ಶಿವಣ್ಣನ ಹೊಸ ಫಾರ್ಮ್ ಹೌಸ್ ಗೃಹಪ್ರವೇಶ ಚಿತ್ರಗಳು; ಎಲ್ಲಿದೆ? ಎಷ್ಟು ಎಕರೆ ಇದೆ?
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ನಟನೆಯ 'ಭೈರತಿ ರಣಗಲ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಪ್ರಚಾರದಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ. ಇನ್ನು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಹೊಸ ಫಾರ್ಮ್ಹೌಸ್ನಲ್ಲಿ ಮನೆ ಕಟ್ಟಿಸಿ ಗೃಹಪ್ರವೇಶ ಮಾಡಿದ್ದಾರೆ.
ಹಬ್ಬದ ಸಂಭ್ರಮದಲ್ಲಿ ಶಿವಣ್ಣ-ಗೀತಾ ದಂಪತಿ ಗಾಜನೂರಿಗೆ ಭೇಟಿ ನೀಡಿದ್ದರು. ಅಣ್ಣಾವ್ರ ಹುಟ್ಟೂರಲ್ಲಿ ಕೆಲ ಸಮಯ ಕಳೆದು ಬಂದಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗುತ್ತಿದೆ. ಅಲ್ಲಿ ನಾಗಮ್ಮ ಅತ್ತೆಯ ಆರೋಗ್ಯ ವಿಚಾರಿಸಿದ್ದರು. ಶಿವಣ್ಣನನ್ನು ಅಪ್ಪಿ ನಾಗತ್ತೆ ಮುತ್ತಿಟ್ಟಿದ್ದು ಅವರು ಆಶೀರ್ವಾದ ಪಡೆದಿದ್ದಾರೆ.

ಅಪ್ಪಾಜಿ ಹುಟ್ಟಿದ ಹಳೇ ಮನೆ ಹಾಗೂ ಮಂಟೇಸ್ವಾಮಿ ದೇವಸ್ಥಾನ ಸೇರಿದಂತೆ ಗಾಜನೂರಿನ ಮೂಲೆ ಮೂಲೆ ಶಿವಣ್ಣ ದಂಪತಿ ಸುತ್ತಾಡಿದ್ದಾರೆ. ಅಲ್ಲಿ ಅಭಿಮಾನಿಯೊಬ್ಬರ ಕ್ಷೀರ ಕೇಂದ್ರಕ್ಕೂ ಭೇಟಿ ನೀಡಿದ್ದರು. ಸಾಕಷ್ಟು ಜನ ಅಭಿಮಾನಿಗಳು ಬಂದು ನೆಚ್ಚಿನ ನಟನ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ಇನ್ನು ದೀಪಾವಳಿ ಸಂಭ್ರಮದಲ್ಲಿ ಸೆಂಚುರಿ ಸ್ಟಾರ್ ಕನಕಪುರ ಬಳಿ ಫಾರ್ಮ್ಹೌಸ್ನಲ್ಲಿ ಮನೆ ಕಟ್ಟಿಸಿ ಗೃಹಪ್ರವೇಶ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೆಲ ತಿಂಗಳಹಿಂದೆ ಕನಕಪುರದ ಮರಳವಾಡಿ ಸಮೀಪ ಶಿವಣ್ಣ ಐದೂವರೆ ಎಕರೆ ಜಾಗ ಖರೀದಿಸಿದ್ದರು. ಅಲ್ಲಿ 10 ಸಾವಿರ ಚದರ ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿದ್ದಾರೆ.
ಲೋಕಸಭೆ ಚುನಾವಣೆ ಸಮಯದಲ್ಲಿ ಗೀತಾ ಶಿವರಾಜ್ಕುಮಾರ್ ನಾಮಪತ್ರ ಸಲ್ಲಿಸುವ ವೇಳೆ ಅಫಿಡವಿಟ್ ಸಲ್ಲಿಸಿದ್ದರು. ಆಗ ಕನಕಪುರ ಬಳಿ ದಂಪತಿ ಹೆಸರಿನಲ್ಲಿ ಕೃಷಿಭೂಮಿ ಇರುವುದಾಗಿ ಮಾಹಿತಿ ನೀಡಿದ್ದರು. ಅದರ ಬೆಲೆ 3 ಕೋಟಿ ರೂ. ಎಂದು ತಿಳಿಸಿದ್ದರು. ಈಗ ಅದೇ ಜಾಗದಲ್ಲಿ ಮನೆ ನಿರ್ಮಿಸಿ ಗೃಹಪ್ರವೇಶ ಮಾಡಿರುವುದು ಗೊತ್ತಾಗುತ್ತಿದೆ.
ಹಬ್ಬದ ಸಂಭ್ರಮದಲ್ಲೇ ಗೃಹಪ್ರವೇಶ ಮಾಡಿ ಸತ್ಯನಾರಾಯಣ ಪೂಜೆ ನೆರವೇರಿಸಿದ್ದಾರೆ. ಸ್ನೇಹಿತರು, ಸಂಬಂಧಿಕರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಶಿವಣ್ಣ- ದಂಪತಿ ಗೋಮಾತೆ ಸಮೇತ ಹೊಸ ಮನೆಗೆ ಅಡಿ ಇಟ್ಟಿದ್ದಾರೆ. ಬಿಡುವಿನ ಸಮಯದಲ್ಲಿ ಫ್ಯಾಮಿಲಿ ಸಮೇತ ಈ ಫಾರ್ಮ್ಹೌಸ್ನಲ್ಲಿ ಕಳೆಯಲು ಶಿವಣ್ಣ ನಿರ್ಧರಿಸಿದ್ದಾರೆ. ಮಾವಿನ ಗಿಡಗಳು ಸೇರಿದಂತೆ ಒಂದಷ್ಟು ಮರ, ಗಿಡಗಳು ಆ ಫಾರ್ಮ್ಹೌಸ್ನಲ್ಲಿದೆ. ಹೊಸದಾಗಿ ಮತ್ತಷ್ಟು ಗಿಡಗಳನ್ನು ನೆಟ್ಟು ಬೆಳೆಸಲು ತೀರ್ಮಾನಿಸಿದ್ದಾರೆ.

