೂ ಚಿತ್ರದಲ್ಲಿವೆ. ಇದರಿಂದಾಗಿ ಚಿತ್ರಕ್ಕೆ ಅನುಕೂಲವಾಗುತ್ತದೆಯೋ, ಅನನುಕೂಲವೋ?
    ಶಾಪ ಒಂದು ಮನೋವೈಜ್ಞಾನಿಕ ಥ್ರಿಲಿಂಗ್‌ ಲವ್‌ ಸ್ಟೋರಿ. ಚಿತ್ರದುದ್ದಕ್ಕೂ ಮುಖ್ಯ ಪಾತ್ರ ಪಯಣಿಸುವ ಹಾದಿಯಲ್ಲೇ ಪ್ರೇಕ್ಷಕರನ್ನು ಒಯ್ಯುವುದೇ ನನ್ನ ಉದ್ದಿಶ್ಯವಾಗಿತ್ತು. ಪಾತ್ರದ ಏರು- ಪೇರುಗಳನ್ನು ಪ್ರೇಕ್ಷಕರೂ ಅನುಭವಿಸಿದರೆ, ಚಿತ್ರ ಯಶಸ್ವಿಯಾಯಿತೆಂದೇ ಲೆಕ್ಕ.

    ಶಾಪದ ಕತೆಯ ಹಿಂದೆ ಇಂಗ್ಲಿಷ್‌ ಚಿತ್ರಗಳ ನೆರಳಿದೆ ಅನ್ನುವ ದೂರಿದೆ. ಅದರಲ್ಲೂ ಕ್ಲೈಮ್ಯಾಕ್ಸ್‌ ಡಿಟ್ಟೋ ಸಿಡ್ನಿ ಶೆಲ್ಡಾನ್‌ ಕಾದಂಬರಿಯ ಅಂತ್ಯದಂತೆಯೇ ಇಲ್ಲವೇ?
    ಚಿತ್ರಕತೆಯ ಎಳೆ ಮೂಲತಃ ಹಂಸಲೇಖಾರದ್ದು. ಕ್ಲೈಮ್ಯಾಕ್ಸ್‌ ಸೇರಿದಂತೆ ಚಿತ್ರಕತೆಯ ಪರಿಯನ್ನು ಅವರು ನನಗೆ ತಿಳಿಸಿದರು. ಆ ಎಳೆಯನ್ನೇ ಹಿಡಿದು ನಾನು 8 ತಿಂಗಳ ಕಾಲ ಹಗಲು ರಾತ್ರಿ ಚಿತ್ರಕತೆ ಹೆಣೆದೆ. ಹಂಸಲೇಖಾರ ಕತೆಯ ಅಸ್ಥಿಪಂಜರಕ್ಕೆ ನಾನು ರಕ್ತ-ಮಾಂಸ ತುಂಬಿದೆ. ಜಗತ್ತಿನಲ್ಲಿ ಅಸಂಖ್ಯಾತ ಕತೆಗಾರರಿದ್ದಾರೆ. ಇಂಥಾದರಲ್ಲಿ ಒಬ್ಬರ ಕತೆಗೂ, ಮತ್ತೊಬ್ಬರ ಕತೆಗೂ ಕೊಂಚವಾದರೂ ಸಾಮ್ಯತೆ ಇದ್ದರೆ ಆಶ್ಚರ್ಯವೇನಲ್ಲ ಅಲ್ಲವೇ?

    ಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲಿ ನಿರ್ದೇಶಕ ಊರಲ್ಲಿ ಇಲ್ಲದೇ ಇರುವದು ಕನ್ನಡದ ಮಟ್ಟಿಗೆ ಇದೇ ಮೊದಲು. ಅದಕ್ಕೆ ಕಾರಣ- ನೀವು ಅಷ್ಟೊಂದು ಬಿಜಿಯಾಗಿದ್ದೀರಾ ಅಥವಾ ಚಿತ್ರದ ಪ್ರಿವ್ಯೂಗೆ ಚಿತ್ರೋದ್ಯಮ ನೀಡಿದ ಪ್ರತಿಕ್ರಿಯೆಯಿಂದಾಗಿ ನಿಮಗೆ ಬೇಜಾರಾಗಿ ಅಮೆರಿಕಾಗೆ ವಾಪಸ್‌ ಹೋದ್ರಾ? ಬಿ.ಸಿ.ಪಾಟೀಲ್‌ ಅವರಂತೂ ನನ್ನ ತಮ್ಮನಿಗೆ ನೋವಾಗಿದೆ ಎಂದೇ ಹೇಳಿದ್ದಾರೆ?
    ಎರಡು ವರ್ಷಗಳ ನನ್ನ ಪರಿಶ್ರಮ ಈಗ ಚಿತ್ರದ ಮೂಲಕ ತೆರೆ ಕಂಡಿದೆ. ಅದನ್ನು ನೋಡಲು ನಾನು ಭಾರತದಲ್ಲಿದ್ದರೆ ಎಷ್ಟು ಚೆನ್ನಾಗಿತ್ತು ಅಂತ ನನಗೂ ಅನಿಸಿದೆ. ಹಾಗಾಗದ್ದಕ್ಕೆ ಬೇಸರವೂ ಆಗಿದೆ. ಬಟ್‌ ಲೈಫ್‌ ಗೋಸ್‌ ಆನ್‌. ನಾನು ಭಾರತದಲ್ಲೇ ಇದ್ದರೆ ಸಿನಿಮಾ ಬೇಗ ಬಿಡುಗಡೆಯಾಗಲು ನೆರವಾಗುತ್ತಿರಲಿಲ್ಲ.

    ಕನ್ನಡ ಚಿತ್ರರಂಗದ ದುರಂತ ಅಂದರೆ, ನಮ್ಮ ವಿತರಕರು ಮತ್ತು ನಿರ್ಮಾಪಕರು ಕನ್ನಡದ ಪ್ರೇಕ್ಷಕರನ್ನು ಮೂಗರು, ದಡ್ಡರು ಅಂತ ತಿಳಿದಿದ್ದಾರೆ. ನೀವು ತೆಗೆದಿರೋ ಸಿನಿಮಾ ಕೇರಳದಲ್ಲಿ ಚೆನ್ನಾಗಿ ಓಡುತ್ತೆ, ಆದರೆ ಕರ್ನಾಟಕದಲ್ಲಲ್ಲ ಅಂತ ಕೂಡ ಹೇಳಿದರು. ಈ ಮಾತಿನಿಂದ ನಾನು ಘಾಸಿಗೊಂಡೆ. ಕನ್ನಡ ಚಿತ್ರರಂಗ ಅಳೆಯುವಂತೆ ಜನರ ಬುದ್ಧಿಮಟ್ಟವನ್ನು ಯಾವುದೇ ಇಂಡಸ್ಟ್ರಿ ಅಳೆದರೂ, ಅಂಥಾ ಇಂಡಸ್ಟ್ರಿ ಹೆಚ್ಚು ಕಾಲ ಉಳಿಯೋದಿಲ್ಲ. ಹಾಗಾದರೆ ಪ್ರತಿಶತ 90 ಕನ್ನಡ ಹಾಗೂ ಹಿಂದಿ ಚಿತ್ರಗಳು ಯಾಕೆ ಫ್ಲಾಪ್‌ ಆಗುತ್ತಿವೆ ? ವಿತರಕರ ಪ್ರಕಾರ ಸಿನಿಮಾ ಸಕ್ಸಸ್‌ ಆಗಬೇಕಾದರೆ ಒಂದು ಫಾರ್ಮುಲಾ ಇದೆ. ಕಲೆ ಅಕ್ಷರಶಃ ಕಲೆ ; ಪೊಳ್ಳು ತತ್ತ್ವಗಳನ್ನು ಮೀರಿದ್ದು.

