ಸುಳ್ಳರಾಜನ ಹೇಡಿಗಳ ಸೈನ್ಯ, ಕೆರಳಿ ಕೆಂಡವಾದ ಪ್ರಕಾಶ್ ರಾಜ್...!
ಸುಳ್ಳು ಎನ್ನುವುದು ಮನುಷ್ಯನ ವ್ಯಕ್ತಿತ್ವವನ್ನು ತಿಂದು ಬಿಸಾಕುವ ಗೆದ್ದಲಿದ್ದಂತೆ. ಒಂದು ಸುಳ್ಳನ್ನು ನಿಜಾ ಎಂದು ಸಾಬೀತು ಮಾಡಲು ಹೋಗಿ ಸಾವಿರ ಸುಳ್ಳುಗಳಲ್ಲಿ ಸಿಲುಕಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತೆ.
ಆದರೂ ಕೂಡ ಕೆಲವರು ಸುಳ್ಳಿನ ಅರಮನೆಯನ್ನು ಕಟ್ಟುತ್ತಾರೆ. ಹೇಳಿದ ಸುಳ್ಳನ್ನೇ ಹೇಳಿ ಆ ಸುಳ್ಳನ್ನು ಸತ್ಯ ಎಂದು ಬಿಂಬಿಸಲು ಹೋಗುತ್ತಾರೆ. ಅದರಲ್ಲಿಯೂ ಬದಲಾದ ಈ ಕಾಲದಲ್ಲಿ ಸುಳ್ಳುಗಾರಿಕೆಗೆ ತಂತ್ರಜ್ಞಾನ ಇನ್ನು ಹೆಚ್ಚಿನ ಬಲ ತುಂಬುತ್ತಿದೆ. ಸತ್ಯ ಕಣ್ಮುಂದೆ ಇದ್ದರೂ ಕೂಡ ಭ್ರಮಾಲೋಕದಲ್ಲಿ ತೇಲುವಂತೆ ಮಾಡುತ್ತಿದೆ. ಇದಕ್ಕೆ ಪ್ರಕಾಶ್ ರಾಜ್ ಫೋಟೊ ಸದ್ಯದ ಉದಾಹರಣೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಪ್ರಯಾಗ್ ರಾಜ್ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. 45 ದಿನಗಳ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಕೋಟ್ಯಂತರ ಜನ ಬಂದು ಸೇರಿದ್ದಾರೆ. ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಿದ್ದಾರೆ. ಜನವರಿ ಹದಿಮೂರರಂದು ಆರಂಭವಾದ ಮಹಾಕುಂಭ ಮೇಳಕ್ಕೆ ಈ ಬಾರಿ ಅತ್ಯಧಿಕ ಸಂಖ್ಯೆಯ ಭಕ್ತರು ಬಂದಿದ್ದು ಇದುವರೆಗೆ ಸುಮಾರು 15 ಕೋಟಿ ಜನ ಸಂಗಮ ಕ್ಷೇತ್ರದಲ್ಲಿ ಪವಿತ್ರ ಸ್ನಾನ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಹೀಗೆ ಧಾರ್ಮಿಕ ಆಚರಣೆ, ಸಂಪ್ರದಾಯ, ಆಧ್ಯಾತ್ಮಿಕ ವಿಸ್ಮಯವಾದ ಮಹಾ ಕುಂಭ ಮೇಳದಲ್ಲಿ ಪ್ರಕಾಶ್ ರಾಜ್ ಭಾಗಿಯಾಗಿದ್ದಾರೆ. ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಕಾಶ್ ರಾಜ್ ನದಿಯಲ್ಲಿ ಮುಳುಗೆದ್ದು ಕೈ ಮುಗಿಯುತ್ತಿರುವ ಚಿತ್ರವೊಂದು ಕೂಡ ವೈರಲ್ ಆಗಿದೆ.
