ಸಂಕಷ್ಟದಲ್ಲಿರುವವರಿಗೆ ಪಕ್ಕದ ಚಿತ್ರರಂಗದಲ್ಲಿ ಕೋಟಿ ಕೋಟಿ ನೆರವು: ನಮ್ಮ 'ಸ್ಟಾರ್'ಗಳೆಲ್ಲಿ?
ಕೊರೊನಾ ವೈರಸ್ನಿಂದ ಸರ್ಕಾರ ಅನಿವಾರ್ಯವಾಗಿ ಲಾಕ್ಡೌನ್ ಕ್ರಮ ತೆಗೆದುಕೊಂಡಿದೆ. ಇದರಿಂದ ಜನಸಾಮಾನ್ಯರ ಬದುಕು ಸಂಕಷ್ಟದಲ್ಲಿ ಸಿಲುಕಿದೆ. ಇದರಲ್ಲಿ ಚಿತ್ರರಂಗದ ಕಾರ್ಮಿಕರೂ ಸೇರಿದ್ದಾರೆ. ಧಾರಾವಾಹಿಗಳನ್ನು ನೆಚ್ಚಿಕೊಂಡವರ ಬದುಕೂ ಅತಂತ್ರ ಸ್ಥಿತಿಗೆ ತಲುಪಿದೆ. ಇವರ ಕಥೆಯೇನು?
ಬಾಲಿವುಡ್ ನಿರ್ಮಾಪಕರು ಈಗಾಗಲೇ ಜತೆಗೂಡಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ದುಡಿಯುವ ದಿನಗೂಲಿ ಕಾರ್ಮಿಕರು, ಕಡಿಮೆ ವೇತನದ ಕೆಲಸಗಾರರಿಗೆ ಹಣಕಾಸಿನ ಸಹಾಯ ಮಾಡಲು ಪರಿಹಾರ ನಿಧಿ ಸ್ಥಾಪಿಸಿದೆ. ತಮಿಳು, ತೆಲುಗು ಚಿತ್ರರಂಗದ ಕಲಾವಿದರು ಕೋಟಿಗಟ್ಟಲೆ ದೇಣಿಗೆ ಹಣವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಘೋಷಣೆ ಮಾಡಿದ್ದಾರೆ. ಚಿತ್ರರಂಗದ ಕಾರ್ಮಿಕರಿಗೆ ನೆರವಾಗಲು ಸಹಾಯ ಹಸ್ತ ಚಾಚಿದ್ದಾರೆ. ಆದರೆ ಕನ್ನಡದಲ್ಲಿ? ಇದುವರೆಗೂ ಒಬ್ಬ ಸ್ಟಾರ್ ನಟ, ನಿರ್ದೇಶಕರು ಪರಿಹಾರ ಹಣ ನೀಡುವ ಅಥವಾ ಬಡ ಕುಟುಂಬಗಳಿಗೆ ನೆರವಾಗುವ ಘೋಷಣೆ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಮುಂದೆ ಓದಿ...

ಐದು ಲಕ್ಷ ಸಂಗ್ರಹಿಸಿದ ಪವನ್
ನಿರ್ದೇಶಕ ಕಾರ್ಮಿಕರಿಗಾಗಿ ಅನ್ಲೈನ್ ಮೂಲಕ ಹಣ ಸಂಗ್ರಹಿಸುವ ಮಾನವೀಯ ಕಾರ್ಯ ಮಾಡುವ ಮೂಲಕ ನಿರ್ದೇಶಕ ಪವನ್ ಕುಮಾರ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರೊಂದಿಗೆ ನಟ 'ಡಾಲಿ' ಧನಂಜಯ ಕೂಡ ಕೈಜೋಡಿಸಿದ್ದಾರೆ. ಹೀಗೆ ಪವನ್ ಕುಮಾರ್ ಸುಮಾರು ಐದು ಲಕ್ಷಕ್ಕೂ ಅಧಿಕ ಹಣ ಸಂಗ್ರಹಿಸಿದ್ದಾರೆ.

