ದುಡ್ಡಿದ್ದರೆ ದುನಿಯಾ ಎನ್ನುವುದನ್ನು ಸಾಬೀತು ಮಾಡಿದ ದಾಸ, ಜೈಲಿನಲ್ಲಿ ದರ್ಶನ್ ರಾಜವೈಭೋಗ..!
ಮೂರು ಬಿಟ್ಟವರು ಊರಿಗೆ ದೊಡ್ಡವರು ಅನ್ನುವ ಮಾತು ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ಗೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ ಜನಪ್ರಿಯತೆಯ ಅಮಲಿನಲ್ಲಿ ಮೈ ಮರೆತ ಈ ಕಲಿಯುಗದ ದುರ್ಯೋಧನನಿಗೆ ಮಾನ ಮರ್ಯಾದೆ ಮೊದಲೇ ಇರಲಿಲ್ಲ. ನಾಚಿಕೆಯಂತೂ ದೂರದ ಮಾತು. ಕೊನೆ ಪಕ್ಷ ಪಶ್ಚಾತಾಪವಾದರೂ ಇದೆಯಾ ಅಂದರೆ ಅದು ಇಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಕನ್ನಡ ಚಿತ್ರರಂಗದ ಪೋರ್ಕಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆದ ಈ ಫೋಟೋದಲ್ಲಿ ಕೊಲೆ ಆರೋಪಿಯಾಗಿರುವ ಶ್ರೀಯುತ ದರ್ಶನ್, ತಾನೇನೂ ಮಾಡಿಯೇ ಇಲ್ಲವೆನ್ನುವಂತೆ ನೆಮ್ಮದಿಯಿಂದ ಕುಂತಿದ್ದಾನೆ. ಕೈಯಲ್ಲೊಂದು ಸಿಗರೇಟ್ ಇದೆ. ಮತ್ತೊಂದು ಕೈಯಲ್ಲಿ ಕಾಫಿ ಮಗ್ ಇದೆ.

ಎಲ್ಲಕ್ಕಿಂತ ಹೆಚ್ಚಾಗಿ ಆ ಕಳಾಹೀನ ಮುಖದಲ್ಲಿ ಮುಗುಳು ನಗೆ ಇದೆ. ಒಬ್ಬ ಆರೋಪಿಗೆ ಜೈಲಿನಲ್ಲಿ ಸಕಲ ಸೌಲಭ್ಯ ಸಿಗುತ್ತೆ ಎನ್ನುವುದಕ್ಕೆ ಕೈಗನ್ನಡಿ ಹಿಡಿಯುವಂತೆ ಇರುವ ಈ ಫೋಟೋ ಸದ್ಯಕ್ಕೆ ಅನೇಕರ ಆಕ್ರೋಶವನ್ನೂ ಹೆಚ್ಚಿಸಿದೆ. ಕಟ್ಟಿಕೊಂಡ ಹೆಂಡತಿಯ ಜೊತೆ ಬಾಳ್ವೆ ನಡೆಸೋದನ್ನು ಬಿಟ್ಟು ಮತ್ತೊಬ್ಬಳ ಸಖ್ಯ ಬೆಳೆಸಿ ಜೈಲು ಪಾಲಾದರೂ ಇವನ ಮುಖದಲ್ಲಿ ಕಾಣುತ್ತಿರುವ ಆ ನಗೆ ಹತ್ತಾರು ಅನುಮಾನ ಹುಟ್ಟು ಹಾಕಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನೂ ಕೂಡ ಈ ಭಾವಚಿತ್ರ ಪ್ರಶ್ನೆ ಮಾಡುತ್ತಿದೆ.
ಅಂದ್ಹಾಗೇ ಕನ್ನಡ ಚಿತ್ರರಂಗವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಕುಂತಿರುವ ಈ ನಾಚಿಕೆಗೇಡು ನಾಯಕನ ಅಕ್ಕ ಪಕ್ಕ ಕುಂತಿರುವುದು ಸತ್ಪಜ್ರೆಗಳಲ್ಲ. ಬದಲಿಗೆ ಸತ್ ಪ್ರಜೆಗಳಿಂದ ತಮ್ಮ ಸಾಮ್ರಾಜ್ಯವನ್ನು ಕಟ್ಟಿಕೊಂಡಿರುವ ಭವಿಷ್ಯದ ನಾಯಕರು ಅನ್ನುವುದು ನಿಮಗೆ ಗೊತ್ತಿರಲಿ. ಆ ಪೈಕಿ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಕೂಡ ಒಬ್ಬ ಅನ್ನುವುದು ದರ್ಶನ್ ಎಂಬ ನಕಲಿ ನಾಯಕನ ಅಸಲಿ ಅಭಿಮಾನಿಗಳ ದೌರ್ಭಾಗ್ಯ.

