ಮಗನ ಸಿನಿಮಾ ಬಗ್ಗೆ ಅಪ್ಡೇಟ್ ಕೊಟ್ಟ ಜನಾರ್ದನ ರೆಡ್ಡಿ, ಯಾವಾಗ ಬಿಡುಗಡೆ?
ರಾಜಕಾರಣಿಗಳ ಮಕ್ಕಳು ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಳ್ಳುವುದು ತೀರ ಸಾಮಾನ್ಯ ಎಂಬಂತಾಗಿದೆ. ಈಗಾಗಲೇ ಹಲವು ರಾಜಕಾರಣಿಗಳ ಮಕ್ಕಳು ಸಿನಿಮಾ ಕ್ಷೇತ್ರದಲ್ಲಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಗಾಲಿ ಜನಾರ್ದನ ರೆಡ್ಡಿಯ ಪುತ್ರ ಕಿರೀಟಿ.
ಗಾಲಿ ಜನಾರ್ದನ ರೆಡ್ಡಿ ಪುತ್ರನ ಹೊಸ ಸಿನಿಮಾ 'ಜೂನಿಯರ್' ಸೆಟ್ಟೇರಿ ಕೆಲವು ತಿಂಗಳುಗಳೇ ಆಗಿದೆ. ಭಾರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಿನಿಮಾದ ಕೆಲವು ಮೇಕಿಂಗ್ ವಿಡಿಯೋಗಳು ಭಾರಿ ಸದ್ದು ಮಾಡಿದ್ದವು.
ಕೆಲವು ದಿನಗಳಿಂದಲೂ 'ಜೂನಿಯರ್' ಸಿನಿಮಾದ ಬಗ್ಗೆ ಸುದ್ದಿ ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಸ್ವತಃ ಜನಾರ್ದನ ರೆಡ್ಡಿಯವರು ತಮ್ಮ ಪುತ್ರನ ಸಿನಿಮಾ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
ಇಂದು ಡಿಸೆಂಬರ್ 19 ರಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಜನಾರ್ದನ ರೆಡ್ಡಿ ಮಾಧ್ಯಮಗಳೊಟ್ಟಿಗೆ ಮಾತನಾಡಿದರು. ರಾಜಕೀಯ ವಿಷಯಗಳ ಬಗ್ಗೆ ಡಿಸೆಂಬರ್ 25 ರಂದು ವಿವರವಾಗಿ ಮಾತನಾಡುವುದಾಗಿ ಹೇಳಿದ ಜನಾರ್ದನ ರೆಡ್ಡಿ ಮಗನ ಸಿನಿಮಾ ವಿಷಯವಾಗಿ ಕೆಲವು ಅಪ್ಡೇಟ್ಗಳನ್ನು ನೀಡಿದರು.

ಮಗನ ಸಿನಿಮಾ ಬಗ್ಗೆ ಅಪ್ಡೇಟ್
''ಕಿರೀಟಿಯ 'ಜೂನಿಯರ್' ಸಿನಿಮಾದ 80% ಚಿತ್ರೀಕರಣ ಮುಗಿದಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಕೆಲವು ದೃಶ್ಯಗಳ ಚಿತ್ರೀಕರಣ ಮಾಡಬೇಕಿದೆ. ಅದರ ಚಿತ್ರೀಕರಣ ಈ ತಿಂಗಳು ಹಾಗೂ ಮುಂದಿನ ತಿಂಗಳು ಮುಗಿದು ಹೋಗಲಿದೆ'' ಎಂದಿದ್ದಾರೆ. ಕಿರೀಟಿ ರೆಡ್ಡಿಯನ್ನು ರಾಜಕೀಯಕ್ಕೆ ತರುತ್ತೀರ? ಎಂಬ ಪ್ರಶ್ನೆಗೆ ಉತ್ತರಿಸಿರುವ ಜನಾರ್ದನ ರೆಡ್ಡಿ, 'ಅವನು ಚಿಕ್ಕ ಮಗುವಾಗಿದ್ದಾಗಿನಿಂದಲೂ ಅವನಿಗೆ ಸಿನಿಮಾ ನಟನಾಗಬೇಕು ಎಂಬುದೇ ಬಯಕೆ. ಅವನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ. ಅವನು ಸಿನಿಮಾ ರಂಗದಲ್ಲಿಯೇ ಮುಂದುವರೆಯಲಿದ್ದಾನೆ'' ಎಂದಿದ್ದಾರೆ.

