"ಕಾರು ಅಪಘಾತದಲ್ಲಿ ಪೆಟ್ಟಾಗಿ ನಟಿ ಪವಿತ್ರಾ ಜಯರಾಮ್ ಸಾಯಲಿಲ್ಲ"; ಜೊತೆಗಿದ್ದ ನಟ ಚಂದು ಹೇಳಿದ್ದೇನು?
ಶನಿವಾರ(ಮೇ 11) ರಾತ್ರಿ ಕರ್ನೂಲು ಬಳಿ ನಡೆದ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ಪವಿತ್ರಾ ಜಯರಾಮ್ ಕೊನೆಯುಸಿರೆಳೆದಿದ್ದರು. ಮಂಡ್ಯ ಮೂಲದ ಆಕೆ ಬೆಂಗಳೂರಿಗೆ ಬಂದು ವಾಪಸ್ ಹೈದರಾಬಾದ್ಗೆ ತೆರಳುವ ವೇಳೆ ಈ ಘಟನೆ ನಡೆದಿತ್ತು. ಅಪಘಾತದಲ್ಲಿ ಜೊತೆಗಿನ ಸಹನಟ ಚಂದು, ಸಂಬಂಧಿ ಅಪೇಕ್ಷಾ, ಡ್ರೈವರ್ ಸಹ ಗಾಯಗೊಂಡಿದ್ದರು.
ಪವಿತ್ರಾ ಜಯರಾಮ್ ಅಂತ್ಯಕ್ರಿಯೆ ಸೋಮವಾರ ಹುಟ್ಟೂರಿನಲ್ಲಿ ನೆರವೇರಿದೆ. ಅಪಘಾತದ ಬಳಿಕ ಗಾಯಗೊಂಡಿದ್ದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಚೇತರಿಸಿಕೊಂಡ ನಟ ಚಂದ್ರಕಾಂತ್ ಕೂಡ ಪವಿತ್ರಾ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿದ್ದರು. ಆಕೆ ಕೊನೆಯುಸಿರೆಳೆಯಲು ಕಾರಣ ಏನು ಎನ್ನುವುದನ್ನು ಚಂದ್ರಕಾಂತ್ ವಿವರಿಸಿದ್ದಾರೆ.

ಅಪಘಾತ ನಡೆದಿದ್ದು ನಿಜ. ಆದರೆ ಅದು ಅಷ್ಟು ಗಂಭೀರ ಅಪಘಾತ ಅಲ್ಲ. ಆಕೆ ಸಾಯಲು ಕಾರಣವೇ ಬೇರೆ. ಇದೇ ವಿಚಾರವನ್ನು ವೈದ್ಯರು ಹೇಳಿದ್ದಾಗಿ ಚಂದು ಟಿವಿ9 ಸುದ್ದಿವಾಹಿನಿಗೆ ಮಾಹಿತಿ ನೀಡಿದ್ದಾರೆ. "ನಾವು ಅಷ್ಟೇನು ವೇಗವಾಹಿ ಪ್ರಯಾಣಿಸುತ್ತಿರಲಿಲ್ಲ. ಬೆಂಗಳೂರಿನಲ್ಲಿ ಶನಿವಾರ ಸಂಜೆ ಬೆಂಗಳೂರಿನಲ್ಲಿ ಧಾರಾಕಾರ ಮಳೆ. ನಾವು ಮೆಹಬೂಬ್ ನಗರ ತಲುಪಿದಾಗ ರಾತ್ರಿ 12.30 ಸಮಯವಾಗಿತ್ತು"
"ನಾವು 3 ಜನ ಚೆನ್ನಾಗಿ ನಿದ್ದೆ ಮಾಡುತ್ತಿದ್ದೆವು. ಮುಂದೆ ಡ್ರೈವರ್ ಪಕ್ಕ ಪವಿತ್ರಾ ಸೋದರಸಂಬಂಧಿ ಇದ್ದರು. ನಾನು ಪವಿತ್ರಾ ಹಿಂದಿನ ಸೀಟ್ನಲ್ಲಿ ಕುಳಿತ್ತಿದ್ದೆವು. ಒಮ್ಮೆ ಶಬ್ಧವಾದಾಗ ಎಲ್ಲರೂ ಎದ್ದೆವು. ಡ್ರೈವರ್ ಹೇಳುವ ಪ್ರಕಾರ ಕೆಎಸ್ಆರ್ಟಿಸಿ ಬಸ್ ಓವರ್ಟೇಕ್ ಮಾಡಲು ಹೋಗಿ ಕಾರಿಗೆ ಟಚ್ ಆಯಿತು. ಆದರೆ ಆ ಟೆನ್ಷನ್ನಲ್ಲಿ ಡ್ರೈವರ್ ವಿರುದ್ಧ ದಿಕ್ಕಿನಲ್ಲಿ ಸ್ಟೇರಿಂಗ್ ತಿರುಗಿಸಿದ್ದಾರೆ. ಹಾಗಾಗಿ ಕಾರು ಪಕ್ಕದ ರಸ್ತೆ ಹೋಯಿತು" ಎಂದಿದ್ದಾರೆ.