ಸ್ಪೇಷಲ್ ಬ್ಯಾರಕ್ ಹೊರಗೆ ಏನೂ ಆಗಿಯೇ ಇಲ್ಲವೆಂಬಂತೆ ಕುಂತಿರುವ ಸನ್ಮಾನ್ಯ ದರ್ಶನ್ ಜೊತೆ ವಿಲ್ಸನ್ ಗಾರ್ಡನ್ ನಾಗ ಮಾತ್ರ ಅಲ್ಲ, ರೇಣುಕಾ ಸ್ವಾಮಿ ಪ್ರಕರಣದಲ್ಲಿ ಹನ್ನೊಂದನೇ ಆರೋಪಿ ನಾಗರಾಜ್ ಕೂಡ ಇದ್ದಾನೆ. ಅಲ್ಲಿಗೆ ಜೈಲಿನಲ್ಲಿ ಯಾವೆಲ್ಲ ಐಶಾರಾಮಿ ಸೌಲಭ್ಯಗಳು ಇವರಿಗೆ ಸಿಕ್ತಿರಬೇಕು ಅನ್ನುವುದನ್ನೂ ನೀವೇ ಊಹಿಸಿ.
ಉಳಿದಂತೆ ಎರಡು ದಿನಗಳ ಹಿಂದಷ್ಟೇ ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಮೇಲೆ ರೈಡ್ ಮಾಡಿದ್ದರು. ನಟ ದರ್ಶನ್ ಸೇರಿ ವಿವಿಧ ಖೈದಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದ್ದು, ಅಕ್ರಮಗಳು ನಡೆಯುವ ಅನುಮಾನದ ಮೇಲೆ ದಾಳಿ ಮಾಡಲಾಗಿತ್ತು. ಇದೀಗ ಈ ಹೊಚ್ಚ ಹೊಸ ಬೋಳು ತಲೆಯ ದರ್ಶನ್fನ ಈ ಫೋಟೊ ಸಿಸಿಬಿ ಅಧಿಕಾರಿಗಳ ದಾಳಿಯ ಹಿಂದಿನ ಉದ್ದೇಶ ಸ್ಪಷ್ಟಪಡಿಸಿದೆ. ಸದ್ಯ ಈ ಫೋಟೊ ದರ್ಶನ್ ಜಾಮೀನು ಅರ್ಜಿಗೆ ಭಾರಿ ಹಿನ್ನಡೆಯಾಗುವ ಸಾಧ್ಯತೆ ಕೂಡ ಇದೆ. ದರ್ಶನ್ ಪ್ರಭಾವ ಬಳಸಿ ಸಾಕ್ಷಿಗಳ ನಾಶಕ್ಕೆ ಪ್ರಯತ್ನಿಸುವ ವಾದವನ್ನು ಕೂಡ ಪೊಲೀಸರು ಮಾಡಬಹುದಾಗಿದೆ.
ಏನೇ ಇರಲಿ ಈ ನಾಡಿಗೆ ಇಂಥದ್ದೊಂದು ದುರ್ಗತಿ ಬರಬಾರದಿತ್ತು. ಇಂತಹ ಕ್ರಿಮಿನಲ್ ಮನಸ್ಥಿತಿಯ ಸ್ಟಾರ್ ತೂಗುದೀಪ ಶ್ರೀನಿವಾಸ್ ಎಂಬ ಹೃದಯವಂತನ ಮನೆಯಲ್ಲಿ ಹುಟ್ಟಬಾರದಿತ್ತು ಅನ್ನುವುದು ಸದ್ಯಕ್ಕೆ ವ್ಯಕ್ತವಾಗುತ್ತಿರುವ ಸಾರ್ವತ್ರಿಕ ಅಭಿಪ್ರಾಯ.


Click it and Unblock the Notifications











