ರಿಸ್ಕ್ ತೆಗೆದುಕೊಂಡು ಸಿನಿಮಾ ನೋಡಿ ಎಂದು ಹೇಳಲಾರೆ: ಶಿವರಾಜ್ ಕುಮಾರ್
ಚಿತ್ರಮಂದಿರಗಳು ಪುನರ್ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುವುದಕ್ಕೆ ನಟ ಶಿವರಾಜ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಇಂದು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದ ಶಿವರಾಜ್ ಕುಮಾರ್, ಮಾಧ್ಯಮಗಳೊಟ್ಟಿಗೆ ಮಾತನಾಡಿ, 'ಚಿತ್ರಮಂದಿರಗಳು ರೀ-ಓಪನ್ ಆಗುತ್ತಿರುವುದು ತುಂಬಾ ಖುಷಿ ವಿಚಾರ. ಆದರೆ ಎಷ್ಟು ಜನ ಬರಬೇಕು ಅಂತ ನಟನಾಗಿ ನಾನು ಹೇಳೋಕಾಗೋಲ್ಲ' ಎಂದಿದ್ದಾರೆ.
ಚಿತ್ರಗಳ ಬಿಡುಗಡೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ, 'ನಟನಾಗಿ ನಾನು ಶೂಟಿಂಗ್ ಮಾಡಬಹುದು ಆಕ್ಟಿಂಗ್ ಮಾಡಬಹುದು. ಚಿತ್ರ ಪ್ರದರ್ಶನ ಹಾಗೂ ಬಿಡುಗಡೆ ಬಗ್ಗೆ ನಾನೇನು ಹೇಳುವುದಿಲ್ಲ. ಅದಕ್ಕೆ ಅಂತ ನಿರ್ಮಾಪಕರಿದ್ದಾರೆ ಅವರೇ ತೀರ್ಮಾನ ಮಾಡುತ್ತಾರೆ' ಎಂದರು.

ರಿಸ್ಕ್ ತೆಗೆದುಕೊಂಡು ಸಿನಿಮಾ ನೋಡಿ ಎನ್ನಲಾರೆ: ಶಿವಣ್ಣ
'ಸಿನಿಮಾ ನೋಡಲು ಬನ್ನಿ ಎಂದು ನಾನು ಪ್ರೇಕ್ಷಕರನ್ನು ಕರೆಯಬಹುದು, ಆದರೆ ರಿಸ್ಕ್ ತೆಗೆದುಕೊಂಡು ಬಂದು ಸಿನಿಮಾ ನೋಡಿ ಎನ್ನಲಾಗುವುದಿಲ್ಲ, ಆರೋಗ್ಯ ಬಹಳ ಮುಖ್ಯ, ಜನರು ತಮ್ಮ ಸುರಕ್ಷತೆ ನೋಡಿಕೊಂಡು ಚಿತ್ರಮಂದಿರಗಳಿಗೆ ಬರಲಿ' ಎಂದರು ಶಿವರಾಜ್ ಕುಮಾರ್.

ನನಗೆ ಎಲ್ಲಾ ಸಿನಿಮಾಗಳು ಸಹ ಒಂದೆ: ಶಿವರಾಜ್ ಕುಮಾರ್
'ಸಿನಿಮಾ ಸಹ ಒಂದು ಉದ್ಯಮ. ಎಲ್ಲ ಉದ್ಯಮದಂತೆ ಇದು ಸಹ ನಿಧಾನವಾಗಿ ಮೇಲೇಳಬೇಕು. ಯಾವ ಸಿನಿಮಾ ಮೊದಲು ಬರಬೇಕು ಎಂದು ಸಹ ನಾನು ಹೇಳಲಾರೆ. ಎಲ್ಲ ಸಿನಿಮಾಗಳು ಒಂದೆ. ಅದೊಂದು ಮ್ಯಾಜಿಕ್ ರೀತಿ ಇರುತ್ತೆ ಯಾವ ಸಿನಿಮಾ ಬೇಕಾದರೂ ಗೆಲ್ಲಬಹುದು' ಎಂದರು ಶಿವರಾಜ್ ಕುಮಾರ್.

'ಜನರು ತಮ್ಮ ಸುರಕ್ಷತೆ ನೋಡಿಕೊಂಡು ಥಿಯೇಟರ್ಗೆ ಬರಲಿ'
ಜನರು ತಮ್ಮ ಸುರಕ್ಷತೆ ನೋಡಿಕೊಂಡು ಥಿಯೇಟರ್ ಗೆ ಬರಲಿ. ಚಿತ್ರಮಂದಿರದಲ್ಲಿ ಏನೇ ಸಮಸ್ಯೆ ಇದ್ದರೂ ನೇರವಾಗಿ ಹೇಳಲಿ. ಪ್ರೇಕ್ಷಕರ ಸುರಕ್ಷತೆ ನಮಗೆ ಬಹಳಾ ಮುಖ್ಯ. ಮಾರ್ಗಸೂಚಿ ನೋಡಿಕೊಂಡು ನಿರ್ಮಾಪಕರೇ ಈ ಬಗ್ಗೆ ತೀರ್ಮಾನ ಮಾಡ್ತಾರೆ ಎಂದರು ಶಿವರಾಜ್ ಕುಮಾರ್.
Recommended Video

ಮೈಸೂರಿನ ಮೃಗಾಲಯಕ್ಕೆ ಬಂದಿದ್ದ ಶಿವಣ್ಣ
ಶಿವರಾಜ್ ಕುಮಾರ್ ತಮ್ಮ ಕುಟುಂಬ ಸಮೇತರಾಗಿ ಮೈಸೂರಿನ ಮೃಗಾಲಯಕ್ಕೆ ಬಂದಿದ್ದರು. ತಾವು ದತ್ತು ಪಡೆದಿರುವ ಆನೆ ಪಾರ್ವತಿಗೆ ಆಹಾರ ತಿನ್ನಿಸಿ ಖುಷಿಪಟ್ಟರು. ನೆಚ್ಚಿನ ನಟ ಶಿವರಾಜ್ ಕುಮಾರ್ ಅನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.


Click it and Unblock the Notifications











