"ನನ್ನ ತಾಯಿ ಯಾರಿಗೂ ನೋವುಂಟು ಮಾಡುವ ಕೆಲಸ ಮಾಡಿಲ್ಲ"; ಪವಿತ್ರಾ ಗೌಡ ಮಗಳ ಪೋಸ್ಟ್
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಆರೋಪಿಯಾಗಿ ಜೈಲು ಸೇರಿದ್ದರು. ಇತ್ತೀಚೆಗೆ ಜಾಮೀನು ಪಡೆದು ಹೊರ ಬಂದಿದ್ದಾರೆ. ಬಂದ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದರು. ಇನ್ನು ಪ್ರಕರಣದ ಬೆಳಕಿಗೆ ಬಂದ ದಿನದಿಂದಲೂ ಆಕೆಯ ಬಗ್ಗೆ ಟ್ರೋಲ್ ಹೆಚ್ಚಾಗಿತ್ತು.
ನಟ ದರ್ಶನ್ ಹಾಗೂ ನಟಿ ಪವಿತ್ರಾ ಗೌಡ ರಿಲೇಷನ್ಶಿಪ್ ಬಗ್ಗೆ ಕೆಲ ವರ್ಷಗಳಿಂದ ಗುಸುಗುಸು ಕೇಳಿಬರ್ತಿತ್ತು. ಕೆಲ ಹಿಂದೆಯಷ್ಟೆ ತಮ್ಮಿಬ್ಬರ 10 ವರ್ಷಗಳ ರಿಲೇಷನ್ಶಿಪ್ ಬಗ್ಗೆ ಪವಿತ್ರಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ದರ್ಶನ್ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದರು. ಪವಿತ್ರಾ ಗೌಡ ಇದಕ್ಕೂ ಮುನ್ನ ಸಂಜಯ್ ಸಿಂಗ್ ಎಂಬುವವರನ್ನು ಪ್ರೀತಿಸಿ ಮದುವೆ ಆಗಿದ್ದರು. ಬಳಿಕ ವಿಚ್ಛೇದನ ಪಡೆದಿದ್ದರು.

ಪವಿತ್ರಾ ಗೌಡ ಹಾಗೂ ಸಂಜಯ್ ಸಿಂಗ್ ದಂಪತಿ ಪುತ್ರಿ ಖುಷಿ ಗೌಡ. ಡಿವೋರ್ಸ್ ಬಳಿಕ ಪವಿತ್ರಾ ಮಗಳ ಜೊತೆ ವಾಸಿಸುತ್ತಿದ್ದಾರೆ. ತಂದೆ ಆಗಾಗ್ಗೆ ಬಂದು ಮಗಳನ್ನು ಭೇಟಿ ಮಾಡಿ ಹೋಗುತ್ತಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾ ಹೆಸರು ಕೇಳಿಬಂದಿದ್ದು ಅಚ್ಚರಿ ಉಂಟು ಮಾಡಿತ್ತು. ತಾಯಿಯಿಂದ 170 ದಿನ ಖುಷಿ ದೂರಾಗುವಂತಾಯಿತು. ತಾಯಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುವವರ ಬಗ್ಗೆ ಖುಷಿ ಬೇಸರ ವ್ಯಕ್ತಪಡಿಸಿದ್ದಾರೆ.
"ಸಾಮಾಜಿಕ ಜಾಲತಾಣದಲ್ಲಿರುವ ಎಲ್ಲರಿಗೂ, ನಾನು ಹೇಳುವುದ ಏನಂದರೆ, ಈ ರೀತಿ ನಾನು ಬರೆಯುವ ಪರಿಸ್ಥಿತಿ ಬರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಆದರೆ ನಿಮ್ಮ ಚುಚ್ಚು ಮಾತುಗಳು ನಿರ್ಲಕ್ಷಿಸಲಾಗದ ಗಾಯಗಳನ್ನು ಮಾಡಿದೆ. ಹಾಗಾಗಿ ಸುಮ್ಮನಿರಲು ಸಾಧ್ಯವಾಗುತ್ತಿಲ್ಲ ಎಂದು ಪವಿತ್ರಾ ಗೌಡ ಮಗಳು ಖುಷಿ ಗೌಡ ಪತ್ರ ಆರಂಭಿಸಿದ್ದಾರೆ.