ಜೆನಿಲಿಯಾ ನಟಿಸುತ್ತಿರುವ ಸಿನಿಮಾ
'ಜೂನಿಯರ್' ಸಿನಿಮಾ ಮೂಲಕ ಕಿರೀಟಿ ರೆಡ್ಡಿ ಮೊದಲ ಬಾರಿ ನಾಯಕ ನಟನಾಗಿ ಎಂಟ್ರಿ ನೀಡುತ್ತಿದ್ದಾನೆ. ಸಿನಿಮಾದಲ್ಲಿ ಖ್ಯಾತ ನಟಿ ಜೆನಿಲಿಯಾ ಡಿಸೋಜಾ ಸಹ ನಟಿಸುತ್ತಿದ್ದಾರೆ. ಸಿನಿಮಾವನ್ನು ತೆಲುಗಿನ ಜನಪ್ರಿಯ ನಿರ್ಮಾಣ ಸಂಸ್ಥೆ ವರಾಹಿ ನಿರ್ಮಾಣ ಮಾಡುತ್ತಿದೆ. ನಿರ್ಮಾಪಕರು ರಜಿನಿ ಕೊರ್ರಪಾಟಿ, ನಿರ್ದೇಶನ ರಾಧಾ ಕೃಷ್ಣ ರೆಡ್ಡಿಯವರದ್ದು, ಸಂಗೀತ ತೆಲುಗಿನ ದೇವಿಶ್ರೀ ಪ್ರಸಾದ್, ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ.

ಬಿಜೆಪಿಯಿಂದ ಚುನಾವಣೆಗೆ?
ರಾಜಕಾರಣಿ ಗಾಲಿ ಜನಾರ್ದನ ರೆಡ್ಡಿ ಇದೀಗ ಮತ್ತೆ ಚುನಾವಣಾ ರಾಜಕೀಯಕ್ಕೆ ಮರಳುತ್ತಾರೆ ಎಂಬ ಸುದ್ದಿಗಳು ತುಸು ಗಟ್ಟಿಯಾಗಿ ಹರಿದಾಡುತ್ತಿವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗಾಲಿ ಜನಾರ್ದನ ರೆಡ್ಡಿ ಬಿಜೆಪಿಯಿಂದ ಕಣಕ್ಕೆ ಇಳಿಯುತ್ತಾರೆ ಎನ್ನಲಾಗಿದೆ. ಬಿಜೆಪಿಯಿಂದ ಕಣಕ್ಕೆ ಇಳಿಯುವ ಅವಕಾಶ ದೊರಕದೇ ಹೋದರೆ ತಾವೇ ಹೊಸ ರಾಜಕೀಯ ಪಕ್ಷ ಕಟ್ಟುವ ಯೋಚನೆಯೂ ಜನಾರ್ದನ ರೆಡ್ಡಿಗೆ ಇದೆ ಎನ್ನಲಾಗುತ್ತಿದೆ. ಡಿಸೆಂಬರ್ 25 ರಂದು ಜನಾರ್ದನ ರೆಡ್ಡಿ ಪತ್ರಿಕಾಗೋಷ್ಠಿ ಕರೆದಿದ್ದು ಆ ದಿನ ಈ ಬಗ್ಗೆ ಅವರು ಮಾತನಾಡಲಿದ್ದಾರೆ.


Click it and Unblock the Notifications











