twitter
    For Quick Alerts
    ALLOW NOTIFICATIONS  
    For Daily Alerts

    ಒಂದಿಷ್ಟು ಭರವಸೆಯನ್ನು ನೀಡಬಹುದಾಗಿತ್ತಲ್ಲವೇ?

    By Super
    |

    ಶಾಪವನ್ನು ಬರೀ ಸಿನಿಮಾ ಆಗಿ ನೋಡಿದರೆ ಚೆನ್ನಾಗಿದೆ ಅನ್ನಿಸುತ್ತದೆ. ಆದರೆ ಹೊರಗೆ ನಿಂತು ನೋಡಿದರೆ ನೆಗೆಟಿವ್‌ ಎಲಿಮೆಂಟ್‌ಗಳು ಬಹಳ ಇವೆ. ಜೀವನ್ಮುಖಿ ಧೋರಣೆಗಳು ಕಾಣಿಸುವುದಿಲ್ಲ. ಇದು ಪ್ರೇಕ್ಷಕರಿಗೆ ರಾಂಗ್‌ ಸಿಗ್ನಲ್‌ಗಳನ್ನು ಕಳಿಸುವ ಸಾಧ್ಯತೆ ಇಲ್ಲವೇ. ಇಷ್ಟಕ್ಕೂ ಬದುಕೆಂದರೆ ಬರೀ ನಿರಾಶೆಗಳ ಮೊತ್ತವೇ. ;?

    ಸಿನಿಮಾ ಚೆನ್ನಾಗಿದೆ ಅಂದದ್ದಕ್ಕೆ ಧನ್ಯವಾದಗಳು. ತಂದೆಯ ಬೈಗುಳವೇ ಕಥಾನಾಯಕನಿಗೆ ಶಾಪವಾಗುತ್ತದೆ. ಆ ಬೈಗುಳದ ಮರುಕಳಿಕೆಯಲ್ಲೇ ಚಿತ್ರಪೂರ್ತಿ ಒದ್ದಾಡುತ್ತಾನೆ, ಹೋರಾಡುತ್ತಾನೆ. ಸುಮ್ಮನಾಗಲೂ ಒಲ್ಲ, ಬಿಟ್ಟು ಕೊಡವುದು ಸಲ್ಲ - ಇದು ಅವನ ಮನ. ತಾನು ಪ್ರೀತಿಸಿದ ಹುಡುಗಿಯಲ್ಲಿ ಒಂದಾಗಿ (ರೂಪಕ), ಶಾಪದಿಂದ ವಿಮುಕ್ತನಾಗುತ್ತಾನೆ.

    ಮಕ್ಕಳ ಹೃದಯ- ಮನಸ್ಸು ಶುದ್ಧ, ಸೂಕ್ಷ್ಮ. ಅವು ಮುಗ್ಧ ಮೂರ್ತಿಗಳು. ತಂದೆ-ತಾಯಂದಿರು ಆಡುವ ಪ್ರತಿ ಮಾತೂ ಒಂದಲ್ಲ ಒಂದು ರೀತಿ ಅವರ ಜೀವನದಲ್ಲಿ ಹಾಸುಹೊಕ್ಕಾಗುತ್ತದೆ. ಚಿತ್ರದ ನಾಯಕನ ಜೀವನದುದ್ದಕ್ಕೂ ಕಾಡುವ ಬೈಗುಳಗಳು, ಚಿತ್ರ ನೋಡುವ ತಂದೆ-ತಾಯಂದಿರಿಗೆ ಖಂಡಿತ ಪಾಠವೇ ಸರಿ. ಮಕ್ಕಳ ಮೃದು ಮನಸ್ಸಿಗೆ ಘಾಸಿ ಮಾಡಕೂಡದು. ಮಾತಾಡುವಾಗ ನಾವು ಎಚ್ಚರದಿಂದಿರಬೇಕು ಎಂಬೊಂದು ಸಲಹೆಯನ್ನು ಪ್ರೇಕ್ಷಕ ತನಗೇ ತಾನೇ ಕೊಡುತ್ತಾ ಥಿಯೇಟರ್‌ನಿಂದ ಹೊರಬರುತ್ತಾನೆ ಎಂಬ ನಂಬುಗೆ ನನ್ನದು. ಈ ನಿಟ್ಟಿನಲ್ಲಿ ಚಿತ್ರ ನೆಗೆಟೀವ್‌ ಅಲ್ಲವೇ ಅಲ್ಲ. ಅದು ಮನರಂಜನೆಯನ್ನೂ ಕೊಡುತ್ತದೆ, ಪಾಠವನ್ನೂ ಹೇಳುತ್ತದೆ.

    ಶಾಪದ ಆರಂಭದಲ್ಲಿ ನಾಯಕನ ಫ್ಲಾಷ್‌ಬ್ಯಾಕ್‌ ಮತ್ತು ಅಂತ್ಯದಲ್ಲಿ ಕೋರ್ಟ್‌ ಸೀನ್‌ಗಳನ್ನು ಚಿತ್ರ ಸಿದ್ಧವಾದ ಮೇಲೆ ರಿ-ಎಡಿಟ್‌ ಮಾಡಲಾಗಿದೆ ಎಂದಿದ್ದಾರೆ ಬಿ.ಸಿ.ಪಾಟೀಲ್‌. ನೀವು ಒಂದು ವರ್ಷ ಕಷ್ಟ ಪಟ್ಟು ಮಾಡಿದ ಚಿತ್ರಕತೆಯಲ್ಲಿ ಈ ದೋಷಗಳು ನಿಮಗೆ ಮೊದಲೇ ಪತ್ತೆಯಾಗಲಿಲ್ಲವೇ ಅಥವಾ ಕಮರ್ಷಿಯಲ್‌ ಕಾರಣಕ್ಕೋಸ್ಕರ ಚಿತ್ರವನ್ನು ಕತ್ತರಿಸುವ ಪ್ರಮೇಯ ಬಂತೇ?
    ಕೆಲವೊಮ್ಮೆ ಎರಡು ತಾಸಿನ ಕತೆ ಹೇಳಲು 2 ವರ್ಷಗಳು ಬೇಕಾಗುತ್ತದೆ. ಈ ಅವಧಿಯಲ್ಲಿ ನೀವು ಕತೆಯ ಇಂಚಿಂಚಿಗೂ ತೀರಾ ಹತ್ತಿರಾಗುತ್ತೀರಿ. ಅದು ಹೇಗೆಂದರೆ, ಒಂದು ಬಿಳಿ ಗೋಡೆಗೆ ತೀರಾ ಹತ್ತಿರಾಗಿ ಮುಖ ಆನಿಸಿದಾಗ, ಅದರಲ್ಲಿನ ಕಲೆಗಳು ಕಾಣಿಸೋದಿಲ್ಲವಲ್ಲ ಹಾಗೆ. ಹೀಗಾಗಿ ಚಿತ್ರ ಮಾಡುವವರು ಶೂಟಿಂಗ್‌ ನಂತರ ಕೆಲವು ದೃಶ್ಯ್ಯಗಳನ್ನು ಕತ್ತರಿಸುವುದು ಸಾಮಾನ್ಯ. ಇದು ಜಗತ್ತಿನಾದ್ಯಂತ ನಡೆಯುತ್ತಿದೆ.

