‘ಕಾಡಿನ ರಾಜ’ ಟೈಗರ್ ಪ್ರಭಾಕರ್ ಕಣ್ಮರೆ
ಬೆಂಗಳೂರು : ಸ್ಯಾಂಡಲ್ವುಡ್ನ ಆ್ಯಕ್ಷನ್ ಹೀರೋ ಟೈಗರ್ ಪ್ರಭಾಕರ್ ಇನ್ನಿಲ್ಲ. ಯುಗಾದಿ ಹಬ್ಬದ ದಿನ (ಮಾರ್ಚ್ 25) ರಾತ್ರಿ 10.50ಕ್ಕೆ ಅವರು ನಗರದ ಮಲ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 48 ವರ್ಷ ವಯಸ್ಸಾಗಿತ್ತು.
ಕಾಮಾಲೆ ರೋಗದಿಂದ ಬಳಲುತ್ತಿದ್ದ ಪ್ರಭಾಕರ್ ಕಳೆದ ವಾರ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ದೇಹಸ್ಥಿತಿಯ ಪೆಂಡ್ಯುಲಮ್ ಚಲನೆ ಆಗಾಗ ಕ್ರಮ ತಪ್ಪುತ್ತಿತ್ತು. ಭಾನುವಾರ ರಾತ್ರಿ 8.30ರ ಹೊತ್ತಿಗೆ ಅವರ ದೇಹ ಸ್ಥಿತಿ ತೀರಾ ಹದಗೆಟ್ಟಿತು. ಮೂತ್ರಪಿಂಡ ಕೆಲಸ ನಿಲ್ಲಿಸಿತು. ವೈದ್ಯರು ಎರಡು ತಾಸಿಗೂ ಹೆಚ್ಚು ಕಾಲ ಶತಾಯ ಗತಾಯ ಯತ್ನಿಸಿದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ.
ದಶಕಗಳ ಹಿಂದೆಯೇ ಗ್ಯಾಂಗ್ರೀನ್ಗೆ ತುತ್ತಾಗಿದ್ದ ಪ್ರಭಾಕರ್ ಅವರಿಗೆ ವೈದ್ಯರು, ಎರಡೂ ಕಾಲನ್ನು ತೆಗೆಸಿಬಿಡಿ. ಇಲ್ಲವಾದರೆ ನಿಮ್ಮ ಜೀವಕ್ಕೇ ತೊಂದರೆಯಿದೆ ಎಂದು ಸಲಹೆ ಕೊಟ್ಟಿದ್ದರು. ಆದರೆ ಟೈಗರ್ ಅದಕ್ಕೆ ಒಪ್ಪಲಿಲ್ಲ. ಈ ಕಾಯಿಲೆಯ ನೋವನ್ನೂ ಅವರು ಕೊನೆ ಉಸಿರೆಳೆವವರೆಗೆ ಅನುಭವಿಸ ಬೇಕಾಯಿತು.
ಕನ್ನಡ, ಮಲೆಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳ ಸುಮಾರು 450ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪ್ರಭಾಕರ್ 30 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ದುಡಿದಿದ್ದಾರೆ. ತಮ್ಮ ಮೊದಲ ಪತ್ನಿಯಿಂದ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನನ್ನು ಪಡೆದಿದ್ದ ಟೈಗರ್ ತಮ್ಮ ಜೀವನಲ್ಲಿ ತಲೆಬಾಗಿದ್ದು ತಾಯಿಗೆ ಮತ್ತು ಜೀಸಸ್ಗೆ. ಇದನ್ನು ಖುದ್ದು ಅವರೇ ಹೇಳಿಕೊಂಡಿದ್ದರು. ಈಗ ಇಬ್ಬರೂ ಹೆಣ್ಣು ಮಕ್ಕಳು ಭಾರತಿ ಮತ್ತು ಗೀತಾ ಡಿಗ್ರಿ ಮುಗಿಸಿದ್ದಾರೆ. ಮಗ ವಿನೋದ್ ಅಪ್ಪನ ಬಗಲಲ್ಲಿದ್ದಾನೆ. ಮೊನ್ನೆ ತಾನೇ ಈತನನ್ನು ಪ್ರಭಾಕರ್ ಚಿತ್ರರಂಗಕ್ಕೆ ಪರಿಚಯಿಸಿದ್ದರು.
ತಾರೆ ಜಯಮಾಲ ಪ್ರಭಾಕರ್ 2ನೇ ಪತ್ನಿ. ಆಕೆಗೆ ಸೌಂದರ್ಯ ಎಂಬ ಮಗಳಿದ್ದಾಳೆ. 3ನೇ ಪತ್ನಿ ಅಂಜು ಅವರಿಗೂ ಒಂದು ಗಂಡು ಮಗುವನ್ನು ಪ್ರಭಾಕರ್ ಕಾಣಿಕೆಯಾಗಿ ಕೊಟ್ಟಿದ್ದರು ! ಮೂರು ಮದುವೆಯಾಗಿದ್ದರೂ ಯಾರೂ ಪ್ರಭಾಕರ್ ಜೊತೆ ವರ್ಷಗಟ್ಟಲೆ ಸಂಸಾರ ಮಾಡಲಿಲ್ಲ. ಒಂದಲ್ಲ ಒಂದು ತಕರಾರು ಪ್ರಭಾಕರ್ ದಾಂಪತ್ಯ ಜೀವನಕ್ಕೆ ಮುಳುವಾಗುತ್ತಿತ್ತು.
ಕರುಣೆಯಿಲ್ಲದ ಕಾನೂನು, ಕಾಡಿನ ರಾಜ, ಪ್ರೀತಿ ವಾತ್ಸಲ್ಯ, ಹೊಸ ಇತಿಹಾಸ, ಜಿದ್ದು, ಮಹೇಂದ್ರ ವರ್ಮ ಮೊದಲಾದ ಚಿತ್ರಗಳಲ್ಲಿ ಮಿಂಚಿದ್ದ ಪ್ರಭಾಕರ್ ತಮ್ಮ ಆ್ಯಕ್ಷನ್ ಹಾಗೂ ಇನ್ಸ್ಪೆಕ್ಟರ್ ಪಾತ್ರಗಳಿಂದ ಜನಮನ ಗೆದ್ದಿದ್ದರು.
ಮೂರು ವರ್ಷಗಳಿಂದ ಡಬ್ಬದಲ್ಲೇ ಇರುವ ಅವರ ಅಭಿನಯ ಹಾಗೂ ನಿರ್ದೇಶನದ 'ಗುಡ್ ಬ್ಯಾಡ್ ಅಗ್ಲಿ " ಈ ವಾರ ತೆರೆ ಕಾಣಲಿದೆ. ಭಾನುವಾರ ಸಂಜೆ ಪ್ರಭಾಕರ್ ಅವರನ್ನು ನೋಡಲು ಡಾ.ರಾಜ್ ಹಾಗೂ ಪಾರ್ವತಮ್ಮ ಮಲ್ಯ ಆಸ್ಪತ್ರೆಗೆ ಹೋಗಿದ್ದರು. ರಾತ್ರಿ 7.30ರವರೆಗೆ ಅವರು ಪ್ರಭಾಕರ್ ಅವರೊಟ್ಟಿಗಿದ್ದರು. ಎಲ್ಲರಿಗೂ ಯುಗಾದಿ ಆರಂಭವಾದರೆ, ಟೈಗರ್ಗೆ ಅಂತ್ಯವಾಗಿದೆ. (ಇನ್ಫೋ ವಾರ್ತೆ)


Click it and Unblock the Notifications