ಪತ್ರ ಮುಂದುವರೆಸಿರುವ ಖುಷಿ "ಪ್ರತಿ ಅಪ್ರಸ್ತುತ ಕಾಮೆಂಟ್, ಪ್ರತಿ ಊಹೆ, ನೋವುಂಟು ಮಾಡುವ ಪದಗಳು ನನ್ನ ಹೃದಯವನ್ನು ಚುಚ್ಚಿದೆ. ನಿನಗೆ ಅವಳ ಪರಿಚಯವಿಲ್ಲ. ಅವಳ ಹೋರಾಟ, ಅವಳ ತ್ಯಾಗ ಅಥವಾ ಲೆಕ್ಕವಿಲ್ಲದಷ್ಟು ಬಾರಿ ಅವಳು ಎಲ್ಲರನ್ನು ತನಗಿಂತ ಮೊದಲು ಇಟ್ಟಿರುವುದು ನಿಮಗೆ ತಿಳಿದಿಲ್ಲ. ನೀವು ಅರ್ಥಮಾಡಿಕೊಂಡಂತೆ ನೀವು ಮಾತನಾಡುತ್ತೀರಿ, ನಿಮ್ಮ ತೀರ್ಪುಗಳಿಗೆ ಯಾವುದೇ ತೂಕವಿಲ್ಲ" ಎಂದು ಬರೆದುಕೊಂಡಿದ್ದಾರೆ.
"ನನ್ನ ತಾಯಿ ಮೌನವಾಗಿ ಮಾಡಿದ ಯುದ್ಧ ನನಗೆ ಮಾತ್ರ ಗೊತ್ತು. ನನ್ನ ತಾಯಿ ನನ್ನ ಜಗತ್ತು, ನನ್ನ ಶಕ್ತಿ, ನನ್ನ ಸ್ಫೂರ್ತಿ, ಅದಕ್ಕಿಂತಲೂ ಹೆಚ್ಚು. ಅವರು ನನ್ನ ತಾಯಿ ಮಾತ್ರವಲ್ಲ, ನನ್ನ ತಂದೆಯೂ ಹೌದು. ಅವಳು ನನ್ನ ಜೀವನದ ಪ್ರತಿಯೊಂದು ಪಾತ್ರವನ್ನು ತುಂಬಾ ಪ್ರೀತಿ, ಕಾಳಜಿಯಿಂದ ತುಂಬಿದ್ದಾಳೆ, ಅವಳು ನನ್ನ ಸರ್ವಸ್ವ ಎಂದು ನಾನು ನಿಜವಾಗಿಯೂ ಹೇಳಬಲ್ಲೆ. ಅವಳಿಗೆ ಗೊತ್ತಿಲ್ಲದೆ ಅವಳ ವಿರುದ್ಧ ಮಾತನಾಡುವುದು ಕ್ರೂರ" ಎಂದು ಬೇಸರ ಹೊರ ಹಾಕಿದ್ದಾರೆ.
"ನಾನು ಇನ್ನೂ ಚಿಕ್ಕವಳು. ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನನ್ನ ತಾಯಿ ಯಾರಿಗೂ ನೋವುಂಟು ಮಾಡುವ ಕೆಲಸ ಮಾಡಿಲ್ಲ. ದಯವಿಟ್ಟು ಮಾತನಾಡುವ ಮುನ್ನ ಯೋಚಿಸಿ. ಪದಗಳು ನೀವು ತಿಳಿದುಕೊಳ್ಳುವುದಕ್ಕಿಂತ ಹೆಚ್ಚು ನೋಯಿಸಬಹುದು" ಎಂದು ಖುಷಿ ಗೌಡ ಸುದೀರ್ಘವಾಗಿ ಪೋಸ್ಟ್ ಮಾಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದ. ಈ ವಿಚಾರ ದರ್ಶನ್ ಗಮನಕ್ಕೆ ಬಂದು ಆತನಿಗೆ ಬುದ್ಧಿ ಕಲಿಸಲು ಮುಂದಾಗಿದ್ದರು. ಅದಕ್ಕಾಗಿ ಆತನನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್ಗೆ ತಂದು ಥಳಿಸಿ ಬುದ್ದಿ ಹೇಳಲು ತೀರ್ಮಾನಿಸಿದ್ದರು. ಈ ವೇಳೆ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಪ್ರಕರಣದಲ್ಲಿ ಎ1 ಆರೋಪಿಯಾಗಿ ಪವಿತ್ರಾ ಗೌಡ ಜೈಲು ಸೇರಿದ್ದರು.


Click it and Unblock the Notifications











