ಎರಡನೇ ಮದುವೆ ಸಂಭ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ ಚೈತ್ರಾ ವಾಸುದೇವನ್..!
ಚೈತ್ರಾ ವಾಸುದೇವನ್, ಕನ್ನಡ ಕಿರುತೆರೆಯ ಬಹುದೊಡ್ಡ ಹೆಸರು. ಅರಳು ಹುರಿದಂತೆ ಮಾತನಾಡುವ ಚೈತ್ರಾ ವಾಸುದೇವನ್, ಅನುಶ್ರೀ ಅವರಷ್ಟೇ ಹೆಸರನ್ನು ಮಾಡಿರುವವರು. ಇನ್ನು ಚೈತ್ರಾ ಕೇವಲ ನಿರೂಪಕಿ ಮಾತ್ರ ಅಲ್ಲ. ಉದ್ಯಮಿ ಕೂಡ ಹೌದು. ಇವರದ್ದೇ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಇದೆ. ಬಿಗ್ ಬಾಸ್ ಕನ್ನಡದ 07ನೇ ಸೀಸನ್ನಲ್ಲಿ ಕೂಡ ಸ್ಫರ್ಧಿಯಾಗಿ ಭಾಗವಹಿಸಿದ್ದರು ಚೈತ್ರಾ.
ಇಂಥಾ ಚೈತ್ರಾ ವಾಸುದೇವನ್ ಈಗ ಎರಡನೇ ಮದುವೆಯ ಸಂಭ್ರಮದಲ್ಲಿದ್ದಾರೆ. ತಮ್ಮ ಮೆಹಂದಿ ಶಾಸ್ತ್ರದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಭಾವಿ ಪತಿಯ ಜೊತೆ ಕ್ಯಾಮರಾಗೆ ಸಖತ್ ಫೋಸ್ ಕೂಡ ನೀಡಿದ್ದಾರೆ. ಚೈತ್ರಾ ವಾಸುದೇವನ್ ಅವರ ಈ ಮದರಂಗಿ ಶಾಸ್ತ್ರದಲ್ಲಿ ಇಡೀ ಕುಟುಂಬ ಭಾಗಿಯಾಗಿದೆ. ಚೈತ್ರಾ ಸಂಭ್ರಮವನ್ನು ಇನ್ನೂ ಹೆಚ್ಚಿಸಿದೆ.

ಇನ್ನು ಜನವರಿಯಲ್ಲಿ ಪ್ಯಾರಿಸ್ನಲ್ಲಿ ಪ್ರೀ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿಕೊಂಡಿದ್ದ ಚೈತ್ರಾ, ಮೆಹಂದಿ ಶಾಸ್ತ್ರದಲ್ಲಿ ತಮ್ಮ ಕನಸಿನ ಹುಡುಗನ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಚೈತ್ರಾ ವಾಸುದೇವನ್ ಅವರ ಈ ಸಂಭ್ರಮದ ಕ್ಷಣಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅನೇಕರು ಚೈತ್ರಾ ಅವರಿಗೆ ಶುಭಾಶಯವನ್ನು ಕೋರುತ್ತಿದ್ದಾರೆ.
ಅಂದ್ಹಾಗೇ ಚೈತ್ರಾ ಅವರನ್ನು ಮದುವೆಯಾಗುತ್ತಿರುವ ಹುಡುಗನ ಹೆಸರು ಜಗದೀಪ್ ಎಲ್. ಫಿಟ್ನೆಸ್ ಕಡೆ ಒಲವು ಇರುವ ವ್ಯಕ್ತಿ ಎನ್ನುವುದು ಇವರ ಇನ್ಸ್ಟಾಗ್ರಾಮ್ ನೋಡಿದರೆ ಗೊತ್ತಾಗುತ್ತೆ. ಬೈಕ್ ಕ್ರೇಜ್ ಕೂಡ ಹೊಂದಿರುವ ಜಗದೀಪ್ ಅವರಿಗೆ ಚೈತ್ರಾ ಅವರಂತೆಯೇ ಪ್ರವಾಸಕ್ಕೆ ತೆರಳುವುದು ಇಷ್ಟ. ಸರಳವಾಗಿ ಹೇಳಬೇಕು ಅಂದರೆ ಇಬ್ಬರ ಅಭಿರುಚಿ ಒಂದೇ. ಇನ್ನು ತಮ್ಮ ಸ್ನೇಹಿತರ ಮಗನ ಬರ್ತ್ ಡೇಗೆ ಎಲ್ಲ ಕಡೆ ಹುಡುಕಾಡಿ ಕೊನೆಯಲ್ಲಿ ಜಗದೀಪ್ ಅವರು ಚೈತ್ರಾ ಒಡೆತನದ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗೆ ಹೋಗಿದ್ದರು.
ಹೀಗೆ ಪರಿಚಯವಾದ ಇಬ್ಬರು ಆ ನಂತರ ಸ್ನೇಹಿತರಾದರು. ಕಾಲ ಉರುಳಿದಂತೆ ಪ್ರೀತಿಯಲ್ಲಿ ಬಿದ್ದರು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರು. ಇನ್ನು ನೇರವಾಗಿಯೇ ಚೈತ್ರಾ ಬಳಿ ಮದುವೆಯ ವಿಚಾರವನ್ನು ಪ್ರಸ್ತಾಪಿಸಿದ್ದರು ಜಗದೀಪ್. ಈ ಕುರಿತು ಹಿಂದೊಮ್ಮೆ ಮಾತನಾಡಿದ್ದ ಚೈತ್ರಾ ಆ ಕ್ಷಣಕ್ಕೆ ನನಗೇನು ಹೇಳಬೇಕು ಗೊತ್ತಾಗಲಿಲ್ಲ ಹೀಗಾಗಿ ಕಾಲಾವಕಾಶ ಬೇಕು ಎಂದೆ ಅವರು ನೇರವಾಗಿ ನನ್ನ ಅಪ್ಪ ಅಮ್ಮನ ಬಳಿ ಮಾತನಾಡಿದರು ಎಂದಿದ್ದಾರೆ. ನನ್ನ ಅಪ್ಪ ಅಮ್ಮನಿಗೆ ಅವರ ಗುಣ ಇಷ್ಟ ಆಯ್ತು ಅವರಿಗೆ ಅಪ್ಪ ಇಲ್ಲ, ತುಂಬಾ ಕಷ್ಟ ಪಟ್ಟು ಜೀವನದಲ್ಲಿ ಮೇಲೆ ಬಂದಿದ್ದಾರೆ ಅವರನ್ನು ನೋಡಿ ನನಗೂ ಕೂಡ ಖುಷಿ ಆಯಿತು ಎಂದು ಹೇಳಿದ್ದಾರೆ. ಇಬ್ಬರ ಯೋಚನಾ ಲಹರಿ ಮತ್ತು ಗುರಿ ಎಲ್ಲವೂ ಒಂದೇ ರೀತಿ ಇದೆ ಹೀಗಾಗಿ ನನಗೂ ಇಷ್ಟವಾಗಿ ಒಪ್ಪಿಕೊಂಡೆ ಎಂದು ಕೂಡ ಚೈತ್ರಾ ಹೇಳಿದ್ದರು.
ಸದ್ಯ ಚೈತ್ರಾ ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಿದೆ. ಈ ಸಂಭ್ರಮದಲ್ಲಿ ಎರಡು ಕಡೆ ಕುಟುಂಬಗಳು ಭಾಗಿಯಾಗಿವೆ. ಮೆಹಂದಿ ಶಾಸ್ತ್ರ ನೆರವೇರಿದೆ. ಇಂದು ಗುರು ಹಿರಿಯರ ಸಮ್ಮುಖದಲ್ಲಿ ಚೈತ್ರಾ ವಾಸುದೇವನ್ ಹೊಸ ಬದುಕಿಗೆ ಮುನ್ನುಡಿಯನ್ನು ಬರೆಯಲಿದ್ದಾರೆ. ಸಹಜವಾಗಿ ಇವರ ಮದುವೆಗೆ ಕನ್ನಡ ಚಿತ್ರರಂಗದ ಅನೇಕ ತಾರೆಯರು ಬರುವ ಸಾಧ್ಯತೆ ಇದೆ. ಈ ನವ ಜೋಡಿಗೆ ನಿಮ್ಮ ಶುಭ ಹಾರೈಕೆ ಕೂಡ ಇರಲಿ.


Click it and Unblock the Notifications











