ಸಂಜನಾ-ರಾಗಿಣಿ ಗೆ ಜಾಮೀನು ನೀಡುವಂತೆ ಬೆದರಿಕೆ ಪತ್ರ ಬರೆದವನ ಬಂಧನ
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿಗೆ ಜಾಮೀನು ನೀಡಬೇಕು ಇಲ್ಲದಿದ್ದರೆ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಬೆದರಿಕೆ ಪತ್ರ ಬರೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಟಿ ರಾಗಿಣಿ-ಸಂಜನಾ ಅಮಾಯಕರು ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ನಿಮ್ಮ ಕಾರಿನ ಇಂಜಿನ್ನಲ್ಲಿ ಬಾಂಬ್ ಇಟ್ಟು ಸ್ಟೋಟಿಸುತ್ತೇನೆ ಎಂದು ತುಮಕೂರಿನಿಂದ ವ್ಯಕ್ತಿಯೊಬ್ಬ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರಿಗೆ ಪತ್ರ ಬರೆದಿದ್ದ. ಅದೇ ರೀತಿಯ ಪತ್ರವನ್ನು ಪೊಲೀಸ್ ಕಮೀಷನರ್ ಕಚೇರಿಗೂ ಬರೆದಿದ್ದು.
ಬೆದರಿಕೆ ಪತ್ರದಲ್ಲಿ ಬಾಂಬ್ ಸ್ಪೋಟಿಸಲು ಬಳಸುವ ಡೆಟೊನೇಟರ್ಗಳು ಮತ್ತು ಕೇಬಲ ಇತ್ತು. ನಟಿಯರಿಗೆ ಮಾತ್ರವಲ್ಲದೆ, ಡಿಜೆ ಹಳ್ಳಿ ಗಲಭೆ ಆರೋಪಿಗಳಿಗೂ ಜಾಮೀನು ನೀಡಬೇಕೆಂದು ಆ ವ್ಯಕ್ತಿ ಪತ್ರದಲ್ಲಿ ಉಲ್ಲೇಖಿಸಿದ್ದ. ಪತ್ರ ಬರೆದಿದ್ದ ವ್ಯಕ್ತಿ ರಾಜಶೇಖರ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ತುಮಕೂರು ಜಿಲ್ಲೆ ತಿಪಟೂರಿಗೆ ಲಿಂಗದಹಳ್ಳಿಯ ವಾಸಿ
ತುಮಕೂರಿನ ತಿಪಟೂರಿನ ಲಿಂಗದಹಳ್ಳಿಯ ರಾಜಶೇಖರ್ ಎಂಬಾತ ಆತನ ಸಂಬಂಧಿಗಳಾದ ರಮೇಶ್ ಹಾಗೂ ಆತನ ತಮ್ಮನ ಹೆಸರಿನಲ್ಲಿ ಈ ಪತ್ರಗಳನ್ನು ಬರೆದಿದ್ದ. ರಮೇಶ್ ಹಾಗೂ ಆತನ ತಮ್ಮನನ್ನು ಬಂಧಿಸಿದಾಗ ರಾಜಶೇಖರ್ ಸಿಕ್ಕಿಬಿದ್ದಿದ್ದಾನೆ.

ಬೆದರಿಕೆ ಪತ್ರದಲ್ಲಿ ಗುರುತಿನ ಚೀಟಿ ಇತ್ತು
ನ್ಯಾಯಾಲಯಕ್ಕೆ ಬಂದಿದ್ದ ಬಾಂಬ್ ಬೆದರಿಕೆ ಪತ್ರದಲ್ಲಿ ರಮೇಶ್ ಹಾಗೂ ಆತನ ತಮ್ಮನ ಗುರುತಿನ ಚೀಟಿ ಇತ್ತು, ಗುರುತಿನ ಚೀಟಿಯ ಜಾಡು ಹಿಡಿದು ಹೋದಾಗ ರಮೇಶ್ ಸಿಕ್ಕಿಬಿದ್ದಿದ್ದಾರೆ. ಆತನ ವಿಚಾರಣೆ ನಡೆಸಿದಾಗ ಆ ಕೃತ್ಯ ಆತನ ಸಂಬಂಧಿ ರಾಜಶೇಖರ್ ಮಾಡಿರುವುದು ಎಂಬುದು ಗೊತ್ತಾಗಿದೆ.

ಆಸ್ತಿ ಕಬಳಿಸುವ ಆಸೆಯಿಂದ ಕೃತ್ಯ
ಆಸ್ತಿ ಕಬಳಿಸುವ ಆಸೆಯಿಂದ ರಾಜಶೇಖರ್ ಈ ಕೃತ್ಯ ಎಸಗಿದ್ದಾನೆ. ಮಾವನ ಆಸ್ತಿ ಕಬಳಿಸಲು ಅಡ್ಡಿಯಾಗಿರುವ ರಮೇಶ್ ನನ್ನು ಜೈಲಿಗೆ ಕಳುಹಿಸಿದರೆ ನನಗೆ ಆಸ್ತಿ ಲಭಿಸುತ್ತದೆ ಎಂಬ ದುರಾಲೋಚನೆಯಿಂದ ರಮೇಶ್ ಹೆಸರಲ್ಲಿ ಬೆದರಿಕೆ ಪತ್ರ ಬರೆದಿದ್ದಾನೆ ರಾಜಶೇಖರ್.
Recommended Video

ಪತ್ನಿಯ ತಂಗಿಯ ಪತಿ ರಮೇಶ್
ರಾಜಶೇಖರ್ ಮಾವನಿಗೆ ಕೋಟ್ಯಂತರ ಆಸ್ತಿಯಿದ್ದು, ರಾಜಶೇಖರ್ ಪತ್ನಿಯ ತಂಗಿಯನ್ನು ರಮೇಶ್ ಮದುವೆಯಾಗಿದ್ದಾನೆ. ಪತ್ನಿಯ ತಂಗಿಯನ್ನು ರಾಜಶೇಖರ್ ಮದುವೆಯಾಗಿ ಎಲ್ಲಾ ಆಸ್ತಿಯನ್ನು ತಾನೇ ಹೊಡೆಯುವ ಪ್ಲಾನ್ ಮಾಡಿದ್ದ ಆದರೆ ಅದು ಸಾಧ್ಯವಾಗಲಿಲ್ಲ, ಹಾಗಾಗಿ ರಮೇಶ್ನನ್ನು ಜೈಲಿಗೆ ಕಳುಹಿಸಿ ಆಸ್ತಿ ಹೊಡೆಯುವ ಯೋಜನೆ ರೂಪಿಸಿದ್ದ, ಆದರೆ ಸಿಕ್ಕಿಹಾಕಿಕೊಂಡ.


Click it and Unblock the Notifications











