ಹಳ್ಳಿ ಹೈದ ರಾಜೇಶ್ ಭೇಟಿ ಮಾಡಿದ ನಟ ಪುನೀತ್
ಈಗಾಗಲೇ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜೇಶ್ ಅವರನ್ನು ಭೇಟಿ ಮಾಡಿ ಅವರ ಚಿಕಿತ್ಸೆಯ ವೈದ್ಯಕೀಯ ವೆಚ್ಚವನ್ನು ತಾವು ಭರಿಸುವುದಾಗಿ ಹೇಳಿದ್ದು ಎಲ್ಲರಿಗೂ ಗೊತ್ತು. ಇದೀಗ ಪವರ್ ಸ್ಟಾರ್ ಪುನೀತ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ರಾಜೇಶ್ ಜೊತೆ ಐದು ನಿಮಿಷ ಮಾತನಾಡಿ ಸಾಂತ್ವನ ಹೇಳಿದ್ದಾರೆ. ಜೊತೆಗೆ, ರಾಜೇಶ್ ಅವರನ್ನು ಬೇಗ ಗುಣಪಡಿಸುವಂತೆ ವೈದ್ಯರಲ್ಲಿ ಮನವಿ ಮಾಡಿದ್ದಾರೆ.
ರಾಜೇಶ್ ಚಿಕಿತ್ಸೆ ಪಡೆಯುತ್ತಿರುವ ಮೈಸೂರಿನ ಆಸ್ಪತ್ರೆಗೆ ಇಂದು (17 ಜುಲೈ 2012) ಬೆಳಿಗ್ಗೆ 9-30ರ ಸುಮಾರಿಗೆ ಹೋಗಿದ್ದ ನಟ ಪುನೀತ್, ರಾಜೇಶ್ ಅವರ ಕುಟುಂಬಕ್ಕೆ ಧೈರ್ಯ ಹೇಳಿದ್ದಾರೆ. ರಾಜೇಶ್, ಪುನೀತ್ ಅವರ ಭಾರೀ ಫ್ಯಾನ್ ಆಗಿದ್ದು ತಮ್ಮ ಮೆಚ್ಚಿನ ನಟನ ದರ್ಶನದಿಂದ ಸಹಜವಾಗಿ ಖುಷಿಯಾಗಿರಬಹುದು. ಐದು ನಿಮಿಷ ಜೊತೆಗಿದ್ದ ಪುನೀತ್ ರೊಡನೆ ರಾಜೇಶ್ ಮಾಡಿದ ಪ್ರತಿಕ್ರಿಯೆ ಏನೆಂಬುದು ಗೊತ್ತಾಗಿಲ್ಲ.
ರಿಯಾಲಿಟಿ ಶೋದ ವೇಳೆಯಲ್ಲೇ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದ ರಾಜೇಶ್, ನೀವೇ ನನ್ನ ಮೆಚ್ಚಿನ ಸ್ಟಾರ್ ಎಂದಿದ್ದರು. ಅದನ್ನು ನೆನಪಿನಲ್ಲಿಟ್ಟುಕೊಂಡು ಇದೀಗ ಹಾಸಿಗೆ ಹಿಡಿದಿರುವ ರಾಜೇಶ್ ಅವರನ್ನು ನೋಡಲು ಪುನೀತ್ ಹೋಗಿದ್ದು ಅವರ ಮಾನವೀಯತೆಗೆ ಹಿಡಿದ ಕನ್ನಡಿ ಎನಿಸಿದೆ.
ರಿಯಾಲಿಟಿ ಶೋ ನಂತರ 'ಜಂಗಲ್ ಜಾಕಿ' ಎಂಬ ಸಿನಿಮಾದಲ್ಲಿ ರಾಜೇಶ್ ನಟಿಸಿದ್ದಾರೆ. ಇದು ರಾಜೇಶನಿಗೆ ಮೊದಲ ಸಿನಿಮಾ ಆಗಿದ್ದರಿಂದ ಸಹಜವಾಗಿಯೇ ಅವರಿಗೆ ಭಾರೀ ನಿರೀಕ್ಷೆ ಉಂಟಾಗಿತ್ತು. ಆದರೆ ಸಿನಿಮಾ ಬಿಡುಗಡೆ ಇನ್ನೂ ಆಗದಿರುವ ಹಿನ್ನೆಲೆಯಲ್ಲಿ ಅವರು ಮಾನಸಿಕ ರೋಗಿಯಾಗಿದ್ದಾರೆ ಎಂಬುದು ಅವರ ಪೋಷಕರ ಅಳಲು.
ರಾಜೇಶ್ ಅವರಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರ ಪ್ರಕಾರ, "ರಾಜೇಶ ದೈಹಿಕವಾಗಿ ಆರೋಗ್ಯವಾಗಿದ್ದೇನೆ. ಆದರೆ ಮಾನಸಿಕವಾಗಿ ಖಿನ್ನತೆ ಅನುಭವಿಸುತ್ತಿದ್ದಾನೆ, ಸ್ಥಿಮಿತ ಕಳೆದುಕೊಂಡಿದ್ದಾನೆ. ವರ್ತನೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ಚಿಕಿತ್ಸೆ ನಡೆಯುತ್ತಿದೆ. ಸದ್ಯ ರಾಜೇಶ್, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ತಮ್ಮ ಮೆಚ್ಚಿನ ನಟ ಪುನೀತ್ ಭೇಟಿಯಿಂದ ಮುಂದೆ ರಾಜೇಶ್ ಬೇಗ ಗುಣಹೊಂದಿದರೂ ಆಶ್ಚರ್ಯವಿಲ್ಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications












