ಇಂತಹ ಟೈಮಲ್ಲೂ ಹಾಸ್ಯಚಟಾಕಿ ಹಾರಿಸಿದ ಪ್ರಕಾಶ್ ರೈ
ಕರ್ನಾಟಕ ರಾಜಕೀಯ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿದ್ದರೇ, ಮತ್ತೊಂದೆಡೆ ಕಾಂಗ್ರೆಸ್-ಜೆಡಿಎಸ್, ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳಲು ಮಾಸ್ಟರ್ ಫ್ಲ್ಯಾನ್ ಮಾಡ್ತಿದೆ.
ಈ ರೀತಿ ಚಿಂದಿ ಚಿತ್ರಾನ್ನ ಆಗಿರುವ ರಾಜ್ಯ ರಾಜಕಾರಣದ ಬಗ್ಗೆ ಪ್ರಕಾಶ್ ರೈ ಕಿಡಿಕಾರಿದ್ದಾರೆ. ಅತಂತ್ರ ಫಲಿತಾಂಶ ನೀಡಿ ದೊಂಬರಾಟ ನೋಡುವಂತಾಗಿರುವ ನಾಡಿನ ಜನತೆ ಬಗ್ಗೆ ರೈ ಆತಂಕ ವ್ಯಕ್ತಪಡಿಸಿದ್ದರು.
ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ರೆಸಾರ್ಟ್ ರಾಜಕಾರಣ, ಕುದರೆ ವ್ಯಾಪಾರ ಆಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ. ಈ ನಡುವೆ ನಟ ಪ್ರಕಾಶ್ ರೈ ಟ್ವಿಟ್ಟರ್ ನಲ್ಲಿ ಹಾಸ್ಯಚಟಾಕಿ ಹಾರಿಸಿದ್ದಾರೆ.
ಕಾಂಗ್ರೆಸ್ ಶಾಸಕರು ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಮತ್ತು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಈ ಬಗ್ಗೆ ಕಾಲೆಳೆದಿರುವ ಪ್ರಕಾಶ್ ರೈ ''ರೆಸಾರ್ಟ್ ಮ್ಯಾನೇಜರ್ ಸರ್ಕಾರ ರಚಿಸಲು ಅನುಮತಿ ಕೋರಿ ರಾಜ್ಯಪಾಲರ ಬಳಿ ಮನವಿ ಮಾಡಿಕೊಂಡಿದ್ದಾರೆ. ಯಾಕಂದ್ರೆ, 116 ಶಾಸಕರು ಅವರ ಜೊತೆಯಲ್ಲಿದ್ದಾರೆ. ಆಟ ಈಗ ಶುರು'' ಎಂದು ಟ್ವೀಟ್ ಮಾಡಿದ್ದಾರೆ.

ರಾಜಕೀಯ ಪಕ್ಷಗಳಿಗೆ ಇದು ಗಂಭೀರವಾಗಿದ್ರೂ, ನೋಡುಗರಿಗೆ ಇದು ಮನರಂಜನೆಯ ಬೆಳವಣಿಗೆಗಳಾಗಿದೆ. ವಾಟ್ಸಾಪ್, ಟ್ವಿಟ್ಟರ್, ಫೇಸ್ ಬುಕ್ ಗಳಲ್ಲಿ ಇಂತಹ ಟ್ರೋಲ್ ಗಳು, ಕಾಮಿಡಿ ಸಂದೇಶಗಳು ರಾಜಕೀಯ ವ್ಯಕ್ತಿಗಳ ಕಾಲೆಳೆಯುತ್ತಿದೆ.


Click it and Unblock the Notifications











