ತಮಿಳು ಹೃದಯಗಳ ಗೆದ್ದ ಮೈಕೇಲ್ ಜಾಕ್ಸನ್ ಈಗ ಕನ್ನಡಿಗರ ಮನ ಸೂರೆಗೊಳ್ಳಲು ಬರುತ್ತಿದ್ದಾನೆ. ಕನ್ನಡದ ಈ ಹುಡುಗನ ಬರಮಾಡಿಕೊಳ್ಳಿ.
ನೃತ್ಯದ ಬೆನ್ನೇರಿ ನಾಗಾಲೋಟದಿಂದ ಹಿಂದಿ ಹಾಗೂ ತಮಿಳು ಚಿತ್ರರಂಗದಲ್ಲಿ ಭಾರಿ ಸುದ್ದಿಮಾಡಿದ ಅಕ್ಟರ್ ಕಮ್ ಡ್ಯಾನ್ಸರ್ ಪ್ರಭುದೇವ್ ಈಗ ಕನ್ನಡಕ್ಕೂ ಕಾಲಿಟ್ಟಿದ್ದಾರೆ. ಕಾದಲನ್, ಮಿನ್ಸಾರ ಕಣವು (ಹಿಂದಿಯಲ್ಲಿ ಸಪ್ನೆ), ಪೆನ್ನಿನ್ ಮನದೈ ತೊಟ್ಟು, ಜೇಮ್ಸ್ಪಾಂಡು, ಮಿ. ರೋಮಿಯೋ, ಡಬಲ್ಸ್, ಕಾದಲಾ ಕಾದಲಾ, ಜಂಟ್ಲಮನ್, ಏಳೆಯಿನ್ ಸಿರಿಪಿಲ್ ಮುಂತಾದ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪ್ರಭುದೇವ ಕನ್ನಡದ ಹುಡುಗ.
ಮೈಸೂರಿನ ಬಳಿಯ ಮೂಗೂರಿನ ಈ ಹುಡುಗ, ತಮಿಳರ ಮೈಖಲ್ ಜಾಕ್ಸನ್. ಪ್ರಭುದೇವ ಕುಣಿತಕ್ಕೆ ಅಭಿಮಾನಿಗಳೂ ಹುಚ್ಚೆದ್ದು ಕುಣಿಯುತ್ತಾರೆ. ಪ್ರಭು ಕುಣಿಯುವುದಿಲ್ಲ ಎಂದರೆ, ಹದಿಹರೆಯದವರ ಹೃದಯವೇ ನಿಂತು ಹೋಗುತ್ತದೆ. ತಮಿಳಿನಲ್ಲಿ ಮಿಂಚುತ್ತಿರುವ ಪ್ರಭು ಈಗ ಕನ್ನಡದ ಎರಡು ಚಿತ್ರದಲ್ಲಿ ನಟಿಸುತ್ತಿರುವುದೇ ಒಂದು ಸುದ್ದಿ.
ಹೆಸರಾಂತ ನಿರ್ದೇಶಕ ರಾಮೋಜಿ ರಾವ್ ಮತ್ತು ನಿರ್ಮಾಪಕಿ ಜಯಶ್ರೀದೇವಿ ಅವರು ಸಂಯುಕ್ತವಾಗಿ ನಿರ್ದೇಶಿಸುತ್ತಿರುವ ಚಿತ್ರ ಎಂಬ ಹೆಸರಿನ ಚಿತ್ರದಲ್ಲಿ ಪ್ರಭುದೇವ ಗೆಸ್ಟ್ ಅಪಿಯರೆನ್ಸ್ ಕೊಡುತ್ತಿದ್ದಾರೆ. ಪ್ರಭುದೇವರ ಸೋದರ ಈ ಚಿತ್ರದ ನಾಯಕ.
ಉಷಾಕಿರಣ್ ಮೂವೀಸ್ ಲಾಂಛನದ ಈ ಚಿತ್ರದ ಪ್ರಥಮ ದೃಶ್ಯಕ್ಕೆ ಮೂಗೂರು ಸುಂದರ್ ಆರಂಭ ಫಲಕ ತೋರಿಸುವುದರೊಂದಿಗೆ ಚಿತ್ರೀಕರಣ ಆರ್.ಟಿ. ನಗರದ ಗಣೇಶನ ದೇವಾಲಯದಲ್ಲಿ ಆರಂಭವಾಗಿದೆ. ಯಲಹಂಕ ರಸ್ತೆಯಲ್ಲಿರುವ ಡೊಮೆನಿಯನ್ ಕ್ಲಬ್ನಲ್ಲಿ ಚಿತ್ರೀಕರಣ ಮುಂದುವರಿದಿದೆ. ದಿನೇಶ್ ಬಾಬು ನಿರ್ದೇಶನ, ಗುರುಕಿರಣ್ ಸಂಗೀತ ಈ ಚಿತ್ರಕ್ಕಿದೆ. ರೇಖಾ ಎಂಬ ನವ ನಟಿ ಚಿತ್ರದ ನಾಯಕಿ.
ಉಪೇಂದ್ರರ ಚಿತ್ರದಲ್ಲಿ ಪ್ರಭು : ಧನರಾಜ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಮತ್ತೊಂದು ಚಿತ್ರದಲ್ಲೂ ಪ್ರಭುದೇವ್ ನಟಿಸುತ್ತಿದ್ದಾರೆ. ಶನಿವಾರದಿಂದ ಈ ಚಿತ್ರದ ಹಾಡುಗಳ ಧ್ವನಿಮುದ್ರಣ ಆರಂಭವಾಗಲಿದೆ. ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಸೂಪರ್ ಡ್ಯಾನ್ಸರ್ ಪ್ರಭುದೇವ ಉಕ್ಕಿನ ಕವಚ ತೊಟ್ಟು ಖಡ್ಗ ಹಿಡಿದಿರುವ ಚಿತ್ರಗಳುಳ್ಳ ಜಾಹೀರಾತು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಇನ್ನೂ ಹೆಸರಿಡದ ಈ ಚಿತ್ರದ ನಿರ್ದೇಶಕರು ಎನ್. ಲೋಕನಾಥ್ ಹಾಗೂ ರಾಜಾರಾಮ್. ಈ ಚಿತ್ರ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಈ ಹಿಂದೆ ಈ ಚಿತ್ರಕ್ಕೆ ಕಾವೇರಿ ಎಂದು ಹೆಸರಿಡಲಾಗಿತ್ತು. ಶಂಕರ್ ಚಿತ್ರವನ್ನು ನಿರ್ದೇಶಿಸ ಬೇಕಿತ್ತು. ಚಿತ್ರದಿಂದ ಶಂಕರ್ರನ್ನು ಹೊರಹಾಕಿದ ಸುದ್ದಿಯನ್ನು ಪ್ರಪ್ರಥಮ ಬಾರಿಗೆ ಕನ್ನಡ.ಇಂಡಿಯಾಇನ್ಫೋಡಾಟ್ಕಾಂ ಪ್ರಕಟಿಸಿದ್ದು ನಿಮಗೆ ನೆನಪಿದೆ ಅಲ್ಲವೆ.
ವಾರ್ತಾ ಸಂಚಯ
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications