ಪುನೀತ್ ನಟಿಸುತ್ತಿರುವ 'ದ್ವಿತ್ವ' ಸಿನಿಮಾದ ಕತೆ ಹುಟ್ಟಿದ್ದು ಹೇಗೆ? ಮಾಹಿತಿ ಹಂಚಿಕೊಂಡ ಪವನ್
ನಟ ಪುನೀತ್ ರಾಜ್ಕುಮಾರ್ ನಟಿಸುತ್ತಿರುವ ಹೊಸ ಸಿನಿಮಾದ ಹೆಸರು ಇಂದು ಘೋಷಣೆ ಆಗಿದೆ. ಪವನ್ ಕುಮಾರ್ ನಿರ್ದೇಶಿಸುತ್ತಿರುವ ಈ ಸಿನಿಮಾಕ್ಕೆ 'ದ್ವಿತ್ವ' ಎಂದು ಹೆಸರಿಡಲಾಗಿದೆ.
Recommended Video
ಹೆಸರು ಮತ್ತು ಒಂದು ಭಿನ್ನ ಪೋಸ್ಟರ್ ಅನ್ನು ಇಂದು ಚಿತ್ರತಂಡ ಬಿಡುಗಡೆ ಮಾಡಿದ್ದು, ಹೆಸರಿನಿಂದಲೇ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸುತ್ತಿದೆ.
'ದ್ವಿತ್ವ' ಕತೆ ಹುಟ್ಟಿದ್ದು ಹೇಗೆ, ಬೆಳೆದಿದ್ದು ಹೇಗೆ ಎಂಬ ವಿಷಯಗಳನ್ನು ಸಿನಿಮಾದ ನಿರ್ದೇಶಕ ಪವನ್ ಕುಮಾರ್ ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
'ದ್ವಿತ್ವ' ಎಂದರೆ ದ್ವಂದತೆ, ಉಭಯತ್ವ, ಎರಡಾಗಿರುವುದು ಎಂಬ ಅರ್ಥಗಳಿವೆ. ಈ ಸಿನಿಮಾದ ಕತೆಯ ಬಗ್ಗೆ ನಾನು ಪುನೀತ್ ರಾಜ್ಕುಮಾರ್ ಅವರೊಟ್ಟಿಗೆ ಬಹಳ ಸಮಯದಿಂದ ಚರ್ಚೆ ನಡೆಸುತ್ತಲೇ ಇದ್ದೆ. ಕೊನೆಗೆ ಈಗ ಅಧಿಕೃತವಾಗಿ ಹೆಸರು ಘೋಷಣೆ ಮಾಡಿದ್ದೇವೆ ಎಂದಿದ್ದಾರೆ ಪವನ್.

ಮುವಥಾಯ್ ಕಲಿಯಲು ಥಾಯ್ಲೆಂಡ್ಗೆ ಹೋಗಿದ್ದೆ: ಪವನ್
'ದ್ವಿತ್ವ' ಸಿನಿಮಾದ ಕಥಾವಸ್ತು ಹಲವು ವರ್ಷಗಳಿಂದಲೂ ನನ್ನ ಮನದಲ್ಲಿತ್ತು. ಅದನ್ನು ಡೆವೆಲಪ್ ಮಾಡುವ ಯತ್ನ ಮಾಡುತ್ತಲೇ ಇದ್ದೆ. 'ಗಾಳಿಪಟ 2' ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲೂ ಮುನ್ನಾ ಮುವಥಾಯ್ ಕಲಿಯಲು ಥಾಯ್ಲೆಂಡ್ಗೆ ಹೋಗಿದ್ದೆ. ಅಲ್ಲಿ ಕೆಲ ಕಾಲ ನೆಲೆಸಿದ್ದೆ. ಅಲ್ಲಿ ಕೆಫೆ ಒಂದರಲ್ಲಿ ಕುಳಿತುಕೊಂಡು ಸಿನಿಮಾದ ಚಿತ್ರಕತೆ ಬರೆದೆ ಎಂದಿದ್ದಾರೆ ಪವನ್ ಕುಮಾರ್.

ಥಾಯ್ಲೆಂಡ್ನಿಂದಲೇ ಕತೆ ಕಳಿಸಿದ್ದೆ: ಪವನ್
''ಅಲ್ಲಿಂದಲೇ ಚಿತ್ರಕತೆಯನ್ನು ಪುನೀತ್ ರಾಜ್ಕುಮಾರ್ಗೆ ಕಳಿಸಿದೆ. ಅವರು ಚಿತ್ರಕತೆ ಓದಿ ಪ್ರತಿಕ್ರಿಯೆ ನೀಡಿದರು. ಆ ನಂತರವೂ ಹಲವು ಬಾರಿ ಕತೆ, ಚಿತ್ರಕತೆಯ ಬಗ್ಗೆ ಚರ್ಚೆ ನಡೆಸುತ್ತಲೇ ಇದ್ದೆವು. ಕೊನೆಗೆ ಲಾಕ್ಡೌನ್ ಅಂತ್ಯವಾಗುವ ವೇಳೆಗೆ ಸಿನಿಮಾ ಮಾಡುವ ನಿರ್ಣಯಕ್ಕೆ ಬಂದೆವು'' ಎಂದು ಹಿಮ್ಮಾಹಿತಿ ನೀಡಿದ್ದಾರೆ ಪವನ್.

