ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ, ನಾನೇನು ಮಾತನಾಡಲಿ ಎಂದ ಪವಿತ್ರಾ ಗೌಡ..!
ಹೆಚ್ಚೇನು ಇಲ್ಲ. ಎರಡು ಮೂರು ವರ್ಷದ ಹಿಂದೆ ಪವಿತ್ರಾ ಗೌಡ ಹೆಸರು ಕೇಳಿದ ತಕ್ಷಣ ಮೊದಲೆಲ್ಲ ಯಾರಿವರು ಎಂಬ ಪ್ರಶ್ನೆ ಅನೇಕರಲ್ಲಿ ಮೂಡುತ್ತಿತ್ತು. ಯಾಕೆಂದರೆ ತನ್ನನ್ನು ತಾನು ನಟಿಯೆಂದು ಹೇಳಿಕೊಳ್ಳುತ್ತಿದ್ದ ಪವಿತ್ರಾ ಗೌಡ ಚಿತ್ರರಂಗದಲ್ಲಿ ಸಾಧಿಸಿ-ಬೇಧಿಸಿದ್ದು ಅಷ್ಟರಲ್ಲಿಯೇ ಇದೆ. ಅಗಮ್ಯ ಎನ್ನುವ ಪರಮತೋಪು ಚಿತ್ರದಲ್ಲಿ ನಟಿಸಿದ್ದ ಪವಿತ್ರಾ ಗೌಡ ಆ ನಂತರ ಛತ್ರಿಗಳು ಸಾರ್ ಛತ್ರಿಗಳು, ಸಾಗುವ ದಾರಿಯಲ್ಲಿ ಎಂಬ ಚಿತ್ರದಲ್ಲಿ ನಟಿಸಿದ್ದರು.
ಈ ಚಿತ್ರಕ್ಕೆ ಇವರಿಗೆ ಸಿಕ್ಕಿದ್ದ ಸಂಭಾವನೆ ಕೇವಲ 20 ಸಾವಿರ ಮಾತ್ರ. ಇದಲ್ಲದೇ ಬತ್ತಾಸ್ ಮತ್ತು ತಮಿಳಿನಲ್ಲಿ 54312 ಎಂಬ ಚಿತ್ರಗಳಿಗೆ ಕೂಡ ಪವಿತ್ರಾ ಗೌಡ ಮುಖಕ್ಕೆ ಬಣ್ಣ ಹಚ್ಚಿದ್ದರು. ಇಂಥಾ ಪವಿತ್ರಾ ಗೌಡ ಆ ನಂತರ ದರ್ಶನ್ ಸಾಂಗತ್ಯ ಬೆಳೆಸಿಕೊಂಡರು. ಉದ್ಯಮಿಯಾಗಿ ಕೂಡ ಹೊರ ಹೊಮ್ಮಿದರು. ''ರೆಡ್ ಕಾರ್ಪೆಟ್ 777'' ಎಂಬ ಡಿಸೈನರ್ ಸ್ಟುಡಿಯೋದ ಒಡತಿಯಾದರು. ಆ ನಂತರ ತಮಗೆ ನೆರವಾದ ದರ್ಶನ್ ಅವರನ್ನು ಕರೆದುಕೊಂಡು ಪರಪ್ಪನ ಅಗ್ರಹಾರಕ್ಕೂ ಹೋದರು.

ಸದ್ಯ ಪವಿತ್ರಾ ಗೌಡ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ದರ್ಶನ್ ಕೂಡ ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದಾರೆ. ಚಿತ್ರರಂಗದಲ್ಲಿ ಮತ್ತೆ ಆಕ್ಟಿವ್ ಆಗಿದ್ದಾರೆ. ಹಾಗಂಥ ನೆಮ್ಮದಿಯಿಂದ ಇರಲು ಸಾಧ್ಯ ಇಲ್ಲ. ಯಾಕೆಂದರೆ ರೇಣುಕಾಸ್ವಾಮಿ ಪ್ರಕರಣ ಇನ್ನೂ ಮುಗಿದಿಲ್ಲ. ವಿಚಾರಣೆ ನಡೆಯುತ್ತಿದೆ. ಇಂದು ಬೆಂಗಳೂರಿನ ಸಿಸಿಎಚ್ 57ನೇ ನ್ಯಾಯಾಲಯದಲ್ಲಿ ವಿಚಾರಣೆ ಕೂಡ ನಡೆದಿದೆ.