'ಭೈರತಿ ರಣಗಲ್' ಸಿನಿಮಾ ನವೆಂಬರ್ 15ಕ್ಕೆ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ನಾಳೆ (ನವೆಂಬರ್ 5) ಟ್ರೈಲರ್ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. ನರ್ತನ್ ನಿರ್ದೇಶನದ ಚಿತ್ರವನ್ನು ತಮ್ಮದೇ ಬ್ಯಾನರ್ನಲ್ಲಿ ಶಿವಣ್ಣ ನಿರ್ಮಾಣ ಮಾಡಿದ್ದಾರೆ. ಸೂಪರ್ ಹಿಟ್ 'ಮಫ್ತಿ' ಚಿತ್ರದ ಪ್ರೀಕ್ವೆಲ್ ಇದು.
'ಮಫ್ತಿ' ಚಿತ್ರದಲ್ಲಿ ಮಾಫಿಯಾ ಡಾನ್ ರಣಗಲ್ ಆಗಿ ಶಿವಣ್ಣ ಅಬ್ಬರಿಸಿದ್ದರು. ಅಷ್ಟಕ್ಕೂ ಆತ ಯಾರು? ಹಿನ್ನಲೆ ಏನು? ಎನ್ನುವ ಕೋನದಲ್ಲಿ 'ಭೈರತಿ ರಣಗಲ್' ಚಿತ್ರದ ಕಥೆ ಸಾಗಲಿದೆ. ವಕೀಲನಾಗಿದ್ದ ರಣಗಲ್ ಯಾಕೆ ಡಾನ್ ಆದ ಎನ್ನುವುದನ್ನು ತೆರೆಮೇಲೆ ನೋಡಬೇಕಿದೆ. ರುಕ್ಮಿಣಿ ವಸಂತ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. 'ಭೈರತಿ ರಣಗಲ್' ಬಳಿಕ ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಬಿಡುಗಡೆ ಆಗಲಿದೆ. ಈ ಮಲ್ಟಿಸ್ಟಾರರ್ ಚಿತ್ರದಲ್ಲಿ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕೂಡ ಬಣ್ಣ ಹಚ್ಚಿದ್ದಾರೆ. ಧನಂಜಯ್ ಜೊತೆ 'ಉತ್ತರಕಾಂಡ' ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಕಾರಣಾಂತರಗಳಿಂದ ಈ ಸಿನಿಮಾ ಚಿತ್ರೀಕರಣ ಅರ್ಧಕ್ಕೆ ನಿಂತಿದೆ.
ತಮಿಳು ಚಿತ್ರಗಳಲ್ಲಿ ನಟಿಸಲು ಶಿವಣ್ಣ ಆಸಕ್ತಿ ತೋರಿಸುತ್ತಿದ್ದಾರೆ. ಯೋಗಿ ಬಾಬು ಜೊತೆ ಒಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೇಮಂತ್ ರಾವ್ ನಿರ್ದೇಶನದ 'ಭೈರವನ ಕೊನೆಪಾಠ' ಸಿನಿಮಾ ಕೂಡ ಕುತೂಹಲ ಮೂಡಿಸಿದೆ. ತೆಲುಗಿನಲ್ಲಿ ರಾಮ್ಚರಣ್ ನಟನೆಯ ಚಿತ್ರದಲ್ಲಿ ಕೂಡ ಒಂದು ಮುಖ್ಯವಾದ ಪಾತ್ರವನ್ನು ಶಿವಣ್ಣ ಮಾಡಲಿದ್ದಾರೆ.


Click it and Unblock the Notifications











