ಚಿರು ತಮ್ಮ ಪವನ್ ಬದುಕಲ್ಲಿ ಮತ್ತೆ ಆಕೆ ಪ್ರತ್ಯಕ್ಷ
ಪ್ರೀತಿಸಿ ಮದುವೆಯಾದ ಪತ್ನಿ ರೇಣು ದೇಸಾಯಿಗೆ ಕೈಕೊಟ್ಟ ಪವನ್ ರಷ್ಯಾ ಮಾಡೆಲ್ ದರಾ ಮಾರ್ಕ್ಸ್ ಕೈಗೂ ಪಾಪು ಕೊಟ್ಟು ಪ್ರೀತಿಯ ಕುರುಹು ಎಂದು ಹೇಳಿ ಟಾಟಾ ಹೇಳಿದ್ದಾಯಿತು. ಎಲ್ಲೋ ಮನೆ ಮಾಡಿಕೊಂಡು ಮಕ್ಕಳೊಂದಿಗೆ ಇದ್ದ ರೇಣು ದೇಸಾಯಿ ಇತ್ತೀಚೆಗೆ ವಿಜಯವಾಡದಲ್ಲಿ ದಿಢೀರ್ ಪ್ರತ್ಯಕ್ಷರಾಗಿ ಚಿರಂಜೀವಿ ಕುಟುಂಬದಲ್ಲಿ ಸಂಚಲನ ಮೂಡಿಸಿದೆ.
ನಟ ಪವನ್ ತಮ್ಮ ಮೊದಲ ಪತ್ನಿ ನಂದಿನಿಗೆ ವಿಚ್ಛೇದನ ನೀಡಿದಂತೆ ಆರ್ಯ ಸಮಾಜದಲ್ಲಿ ಕೈಹಿಡಿದ ನಟಿ ರೇಣು ದೇಸಾಯಿಗೂ ವಿಚ್ಛೇದನ ನೀಡಲು ಪವನ್ ಮುಂದಾಗಿದ್ದಾರೆ. ಇಷ್ಟೆಲ್ಲ ಸಂಸಾರ ಗೊಂದಲಗಳಿದ್ದರೂ ಪವನ್ ಅವರ ಇತ್ತೀಚಿನ ಚಿತ್ರ ಕ್ಯಾಮೆರಾಮ್ಯಾನ್ ಗಂಗಾ ತೋ ರಾಂ ಬಾಬು ಭರ್ಜರಿ ಗಳಿಕೆ ಮಾಡಿದೆಯಂತೆ.
ಪವನ್ ಪತ್ನಿ ರೇಣು ದೇಸಾಯಿ ತಮ್ಮ ಜೊತೆಗೆ ಮಕ್ಕಳಾದ ಅಖಿರನಂದನ್ ಹಾಗೂ ಆದ್ಯರನ್ನು ಕರೆದುಕೊಂಡು ವಿಜಯವಾಡದ ಪ್ರಸಿದ್ಧ ದೇಗುಲ ಕನಕ ದುರ್ಗ ದೇಗುಲಕ್ಕೆ ಬಂದಿದ್ದರಂತೆ. ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಯಾವ ಕಾರಣಕ್ಕೆ ರೇಣು ಈ ಶಕ್ತಿಯುತ ಅಮ್ಮನ ಪೂಜೆಗಾಗಿ ಬಂದಿದ್ದಳು ಎಂಬುದು ಬಹಿರಂಗಗೊಂಡಿಲ್ಲ.
ಚಿರಂಜೀವಿ ಅವರು ಯುಪಿಎ ಕ್ಯಾಬಿನೆಟ್ ಸೇರಿದ ಖುಷಿಯಲ್ಲಿ ಇಡೀ ಕುಟುಂಬ ಇರುವಾಗ ರೇಣು ಬಂದು ಹೋದ ಸುದ್ದಿ ಸಿಕ್ಕಿದೆ. ದೇವರು ದಿಂಡರು ಎಂದರೆ ಭಯ ಭಕ್ತಿ ಹೊಂದಿರುವ ಚಿರು ಕುಟುಂಬ ರೇಣು ಆಗಮನದಿಂದ ಕೊಂಚ ಚಿಂತೆಗೀಡಾಗಿದೆ.
ಇತ್ತೀಚಿಗೆ ಚಿರು ಕುಟುಂಬದಲ್ಲಿ ನಡೆದ ಯಾವುದೇ ಶುಭ ಸಮಾರಂಭದಲ್ಲಿ ಕಾಣಿಸಿಕೊಳ್ಳದ ರೇಣು ಈಗ ವಿಜಯವಾಡಕ್ಕೆ ಬಂದು ಪೂಜೆ ಸಲ್ಲಿಸಿದ್ದಲ್ಲದೆ ಸ್ನೇಹಿತರ ಮದುವೆ ಸಮಾರಂಭದಲ್ಲೂ ಪಾಲ್ಗೊಂಡಿರುವ ಸುದ್ದಿ ಇದೆ.