ಇದೇ ಸಮಯದಲ್ಲಿ ಪ್ರಕರಣದಲ್ಲಿ ಎ 1 ಆರೋಪಿಯಾದ ಪವಿತ್ರಾ ಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ನೀಡಿದ್ಧಾರೆ. ವಿಚಾರಣೆಯನ್ನು ಮುಗಿಸಿಕೊಂಡು ನಗು ನಗುತ್ತಲೇ ಹೊರ ಬಂದ ಪವಿತ್ರಾ ನಾನೇನು ಮಾತನಾಡಲಿ ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಅಲ್ಲಿ ನೂಕಾಟ ತಳ್ಳಾಟ ನಡೆಯದಿದ್ದರೆ ಬಹುಶಃ ಪವಿತ್ರಾ ಗೌಡ ಮಾತನಾಡುತ್ತಿದ್ದರೇನೋ. ಆದರೆ ಗದ್ದಲ ಗಲಾಟೆಯ ವಾತಾವರಣ ಅಲ್ಲಿದ್ದಿದ್ದರಿಂದ ಪವಿತ್ರಾ ಗೌಡ ಅವರನ್ನು ಅಲ್ಲಿಂದ ಅವರ ಸಹೋದರ ಕರೆದುಕೊಂಡು ಹೋಗಿದ್ದಾರೆ.
ಇನ್ನು ಇಂದು ದರ್ಶನ್ ಮತ್ತು ಪವಿತ್ರಾ ಗೌಡ ಮತ್ತೊಮ್ಮೆ ಮುಖಾಮುಖಿ ಆಗಬೇಕಿತ್ತು.ಆ ಗಳಿಗೆಗೆ ಅನೇಕರು ಕಾಯುತ್ತಿದ್ದರು ಕೂಡ. ಆದರೆ ದರ್ಶನ್ ಇಂದು ನ್ಯಾಯಾಲಯಕ್ಕೆ ಬರಲೇ ಇಲ್ಲ. ಬದಲಿಗೆ ಮೊನ್ನೆಯೆಲ್ಲ ವಿಮಾನ ನಿಲ್ಧಾಣದಿಂದ ರಾಜಾರೋಷವಾಗಿ ಆರಾಮಾಗಿ ನಡೆದುಕೊಂಡು ಬಂದಿದ್ದ ದರ್ಶನ್ ಇಂದು ಬೆನ್ನು ನೋವು ಎಂದು ಹೇಳಿ ವಿಚಾರಣೆಗೆ ಗೈರಾಗಿದ್ದರು. ದರ್ಶನ್ ಅವರ ಈ ನಡೆ ನ್ಯಾಯಾಧೀಶರ ಅಸಮಾಧಾನಕ್ಕೆ ಕಾರಣವಾಯ್ತು.
ಹೀಗಾಗಿಯೇ ದರ್ಶನ್ ಪರ ವಕೀಲರಿಗೆ ಎಚ್ಚರಿಕೆಯನ್ನು ನೀಡಿದ ನ್ಯಾಯಾಧೀಶರು ವಿಚಾರಣೆ ಇದ್ದಾಗ ಕಡ್ಡಾಯವಾಗಿ ಹಾಜರಾಗಬೇಕು ಎಂದು ಹೇಳಿದರು. ಇನ್ನು ಇದೇ ಸಮಯದಲ್ಲಿ ಹೈಕೋರ್ಟ್ ಬೆಂಗಳೂರು ವ್ಯಾಪ್ತಿಯಿಂದ ಹೊರ ಹೋಗಲು ಅನುಮತಿ ನೀಡಿತ್ತು ಎಂದು ತಿಳಿಸಿ ಆದೇಶ ಪ್ರತಿಯನ್ನು ನ್ಯಾಯಾಧೀಶರಿಗೆ ವಕೀಲರು ನೀಡಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು ವಿಚಾರಣೆಯ ವೇಳೆ ಆರೋಪಿಗಳು ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಪುನರುಚ್ಚಿಸಿದರು.
ಇನ್ನು ಇಂದು ನಡೆದ ವಿಚಾರಣೆಗೆ ಎ 2 ಆರೋಪಿ ನಟ ದರ್ಶನ್ ಒಬ್ಬರನ್ನು ಹೊರತುಪಡಿಸಿ ಇನ್ನುಳಿದ ಆರೋಪಿಗಳಾದ ಎ 1 ಪವಿತ್ರಾ ಗೌಡ, ಎ 6 ಜಗದೀಶ್, ಎ 11 ನಾಗರಾಜ್, ಎ 12 ಎಂ ಲಕ್ಷ್ಮಣ, ಎ 14 ಪ್ರದೋಶ್, ಸೇರಿ ಇನ್ನೂ ಕೆಲವರು ಹಾಜರಾಗಿದ್ದರು. ಕೆಲವು ಆರೋಪಿಗಳು ಇದೇ ಸಮಯದಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ತಮ್ಮ ಮೊಬೈಲ್ಗಳನ್ನು ಮರಳಿಸಬೇಕು ಎಂದು ಮನವಿಯನ್ನು ಮಾಡಿದರು. ಆ ನಂತರ ವಿಚಾರಣೆಯನ್ನು ನ್ಯಾಯಾಲಯ ಮೇ 20ಕ್ಕೆ ಮುಂದೂಡಿತು.
ಅಂದ್ಹಾಗೇ ದರ್ಶನ್ ಮೊನ್ನೆಯಷ್ಟೇ ಡೆವಿಲ್ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ರಾಜಸ್ಥಾನದಿಂದ ಮರಳಿ ಬಂದಿದ್ಧಾರೆ. ರಾಜಸ್ಥಾನದಲ್ಲಿ ಎಡಬಿಡದೆ 28 ಗಂಟೆಗಳ ಕಾಲ ನಿರಂತರವಾಗಿ ಚಿತ್ರೀಕರಣದಲ್ಲಿ ದರ್ಶನ್ ಭಾಗಿಯಾಗಿದ್ದರಿಂದ ಅವರಿಗೆ ಮತ್ತೆ ಬೆನ್ನು ನೋವು ಹೆಚ್ಚಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಹೀಗಾಗಿಯೇ ದರ್ಶನ್ ಇಂದು ನ್ಯಾಯಾಲಯಕ್ಕೆ ವಿಚಾರಣೆಗೆ ಬರಲಿಲ್ಲ ಎಂದು ಹೇಳಲಾಗುತ್ತಿದೆ. ಈ ವಿಚಾರ ಎಷ್ಟರ ಮಟ್ಟಿಗೆ ನಿಜಾ ಎನ್ನುವುದು ಡೆವಿಲ್ ತಂಡಕ್ಕೆ ಮಾತ್ರ ಗೊತ್ತು.
ಇನ್ನು ಪವಿತ್ರಾ ಗೌಡ ವಿಚಾರಕ್ಕೆ ಬಂದರೆ ಸದ್ಯ ಪವಿತ್ರಾ ಗೌಡ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ರೀ ಲಾಂಚ್ ಮಾಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಈ ಸ್ಟುಡಿಯೋ ಕುರಿತು ವಿಡಿಯೋಗಳನ್ನು ಮತ್ತು ಫೋಟೊಗಳನ್ನು ಕೂಡ ಪವಿತ್ರಾ ಗೌಡ ಹಂಚಿಕೊಳ್ಳುತ್ತಿದ್ದಾರೆ. ಇದರ ನಡುವೆ ಮೊನ್ನೆಯಷ್ಟೇ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಿದ್ದ ಪವಿತ್ರಾ ಗೌಡ ಹಬ್ಬದ ಸಂಭ್ರಮದಲ್ಲಿ ಕೆಟ್ಟ ದೃಷ್ಟಿಯ ಬಗ್ಗೆ ಮಾತನಾಡಿದ್ದರು. ಕೆಟ್ಟ ದೃಷ್ಟಿ ಯಾವಾಗಲೂ ನೋಡುತ್ತಿರುತ್ತೆ ಆದರೆ ನನ್ನ ಮುಟ್ಟೋಕಾಗಲ್ಲ ಎಂದು ಬರೆದುಕೊಂಡಿದ್ದರು. ಪವಿತ್ರಾ ಗೌಡ ಅವರ ಈ ಮಾರ್ಮಿಕ ಸಂದೇಶದ ಕುರಿತು ಚರ್ಚೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ನಡೆದಿತ್ತು.
ಇನ್ನುಳಿದಂತೆ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ಈ ಹಿನ್ನೆಲೆ ದರ್ಶನ್ಗೆ ನೀಡಿರುವ ಜಾಮೀನು ರದ್ದು ಮಾಡಬೇಕೆಂದು ಕೋರಿ ಖಾಕಿ ಪಡೆ ಸುಪ್ರೀಂ ಕೋರ್ಟ್ನ ಮೆಟ್ಟಿಲನ್ನೇರಿದೆ.
ದರ್ಶನ್ಗೆ ಹೈಕೋರ್ಟ್ ಅವಸರ ಅವಸರವಾಗಿ ಜಾಮೀನು ನೀಡಿದ್ದು, ದರ್ಶನ್ ಒಬ್ಬ ಹೀರೋ ಎನ್ನುವುದನ್ನು ಮಾತ್ರ ಪರಿಗಣಿಸಿ ಮಾತ್ರ ಜಾಮೀನು ನೀಡಿದೆ. ಸಾಕ್ಷ್ಯ ತಿರುಚುವ ಸಾಧ್ಯತೆಯ ಬಗ್ಗೆ ಹೈಕೋರ್ಟ್ ಪರಿಗಣಿಸಿಲ್ಲ ಎಂದು ಪ್ರಾಸಿಕ್ಯೂಷನ್ ಮನವಿಯನ್ನು ಮಾಡಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಟೆಕ್ನಿಕಲ್ ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಲು ಹೈಕೋರ್ಟ್ ವಿಫಲವಾಗಿದೆ ಹೀಗಾಗಿ ಮಧ್ಯಂತರ ಪರಿಹಾರವಾಗಿ ಏಕಪಕ್ಷೀಯ ಆದೇಶ ನೀಡಬೇಕು ಎಂದು ರಾಜ್ಯ ಸರ್ಕಾರದ ಪ್ರಾಸಿಕ್ಯೂಷನ್ ಅರ್ಜಿಯಲ್ಲಿ ಕೋರಿದೆ.
ದರ್ಶನ್ಗೆ ಆರು ವಾರಗಳ ಕಾಲ ಮಧ್ಯಂತರ ಬೇಲ್ ನೀಡಿದ್ದಾಗಲೂ ಕೂಡ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡಿಲ್ಲ, ದರ್ಶನ್ ಮತ್ತು ಅವರ ಸಹಚರರು ಜಾಮೀನಿಗೆ ಅರ್ಹರಲ್ಲ, ಕೇಸ್ನಲ್ಲಿ ಪ್ರಬಲ ಸಾಕ್ಷಿಗಳಿದ್ದರೂ ಕೂಡ ಹೈಕೋರ್ಟ್ ಪರಿಗಣಿಸಲು ವಿಫಲವಾಗಿದೆ ಹೀಗಾಗಿ ಜಾಮೀನು ಆದೇಶಕ್ಕೆ ತಡೆ ನೀಡುವಂತೆ ಮನವಿಯನ್ನು ಮಾಡಿದೆ.
ಹೀಗೆ ಪ್ರಾಸಿಕ್ಯೂಷನ್ ಸಲ್ಲಿಸಿದ ಆಕ್ಷೇಪಣಾ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅರ್ಜಿಯನ್ನು ಏಪ್ರಿಲ್ 22ಕ್ಕೆ ಮುಂದೂಡಿದೆ. ಆರೋಪಿಗಳ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಸೂಚನೆಯನ್ನು ನೀಡಿರುವ ಸುಪ್ರೀಂ ಕೋರ್ಟ್ ಏಪ್ರಿಲ್ 22ರಂದು ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿದೆ. ನ್ಯಾಯಮೂರ್ತಿ ಪರ್ದೀವಾಲಾ ಮತ್ತು ನ್ಯಾಯಮೂರ್ತಿ ಮಹದೇವನ್ ಪೀಠ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ.
ಒಟ್ನಲ್ಲಿ ಸದ್ಯ ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ & ಗ್ಯಾಂಗ್ ಎರಡೆರಡು ವಿಚಾರಣೆಯನ್ನು ಎದುರಿಸುತ್ತಿದೆ. ಇನ್ನು ದರ್ಶನ್ ಇಂದು ಗೈರಾಗಿದ್ಧಾರೆ. ಮೂರು ಬಾರಿ ವಿಚಾರಣೆಗೆ ಗೈರಾದರೆ ನ್ಯಾಯಾಲಯ ದರ್ಶನ್ಗೆ ಸಮನ್ಸ್ ನೀಡುವ ಸಾಧ್ಯತೆ ಇದೆ. ಹೀಗಾಘಿ ಮುಂಚಿನ ವಿಚಾರಣೆಗೆ ಅಂದರೆ ಮೇ 20ರಂದು ದರ್ಶನ್ ಬೆನ್ನು ನೋವಿನ ಕಾರಣವನ್ನು ಹೇಳದೇ ನ್ಯಾಯಾಲಯಕ್ಕೆ ಬರುತ್ತಾರಾ ? ವಿಚಾರಣೆಗೆ ಹಾಜರಾಗುತ್ತಾರಾ ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











