ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರಿಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಭಾವುಕ ನಮನ
ಮಕ್ಕಳಾಗಲಿಲ್ಲ ಎಂಬ ಕೊರಗಿನಲ್ಲಿ ಅನೇಕ ಮಹಿಳೆಯರು ಮರ ಸುತ್ತಿ ಪೂಜೆ ಪುನಸ್ಕಾರ ಮಾಡುತ್ತಿದ್ದ ಆ ಕಾಲದಲ್ಲಿ ಪರಿಸರದ ಮೂಲಕ ತಮ್ಮ ದುಃಖವನ್ನು ಮರೆತಿದ್ದವರು ಸಾಲು ಮರದ ತಿಮ್ಮಕ್ಕ. ನಾನು ಬೆಳೆಸುವ ಒಂದೊಂದು ಮರ ಕೂಡ ಒಂದೊಂದು ಮಗು ಎಂದು ತೀರ್ಮಾನ ಮಾಡಿದವರು. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಚಿಕ್ಕ ರಂಗಯ್ಯ ಮತ್ತು ವಿಜಯಮ್ಮ ಅವರಿಗೆ..
1910ರಲ್ಲಿ ಜನಿಸಿದ್ದ ತಿಮ್ಮಕ್ಕ ತಮ್ಮ ಪತಿ ಚಿಕ್ಕಯ್ಯ ಜೊತೆ ಕುದೂರಿನಿಂದ ಹುಲಿಕಲ್ ತನಕ ಸುಮಾರು 4 ಕಿ.ಮೀ. ಉದ್ದಕ್ಕೂ 284 ಆಲದ ಮರಗಳನ್ನು ಮೊದಲು ನೆಡುವ ಮೂಲಕ ತಮ್ಮ ಪರಿಸರ ಪ್ರೇಮ ಮೆರೆದಿದ್ದರು. ಬಿಂದಿಗೆಯಲ್ಲಿ ನೀರು ಹೊತ್ತು ತಂದು ಸಸಿಗಳನ್ನು ರಕ್ಷಿಸಿ ಬೆಳೆಸಿದರು.

ಮಕ್ಕಳಿಲ್ಲದ ನೋವನ್ನು ಮರೆತು ತಮ್ಮ ಜೀವಿತಾವಧಿಯಲ್ಲಿ 8000ಕ್ಕೂ ಅಧಿಕ ಗಿಡಗಳನ್ನು ಬೆಳೆಸಿದ ಸಾಲು ಮರದ ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ರಾಷ್ಟ್ರೀಯ ನಾಗರಿಕ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿಯನ್ನು ಕೂಡ ನೀಡಲಾಗಿತ್ತು.
ಇಷ್ಟೇ ಅಲ್ಲ ಬಿಬಿಸಿ ರೇಡಿಯೋ ನಡೆಸಿದ ದೇಶದ ಅತಿ ಮುಖ್ಯವಾದ100 ಸಾಧಕ ಮಹಿಳೆಯರ ಲಿಸ್ಟ್ನಲ್ಲಿ ಸಾಲು ಮರದ ತಿಮ್ಮಕ್ಕ ಕೂಡ ಒಬ್ಬರಾಗಿದ್ದರು. ಅಮೆರಿಕಾದ ಕ್ಯಾಲಿಫೋರ್ನಿಯಾದ ಲಾಸ್ ಎಂಜಲೀಸ್ನಲ್ಲಿ ಪರಿಸರ ಅಧ್ಯಯನ ಕೇಂದ್ರಕ್ಕೆ ಸಾಲು ಮರದ ತಿಮ್ಮಕ್ಕ ಅವರ ಹೆಸರಿಡಲಾಗಿದೆ. 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಇಂಥಾ ಸಾಲು ಮರದ ತಿಮ್ಮಕ್ಕ ಕಂಡರೆ ಅಕ್ಕ ಪಕ್ಕದ ರಾಜ್ಯದವರಿಗೆ ಕೂಡ ವಿಶೇಷವಾದ ಪ್ರೀತಿ ಇತ್ತು. ವಿವೇಕ್ ಅವರನ್ನೊಳಗೊಂಡು ಹಲವಾರು ತಾರೆಯರಿಗೆ ತಿಮ್ಮಕ್ಕ ಅವರ ಮೇಲೆ ವಿಶೇಷವಾದ ಗೌರವ ಇತ್ತು. ಆ ಪೈಕಿ ಒಬ್ಬರಾಗಿದ್ದ ಪವನ್ ಕಲ್ಯಾಣ್ 114ನೇ ವಯಸ್ಸಿನಲ್ಲಿ ಅಗಲಿದ ಸಾಲು ಮರದ ತಿಮ್ಮಕ್ಕ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿಯನ್ನು ಸಲ್ಲಿಸಿದ್ಧಾರೆ. ವೃಕ್ಷಮಾತೆಗೆ ನಮನ ಸಲ್ಲಿಸಿದ್ದಾರೆ.
ಸಾಲು ಮರದ ತಿಮ್ಮಕ್ಕ ಅಗಲಿದ ಹಿನ್ನೆಲೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾದ ಬರಹವನ್ನು ಬರೆದುಕೊಂಡಿರುವ ಪವನ್ ಕಲ್ಯಾಣ್, ''ಆಂಧ್ರಪ್ರದೇಶದಲ್ಲಿ, ಪರಿಸರವನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದವರನ್ನು ನಾವು ನೋಡಿದ್ದೇವೆ. ಮರಗಳನ್ನು ನಿರ್ದಯವಾಗಿ ಕಡಿದು, ಕಾಡುಗಳನ್ನು ನಾಶಮಾಡಿ, ಸ್ವಾರ್ಥ ಲಾಭಕ್ಕಾಗಿ ನಮ್ಮ ಪ್ರಮುಖ ಪರಿಸರ ಸಂಪನ್ಮೂಲಗಳ ಕಳ್ಳಸಾಗಣೆಯನ್ನು ಮಾಡಲು ಅನುವು ಮಾಡಿ ಕೊಟ್ಟಿದ್ದನ್ನೂ ಕೂಡ ನಾವು ನೋಡಿದ್ದೇವೆ. ಆದರೆ ಇನ್ನೊಂದು ಕಡೆ, ಪ್ರಕೃತಿಗೆ ಸಂಪೂರ್ಣ ಸಮರ್ಪಣೆಯಾಗಿದ್ದ ವಿನಮ್ರ ವ್ಯಕ್ತಿ - ಸಾಲುಮರದ ತಿಮ್ಮಕ್ಕ, "ಮರಗಳ ತಾಯಿ"ಎಂದು ಸರಳವಾಗಿ ಕರೆಯಲ್ಪಡುವ ಮಹಿಳೆ'' ಎಂದು ಹೇಳಿದ್ಧಾರೆ.