"ನಿಜ ಹೇಳಬೇಕು ಅಂದ್ರೆ ಅಪಘಾತದಲ್ಲಿ ಯಾರೊಬ್ಬರು ಗಂಭೀರವಾಗಿ ಗಾಯಗೊಂಡಿಲ್ಲ. ನನಗೆ ಮಾತ್ರ ಕೊಂಚ ಪೆಟ್ಟಾಗಿದೆ. ನನ್ನ ಮೈಯಿಂದ ರಕ್ತ ಸೋರುತ್ತಿತ್ತು. ಅದನ್ನು ನೋಡಿ ನಟಿ ಪವಿತ್ರಾ ಶಾಕ್ ಆಗಿದ್ದರು. ಹಾಗಾಗಿ ಸಡನ್ ಸ್ಟ್ರೋಕ್ನಿಂದ ಆಕ ಮೃತಪಟ್ಟಿದ್ದಾರೆ. ವೈದ್ಯರು ಸಹ ಇದನ್ನೇ ಹೇಳಿದ್ದಾರೆ. ನನಗೆ ಆ ಸಮಯದಲ್ಲಿ ಪ್ರಜ್ಞೆ ಇರಲಿಲ್ಲ" ಎಂದು ವಿವರಿಸಿದ್ದಾರೆ.
"ಪವಿತ್ರಾ ಕನ್ನಡದಲ್ಲಿ ನಟ ದರ್ಶನ್ ಜೊತೆ ಸಿನಿಮಾದಲ್ಲಿ ನಟಿಸಲು ಒಪ್ಪಂದಕ್ಕೆ ಸಹಿ ಮಾಡಲು ಬೆಂಗಳೂರಿಗೆ ಬಂದಿದ್ದೆವು. ಮೇ 25, 26ಕ್ಕೆ ಚಿತ್ರೀಕರಣದಲ್ಲಿ ಆಕೆ ಭಾಗಿ ಆಗಬೇಕಿತ್ತು. ಅದೇ ಸಮಯದಲ್ಲಿ ತೆಲುಗಿನ ಜೆಮಿನಿ ವಾಹಿನಿ ಕಾರ್ಯಕ್ರಮದ ಒಪ್ಪಂದಕ್ಕೆ ಸಹಿ ಮಾಡಲು ಕರೆ ಬಂತು. ಅಲ್ಲಿಗೆ ಹೋಗಿ ಬರೋಣ ಎಂದು ಹೊರಟಾಗ ಈ ಘಟನೆ ನಡೀತು" ಎಂದಿದ್ದಾರೆ.
"ಅಪಘಾತದ ಬಳಿಕ ಆಕೆ ಇನ್ನು ಉಸಿರಾಡುತ್ತಲೇ ಇದ್ದಳು. ಆದರೆ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗಲಿಲ್ಲ. 15-20 ನಿಮಿಷ ತಡವಾಗಿ ಬಂತು. ಅದು ನಿರ್ಜನ ಪ್ರದೇಶ. ರಾತ್ರಿ 1 ಗಂಟೆ ಸುಮಾರಿಗೆ ಸುತ್ತಾಮುತ್ತಾ ಯಾರು ಇರಲಿಲ್ಲ. ನನ್ನನ್ನು ನೋಡಿ ಭಯಗೊಂಡು ಆಕೆ ಶಾಕ್ ಆಗಿರಬಹುದು. ಮುಂದೆ ಇದ್ದವರಿಗೆ ಬಲೂನ್ ಓಪನ್ ಆಗಿ ಬಚಾವಾಗಿದ್ದಾರೆ. ನನಗೆ ಮಾತ್ರ ಗಂಭೀರ ಪೆಟ್ಟಾಯಿತು" ಎಂದು ಮಾಹಿತಿ ನೀಡಿದ್ದಾರೆ.
ಕನ್ನಡದಲ್ಲಿ 'ಜೋಕಾಲಿ', 'ನೀಲಿ', 'ರಾಧಾರಮಣ' ಎನ್ನುವ ಧಾರಾವಾಹಿಗಳಲ್ಲಿ ಪವಿತ್ರಾ ನಟಿಸಿದ್ದರು. ತೆಲುಗಿನ 'ತ್ರಿನಯನಿ' ಧಾರಾವಾಹಿ ಅಲ್ಲಿ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು. ದರ್ಶನ್ ನಟನೆಯ 'ಡೆವಿಲ್' ಚಿತ್ರದಲ್ಲಿ ಆಕೆ ನಟಿಸಬೇಕಿತ್ತು ಎನ್ನಲಾಗ್ತಿದೆ.


Click it and Unblock the Notifications











