"ಎಲ್ಲಾ ಕಳೆದುಕೊಂಡಂತೆ ನಟಿಸಿ ನೋಡು"; ತಾಳ್ಮೆ ಪಾಠ ಮಾಡಿದ ಪವಿತ್ರಾ ಗೌಡ
ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆ ಆಗಿರುವ ನಟಿ ಪವಿತ್ರಾ ಗೌಡ ಸೈಲೆಂಟ್ ಆಗಿದ್ದಾರೆ. ತಾನಾಯಿತು ತಮ್ಮ ಬ್ಯೂಟಿಕ್ ಕೆಲಸ ಆಯಿತು ಎಂದು ದಿನ ದೂಡುತ್ತಿದ್ದಾರೆ. ಇತ್ತೀಚೆಗೆ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆದ ಪ್ರಕರಣದ ವಿಚಾರಣೆಯಲ್ಲಿ ಆಕೆ ಹಾಜರಾಗಿದ್ದರು. ಸದ್ಯ ಇನ್ಸ್ಟಾಗ್ರಾಮ್ನಲ್ಲಿ ಗೂಡಾರ್ಥದ ಪೋಸ್ಟ್ ಮಾಡಿದ್ದಾರೆ.
ಜೈಲಿನಿಂದ ಬಿಡುಗಡೆ ಆಗಿ ಬಂದ ಬಳಿಕ ನಟ ದರ್ಶನ್ ಸಂಪರ್ಕ ಇರಲಿಲ್ಲ, ಯಾವುದೇ ಸಂವಹನ ಕೂಡ ನಡೆಯುತ್ತಿರಲಿಲ್ಲ ಎನ್ನುವ ಊಹಾಪೋಹ ಇತ್ತು. ಇತ್ತೀಚೆಗೆ ಪವಿತ್ರಾ ಗೌಡ ಕೋರ್ಟ್ ವಿಚಾರಣೆ ಮುಗಿಸಿ ಹೊರಗೆ ಬರುವಾಗ ಲಿಫ್ಟ್ನಲ್ಲಿ ಪಟ್ಟು ಹಿಡಿದು ದರ್ಶನ್ ಫೋನ್ ಪಡೆದುಕೊಂಡಿದ್ದರು ಎಂದು ವರದಿ ಆಗಿತ್ತು. ಅಷ್ಟೆ ಅಲ್ಲ, ಕೋರ್ಟ್ನಿಂದ ಹೊರಗೆ ನಡೆದು ಬರುವಾಗ ದರ್ಶನ್ ಕೈ ಹಿಡಿದಿದ್ದರು ಎಂದು ಹೇಳಲಾಗಿತ್ತು.

ಮೊದಲಿನಂತೆ ಸೋಶಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಆಕ್ಟೀವ್ ಆಗಿದ್ದಾರೆ. ತಮ್ಮ ಬ್ಯೂಟಿಕ್ಗೆ ಸಂಬಂಧಿಸಿದ ಪೋಸ್ಟ್ ಮಾಡುತ್ತಿರುತ್ತಾರೆ. ದೇವಸ್ಥಾನಗಳಿಗೆ ಭೇಟಿ ನೀಡುವ ಬಗ್ಗೆಯೂ ಫೋಟೊ, ವೀಡಿಯೋ ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ಸೇರಿ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದರು. ಸ್ನೇಹಿತರ ಜೊತೆ ಸೇರಿ ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದರು. ಇದನ್ನು ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದರು.