    ಚಿತ್ರದ ಪ್ರಚಾರದ ಸಲುವಾಗಿ ಟೀವಿ ಚಾನೆಲ್‌ಗೆ ನೀವು ಕೊಟ್ಟದ್ದು ಒಂದೇ ಹಾಡು. ಅದೇ ವಾಹಿನಿ..ವಾಹಿನಿ... ಆದರೆ ಈ ಹಾಡು ತುಂಬಾ ನಿಧಾನ ಗತಿಯಲ್ಲಿದೆ. ಅದಕ್ಕೆ ಹೋಲಿಸಿದರೆ ಶಾಪ ಚಿತ್ರದ ಸ್ಪೀಡ್‌ ಚೆನ್ನಾಗಿಯೇ ಇದೆ. ಪ್ರೇಕ್ಷಕ ಆ ಹಾಡು ನೋಡಿಯೇ ಹೆದರಿ ಥಿಯೇಟರ್‌ಗೆ ಬಾರದೇ ಇರುವ ಅಪಾಯವಿಲ್ಲವೇ. ಯಾಕೆಂದರೆ ನನ್ನ ಪ್ರೀತಿಯ ಹುಡುಗಿ ಚಿತ್ರದ ನಿರೂಪಣೆ ನಿಧಾನಗತಿಯಲ್ಲಿದ್ದರೂ ಅವರು ಪ್ರಚಾರಕ್ಕೆ ಬಳಸಿದ ಕಾರ್‌..ಕಾರ್‌... ಗೀತೆಯ ವೇಗ ಅದ್ಭುತವಾಗಿತ್ತು.

    ಚಿತ್ರದ ಪ್ಲಾಟ್‌ ಪಾಯಿಂಟ್‌ಗಳನ್ನು ಮೊದಲೇ ಹೇಳೋದು ಬೇಡವಾಗಿತ್ತು . ಅದಕ್ಕಾಗೇ ಇತರ ಹಾಡುಗಳನ್ನು ಟಿವಿ ಚಾನೆಲ್‌ಗಳಿಗೆ ಕೊಡಲಿಲ್ಲ. ಚಿತ್ರಕತೆಯ ಎಳೆ ಹಾಡಿನ ಮುಖಾಂತರ ಗೊತ್ತಾದಲ್ಲಿ ಪ್ರೇಕ್ಷಕ ಆಸಕ್ತಿ ಕಳೆದು ಕೊಳ್ಳುವ ಸಾಧ್ಯತೆಯಿದೆ. ಅದಕ್ಕಾಗೇ ಎರಡು ಹಾಡುಗಳನ್ನು ಮಾತ್ರ ಪ್ರಚಾರದ ಸಲುವಾಗಿ ಟಿವಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡಿದೆವು. ಈ ಹಾಡುಗಳು ಕತೆಯ ಪ್ಲಾಟ್‌ಗಳನ್ನು ಹೇಳದಿದ್ದರೂ, ಗುನುಗುನಿಸುವಂತಿವೆ. ನನಗೆ ತಿಳಿದಿರುವಂತೆ, ವಾಹಿನಿ...ವಾಹಿನಿ... ಹಾಡು ಉದಯ ಟಿವಿಯ ಟಾಪ್‌ 10 ನಲ್ಲಿ ದೀರ್ಘ ಕಾಲ ಪ್ರಸಾರವಾಗಿದೆ. ಇದೊಂದು ದಾಖಲೆ.

