ಅಪ್ಪು ಬ್ಯಾನರ್ ಕಿತ್ತು, ತುಳಿದಿದ್ದ ದುಷ್ಟರ ಬಂಧನ
ಕನ್ನಡ ಸಿನಿಮಾ ಪ್ರೇಮಿಗಳಿಗೆ ಪುನೀತ್ ರಾಜ್ಕುಮಾರ್ ದೇವರ ಸಮಾನ. ಎಷ್ಟೋ ಮನೆಗಳಲ್ಲಿ ದೇವರ ಮನೆಯಲ್ಲಿ ಪುನೀತ್ ರಾಜ್ಕುಮಾರ್ ಫೋಟೊ ಇಟ್ಟು ಪೂಜೆ ಮಾಡಲಾಗುತ್ತಿದೆ. ಆ ಪರಿಯ ಪ್ರೀತಿ, ಗೌರವ, ಅಭಿಮಾನ ಅಪ್ಪು ಬಗ್ಗೆ.
ಇಡೀ ರಾಜ್ಯದಾದ್ಯಂತ ಎಲ್ಲಿ ನೋಡಿದರೂ ಪುನೀತ್ ರಾಜ್ಕುಮಾರ್ ಬ್ಯಾನರ್ಗಳು ರಾರಾಜಿಸುತ್ತಿವೆ. ಅಪ್ಪುವನ್ನು ಜನರು ಅದೆಷ್ಟು ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು ಎಂಬುದಕ್ಕೆ ಅಡಿಗಡಿಗೆ ಸಿಕ್ಕುವ ಆ ಬ್ಯಾನರ್ಗಳು ಸಾಕ್ಷಿ.
ಆದರೆ ಬೆಂಗಳೂರಿನ ಏರಿಯಾ ಒಂದರಲ್ಲಿ ನಿನ್ನೆ ಕೆಲ ಕಿಡಿಗೇಡಿಗಳು ಪುನೀತ್ ರಾಜ್ಕುಮಾರ್ ಅವರ ಬ್ಯಾನರ್ ಕಿತ್ತು ಅದನ್ನು ಹರಿದು ದುಷ್ಟತನ ಮೆರೆದಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ದುಷ್ಟರನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಪೇಟೆ ಸರ್ಕಲ್ ಬಳಿ ವರಲಕ್ಷ್ಮಿ ಸಿಲ್ಕ್ ಸ್ಯಾರೀಸ್ ಬಳಿ ಹಾಕಲಾಗಿದ್ದ ದೊಡ್ಡ ಪುನೀತ್ ರಾಜ್ಕುಮಾರ್ ಬ್ಯಾನರ್ ಅನ್ನು ಕೆಲವು ಕಿಡಿಗೇಡಿಗಳು ಹರಿದು ಅದನ್ನು ಕಾಲಿನಲ್ಲಿ ತುಳಿದಿದ್ದಾರೆ. ದುಷ್ಟರ ಈ ದುಷ್ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೂಡಲೇ ಅಪ್ಪು ಅಭಿಮಾನಿಗಳು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪೊಲೀಸರಿಗೆ ಮಾಹಿತಿಯನ್ನು ತಲುಪಿಸಿ, ದುಷ್ಕೃತ್ಯ ಎಸಗಿದವರನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಸಿಟಿ ಮಾರ್ಕೆಟ್ ಪೊಲೀಸರು ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿ, ಸ್ಥಳೀಯರ ನೆರವಿನೊಂದಿಗೆ ಕುಳ್ಳ ಅಲಿಯಾಸ್ ರೇಣುಕಾ ಪ್ರಸನ್ನ, ತಲೆ ಮಂಜ, ಅಭಿ, ಶಂಕರ್ ಅಲಿಯಾಸ್ ಲಾಲ್ ಎಂಬುವರನ್ನು ಬಂಧಿಸಿದ್ದಾರೆ.


Click it and Unblock the Notifications











