ಪ್ರಕಾಶ್ ರೈ ಬಗ್ಗೆ ಗೊಂದಲ ಸೃಷ್ಟಿಸಿದ ರಾಷ್ಟ್ರೀಯ ಸುದ್ದಿವಾಹಿನಿಗಳು.!
Recommended Video

ಬಹುಭಾಷಾ ನಟ ಪ್ರಕಾಶ್ ರೈ ಅವರ ಬಗ್ಗೆ ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಗೊಂದಲದ ಸುದ್ದಿಯೊಂದನ್ನ ಪ್ರಸಾರ ಮಾಡಿದೆ. ಈ ಸುದ್ದಿ ನಿನ್ನೆ (ಅಕ್ಟೋಬರ್ 2) ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಠಿಸಿತ್ತು.
ಈ ಸುದ್ದಿಯನ್ನ ನೋಡಿ ಸ್ವತಃ ಪ್ರಕಾಶ್ ರೈ ಅವರೇ ಒಂದು ಕ್ಷಣ ಆಶ್ಚರ್ಯವಾಗಿದ್ದಾರೆ. ಹೌದು, ಬೆಂಗಳೂರಿನಲ್ಲಿ ಆರಂಭವಾದ ಮೂರು ದಿನಗಳ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ ಐ)ನ 11ನೇ ರಾಜ್ಯ ಸಮ್ಮೇಳನ ಸಮಾರಂಭವನ್ನು ಉದ್ಘಾಟಿಸಿದ್ದ ಪ್ರಕಾಶ್ ರೈ, ಗೌರಿ ಲಂಕೇಶ್ ಅವರ ಹತ್ಯೆಯನ್ನ ಖಂಡಿಸಿ ಮಾತನಾಡಿದರು.
ಈ ವೇಳೆ ತಪ್ಪಾಗಿ ಗ್ರಹಿಸಿಗೊಂಡ ಕೆಲವು ರಾಷ್ಟ್ರೀಯ ಮಾಧ್ಯಮಗಳು ಸುದ್ದಿಯಲ್ಲಿ ಗೊಂದಲ ಉಂಟು ಮಾಡಿ ಪ್ರಸಾರ ಮಾಡಿವೆ. ಅಷ್ಟಕ್ಕೂ, ಪ್ರಕಾಶ್ ರೈ ಬಗ್ಗೆ ಏನಂತ ಸುದ್ದಿ ಮಾಡಿದ್ದರು? ಮುಂದೆ ಓದಿ....

ರಾಷ್ಟ್ರ ಪ್ರಶಸ್ತಿ ವಾಪಸ್ ಕೊಡ್ತಾರಂತೆ.!
ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರಕಾಶ್ ರೈ ತಮಗೆ ಬಂದಿರುವ 5 ರಾಷ್ಟ್ರ ಪ್ರಶಸ್ತಿಗಳನ್ನು ವಾಪಸ್ ಮಾಡಲಿದ್ದಾರೆ. ಅವಾರ್ಡ್ ವಾಪ್ಸಿ ಪ್ರಕಾಶ್ ರೈ ಅವರಿಂದಲೇ ಶುರುವಾಗಲಿದೆ ಎಂದು ರಾಷ್ಟ್ರೀಯ ಸುದ್ದಿ ವಾಹಿನಿಗಳು ನಿನ್ನೆ (ಅಕ್ಟೋಬರ್ 2) ಪ್ರಸಾರ ಮಾಡಿದ್ದವು.

ಈ ಸುದ್ದಿ ನೋಡಿ ಪ್ರಕಾಶ್ ರೈ ಶಾಕ್.!
ಸುದ್ದಿ ವಾಹಿನಿಗಳಲ್ಲಿ ಈ ಸುದ್ದಿ ನೋಡಿ ಸ್ವತಃ ಪ್ರಕಾಶ್ ರೈ ಅವರೇ ಶಾಕ್ ಆಗಿದ್ದಾರೆ. ನಂತರ ಈ ಬಗ್ಗೆ ಸ್ಪಷ್ಟಿಕರಣ ನೀಡಿದ ನಟ, ನಾನು ನನ್ನ ರಾಷ್ಟ್ರ ಪ್ರಶಸ್ತಿಗಳನ್ನ ವಾಪಸ್ ನೀಡುತ್ತಿಲ್ಲ. ಇದೆಲ್ಲಾ ಸುಳ್ಳು ಎಂದರು.