    ಕಾವೇರಿ ವಿವಾದದ ಪ್ರಸ್ತಾಪವಿಲ್ಲದೆಯೇ ಶಾಪ ಚಿತ್ರ ಮಾಡಬಹುದಾಗಿತ್ತಲ್ಲ. ಆ ಇಶ್ಯೂ ಬಳಸುವ ಮೂಲಕ ಚಿತ್ರ ಕೊಂಚ ವಾಚ್ಯವಾಗಿದೆ ಅನ್ನುವ ಆರೋಪ ಇದೆ. ಜೊತೆಗೆ ತಮಿಳರಿಗೆ ಕೊಂಚ ಆ್ಯಂಟಿಯಾಗಿರುವದರಿಂದ ಈ ಚಿತ್ರವನ್ನು ತಮಿಳು ಭಾಷೆಗೆ ಡಬ್‌ ಅಥವಾ ರೀಮೇಕ್‌ ಮಾಡೋದಕ್ಕೆ ಸಾಧ್ಯವಾಗುತ್ತಾ ? ಜನ ಇಂಥಾ ತೀರ್ಮಾನಕ್ಕೆ ಬರಬಹುದೆಂಬ ಆತಂಕ ಇತ್ತು. ಆ ಕಾರಣಕ್ಕೇ ಕೊನೆಯಲ್ಲಿ ಒಂದು ಸಾಲು ಸೇರಿಸಿದೆವು. ಕರ್ನಾಟಕದ ಮುಖ್ಯಮಂತ್ರಿ ಹೇಳುತ್ತಾರೆ- ನಾವೆಲ್ಲಾ ಭಾರತಾಂಬೆಯ ಮಕ್ಕಳು. ಸೌಹಾರ್ದಯುತವಾಗಿ ಬಾಳಬೇಕು. ಸೆನ್ಸಾರ್‌ ಬೋರ್ಡ್‌ ಇದನ್ನು ಕೊಂಡಾಡಿತು.ಇದು ತಮಿಳರ ವಿರುದ್ಧ ಅಲ್ಲವೇ ಅಲ್ಲ. ತನ್ನ ಸುತ್ತಲ ಘಟನಾವಳಿ ಪಾತ್ರದ ಸ್ಥಿತಿಗೆ ಹೇಗೆ ಸಮೀಕೃತವಾಗಿದೆ ಎಂಬುದಷ್ಟೆ ಮುಖ್ಯ. ತಮಿಳಿಗೆ ರೀಮೇಕೇ? ಖಂಡಿತಾ ಮಾಡಬಹುದು. ಪಾತ್ರಗಳನ್ನು ತಿರುಚಿದರಾಯಿತು, ಅಷ್ಟೆ.

    ನಾಯಕ, ನಾಯಕಿಯನ್ನು ಊರು ಬಿಡುವಾಗ ಭೇಟಿ ಮಾಡುವುದಕ್ಕೆ ಸಾಧ್ಯವಾಗದೇ ಹೋಗುವ ದೃಶ್ಯ (ಬಸ್‌ ಹಿಂದೆ ಓಡುವುದು) ಬಾಲಿಶವಾಗಲಿಲ್ಲವೇ. ಅಷ್ಟಕ್ಕೂ ಅದು ವಿಮಾನವಲ್ಲ, ಬಸ್‌. ಅದನ್ನು ನಿಲ್ಲಿಸುವುದು ಅಷ್ಟೇನೂ ಕಷ್ಟವಾಗುತ್ತಿರಲಿಲ್ಲ. ವೆಲ್‌. ಇದೇನಾದರೂ ಹಿಂದಿ ಚಿತ್ರವಾಗಿದ್ದರೆ ನಾವು ಏರೋಪ್ಲೇನನ್ನೇ ಬಾಡಿಗೆಗೆ ಪಡೆಯಬಹುದಿತ್ತು. J ಭಾರತದ ರಸ್ತೆಗಳ ಮೇಲೆ ಎಷ್ಟೆಲ್ಲಾ ಬಸ್ಸುಗಳು ಓಡಾಡುತ್ತವೆ. ಸಮಯ ಪಾಲನೆಯೇ ಮುಖ್ಯವಾಗುವ ಚಾಲಕರು ಬಸ್ಸನ್ನು ನಿಲ್ಲಿಸೋದಿಲ್ಲ. ಇದು ನನ್ನ ಅನುಭವವೂ ಹೌದು.

