ದರ್ಶನ್ ಮನೆ ಮುಂದೆ ಅತಿಯಾಗಿ ವರ್ತಿಸಿದ ಅಭಿಮಾನಿ ಕೆನ್ನೆಗೆ ಬಾರಿಸಿದ ಪೊಲೀಸ್ ಅಧಿಕಾರಿ
ನಟ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭ ಕೋರುತ್ತಿದ್ದಾರೆ. ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಪ್ರತಿವರ್ಷ ಅವರ ಹುಟ್ಟುಹಬ್ಬದ ದಿನ ಆರ್ಆರ್ ನಗರದ ಮನೆ ಮುಂದೆ ಇದ್ದ ಸಂಭ್ರಮ ಈ ಬಾರಿ ಇಲ್ಲ. ಆದರೂ ಕೆಲ ಅಭಿಮಾನಿಗಳು ದರ್ಶನ್ ನಿವಾಸದ ಬಳಿ ನೆರೆದಿದ್ದಾರೆ. ನೆಚ್ಚಿನ ನಟನಿಗೆ ಜೈಕಾರ ಹಾಕಿದ್ದಾರೆ.
ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸ್ ಭದ್ರತೆ ಕೂಡ ಒದಗಿಸಲಾಗಿದೆ. ಈ ವೇಳೆ ಹುಚ್ಚಾಟ ಮೆರೆದ ಅಭಿಮಾನಿ ಒಬ್ಬನಿಗೆ ಪೊಲೀಸ್ ಅಧಿಕಾರಿ ಕಪಾಳಮೋಕ್ಷ ಮಾಡಿರುವ ಘಟನೆ ಕೂಡ ನಡೆದಿದೆ. ದರ್ಶನ್ ಮನೆಯಲ್ಲಿ ಕೊಂಚ ದೂರದಲ್ಲೇ ಬ್ಯಾರಿಕೇಡ್ ಆಗಿ ಅಭಿಮಾನಿಗಳನ್ನು ಪೊಲೀಸರು ನಿಯಂತ್ರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ದರ್ಶನ್ ಮನೆ ಬಳಿ ಹೋಗಲೇಬೇಕು ಎಂದು ಕೆಲ ಅಭಿಮಾನಿಗಳು ಹುಚ್ಚಾಟ ಮೆರೆದಿದ್ದಾರೆ.

ಅತಿಯಾಗಿ ವರ್ತಿಸಿದ ಅಭಿಮಾನಿಯೊಬ್ಬನ ಕೆನ್ನೆಗೆ ಪೊಲೀಸ್ ಅಧಿಕಾರಿ ಹೊಡೆದಿದ್ದಾರೆ. ಆದರೂ ಮಾತು ಕೇಳದೇ ಪೊಲೀಸರ ಮೇಲೆ ಆತ ಕೂಗಾಡಿರುವುದು ಕಂಡುಬಂದಿದೆ. ಅಭಿಮಾನಿ ಕುಡಿದು ಬಂದು ಹೀಗೆ ವರ್ತಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನೆಗೆ ಸಂಬಂಧಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇಂದು ನಟ ದರ್ಶನ್ಗೆ (ಫೆಬ್ರವರಿ 16) 49ನೇ ವರ್ಷದ ಹುಟ್ಟುಹಬ್ಬ. ಈ ಸಮಯದಲ್ಲಿ ಅಭಿಮಾನಿಗಳು ನೆಚ್ಚಿನ ನಟನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪತಿಯ ಹುಟ್ಟುಹಬ್ಬದ ಹಿನ್ನೆಲೆ ವಿಜಯಲಕ್ಷ್ಮಿ ದರ್ಶನ್ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಧನ್ವೀರ್ ನಟನೆಯ 'ಹಯಗ್ರೀವ' ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.