ಇದೊಂದು ಸೈಕಾಲಜಿಕಲ್ ಥ್ರಿಲ್ಲರ್ ಡ್ರಾಮಾ: ಪವನ್
''ಸಿನಿಮಾಕ್ಕೆ 'ದ್ವಿತ್ವ' ಎಂದೇ ಹೆಸರಿಡಬೇಕು ಎಂದು ಬಹಳ ದಿನದಿಂದಲೂ ಅಂದುಕೊಳ್ಳುತ್ತಿದ್ದೆ. ಈಗ ಅದೇ ಹೆಸರನ್ನು ಇಟ್ಟಿದ್ದೇವೆ. ಸಿನಿಮಾದ ಪೋಸ್ಟರ್ ಮಾಡಿದ ಆದರ್ಶ್ಗೆ ಧನ್ಯವಾದ ಹೇಳಲೇ ಬೇಕು. ನನ್ನ ಚಿತ್ರಕತೆಯಲ್ಲಿರುವ ಹಲವು ಅಂಶಗಳನ್ನು ಪೋಸ್ಟರ್ ಮೂಲಕ ಆತ ಬಿಚ್ಚಿಟ್ಟಿದ್ದಾನೆ. 'ಲೂಸಿಯಾ' ಸಿನಿಮಾದಿಂದಲೂ ಅವನೇ ನನಗೆ ಪೋಸ್ಟರ್ ಮಾಡಿಕೊಡುತ್ತಿದ್ದಾನೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಡ್ರಾಮಾ ಆಗಿರಲಿದೆ'' ಎಂದಿದ್ದಾರೆ ಪವನ್.

ಚಿತ್ರತಂಡದಲ್ಲಿ ಯಾರ್ಯಾರಿದ್ದಾರೆ?
ಸಿನಿಮಾದ ತಾಂತ್ರಿಕ ವರ್ಗದ ಬಗ್ಗೆ ಮಾತನಾಡಿರುವ ಪವನ್, ''ಸಿನಿಮಾಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಲಿದ್ದಾರೆ. ಸಿನಿಮಾಟೊಗ್ರಾಫರ್ ಆಗಿ ಪ್ರೀತ ನಮ್ಮ ತಂಡ ಸೇರಿಕೊಂಡಿದ್ದಾರೆ. 'ಲೈಫು ಇಷ್ಟೇನೆ' ಸಿನಿಮಾಕ್ಕೆ ಮುಂಚಿನಿಂದಲೂ ನನ್ನ ಸಿನಿಮಾ ಎಡಿಟಿಂಗ್ ಮಾಡುತ್ತಿರುವ ಸುರೇಶ್ ಈ ಸಿನಿಮಾವನ್ನೂ ಎಡಿಟಿಂಗ್ ಮಾಡಲಿದ್ದಾರೆ. ಇನ್ನೂ ಹಲವರು ನಮ್ಮ ತಂಡವನ್ನು ಶೀಘ್ರದಲ್ಲಿಯೇ ಸೇರಿಕೊಳ್ಳಲ್ಲಿದ್ದಾರೆ'' ಎಂದಿದ್ದಾರೆ ಪವನ್.

ತೆಲುಗು ವೆಬ್ ಸರಣಿ ನಿರ್ದೇಶಿಸಿರುವ ಪವನ್
'ಲೂಸಿಯಾ', 'ಯು-ಟರ್ನ್' ಸಿನಿಮಾಗಳ ಮೂಲಕ ಖ್ಯಾತಿಗಳಿಸಿರುವ ಪವನ್ ಪ್ರಸ್ತುತ 'ಕುಡಿ ಎಡಮೈತೆ' ಹೆಸರಿನ ತೆಲುಗು ವೆಬ್ ಸರಣಿ ನಿರ್ದೇಶಿಸಿದ್ದಾರೆ. ಅದು ಕೆಲವೇ ದಿನಗಳಲ್ಲಿ ಆಹಾ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಇನ್ನು ಪುನೀತ್ ನಟಿಸಿರುವ 'ಜೇಮ್ಸ್' ಕೊನೆಯ ಹಂತದ ಚಿತ್ರೀಕರಣ ನಡೆಯಲಿದೆ. ನಂತರ ದಿನಕರ್ ತೂಗುದೀಪ್ ನಿರ್ದೇಶನದ ಸಿನಿಮಾದಲ್ಲಿಯೂ ಅವರು ನಟಿಸಲಿದ್ದಾರೆ.


Click it and Unblock the Notifications