    ನಾಯಕ ತಾನು ದ್ವೇಷಿಸುವ ಅಪ್ಪನ ಫೋಟೋವನ್ನು ಮನೆಯ ಗೋಡೆಯಲ್ಲಿಟ್ಟಿದ್ದಾನೆ. ಆದರೆ ಪ್ರೀತಿಸುವ ಅಮ್ಮನ ಫೋಟೋ ಯಾಕಿಲ್ಲ... ಇದೊಂದು ಮುಕ್ತ ಮಾತುಕತೆಗೆ ತಕ್ಕ ವಿಷಯ. ನೀವು ಡಿಸ್ಕವರಿ ಚಾನೆಲ್ಲನ್ನು ನೋಡಿದ್ದರೆ ಒಂದು ವಿಷಯ ತಿಳಿಯುತ್ತದೆ. ಸಿಂಹಿಣಿ ತನ್ನ ಮರಿಯಿಂದ ದೂರ ಹೋಗುತ್ತಲೇ ಇರುತ್ತದೆ. ಆದರೆ, ಮರಿ ಅದರ ಹಿಂದೆ ಹಿಂದೆಯೇ ಸಾಗುತ್ತದೆ.

    ಮರುಳ... ಹಾಡನ್ನು ನೀವು ಗಮನ ಇಟ್ಟು ನೋಡಿದಲ್ಲಿ ಒಂದು ಅಂಶ ಕಾಣುತ್ತದೆ- ಶೇಖರ್‌ ತನ್ನ ಅಪ್ಪ ತಬ್ಬಿ- ಮುದ್ದಾಡುವನೆಂದು ಬಯಸಿ ಅಪ್ಪನತ್ತ ಹೋಗುತ್ತಾನೆ. ಆದರೆ ಅಪ್ಪನಿಗೆ ಅದರ ಲಕ್ಷ್ಯವೇ ಇರುವುದಿಲ್ಲ. ಶೇಖರನಿಗೆ ತನ್ನ ಜೀವನದಲ್ಲಿ ಯಾರೂ ಇಲ್ಲ. ಹೆತ್ತಮ್ಮ ಸತ್ತಿದ್ದಾಳೆ. ಮಲತಾಯಿ ಬಿಟ್ಟಿದ್ದಾಳೆ. ತಾಣ ಅರಸುತ್ತಾ ಹೋಗುವ ಶೇಖರನಿಗೆ ಅದು ದಕ್ಕೋದೇ ಇಲ್ಲ. ಪ್ರೀತಿ/ದ್ವೇಷದ ಸಂಬಂಧ ನಾಯಕನಿಗೆ ಅಪ್ಪನೊಟ್ಟಿಗೇ ಹೆಚ್ಚು. ನಾವೆಲ್ಲಾ ಇಂಥಾ ನಡಾವಳಿ ತೋರುತ್ತೇವೆ. ಅದು ಸಹಜವೇ ಹೊರತು ತಾರ್ಕಿಕವಲ್ಲ. ತಾಯಿಯ ಫೋಟೋ ಯಾಕೆ ಇಟ್ಟುಕೊಳ್ಳೋಲ್ಲ ಅನ್ನೋ ಪ್ರಶ್ನೆ... ಇಟ್ಟುಕೊಂಡಿದ್ದಾನೆ. ಆದರೆ, ಅದು ತೋರಿಸುವಷ್ಟು ಡ್ರಮಾಟಿಕ್‌ ಅಲ್ಲ.

    ಚಿತ್ರ ಗೆದ್ದರೆ ಇನ್ನೊಂದು ಕನ್ನಡ ಚಿತ್ರ ನಿರ್ದೇಶಿಸುವ ಆಸೆಯಿದೆಯಾ?
    ಯಾಕಾಗಬಾರದು? J ಕನ್ನಡದ ಮಹಾನ್‌ ಜನತೆ ಇದಕ್ಕೆ ಉತ್ತರ ಕೊಡುತ್ತಾರೆ

    English summary
    The curse of Kannada Film industry is that our distributors and producers treat our kannada people as dumb says Ashok Patil
    Sunday, July 14, 2013, 14:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X