ಒಂದು ತಿಂಗಳು ಇದೇ ಕೆಲಸ
ಮುಂದಿನ ಒಂದು ತಿಂಗಳು ಇದೇ ಕೆಲಸ ಮಾಡುವುದಾಗಿ ಪವನ್ ತಿಳಿಸಿದ್ದಾರೆ. ಯಾವುದೇ ಹೊಸ ಸ್ಕ್ರಿಪ್ಟ್ಗಳನ್ನು ಬರೆಯುವುದಿಲ್ಲ. ನಮ್ಮ ಮನರಂಜನಾ ವಲಯಕ್ಕೆ ಅಗತ್ಯವಿರುವ ಹೊಸ ದೊಡ್ಡ ಅಂಶ ಏನು ಎಂಬುದರ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಪವನ್ ಹೇಳಿದ್ದರು. ಅವರು ಈಗ ಆನ್ಲೈನ್ನಲ್ಲಿ ಹಣ ಸಂಗ್ರಹಿಸಿ ಅದನ್ನು ಚಿತ್ರರಂಗದ ಕಾರ್ಮಿಕರ ಅನುಕೂಲತೆಗೆ ವಿನಿಯೋಗಿಸುವ ಯೋಜನೆ ಹಮ್ಮಿಕೊಂಡಿದ್ದಾರೆ.
ಸಂಚಾರಿ ವಿಜಯ್ ನೆರವು
ನಟ ಸಂಚಾರಿ ವಿಜಯ್ ದಿನಗೂಲಿ ನಂಬಿಕೊಂಡು ಬದುಕು ಸಾಗಿಸುತ್ತಿರುವ ಐದಾರು ಅತಿ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಒಂದು ತಿಂಗಳ ಮಟ್ಟಿಗೆ ಅಗತ್ಯವಿರುವ ದಿನ ಸಾಮಾನುಗಳು, ಧಾನ್ಯಗಳನ್ನು ಒದಗಿಸುವ ಪ್ರಯತ್ನವನ್ನು ತಮ್ಮ ಮಿತಿಯಲ್ಲಿ ಮಾಡುತ್ತಿದ್ದಾರೆ. ನಟ 'ಆ ದಿನಗಳು' ಚೇತನ್ ಕೂಡ ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ.

ಜವಾಬ್ದಾರಿ ಮರೆತರೇ ನಟರು?
ಹಾಗಾದರೆ ಉಳಿದ 'ಸ್ಟಾರ್'ಗಳು ಏನು ಮಾಡುತ್ತಿದ್ದಾರೆ? ಸ್ಟಾರ್ ನಟರ ಅಭಿಮಾನಿಗಳು ಅಲ್ಲಲ್ಲಿ, ಹಸಿದವರಿಗೆ ಊಟ, ಇನ್ನಿತರೆ ಸಾಮಗ್ರಿಗಳನ್ನು ಒದಗಿಸುವ ಕಾರ್ಯ ಮಾಡುತ್ತಿದ್ದಾರೆ ನಿಜ. ಆದರೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ನೆರವಾಗುವುದು 'ಸ್ಟಾರ್'ಗಳ ಜವಾಬ್ದಾರಿ. ಈ ಹೊಣೆಗಾರಿಕೆಯನ್ನು ಅವರು ಮರೆತಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ.

ಸಲಹೆ ನೀಡುತ್ತಿರುವ ನಟರು
ಇತರೆ ಚಿತ್ರರಂಗಗಳಂತೆಯೇ ಕನ್ನಡದಲ್ಲಿ ಕೂಡ ತಾರಾ ಹಾವಳಿ ಇದೆ. ಅದರಲ್ಲಿಯೂ ನಾಯಕನಟರಿಗೆ ಅಭಿಮಾನಿಗಳು ಹೆಚ್ಚು. ಅಭಿಮಾನಿಗಳಿಗೆ ಕಿವಿ ಮಾತು ಹೇಳುವ ಕೆಲಸವನ್ನು ಈ ನಟರು ಮಾಡಿದ್ದಾರೆ. ಈ ಸಂದರ್ಭದಲ್ಲಿ ನಾವು ಹೇಗೆ ವರ್ತಿಸಬೇಕು ಎಂಬ ಸಲಹೆಗಳನ್ನು ನೀಡಿದ್ದಾರೆ. ಹಾಗೆಯೇ ಕೆಲವು ನಟರು ಸತ್ಯಾಸತ್ಯತೆಗಳನ್ನು ವಿವೇಚಿಸದೆ ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಅಭಿಮಾನಿಗಳಿಗೆ ರಂಜನೆಗೆ ಕೊರತೆಯಿಲ್ಲ
ಸ್ಟಾರ್ ನಟರ ಸಿನಿಮಾಗಳನ್ನು ನಿರ್ಮಿಸುವುದಕ್ಕಾಗಿಯೇ ಸೀಮಿತವಾಗಿರುವ ಕೆಲವು ನಿರ್ಮಾಣ ಸಂಸ್ಥೆಗಳು ಈ ಸಂದರ್ಭದಲ್ಲಿ ಅಭಿಮಾನಿಗಳನ್ನು ರಂಜಿಸುವ ಕೆಲಸವನ್ನೇನೋ ಮಾಡುತ್ತಿವೆ. ಈಗ ಸಿನಿಮಾಗಳು ಬಿಡುಗಡೆಯಾಗಲು ಅವಕಾಶವಿಲ್ಲದಿದ್ದರೂ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳಿಗೆ ಖುಷಿ ನೀಡುವ ಸಂಗತಿಗಳಿಗೇನೂ ಕಡಿಮೆ ಇಲ್ಲ.