ಕನ್ನಡ ಬಿಗ್ ಬಾಸ್ ಮಾಜಿ ಸ್ಫರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಹಂಚಿಕೊಂಡ ಈ ಫೋಟೊದ ಸತ್ಯಾಸತ್ಯತೆಯನ್ನು ತಿಳಿಯದೇ ಅನೇಕರು ನಿಜಾ ಎಂದುಕೊಂಡಿದ್ದಾರೆ. ಪ್ರಕಾಶ್ ರಾಜ್ ಅವರನ್ನು ಟ್ರೋಲ್ ಕೂಡ ಮಾಡುತ್ತಿದ್ದಾರೆ.ಆದರೆ ಅಸಲಿಗೆ ಈ ಫೋಟೊ ನಕಲಿ. ಕೃತಕ ಬುದ್ದಿಮತ್ತೆ ಟೂಲ್ { AI } ಬಳಸಿ ಈ ಫೋಟೊ ಸೃಷ್ಟಿಸಲಾಗಿದೆ. ಪ್ರಕಾಶ್ ರಾಜ್ ಅವರ ಕಾಲೆಳೆಯಲೆಂದೇ ಈ ಫೋಟೊವನ್ನು ತೇಲಿ ಬಿಡಲಾಗಿದೆ.
ಹೀಗಾಗಿಯೇ ಆಕ್ಷೇಪ ವ್ಯಕ್ತಪಡಿಸಿರುವ ಪ್ರಕಾಶ್ ರಾಜ್ ಸದ್ಯ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ 'ಸುಳ್ಳು ಸುದ್ದಿ, ಸುಳ್ಳರಾಜನ ಹೇಡಿಗಳ ಸೈನ್ಯಕ್ಕೆ.. ಅವರ ಪವಿತ್ರ ಪೂಜೆಯಲ್ಲಿಯೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ' ಎಂದು ಬರೆದುಕೊಂಡಿದ್ದಾರೆ. ದೂರು ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿ ಏನು ಮಾಡುತ್ತಾರೋ ನೋಡೋಣ ಎಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಅಂದ್ಹಾಗೇ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದ ನಿಧಿ ಚೌಧರಿ ಎಂಬ ಮಹಿಳೆ ಮಹಾಕುಂಭ ಮೇಳಕ್ಕೆ ಬರುವ ಜನ ಸ್ವಚ್ಚತೆಯನ್ನು ಕಾಪಾಡುತ್ತಿಲ್ಲ ಎಂದು ದೂರಿದ್ದರು. ಜನ ಇಲ್ಲಿ ಹೊಲಸು ಮಾಡಿ ಹೋಗುತ್ತಿದ್ದಾರೆ, ನನ್ನ ಮನಸಿಗೆ ತುಂಬಾ ದುಖವಾಗುತ್ತಿದೆ ಎಂದು ದೂರಿದ್ದರು. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪ್ರಕಾಶ್ ರಾಜ್ ಇದು ಅಸಹ್ಯಕರವಲ್ಲವೇ ಎಂದು ಪ್ರಶ್ನೆ ಮಾಡಿದ್ದರು. ಇದರ ಬೆನ್ನಲ್ಲೇ ಪ್ರಕಾಶ್ ರಾಜ್ ತ್ರಿವೇಣು ಸಂಗಮದಲ್ಲಿ ಸ್ನಾನ ಮಾಡುತ್ತಿರುವ ಫೋಟೊ ವೈರಲ್ ಆಗಿತ್ತು.
ಸದ್ಯ ಪ್ರಕಾಶ್ ರಾಜ್ ಕಾನೂನು ಸಮರಕ್ಕೆ ಮುಂದಾಗಿದ್ದು ಈ ಪ್ರಕರಣದಲ್ಲಿ ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಇದರ ನಡುವೆ ಫೋಟೊ ನಕಲಿ ಇರಬಹುದು ಆದರೆ ಕೇಸ್ ಹಾಕುವ ಭರದಲ್ಲಿ ಕುಂಭಮೇಳದ ಸ್ನಾನ ಪವಿತ್ರ ಪೂಜೆ ಎಂದು ಒಪ್ಪಿಕೊಂಡಿದ್ದರಲ್ಲ ಅಷ್ಟೇ ಸಾಕು ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.


Click it and Unblock the Notifications