ಮುಂದುವರೆದು ''ಕರ್ನಾಟಕದ ಒಂದು ಸಣ್ಣ ಹಳ್ಳಿಯಿಂದ ಬಂದ ತಿಮ್ಮಕ್ಕ ಮತ್ತು ಅವರ ಪತಿ ಮಕ್ಕಳನ್ನು ಹೊಂದಲು ಸಾಧ್ಯವಾಗದಿದ್ದಾಗ ತಮ್ಮ ಜೀವನದ ಉದ್ದೇಶವನ್ನು ಕಂಡುಕೊಂಡರು. ಅವರು ಹಸಿರು ಕುಟುಂಬವನ್ನು ಬೆಳೆಸಲು ಆಯ್ಕೆ ಮಾಡಿಕೊಂಡರು. ಪರಿಶುದ್ದ ಪ್ರೀತಿ ಮತ್ತು ದೈನಂದಿನ ಶ್ರಮದಿಂದ, 375 ಭವ್ಯವಾದ ಆಲದ ಮರಗಳು ಸೇರಿದಂತೆ 8000ಕ್ಕೂ ಅಧಿಕ ಮರಗಳನ್ನು ನೆಟ್ಟು ಪೋಷಿಸಿ ಜಗತ್ತಿಗೆ ಉಡುಗೊರೆಯನ್ನು ನೀಡಿದರು'' ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
''ಅವರ ಜೀವನವು ಅಧಿಕಾರ ಅಥವಾ ಸಂಪತ್ತನ್ನು ಯಾವತ್ತು ಹುಡಕಲಿಲ್ಲ. ಅದನ್ನು ಬಯಸುವ ವ್ಯಕ್ತಿ ಕೂಡ ಅವರಾಗಿರಲಿಲ್ಲ ಭೂಮಿ ತಾಯಿಗೆ ಬೇಷರತ್ತಾದ ಪ್ರೀತಿಯನ್ನು ನೀಡುವುದಷ್ಟೇ ಅವರ ಉದ್ದೇಶವಾಗಿತ್ತು. ಇಂದು 114ನೇ ವಯಸ್ಸಿನಲ್ಲಿ ನಮ್ಮ ನಡುವೆ ಇದ್ದ ದಂತಕತೆ, ಪ್ರಕೃತಿಯ ರಕ್ಷಕಿ ನಮ್ಮನ್ನು ಅಗಲಿದ್ದಾರೆ. ಅವರ ಬದುಕು ನಮ್ಮೆಲ್ಲರಿಗೆ ಪಾಠ. ಜನಸೇನಾ ಪರವಾಗಿ, ಮಹಾನ್ ಸಾಲುಮರದ ತಿಮ್ಮಕ್ಕ ಅವರಿಗೆ ನಾನು ನನ್ನ ಗೌರವವನ್ನು ಸಲ್ಲಿಸುತ್ತೇನೆ'' ಎಂದು ಪವನ್ ಕಲ್ಯಾಣ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ಧಾರೆ.


Click it and Unblock the Notifications