ದರ್ಶನ್ ಜೈಲಿನಲ್ಲಿ ಇದ್ದರೂ ಸಹೋದರ ದಿನಕರ್ ತೂಗುದೀಪ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಹಿಂದೆ ದರ್ಶನ್ ನಟಿಸಿದ್ದ ನವಗ್ರಹ ಹಾಗೂ ಸಾರಥಿ ಚಿತ್ರಗಳನ್ನು ದಿನಕರ್ ಕಟ್ಟಿಕೊಟ್ಟಿದ್ದರು. ಇದು ಇವರಿಬ್ಬರ 3ನೇ ಕಾಂಬಿನೇಷನ್ ಸಿನಿಮಾ ಎನ್ನುವುದು ವಿಶೇಷ. ರಮೇಶ್ ಪಿ ಪಿಳೈ ಚಿತ್ರ ನಿರ್ಮಾಣ ಮಾಡಲಿದ್ದಾರೆ. ಕೊನೆಯದಾಗಿ 'ರಾಯಲ್' ಚಿತ್ರವನ್ನು ದಿನಕರ್ ನಿರ್ದೇಶನ ಮಾಡಿದ್ದರು.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದ ಜೈಲು ಸಿಬ್ಬಂದಿಗೂ ದರ್ಶನ್ಗೆ ಶುಭಾಶಯ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಮಧ್ಯರಾತ್ರಿ 1 ಗಂಟೆವರೆಗೂ ನಿದ್ದೆ ಮಾಡದೇ ಯೋಚನೆ ಮಾಡುತ್ತಾ ದರ್ಶನ್ ಎದ್ದಿದ್ದರು. ಏಕಾಂಗಿ ಆಗಿ ಒಬ್ಬರೇ ಕೂತು ಚಿಂತಾಕ್ರಾಂತರಾಗಿದ್ದರು ಎಂದು ಟಿವಿ9 ಕನ್ನಡ ವಾಹಿನಿ ವರದಿ ಮಾಡಿದೆ.
ಪ್ರತಿವರ್ಷ ಪತ್ನಿ, ಮಗ ಹಾಗೂ ಆಪ್ತರ ಜೊತೆ ಕೇಕ್ ಕತ್ತರಿಸಿ ದರ್ಶನ್ ಹುಟ್ಟುಹಬ್ಬ ಆಚರಿಸುತ್ತಿದ್ದರು. ಕಳೆದ ವರ್ಷ ಕೂಡ ಕೆಲವೇ ಆಪ್ತರ ಸಮ್ಮುಖದಲ್ಲಿ ಸಂಭ್ರಮಿಸಿದ್ದರು. ಆದರೆ ಈ ವರ್ಷ ಅದಕ್ಕೆ ಅವಕಾಶ ಸಿಕ್ಕಿಲ್ಲ. ಈ ಬಾರಿ ಮಾತ್ರ ಕ್ವಾರಂಟೈನ್ ಜೈಲ್ ಬ್ಯಾರಕ್ನಲ್ಲಿ ಕಾಲ ಕಳೆಯುವಂತಾಗಿದೆ.
ದರ್ಶನ್ ಹುಟ್ಟುಹಬ್ಬದ ಕಾಮನ್ ಸಿಡಿಪಿ ವೈರಲ್ ಆಗ್ತಿದೆ. ಸಮಾಜ ಸೇವೆಗೆ ನೆಚ್ಚಿನ ನಟನ ಜೊತೆ ಅಭಿಮಾನಿಗಳು ಕೈಜೋಡಿಸಿರುವಂತೆ ಡಿಪಿ ಸಿದ್ಧಪಡಿಸಲಾಗಿದೆ. ರೇಣುಕಾಸ್ವಾಮಿ ಪ್ರಕರಣದ ಟ್ರಯಲ್ ಶುರುವಾಗಿದೆ. ಸಾಕ್ಷಿಗಳ ವಿಚಾರಣೆ ಆರಂಭವಾಗಿದೆ. ಆದರೆ ಸದ್ಯಕ್ಕೆ ದರ್ಶನ್ ಸೇರಿ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಗುವ ಸುಳಿವು ಸಿಕ್ತಿಲ್ಲ.
ಇನ್ನು ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಕರಿಯ' ಸಿನಿಮಾ ರೀ-ರಿಲೀಸ್ ಆಗಿದೆ. ಕಳೆದೆರಡು ದಿನಗಳಿಂದ ಆಯ್ದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇನ್ನು ಎರಡು ತಿಂಗಳು ಕಳೆದ 'ಡೆವಿಲ್' ಸಿನಿಮಾ ಓಟಿಟಿಗೆ ಬಂದಿಲ್ಲ. ದರ್ಶನ್ ಹುಟ್ಟುಹಬ್ಬಕ್ಕೆ ಸ್ಟ್ರೀಮಿಂಗ್ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಭಿಮಾನಿಗಳಿಗೆ ನಿರಾಸೆಯಾಗಿದೆ.


Click it and Unblock the Notifications











