'ಅಭಿನೇತ್ರಿ' ಬಗ್ಗೆ ಪೂಜಾಗಾಂಧಿ ಬಿಟ್ಟುಕೊಟ್ಟ ಸತ್ಯ
ಪೂಜಾಗಾಂಧಿ ಅವರು ನಿರ್ಮಿಸಿ ನಟಿಸುತ್ತಿರುವ 'ಅಭಿನೇತ್ರಿ' ಚಿತ್ರ ಸೆಟ್ಟೇರಿದೆ. ಈ ಚಿತ್ರದ ಫಸ್ಟ್ ಲುಕ್ ನೋಡಿದವರು ಬಹುಶಃ ಇದು ಮಿನುಗು ತಾರೆ ಕಲ್ಪನಾ ಅವರ ಕಥೆ ಇರಬಹುದು ಎಂದು ಭಾವಿಸಿದರು. ಇನ್ನೂ ಕೆಲವರು ಇಲ್ಲಾ ಇಲ್ಲಾ ಇದು ಮಂಜುಳಾ ಗೆಟಪ್ ಎಂದರು.
ಈಗ ಸ್ವತಃ ಪೂಜಾಗಾಂಧಿ ಅವರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ತಮ್ಮ 'ಅಭಿನೇತ್ರಿ' ಚಿತ್ರ ಕಲ್ಪನಾ ಅವರ ಕುರಿತದ್ದೂ ಅಲ್ಲ ಹಾಗೆಯೇ ಮಂಜುಳಾ ಅವರ ಕಥೆಯೂ ಅಲ್ಲ. ಆದರೆ ಇದು ತಾರೆಯೊಬ್ಬಳ ಬಗೆಗಿನ ಚಿತ್ರ ಎಂದಿದ್ದಾರೆ. ಚಿತ್ರದ ಫಸ್ಟ್ ಲುಕ್ ನೋಡಿ ಇದು ಇಂತಹದ್ದೇ ಚಿತ್ರ ಎಂಬ ನಿರ್ಧಾರಕ್ಕೆ ಬರುವುದು ಸರಿಯಲ್ಲ ಎಂಬುದು ಅವರ ಮಾತಿನ ಒಟ್ಟಾರೆ ಅರ್ಥ.
ಬಹುಶಃ ಚಿತ್ರದ ಫಸ್ಟ್ ಲುಕ್ ನೋಡಿದರೆ ಇದು ಕಲ್ಪನಾ ಗೆಟಪ್ ಅನ್ನಿಸುತ್ತದೆ. ಆದರೆ ತಮ್ಮ ಚಿತ್ರ ಖಂಡಿತ ಕಲ್ಪನಾ ಬಗೆಗಿನ ಕಥೆಯನ್ನು ಒಳಗೊಂಡಿಲ್ಲ. ಒಂದು ವೇಳೆ ತಮ್ಮ ಗೆಟಪ್ ಕಲ್ಪನಾ ತರಹವೇ ಇದೆ ಎಂದರೆ ನಿಜಕ್ಕೂ ನಾನು ಆ ಹೊಗಳಿಕೆಯನ್ನು ಸಂತೋಷದಿಂದ ಸ್ವೀಕರಿಸುತ್ತೇನೆ.ಈ ಚಿತ್ರ ಯಾವುದೇ ತಾರೆ ಕುರಿತಾದ ಚಿತ್ರವಲ್ಲ. ಅರುವತ್ತು, ಎಪ್ಪತ್ತರ ದಶಕದಲ್ಲಿ ತಾರೆಯೊಬ್ಬಳ ಕಥೆ. ಈ ಚಿತ್ರ ಡಿಫರೆಂಟ್ ಆಗಿರುತ್ತದೆ. ಹಾಗಾಗಿ ಎಪ್ಪತ್ತರ ದಶಕದ ಸೆಟ್ ಗಳು, ಕಾಸ್ಟ್ಯೂಮ್ ಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಚೆನ್ನೈನಲ್ಲಿ ಚಿತ್ರೀಕರಣ ನಡೆಯಲಿದೆ.
ಕನ್ನಡ ಚಿತ್ರರಂಗದ ಮಟ್ಟಿಗೆ ಎಪ್ಪತ್ತರ ದಶಕ ಸ್ವರ್ಣಯುಗ. ಆಗ ಚೆನ್ನೈನಲ್ಲಿ ಕನ್ನಡ ಚಿತ್ರಗಳನ್ನು ರಾತ್ರಿ ವೇಳೆ ಚಿತ್ರೀಕರಿಸಲಾಗುತ್ತಿತ್ತು. ಬೆಳಗಿನ ವೇಳೆ ಸ್ಟುಡಿಯೋಗಳ ಅಭಾವ ಇತ್ತು. ಆಗಿನ ಕಾಲದ ಚಿತ್ರ ನಿರ್ಮಾಣದ ಕಷ್ಟನಷ್ಟಗಳು ಹೇಗಿದ್ದವು ಎಂಬುದನ್ನೂ ತಮ್ಮ ಚಿತ್ರದಲ್ಲಿ ಅನಾವರಣಗೊಳ್ಳಲಿದೆ ಎಂದಿದ್ದಾರೆ ಪೂಜಾಗಾಂಧಿ.
ಸತೀಶ್ ಪ್ರಧಾನ್ ನಿರ್ದೇಶಿಸುತ್ತಿರುವ ಈ ಚಿತ್ರದ ಪಾತ್ರವರ್ಗದಲ್ಲಿ ಪೂಜಾಗಾಂಧಿ ಜೊತೆ ಮಕರಂದ್ ದೇಶ್ ಪಾಂಡೆ, ರವಿಶಂಕರ್ ಇದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದಕ್ಕಾಗಿ ತಾರಾ ಅವರನ್ನು ಸಂಪರ್ಕಿಸಲಾಗಿದೆಯಂತೆ. ಮನೋಮೂರ್ತಿ ಅವರ ಸಂಗೀತ ಚಿತ್ರಕ್ಕಿದ್ದು ಸೆಪ್ಟೆಂಬರ್ 27ರಿಂದ ಶೂಟಿಂಗ್ ಆರಂಭ. (ಏಜೆನ್ಸೀಸ್)


Click it and Unblock the Notifications












