ಯೋಗರಾಜ್ ಭಟ್ ಗೆ ರಾಜಕೀಯ ಪಕ್ಷಗಳ ಕಾಟ: ಇದೊಂಥರಾ ಹಿಂಸೆ ಎಂದ ಭಟ್ಟರು
ಸಾಮಾಜಿಕ ಜಾಲತಾಣ ಕಾಲದಲ್ಲಿ ಮಿಥ್ಯೆ-ಸತ್ಯಗಳ ನಡುವಣ ಗೆರೆ ತೆಳುವಾಗಿಬಿಟ್ಟಿದೆ. ಸುಳ್ಳನ್ನು ಸತ್ಯಗಳಂತೆ ಬಿಂಬಿಸಲಾಗುತ್ತಿದೆ. ಸುಳ್ಳನ್ನು ಸತ್ಯ ಮಾಡಲು ಸೆಲೆಬ್ರಿಟಿಗಳ ಚಿತ್ರಗಳು, ಹೇಳಿಕೆಗಳನ್ನು ತಿರುಚಿ ಬಳಸಲಾಗುತ್ತಿದೆ.
Recommended Video
ನಿರ್ದೇಶಕ ಯೋಗರಾಜ್ ಭಟ್ ಅವರು ರಾಜಕೀಯವಾಗಿ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಕವನದ ಮೂಲಕ ರಾಜಕೀಯವನ್ನು ಒಟ್ಟಾರೆಯಾಗಿ ವಿಡಂಬಿಸುವ ಅವರು ರಾಜಕೀಯದಿಂದ ಮೊದಲಿನಿಂದಲೂ ಅಂತರ ಕಾಯ್ದುಕೊಂಡಿದ್ದಾರೆ.
ಆದರೆ ಇತ್ತೀಚೆಗೆ ಅವರೇ ಬರೆದ ಸಾಲುಗಳನ್ನು ಅವರ ಚಿತ್ರದೊಂದಿಗೆ ಬಳಸಿ ಯೋಗರಾಜ್ ಭಟ್ ಅವರು ಒಂದು ರಾಜಕೀಯ ಪಕ್ಷವನ್ನು ಬೆಂಬಲಿಸಿ, ಮತ್ತೊಂದು ರಾಜಕೀಯ ಪಕ್ಷವನ್ನು ವಿರೋಧಿಸಿ ಎಂದು ಮನವಿ ಮಾಡಿದ್ದಾರೆಂಬ ಅರ್ಥ ಹೊಮ್ಮುವಂತೆ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿದೆ. ಇದರ ಬಗ್ಗೆ ಸ್ವತಃ ಭಟ್ಟರು ಸ್ಪಷ್ಟನೆ ನೀಡಿದ್ದಾರೆ.

'ಫೊಟೊ ಮೇಲೆ ಸಾಲುಗಳನ್ನು ಬರೆದು ಹಂಚಿಕೊಳ್ಳುತ್ತಿದ್ದಾರೆ'
ಇಂದು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಭಟ್ಟರು, 'ಇತ್ತೀಚೆಗೆ ನನ್ನ ಫೋಟೋವೊಂದರ ಮೇಲೆ ಕೆಲವೊಂದು ಸಾಲುಗಳನ್ನು ಬರೆದು, ಯಾವುದೋ ಒಂದು ಪಕ್ಷಕ್ಕೆ ಬೆಂಬಲ ನೀಡಿ, ಮತ್ಯಾವುದೋ ಪಕ್ಷಕ್ಕೆ ಬೆಂಬಲ ನೀಡಬೇಡಿ ಎಂದು ಸ್ವತಃ ನಾನೇ ಜನರಲ್ಲಿ ವಿನಂತಿ ಮಾಡುತ್ತಿರುವಂತೆ ಬಿಂಬಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ'.

ಅರ್ಥವಾಗುವುದು ಸಿನಿಮಾ ಭಾಷೆ ಮಾತ್ರ: ಯೋಗರಾಜ್ ಭಟ್
ನನಗೆ ಅರ್ಥವಾಗುವುದು ಸಿನಿಮಾದ ಭಾಷೆ ಮಾತ್ರ, ರಾಜಕೀಯಕ್ಕೆ ಸಂಬಂಧಪಟ್ಟ ಯಾವ ಎಡ ಬಲ ಸಿದ್ಧಾಂತಗಳೂ ನನಗೆ ತಿಳಿದಿಲ್ಲ. ಹಾಗಾಗಿ ನನ್ನ ಎಲ್ಲಾ ಗೆಳೆಯ/ಗೆಳತಿಯರು ಈ ರೀತಿಯ ಯಾವುದೇ ವೈಪರೀತ್ಯಗಳಲ್ಲಿ ನನ್ನ ಫೋಟೋ ಕಂಡುಬಂದಲ್ಲಿ ಅದನ್ನು ನಿರ್ಲಕ್ಷಿಸಬೇಕಾಗಿ ವಿನಂತಿ ಎಂದು ಮನವಿ ಮಾಡಿದ್ದಾರೆ ಯೋಗರಾಜ್ ಭಟ್.

ರಾಜಕಾರಣದ ಆರಾಧಕ ಅಲ್ಲ: ಯೋಗರಾಜ್ ಭಟ್
ಚುಟುಕು ಭಿನ್ನವತ್ತಳೆಯನ್ನೂ ಬರೆದಿರುವ ಭಟ್ಟರು, 'ನಾನು ಯಾವುದೇ ಬಗೆಯ ರಾಜಕಾರಣದ ಆರಾಧಕ ಅಲ್ಲ, ಎಡ-ಬಲ, ಮೇಲೆ-ಕೆಳಗೆ, ಜಾತಿ-ಪಾತಿಗಳಿಗೆ ನಾನು ಸೇರಿಲ್ಲ. ನನ್ನ ಕೆಲವು ಗಾದೆ ರೀತಿಯ ಸಾಲುಗಳು, ಕವನದ ಸಾಲುಗಳನ್ನು ಕೆಲವು ರಾಜಕೀಯ ಪಕ್ಷಗಳು ಸುಮ್ಮನೆ ಬಳಸಿಕೊಳ್ಳುತ್ತಿವೆ'.

ಓದುಗರಲ್ಲಿ ಭಟ್ಟರ ಮನವಿ
'ಅದೊಂಥರಾ ಹಿಂಸೆ, ಆದ್ದರಿಂದ ಓದುಗರು, ನೋಡುಗರು ನನ್ನನ್ನು ಯಾವುದೇ ಪಕ್ಷಕ್ಕೂ ಜೋಡಿಸದೆ, ಸೇರಿಸದೆ, ನನ್ನ ರಾಜಕೀಯ ನಿರ್ಲಿಪ್ತತೆಯನ್ನು ಕಾಪಾಡಬೇಕಾಗಿ ಪ್ರಾರ್ಥನೆ' ಎಂದು ಮನವಿ ಮಾಡಿದ್ದಾರೆ ಯೋಗರಾಜ್ ಭಟ್.

'ಬೆಂಬಲ ನಿಖಿಲ್ ಕುಮಾರಸ್ವಾಮಿಗೊ, ಸುಮಲತಾ ಅಂಬರೀಶ್ ಅವರಿಗೋ?'
ಎಲ್ಲ ಪಕ್ಷದ ರಾಜಕೀಯ ವ್ಯಕ್ತಿಗಳೊಂದಿಗೆ ಪರಿಚಯ ಹೊಂದಿರುವ ಭಟ್ಟರು ರಾಜಕೀಯವಾಗಿ ಎಲ್ಲಾ ಪಕ್ಷಗಳಿಂದಲೂ ದೂರವೇ ಉಳಿದಿದ್ದಾರೆ. ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಪತ್ರಕರ್ತರೊಬ್ಬರು, 'ನಿಮ್ಮ ಬೆಂಬಲ ನಿಖಿಲ್ ಕುಮಾರಸ್ವಾಮಿಗೋ, ಸುಮಲತಾ ಅಂಬರೀಶ್ ಅವರಿಗೋ?' ಎಂದಾಗ 'ನಾನು ಇಬ್ಬರ ಮನೆಯಲ್ಲಿಯೂ ಊಟ ತಿಂದಿದ್ದೇನೆ' ಎಂದಿದ್ದರು ಭಟ್ಟರು.


Click it and Unblock the Notifications