    ವಿತರಕರು ಸದಾ ಹೇಳಿದ್ದು ಒಂದೇ ಮಾತು- ಇದು ಕ್ಲಾಸ್‌ ಚಿತ್ರ. ಆದರೆ ಕನ್ನಡದ ಜನ ಕ್ಲಾಸ್‌ ಚಿತ್ರಗಳನ್ನ ನೋಡೋದಿಲ್ಲ. ಇದರಿಂದ ನನಗೆ ತುಂಬಾ ಬೇಜಾರಾಯಿತು. ಸಿನಿಮಾ ಮಾಡೋದರಲ್ಲಿ ತೊಡಗದೇ ಇರುವ ಮಂದಿ ಇಂಥಾ ಕಾಮೆಂಟ್‌ಗಳನ್ನು ಮಾಡುವುದು ಸುಲಭ.

    ಶಾಪ ಚಿತ್ರಕ್ಕೆ ಆರಂಭದಲ್ಲಿ ಸಿಕ್ಕ ಪ್ರಚಾರದ ಟೆಂಪೋ ಕೊನೆಯತನಕ ಉಳಿಯಲಿಲ್ಲ. ಚಿತ್ರ ಬಿಡುಗಡೆಯಾಗುವ ಹೊತ್ತಿಗೆ ಇನ್ನೂ ಒಂದಿಷ್ಟು ಪ್ರಚಾರದ ಅಗತ್ಯ ಇತ್ತಲ್ಲವೇ? ಕನಿಷ್ಠ ಲಂಕೇಶ ಚಿತ್ರಕ್ಕೆ ಸಿಕ್ಕಿದ ಪ್ರಚಾರವೂ ಇದಕ್ಕೆ ಸಿಗಲಿಲ್ಲ. ಅದರಲ್ಲೂ ಶಾಪದಂಥ ಚಿತ್ರಕ್ಕೆ ಶ್ರೀಸಾಮಾನ್ಯ ಪ್ರೇಕ್ಷಕನನ್ನು ಮೊದಲೇ ತಯಾರು ಮಾಡುವ ಅಗತ್ಯ ಇತ್ತಲ್ಲವೇ. ಚಿತ್ರದ ಬಿಡುಗಡೆ ವಿಳಂಬವಾಗಿರುವುದೂ ಅನನುಕೂಲವಲ್ಲವೇ?
    ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಶಾಪ ಬಿಡುಗಡೆ ಮಾಡಬೇಕು ಅನ್ನೋದು ನಮ್ಮ ನಿರ್ಧಾರವಾಗಿತ್ತು. ಆದರೆ ಅದು ಅಷ್ಟು ಸುಲಭವಾಗಲಿಲ್ಲ, ನಮ್ಮ ಕೈಮೀರಿದ ವಿಷಯವಾಯಿತು. ಈಗ ಶಾಪ ತೆರೆ ಕಂಡಿದೆ. ಅದನ್ನು 'ಮೆಚ್ಚಿದೆವು ಅಥವಾ ಚೆನ್ನಾಗಿಲ್ಲ' ಅಂತ ಕನ್ನಡ ಜನರೇ ಹೇಳಲಿದ್ದಾರೆ. ಬೆಂಗಳೂರಿನ ನಮ್ಮ ವಿತರಕರು ಹಾಗೂ ಕೆ.ಆರ್‌.ಪ್ರಭು ಚಿತ್ರದ ಬಲವನ್ನ ಗುರ್ತಿಸಿದರು. ಅವರಿಗೆ ನಾನು ಆಭಾರಿ.

    English summary
    The curse of Kannada Film industry is that our distributors and producers treat our kannada people as dumb says Ashok Patil
    Sunday, July 14, 2013, 14:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X