ಪವನ್ ಕಲ್ಯಾಣ್ ಸದ್ಯ ಯುರೋಪ್ ಪ್ರವಾಸದಲ್ಲಿದ್ದು, ರೇಣು ಅವರನ್ನು ಭೇಟಿ ಮಾಡುವ ಸಾಧ್ಯತೆಯಿಲ್ಲ. ಚಿರಂಜೀವಿ ಮತ್ತೊಮ್ಮೆ ತಮ್ಮಡು ಸಂಸಾರ ಸರಿ ಮಾಡುವ ಕೆಲಸಕ್ಕೆ ಕೈ ಹಾಕುವ ಸಾಧ್ಯತೆ ಕಮ್ಮಿ ಎನ್ನಲಾಗಿದೆ.
ಗುಜರಾತ್ ಮೂಲದ ರೇಣು ದೇಸಾಯಿ ರೂಪದರ್ಶಿ, ನಟಿಯಾಗಿ ಟಾಲಿವುಡ್ ಪ್ರವೇಶಿಸಿದ್ದು ಪವನ್ ಕಲ್ಯಾಣ್ ಜೊತೆ ಬದ್ರಿ ಚಿತ್ರದ ಮೂಲಕ. ಈ ಚಿತ್ರದ ಶೂಟಿಂಗ್ ಮುಗಿಯುತ್ತಿದ್ದಂತೆ ಇಬ್ಬರು ಸತಿ ಪತಿಗಳಾಗುವ ಕನಸು ಕಂಡಿದ್ದರು. ನಂತರ ಜಾನಿ ಚಿತ್ರದಲ್ಲಿ ನಟಿಸಿದ್ದ ರೇಣು ಆಮೇಲೆ ಖುಷಿ, ಗುಡುಂಬಾ ಶಂಕರ್, ಬಾಲು ಹಾಗೂ ಅನ್ನವಾರಂ ಚಿತ್ರಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದರು.
ಮದುವೆ ಹಾಗೂ ವಿಚ್ಛೇದನ: ನಂದಿನಿಯನ್ನು ಪವನ್ ಕಲ್ಯಾಣ್ ಮೇ, 17, 1997ರಲ್ಲಿ ಮದುವೆಯಾಗಿದ್ದರು. ಅಗಸ್ಟ್ 2008 ರಲ್ಲಿ ಮೊದಲ ಪತ್ನಿಗೆ 5 ಕೋಟಿ ರು ನೀಡಿ ಪವನ್ ವಿಚ್ಛೇದನ ಪಡೆದಿದ್ದರು. ನಂದಿನಿ ಮೇ 16, 2010ರಲ್ಲಿ ಡಾ. ಕೃಷ್ಣರೆಡ್ಡಿ ಎಂಬುವರನ್ನು ಮದುವೆಯಾದರು. ಮದುವೆಯಾದ ಮೇಲೆ ನಂದಿನಿ ತನ್ನ ಹೆಸರನ್ನು ಜಾಹ್ನವಿ ಎಂದು ಬದಲಾಯಿಸಿಕೊಂಡರು.
ಪವನ್ ಹಾಗೂ ರೇಣು ದೇಸಾಯಿ ಸುಮಾರು 4 ವರ್ಷ ಲಿವ್ ಇನ್ ಸಂಬಂಧದಲ್ಲಿದ್ದರು. 2009 ಜನವರಿ 28ರಂದು ರೇಣು ದೇಸಾಯಿರನ್ನು ಪವನ್ ಅಧಿಕೃತವಾಗಿ 'ಕಲ್ಯಾಣ' ಮಾಡಿಕೊಂಡರು.
2004ರಲ್ಲಿ ಅಖಿರ ನಂದನ್ ಎಂಬ ಮಗ (ಮದುವೆಗೆ ಮುಂಚೆ ಪ್ರೀತಿಯ ದ್ಯೋತಕವಾಗಿ ಹುಟ್ಟಿದ ಕೂಸು) ಹಾಗೂ 2010ರಲ್ಲಿ ಆದ್ಯ ಎಂಬ ಪುತ್ರಿಯನ್ನು ದಂಪತಿ ಪಡೆದಿದ್ದಾರೆ. ಇಬ್ಬರ ನಡುವೆ ರಷ್ಯನ್ ಚೆಲುವೆ ಕಾಣಿಸಿಕೊಂಡ ಮೇಲೆ ಪವನ್ ಹಾಗೂ ರೇಣು ದೂರಾಗಿದ್ದರು. ರೇಣು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ 40 ಕೋಟಿ ಡಿಮ್ಯಾಂಡ್ ಮಾಡಿದ್ದಾರೆ ಎಂಬ ಸುದ್ದಿ ಕೂಡಾ ಇದೆ.
2011ರಲ್ಲಿ ನಾನು ಪವನ್ ದೂರಾಗಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ರೇಣು, ಹೈದರಾಬಾದ್ ಬಿಟ್ಟು ಪುಣೆ, ಮುಂಬೈ ಕಡೆ ತೆರಳಿ ಮಕ್ಕಳೊಂದಿಗೆ ನೆಮ್ಮದಿ ಜೀವನ ಸಾಗಿಸಿದ್ದರು.


Click it and Unblock the Notifications