ಬಹಿರಂಗವಾಗಿ ಮಾತಾಡದ ನಟರು
ಸಿನಿಮಾದ ಮೋಷನ್ ಪೋಸ್ಟರ್, ಟ್ರೇಲರ್, ಹಾಡು, ಫಸ್ಟ್ ಲುಕ್ ಹೀಗೆ ಒಂದೊಂದನ್ನೇ ಬಿಡುಗಡೆ ಮಾಡುವ ಮೂಲಕ ಬೇಸರದಲ್ಲಿರುವ ಅಭಿಮಾನಿಗಳಿಗೆ ಮುದ ನೀಡುತ್ತಿದ್ದಾರೆ. ನಟರು, ನಟಿಯರು, ನಿರ್ದೇಶಕರು, ನಿರ್ಮಾಪಕರು ಅವುಗಳನ್ನು ಹಂಚಿಕೊಂಡು ಆನಂದಿಸುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಜನರು ಮತ್ತು ಚಿತ್ರರಂಗದ ಸಾಮಾನ್ಯರ ಬಗ್ಗೆ ದನಿ ಎತ್ತಿ ಮಾತಾಡಬೇಕಾದ ಪ್ರಮುಖರು ಇದುವರೆಗೂ ಬಹಿರಂಗವಾಗಿ ಮಾತನಾಡಿಲ್ಲ. ಸ್ಟಾರ್ ನಟರು ಮಾತಾಡಿದರೆ ದೇಣಿಗೆಗಳೂ ಹೆಚ್ಚು ಹರಿದುಬರುತ್ತವೆ.

ಟ್ರೋಲ್ ಹುಡುಗರೂ ಕೇಳುತ್ತಿದ್ದಾರೆ
ಸಿನಿಮಾಗಳು, ಕಲಾವಿದರ ಕುರಿತು ಮೀಮ್ ಮಾಡುವ ಮೂಲಕ ಪ್ರಚಾರ ನೀಡುವ ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್ ಪುಟಗಳಲ್ಲಿಯೂ ಕನ್ನಡದ ಸ್ಟಾರ್ ನಟರ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ನೆರೆಯ ಚಿತ್ರರಂಗದ ನಟರು ಉದಾರ ದೇಣಿಗೆ ನೀಡುತ್ತಿದ್ದರೂ ಇಲ್ಲಿ ಒಬ್ಬ ನಟರೂ ಇಲ್ಲ. ಎಲ್ಲರೂ ಎಲ್ಲಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ.

ಬೇಗ ನಡೆಯಲಿ ಯೋಜನೆ
ಚಿತ್ರರಂಗದ ದಿನಗೂಲಿ ನೌಕರರಿಗೆ ಸಹಾಯ ಮಾಡಲು ಚರ್ಚೆ ನಡೆಯುತ್ತಿದೆ. ಚಲನಚಿತ್ರ ಕಾರ್ಮಿಕರ ಒಕ್ಕೂಟ ಈ ಬಗ್ಗೆ ಚಿಂತನೆ ನಡೆಸಿದೆ. ಅದರೊಂದಿಗೆ ಕೈಜೋಡಿಸಲು ಕೆಲವು ನಟರೂ ಮುಂದೆ ಬರುತ್ತಿದ್ದಾರೆ ಎನ್ನಲಾಗಿದೆ. ನಟರು ಆದಷ್ಟು ಬೇಗನೆ ಎಲ್ಲರೂ ಜತೆಗೂಡಿ ಒಮ್ಮತದ ತೀರ್ಮಾನ ತೆಗೆದುಕೊಂಡರೆ ಈಗಾಗಲೇ ಸಂಕಷ್ಟದಲ್ಲಿರುವ ಜನರಿಗೆ ಚಿತ್ರರಂಗದ ಕಾರ್ಮಿಕರಿಗೆ ಸಹಾಯವಾಗುತ್ತದೆ.


Click it and Unblock the Notifications