ಎಡವಟ್ಟು ಆಗಿದ್ದು ಎಲ್ಲಿ?
ಅಷ್ಟಕ್ಕೂ, ಇಂತಹ ಸುದ್ದಿ ಹರಡಲು ಕಾರಣವಾಗಿದ್ದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ ಐ)ನ 11ನೇ ರಾಜ್ಯ ಸಮ್ಮೇಳನ. ಈ ಸಮಾರಂಭದಲ್ಲಿ ಗೌರಿ ಲಂಕೇಶ್ ಹತ್ಯೆಯನ್ನ ಖಂಡಿಸಿ ಮಾತನಾಡಿದ ಪ್ರಕಾಶ್ ರೈ, ಪ್ರಧಾನಿ ಮೋದಿ ಅವರ ಮೌನದ ಬಗ್ಗೆ ಪ್ರಶ್ನಿಸಿದ್ದರು. ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಬಗ್ಗೆ ಮಾತನಾಡಿದ್ದರು. ಈ ಹೇಳಿಕೆಗಳನ್ನ ರಾಷ್ಟ್ರೀಯ ಮಾಧ್ಯಮಗಳು ತಪ್ಪಾಗಿ ಗ್ರಹಿಸಿಕೊಂಡಿದೆ.

ಸಮಾರಂಭದಲ್ಲಿ ರೈ ಹೇಳಿದ್ದೇನು?
"ನಾನು ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಒಂದು ವಿಡಿಯೋ ನೋಡಿದೆ. ಅದರಲ್ಲಿದ್ದುದು ಚೀಫ್ ಮಿನಿಸ್ಟರೋ ಅಥವಾ ಯಾವುದಾದರೂ ದೇವಸ್ಥಾನದ ಪೂಜಾರಿಯೋ ಎಂದು ಗೊತ್ತಾಗದಷ್ಟು ಮಟ್ಟಿಗೆ ಅವರ ನಟನೆಯಿತ್ತು. ನನಗೆ 5 ರಾಷ್ಟ್ರಪ್ರಶಸ್ತಿಗಳು ಸಂದಿವೆ. ಅವರ ನಟನೆ ನೋಡಿ ಅವನ್ನು ಅವರಿಗೆ ಕೊಟ್ಟುಬಿಡೋಣ ಅನ್ನಿಸಿತು! ನಾನೊಬ್ಬ ದೊಡ್ಡ ನಟ. ಅವರೆಲ್ಲ (ರಾಜಕಾರಣಿಗಳು) ನನಗಿಂತ ದೊಡ್ಡ ನಟರಾಗಲು ಯತ್ನಿಸುತ್ತಿದ್ದಾರೆ" ಎಂದಿದ್ದರು.

ಪ್ರಕಾಶ್ ರೈ ಮಾತನಾಡಿದ್ದು ಕನ್ನಡದಲ್ಲಿ.!
ಪ್ರಕಾಶ್ ರೈ ಇಷ್ಟೆಲ್ಲಾ ಮಾತನಾಡಿದ್ದು ಕನ್ನಡದಲ್ಲಿ. ಹೀಗಾಗಿ, ಇಂಗ್ಲಿಷ್ ಮತ್ತು ಹಿಂದಿಯ ರಾಷ್ಟ್ರೀಯ ಮಾಧ್ಯಮದವರು ತಪ್ಪಾಗಿ ಗ್ರಹಿಸಿಕೊಂಡು, ಹೀಗೆ ಗೊಂದಲ ಉಂಟು ಮಾಡಿರಬಹುದು ಎನ್ನಲಾಗಿದೆ.

ಪ್ರಕಾಶ್ ರೈ ಸ್ಪಷ್ಟನೆ
ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ ಪ್ರಕಾಶ್ ರೈ, ''ನನಗೆ ಬಂದಿರುವ ಪ್ರಶಸ್ತಿಗಳ ನನಗೆ ಗೌರವವಿದೆ. ಅವುಗಳನ್ನು ಹಿಂದಿರುಗಿಸುವ ಪ್ರಯತ್ನವನ್ನು ನಾನು ಮಾಡುವುದಿಲ್ಲ. ಆದರೆ, ಗೌರಿ ಲಂಕೇಶ್ ಹತ್ಯೆಯ ಬಗ್ಗೆ ನನಗೆ ಆಕ್ರೋಶವಿದೆ. ಕೆಲವರು ಅವರ ಸಾವನ್ನು ಸಂಭ್ರಮಿಸಿದ್ದಾರೆ. ಈ ಬಗ್ಗೆ ಕಠಿಣ ಸಂದೇಶ ರವಾನೆಯಾಗಬೇಕು. ಪ್ರಧಾನಿ ಮೋದಿ ಈ ಬಗ್ಗೆ ಮಾತನಾಡಿ, ಒಂದು ಸ್ಪಷ್ಟ ಸಂದೇಶ ಕೊಡಬೇಕು ಎಂಬುದು ನನ್ನ ಆಗ್ರಹ'' ಮಾಡಿದ್ದಾರೆ


Click it and Unblock the Notifications