ಇದೀಗ ಪವಿತ್ರಾ ಗೌಡ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಗೂಡಾರ್ಥದ ಪೋಸ್ಟ್ಗಳನ್ನು ಹಾಕಿದ್ದಾರೆ. ಈ ಮೂಲಕ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಲವರು ಭಾವಿಸುತ್ತಿದ್ದಾರೆ. ಅಷ್ಟಕ್ಕೂ ಆ ಪೋಸ್ಟ್ನಲ್ಲಿ ಏನಿದೆ? ಎನ್ನುವುದನ್ನು ನೋಡುವುದಾದರೆ ಒಂದು ಪೋಸ್ಟ್ನಲ್ಲಿ ತಮ್ಮ ವೀಡಿಯೋ ಹಾಕಿದ್ದಾರೆ. ಸಮಯ ಹಾಗೂ ತಾಳ್ಮೆ ಕೀಲಿಕೈ. ಎಲ್ಲಾ ಪ್ರಶ್ನೆಗಳಿಗೆ ನಿಶಬ್ಧವೇ ಒಳ್ಳೆ ಉತ್ತರ. ಎಲ್ಲಾ ಪರಿಸ್ಥಿತಿಯಲ್ಲಿ ನಗು ಉತ್ತಮ ಪ್ರತಿಕ್ರಿಯೆ" ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್ನಲ್ಲಿ ಶ್ರೀಕೃಷ್ಣನ ಫೋಟೊ ಹಾಕಿ "ಎಲ್ಲವನ್ನು ಕಳೆದುಕೊಂಡ ಹಾಗೆ ಸ್ವಲ್ಪ ದಿನ ನಟಿಸಿ ನೋಡು. ನಿನ್ನವರು ಯಾರು ಎಂದು ತಿಳಿಯುತ್ತದೆ. ತಾಳ್ಮೆ ಬಹಳ ಮುಖ್ಯ" ಎಂದು ಪವಿತ್ರಾ ಗೌಡ ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ಗಳು ಕುತೂಹಲ ಮೂಡುವಂತೆ ಮಾಡಿದೆ.
'ಅಗಮ್ಯ', 'ಸಾಗುವ ದಾರಿಯಲ್ಲಿ', 'ಪ್ರೀತಿ ಕಿತಾಬು' ಎಂಬ ಸಿನಿಮಾಗಳಲ್ಲಿ ಪವಿತ್ರಾ ಗೌಡ ನಟಿಸಿದ್ದರು. 'ಜಗ್ಗುದಾದ' ಸಿನಿಮಾ ಸಮಯದಲ್ಲಿ ದರ್ಶನ್ ಪರಿಚಯವಾಗಿತ್ತು. ಬಳಿಕ ಇಬ್ಬರೂ ಹತ್ತಿರವಾಗಿದ್ದರು. ನಮ್ಮಿಬ್ಬರ ರಿಲೇಷನ್ಗೆ ಈಗ 10 ವರ್ಷ ಎಂದು ಸ್ವತಃ ಪವಿತ್ರಾ ಗೌಡ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ವಿಜಯಲಕ್ಷ್ಮಿ ದರ್ಶನ್ ಆಕ್ಷೇಪ ವ್ಯಕ್ತಪಡಿಸಿ ಪರೋಕ್ಷವಾಗಿ ಪೋಸ್ಟ್ ಮಾಡಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಸಂಘರ್ಷ ಏರ್ಪಟ್ಟಿತ್ತು.
ಎಲ್ಲಾ ತಣ್ಣಗಾಯಿತು ಎನ್ನುವ ವೇಳೆಗೆ ಕಳೆದ ವರ್ಷ ದರ್ಶನ್- ವಿಜಯಲಕ್ಷ್ಮಿ ದಂಪತಿ ದುಬೈನಲ್ಲಿ ಅಭಿಮಾನಿಗಳ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಬಳಿಕ ಕೆಲವೇ ದಿನಗಳಲ್ಲಿ ರೇಣುಕಾಸ್ವಾಮಿ ಪ್ರಕರಣ ಬೆಳಕಿಗೆ ಬಂದಿತ್ತು. ಭಾರೀ ಸದ್ದು ಮಾಡಿತ್ತು. ಮುಂದೆ ಎ1 ಆಗಿ ಪವಿತ್ರಾ ಗೌಡ ಹಾಗೂ ಎ2 ಆಗಿ ದರ್ಶನ್ ವಿಚಾರಣಾಧೀನ ಕೈದಿಗಳಾಗಿ ಜೈಲು ಸೇರುವಂತಾಗಿತ್ತು.


Click it and Unblock the Notifications











